ಕಳೆದ ಎರಡು ದಿನಗಳಲ್ಲಿ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಎರಡು ಮಹತ್ವದ ವಿದ್ಯಮಾನಗಳು ನಡೆದಿವೆ. ಮನುವಾದಿ ಪುರೋಹಿತಶಾಹಿ ಸಂಸ್ಕೃತಿಗೆ ಪರ್ಯಾಯವಾಗಿ ದ್ರಾವಿಡ ಸಂಸ್ಕೃತಿಯ ಬಸವಣ್ಣ ಮತ್ತು ಪೆರಿಯಾರ್ ಅವರ ಮೂಲಕ ಹೊಸ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗೆ ಹಂಬಲಿಸಿದ ರಾಜ್ಯಗಳಿವು.
ದಲಿತರು, ಬುಡಕಟ್ಟು ಜನರು, ಆದಿವಾಸಿಗಳು ಮತ್ತು ಶೂದ್ರ ಸಮುದಾಯಗಳ ಆಹಾರ, ಆಚರಣೆ, ದೈವ, ಬದುಕಿನ ಕುರಿತು ದ್ರಾವಿಡ ಸಂಸ್ಕೃತಿ ತನ್ನದೇ ಸ್ಪಷ್ಟತೆಯನ್ನು ಹೊಂದಿದೆ. ಹಾಗೇ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯ ಮೇಲಿನ ತಮ್ಮ ಹಿಡಿತ ಮತ್ತು ಯಜಮಾನಿಕೆಯನ್ನು ನಿರಂತರವಾಗಿ ಇಟ್ಟುಕೊಳ್ಳಲು ಪುರೋಹಿತಶಾಹಿ, ಹಿಂದೂ ದೇವರು ಮತ್ತು ಧರ್ಮದ ಹೆಸರಿನಲ್ಲಿ ಇತರೆ ಶೂದ್ರ ಸಮುದಾಯಗಳ ಮೇಲೆ ನಡೆಸುತ್ತಿದ್ದ ಮತ್ತು ಈಗಲೂ ನಡೆಸುತ್ತಿರುವ ದಬ್ಬಾಳಿಕೆ ಮತ್ತು ಕುತಂತ್ರಗಳನ್ನು ಬಸವಣ್ಣ ಮತ್ತು ಪೆರಿಯಾರ್ ಇಬ್ಬರೂ ಜನಸಾಮಾನ್ಯ ಭಾಷೆಯಲ್ಲೇ ಬಯಲುಮಾಡಿದ್ದರು.
ಅಂತಹ ನೆಲದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ನಡೆದ ವಿದ್ಯಮಾನಗಳು ಕರ್ನಾಟಕ ಮತ್ತು ತಮಿಳುನಾಡಿನ ಭಿನ್ನ ಪ್ರತಿಕ್ರಿಯೆಗಳಿಗೆ, ಯೋಚನೆ ಮತ್ತು ನಿಲುವಿನ ಭಿನ್ನತೆಗೆ ನಿದರ್ಶನಗಳಾಗಿ ನಿಂತಿವೆ.
ಕರ್ನಾಟಕದಲ್ಲಿ ಸಿನಿಮಾ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ದಲಿತರ ವಿಷಯದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆ ಕುರಿತು ಮಾತನಾಡುತ್ತಾ, ಬಲಿತವರು, ಬಲಿತವರ ಸ್ವಾಮೀಜಿಗಳು ದಲಿತರ ಮನೆಗೆ ಹೋಗಿ ಉಳಿಯವುದು, ವಾಸ್ತವ್ಯ ಮಾಡುವುದು ಬೂಟಾಟಿಕೆ. ಬಲಿತರು ದಲಿತರ ಮನೆಗೆ ಹೋಗಬಹುದು. ಆದರೆ, ಅವರ ಆಹಾರ ಸೇವಿಸುತ್ತಾರೆಯೇ? ಅವರು ಮಾಡುವ ಕೋಳಿ, ಕುರಿ ಮಾಂಸಾಹಾರ ಸೇವಿಸುತ್ತಾರೆಯೇ? ಎಂದು ಪ್ರಶ್ನಿಸುವ ಮೂಲಕ ಮೇಲ್ಜಾತಿಗಳ ಬೂಟಾಟಿಕೆಯ, ಪ್ರಚಾರದ ಪ್ರಹಸನಗಳನ್ನು ನೇರವಾಗಿ ಪ್ರಶ್ನಿಸಿದ್ದರು.
ತಮಿಳುನಾಡಿನಲ್ಲಿ ನಟ ಸೂರ್ಯ ನಿರ್ಮಿಸಿ ನಟಿಸಿದ ಬಹುಚರ್ಚಿತ ಜೈ ಭೀಮ್ ಸಿನಿಮಾದ ದೃಶ್ಯವೊಂದರಲ್ಲಿ ಅಲ್ಲಿನ ವೆಣ್ಣಿಯಾರ್ ಎಂಬ ಸವರ್ಣೀಯ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಕೂಗೆದ್ದಿತ್ತು. ಅದೂ ಬಿಜೆಪಿಯ ಮಿತ್ರಪಕ್ಷವಾಗಿ ಕೇಂದ್ರ ಸರ್ಕಾರದಲ್ಲಿ ಪಾಲುದಾರನಾಗಿರುವ ಪಿಎಂಕೆ ಪಕ್ಷದ ನಾಯಕ, ಮಾಜಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ , ಚಿತ್ರದಲ್ಲಿ ಕೆಟ್ಟ ಪೊಲೀಸ್ ಅಧಿಕಾರಿಯನ್ನು ತಮ್ಮ ವೆಣ್ಣಿಯಾರ್ ಸಮುದಾಯದವನು ಎಂದು ಬಿಂಬಿಸುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ವೆಣ್ಣಿಯಾರ್ ಸಂಗಮ್ ಸಂಘಟನೆಯ ರಾಜ್ಯಾಧ್ಯಕ್ಷರು ನಟ ಸೂರ್ಯ, ನಿರ್ಮಾಪಕಿ ಹಾಗೂ ಸೂರ್ಯ ಪತ್ನಿ ಜ್ಯೋತಿಕಾ ಮತ್ತು ಸಿನಿಮಾ ನಿರ್ದೇಶಕ ಟಿ ಜೆ ಜ್ಞಾನವೇಲ್ ಅವರಿಗೆ ನೋಟೀಸ್ ಜಾರಿ ಮಾಡಿದ್ದರು.
ಒಂದು, ದಲಿತರ ಆಹಾರವನ್ನು ಬಲಿತವರು, ಬಲಿತವರ ಸ್ವಾಮೀಜಿಗಳು ಸೇವಿಸುತ್ತಾರೆಯೇ? ಎಂಬ ದಲಿತರು ಮತ್ತು ಸವರ್ಣೀಯರ ನಡುವಿನ ಪ್ರಮುಖ ತಡೆಗೋಡೆಯ ಕುರಿತ ಹಂಸಲೇಖ ಪ್ರಶ್ನೆ. ಆ ಪ್ರಶ್ನೆಯ ಮೂಲಕ ಅವರು ಬ್ರಾಹ್ಮಣರೂ ಸೇರಿದಂತೆ ಮೇಲ್ಜಾತಿ ಜನರು ಆಹಾರದ ವಿಷಯದಲ್ಲಿ ಹೊಂದಿರುವ ಶ್ರೇಷ್ಠತೆಯ ವ್ಯಸನವನ್ನೂ, ಅಸ್ಪೃಶ್ಯತೆ ಮತ್ತು ಆಹಾರ ರಾಜಕಾರಣಕ್ಕೂ ಇರುವ ನಂಟನ್ನು ಸೂಕ್ಷ್ಮವಾಗಿ ಪ್ರಶ್ನಿಸಿದ್ದರು. ಮತ್ತೊಂದು ಘಟನೆಯಲ್ಲಿ ಬುಡಕಟ್ಟು ಸಮುದಾಯದ ಅಮಾಯಕ ವ್ಯಕ್ತಿಯೊಬ್ಬನ್ನು ಆತನ ಜಾತಿ ಮತ್ತು ಸಾಮಾಜಿಕ ಹಿನ್ನೆಲೆಯ ಕಾರಣಕ್ಕಾಗಿಯೇ ಅಪರಾಧಿಯನ್ನಾಗಿ ನೋಡುವ ಮತ್ತು ಬಲಿಪಶು ಮಾಡುವ ಮೇಲ್ಜಾತಿಯ ಮನಸ್ಥಿತಿ ಮತ್ತು ಅಧಿಕಾರದ ದರ್ಪದ ಕುರಿತ ಪ್ರಶ್ನೆಯನ್ನು ಎತ್ತಿದ ಜೈ ಭೀಮ್.
ಈ ಎರಡೂ ಪ್ರಶ್ನೆಗಳು ಮೇಲ್ಜಾತಿ, ಪುರೋಹಿತಶಾಹಿಯ ಮುಖಕ್ಕೆ ರಾಚಿದ ಕಟು ವಾಸ್ತವವನ್ನು ಅರಗಿಸಿಕೊಳ್ಳಲಾಗದವರು, ಆ ಪ್ರಶ್ನೆಗಳಿಗೆ, ಎತ್ತಿದ ಸವಾಲುಗಳಿಗೆ ಉತ್ತರಿಸುವ ಬದಲು, ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಅಂತಹ ಪ್ರಶ್ನೆಗಳನ್ನು ಕೇಳಿದವರನ್ನೇ ಬಾಯಿ ಮುಚ್ಚಿಸುವ, ಅವರ ಮೇಲೆಯೇ ವಾಗ್ದಾಳಿ ಮಾಡುವ ಮೂಲಕ ಪರೋಕ್ಷವಾಗಿ ಬೆದರಿಸುವ(ಹಂಸಲೇಖಾ ಪ್ರಕರಣದಲ್ಲಿ ಅವರು ಹಿಂಜರಿದು ಕ್ಷಮೆ ಯಾಚಿಸಿದರು ಕೂಡ!) ಮತ್ತು ಶತಮಾನಗಳ ತನ್ನ ಯಜಮಾನಿಕೆಯನ್ನು ಪ್ರಶ್ನಿಸುವುದನ್ನು ಹಣಿಯಲಾಗುವುದು, ಬಗ್ಗುಬಡಿಯಲಾಗುವುದು ಎಂಬ ಸಂದೇಶ ರವಾನಿಸಲಾಗಿದೆ.
ಆದರೆ ಅಂತಹ ಬೆದರಿಕೆ ಮತ್ತು ಯಜಮಾನಿಕೆಯ ದರ್ಪಕ್ಕೆ ಕರ್ನಾಟಕ ಮತ್ತು ತಮಿಳುನಾಡು ಜನಸಾಮಾನ್ಯರ ಪ್ರತಿಕ್ರಿಯಿಸಿದ ರೀತಿ ತೀರಾ ತದ್ವಿರುದ್ಧ.
ತಮಿಳುನಾಡಿನಲ್ಲಿ ಜೈ ಭೀಮ್ ಸಿನಿಮಾದ ಪೊಲೀಸ್ ಅಧಿಕಾರಿಯ ಪಾತ್ರದ ವಿಷಯದಲ್ಲಿ ಎದ್ದ ಪ್ರಶ್ನೆಗೆ ಅಲ್ಲಿನ ಸಿನಿಮಾ, ಸಾಹಿತ್ಯ, ರಾಜಕಾರಣ ಸೇರಿದಂತೆ ಎಲ್ಲಾ ರಂಗಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ವೆಣ್ಣಿಯಾರ್ ಸಮುದಾಯದ ವಾದಕ್ಕೆ ವಿರುದ್ಧವಾಗಿ ನಟ ಸೂರ್ಯ ಮತ್ತು ಅವರ ತಂಡದ ಪರ ದೊಡ್ಡದೊಡ್ಡ ನಟರು, ನಿರ್ಮಾಪಕರು, ರಾಜಕಾರಣಿಗಳು, ಸಾಹಿತಿಗಳು, ಮತ್ತು ಮುಖ್ಯವಾಗಿ ಜನಸಾಮಾನ್ಯರು ನಿಂತರು. ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಭಾರತಿರಾಜ, ನಿರ್ದೇಶಕರಾದ ಪಾ ರಂಜಿತ್, ವೆಟ್ರಿಮಾರನ್ ಮುಂತಾದವರು #WeStandWithSuriya #JaiBhim ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನವನ್ನೇ ಮಾಡಿದರು. ಸೂರ್ಯ ಅವರ ಸಾಮಾಜಿಕ ಬದ್ಧತೆ, ದಲಿತಪರ ಧೋರಣೆಗಳನ್ನು ಪ್ರಸ್ತಾಪಿಸಿ, ಸಿನಿಮಾದ ವಿರುದ್ಧ ಎದ್ದ ಅಸಹನೆಯನ್ನು ಸದ್ದಡಗಿಸಿದರು.
ಆದರೆ, ಕರ್ನಾಟಕದಲ್ಲಿ ಹಂಸಲೇಖಾ ಅವರ ಮಾತುಗಳಿಗೆ ಪುರೋಹಿತಶಾಹಿ ಮನುವಾದಿ ವಲಯದಿಂದ ವ್ಯಕ್ತವಾದ ತೀವ್ರ ವಾಗ್ದಾಳಿ ಮತ್ತು ಟ್ರೋಲ್ ಗೆ ಪ್ರತಿಯಾಗಿ ಅವರ ಪರ ಯಾವೊಬ್ಬ ಸೆಲೆಬ್ರಿಟಿಗಳಾಗಲೀ, ಸ್ಟಾರ್ ನಟನಟಿಯರಾಗಲೀ ನಿಂತ ನಿದರ್ಶಗಳೇ ಇಲ್ಲ! ಅಷ್ಟೇ ಅಲ್ಲ; ಹಂಸಲೇಖ ಯಾರ ಪರ ದನಿ ಎತ್ತಿ, ಯಾರಿಗೆ ಆಗುತ್ತಿರುವ ತಾರತಮ್ಯ, ಅನ್ಯಾಯವನ್ನು ಪ್ರಶ್ನಿಸಿದ್ದರೋ ಆ ಸಮುದಾಯಗಳು ಕೂಡ ಅವರ ಮೇಲಿನ ದಾಳಿಯ ವಿರುದ್ಧ ದನಿ ಎತ್ತಿ ಪರ ನಿಲ್ಲಲಿಲ್ಲ. ದಲಿತ ಸಂಘಟನೆಗಳು, ಶ್ರೂಧ ಸಂಘಟನೆಗಳು ಮೌನಕ್ಕೆ ಜಾರಿದವು.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಯುವ ಬರಹಗಾರರು, ಪ್ರಗತಿಪರ ಚಿಂತನೆಯ ವ್ಯಕ್ತಿಗಳು ಹಂಸಲೇಖ ಪರ ದನಿ ಎತ್ತಿದರೂ ಅದೊಂದು ದೊಡ್ಡ ಆಂದೋಲನದ ಸ್ವರೂಪ ಪಡೆಯಲೇ ಇಲ್ಲ. ಇನ್ನು ದಲಿತ ಸಂಘರ್ಷ ಸಮಿತಿಯಂತಹ ದಲಿತ ಸಂಘಟನೆಗಳು(ಶಿವಮೊಗ್ಗದ ದಸಂಸ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಹೇಳಿಕೆ ಹೊರತುಪಡಿಸಿ) ಯಾವೊಂದು ಪ್ರತಿಕ್ರಿಯೆಯನ್ನೂ ಕೊಡಲಿಲ್ಲ. ಹಾಗೆ ನೋಡಿದರೆ, ಈ ವಿಷಯದಲ್ಲಿ ದಲಿತ ಸಂಘಟನೆಗಳು ಹಂಸಲೇಖಾ ಪರ ಬೀದಿಗಿಳಿದು ಹೋರಾಟ ಮಾಡಬೇಕಿತ್ತು. ಸಿನಿಮಾ ಮತ್ತು ಮನೋರಂಜನೆ ಉದ್ಯಮದ ಹಲವು ಅನಿವಾರ್ಯತೆ ಮತ್ತು ಬಿಕ್ಕಟ್ಟುಗಳ ನಡುವೆಯೂ ಅಪಾಯವನ್ನು ಮೈಮೇಲೆ ತಮ್ಮ ಪರ ಎಳೆದುಕೊಂಡು ಹಂಸಲೇಖ ವ್ಯಕ್ತಪಡಿಸಿದ ನೇರ ಮತ್ತು ದಿಟ್ಟ ಅಭಿಪ್ರಾಯಕ್ಕೆ ದಲಿತರು ಎದೆ ಸೆಟೆದು ನಿಲ್ಲಬೇಕಿತ್ತು.
ಆದರೆ, ಆಗಿದ್ದು ಏನು? ಶಿವಮೊಗ್ಗದಲ್ಲಿ ದಸಂಸ ಸಂಚಾಲಕ ಗುರುಮೂರ್ತಿ ಅವರು ಒಂದು ಹೇಳಿಕೆಯನ್ನು ಹಂಸಲೇಖ ಅವರಿಗೆ ನಮ್ಮ ಬೆಂಬಲವಿದೆ ಎಂದದ್ದು ಬಿಟ್ಟರೆ ಇನ್ನೇನೂ ಇಲ್ಲ!
ಜೊತೆಗೆ ಹಂಸಲೇಖ ಎತ್ತಿದ ಪ್ರಶ್ನೆ ಕೇವಲ ದಲಿತರಿಗೆ ಸೀಮಿತವಾಗೇನೂ ಇರಲಿಲ್ಲ. ಮಾಂಸಾಹಾರ ಮತ್ತು ಸಸ್ಯಾಹಾರದ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ರಾಜಕಾರಣದ ದಬ್ಬಾಳಿಕೆಯ ಬಗ್ಗೆಯೂ ಅವರು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಹಾಗಾಗಿ ಎಲ್ಲಾ ಮಾಂಸಾಹಾರಿ ಸಮುದಾಯಗಳು ಹಂಸಲೇಖ ಪರ ನಿಲ್ಲಬೇಕಿತ್ತು ಮತ್ತು ಆ ಮೂಲಕ ತಮ್ಮ ಆಹಾರದ ಆಯ್ಕೆಯ ಹಕ್ಕಿನ ಸಮರ್ಥನೆಗೆ ಇಳಿಯಬೇಕಿತ್ತು. ಆದರೆ, ಒಂದೇ ಒಂದು ಶೂದ್ರ ಸಮುದಾಯದ ಜಾತಿ ಸಂಘಟನೆಯೂ ಆ ಬಗ್ಗೆ ದನಿ ಎತ್ತಲೇ ಇಲ್ಲ!
ದ್ರಾವಿಡ ಅಸ್ಮಿತೆಯ ನೆಲೆಯಲ್ಲಿ ಈಗಲೂ ರಾಜಕಾರಣ ಮಾಡುವ ತಮಿಳುನಾಡಿಗೂ, ಮತ್ತು ಪುರೋಹಿತಶಾಹಿ ಹಿಂದುತ್ವವಾದಿ ರಾಜಕಾರಣಕ್ಕೆ ಜಾರಿರುವ ಕರ್ನಾಟಕಕ್ಕೂ ಇರುವ ವ್ಯತ್ಯಾಸ ಇದು.