ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಕ್ರೂರತೆಯನ್ನು ಪಟ್ಟ ಹಾಕಲು ರಷ್ಯಾ ಮುಖ್ಯವಾದ ಸಭೆಯನ್ನು ಕರೆದಿದೆ. ಈ ಸಭೆಗೆ ಪಾಕಿಸ್ತಾನ, ಚೀನಾ ಮತ್ತು ಅಮೇರಿಕಾವನ್ನು ಆಹ್ವಾನಿಸಿರುವ ರಷ್ಯಾವು ಭಾರತಕ್ಕೆ ಆಮಂತ್ರಣವನ್ನು ನೀಡಿಲ್ಲ. ಅಫ್ಘಾನ್’ನಲ್ಲಿ ಹೆಚ್ಚುತ್ತಿರುವ ತಾಳಿಬಾನ್ ಆಕ್ರಮಣವನ್ನು ತಡೆಯಲು ರಷ್ಯಾ ಮುಂದೆ ಬಂದಿದ್ದು, ಈ ವಿಚಾರಕ್ಕೆ ಹೊಂದಿಕೊಂಡಿರುವ ರಾಷ್ಟ್ರಗಳನ್ನು ಪ್ರಮುಖವಾದ ಸಭೆಗೆ ಕರೆದಿದೆ. ಈ ಸಭೆಯು ಆಗಸ್ಟ್ 11ರಂದು ಕತಾರ್’ನಲ್ಲಿ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ. ಮಾರ್ಚ್ 18 ಮತ್ತು ಏಪ್ರಿಲ್ 30ರಂದು ನಡೆದಿದ್ದ ಸಭೆಯ ರೀತಿಯಲ್ಲಿಯೇ ಈ ಸಭೆಯೂ ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ರಷ್ಯಾದ ವಿದೇಶಾಂಗ ಮಂತ್ರಿಯಾಗಿರುವ ಸೆರ್ಗಿ ಲಾವ್ರೋವ್ ಅವರು ತಾಷ್ಕೆಂಟ್’ನಲ್ಲಿ ಮಾತನಾಡುತ್ತಾ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸೇರಿದಂತೆ ಇತರ ರಾಷ್ಟ್ರಗಳೊಡನೆ ರಷ್ಯಾ ತನ್ನ ಸಂಬಂಧವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಆಗಸ್ಟ್ 11ರ ಸಭೆಗೆ ಭಾರತಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ನಡೆಯಲಿಲ್ಲ. ಅಮೇರಿಕಾದೊಂದಿಗೆ ‘ಎಕ್ಸ್ಟೆಂಡೆಡ್ ಟ್ರಯೋಕಾ’ ಮಾದರಿಯ ಸಭೆಗಳನ್ನು ನಡೆಸುವುದರ ಜತೆಗೆ, ಮಧ್ಯ ಏಷ್ಯಾ ರಾಷ್ಟ್ರಗಳಾದ ಭಾರತ, ಇರಾನ್’ನೊಂದಿಗೆ ಸಭೆ ನಡೆಸುವುದಾಗಿ ಲಾವ್ರೋವ್ ಹೇಳಿದ್ದರು. ರಷ್ಯಾ ಮತ್ತು ಅಮೇರಿಕಾದ ನಡುವೆ ಹಲವಾರು ವಿಚಾರಗಳಲ್ಲಿ ವೈಮನಸ್ಯವಿದ್ದರೂ, ತಾಲಿಬಾನಿಗಳ ಆಕ್ರಮಣವನ್ನು ಮಟ್ಟಹಾಕುವ ಸಲುವಾಗಿ ಎರಡೂ ರಾಷ್ಟ್ರಗಳು ಈಗ ಪರಸ್ಪರ ಕೈಜೋಡಿಸುವ ನಿರ್ಧಾರಕ್ಕೆ ಬಂದಿವೆ. ಪ್ರಸ್ತುತ ಬಹುಮುಖ್ಯವಾದ ಸಭೆಗೆ ಭಾರತವನ್ನು ಆಹ್ವಾನಿಸದೇ ಇರುವುದರ ಕುರಿತು ಭಾರತದ ವಿದೇಶಾಂಗ ಇಲಾಖೆಯಿಂದ ಯಾವುದೇ ಅಧಿಕೃತವಾದ ಹೇಳಿಕೆ ಹೊರಬಿದ್ದಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಟಿ ಎಸ್ ತಿರುಮೂರ್ತಿಯವರು ಶುಕ್ರವಾರದಂದು ನಡೆಯಲಿರುವ ವಿಶ್ವ ಭದ್ರತಾ ಪಡೆಗಳ ಸಭೆಯಲ್ಲಿ ಅಫ್ಘಾನ್ ಪರಿಸ್ಥಿತಿಯನ್ನು ಚರ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಮೇ 1ರಂದು ಅಫ್ಘಾನಿಸ್ತಾನದಿಂದ ಅಮೇರಿಕಾವು ತನ್ನ ಭದ್ರತಾ ಪಡೆಯನ್ನು ವಾಪಾಸ್ ಕರೆಯಲು ಆರಂಭಿಸಿದ ನಂತರ ಅಫ್ಘಾನ್’ನಲ್ಲಿ ತಾಲೀಬಾನಿಗಳು ಮತ್ತೆ ಜೀವಂತವಾಗಿದ್ದರೆ. ಈಗಾಗಲೇ ಅಮೇರಿಕಾದ ಬಹುಪಾಲು ಭದ್ರತಾ ಸಿಬ್ಬಂದಿಗಳು ಅಮೇರಿಕಾಕ್ಕೆ ವಾಪಾಸಾಗಿದ್ದು, ಆಗಸ್ಟ್ 31ರ ವೇಳೆಗೆ ಸಂಪೂರ್ಣವಾಗಿ ಎಲ್ಲಾ ಸೈನ್ಯ ನೆಲೆಗಳನ್ನು ಮುಚ್ಚುವ ಯೋಜನೆ ಹಾಕಲಾಗಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಭಾರತವೂ ಪ್ರಮುಖ ಪಾತ್ರ ವಹಿಸಿದೆ. ಯುದ್ಧಪೀಡಿತ ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ಭಾರತವು ಈಗಾಗಲೇ 3 ಬಿಲಿಯಲ್ ಡಾಲರ್ ಬಂಡವಾಳ ಹೂಡಿದೆ. ಈಗ ಇದೇ ದೇಶವನ್ನು ಅತ್ಯಂತ ಪ್ರಮುಖವಾದ ಸಭೆಯಿಂದ ದೂರ ಇಟ್ಟಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read moreDetails