ರಾಜ್ಯ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಾನಗಲ್ ಮತ್ತು ಸಿಂದಗಿಯಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಲು ಮೂರು ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಮಿನಿಕದನ ಗೆಲುವಿಗಾಗಿ ತಮ್ಮದೇ ಆದ ರಣತಂತ್ರಗಳನ್ನ ರೂಪಿಸಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ.
ಉಪಚುನಾವಣೆ ಗೆಲುವಿಗಾಗಿ ಮೂರು ಪಕ್ಷಗಳು ದಾಳವನ್ನ ಹಾಕುತ್ತಿವೆ. ತಮ್ಮದೇ ಆದ ತಂತ್ರ, ರಣತಂತ್ರಗಳನ್ನ ರೂಪಿಸಿಕೊಂಡು ಮಿನಿಕದನದಲ್ಲಿ ಸಮರಕ್ಕೆ ಸಿದ್ಧವಾಗುತ್ತಿವೆ. ಅಕ್ಟೋಬರ್ 30ರ ನಿರ್ಣಾಯಕ ಯುದ್ಧಕ್ಕೆ ವೋಟ್ ಎಂಬ ಶಸ್ತ್ರಾಸ್ತ್ರವನ್ನ ಜೋಡಿಸುತ್ತಿವೆ. ಇದೇ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡಾ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ಸಜ್ಜಾಗಿದ್ದು, ಖುದ್ದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೈಎಲೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ. ಹಾನಗಲ್ ಮತ್ತು ಸಿಂದಗಿಯಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ಇನ್ನು ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಗೆಲುವಿಗಾಗಿ ಸುರ್ಜೇವಾಲಾಗೆ ಹೈಕಮಾಂಡ್ ಕೆಲವು ಸಲಹೆ, ಸೂಚನೆಗಳನ್ನೂ ಕೊಟ್ಟು ಕಳಿಸಿದೆ.
ಹೈಕಮಾಂಡ್ ಸೂಚನೆಗಳೇನು?
- ಬೈ ಎಲೆಕ್ಷನ್ ಸೇರಿ ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ರೂ ಭಾಗಿಯಾಗಿ
- ನಾಯಕರ ನಡುವೆ ಭಿನ್ನಾಭಿಪ್ರಾಯ, ಗೊಂದಲ ಮೂಡದಂತೆ ಎಚ್ಚರ ವಹಿಸಿ
- ಎಲ್ಲ ನಾಯಕರನ್ನೂ ಜೊತೆಗೂಡಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು
- ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬನ್ನಿ
- ಬೈ ಎಲೆಕ್ಷನ್ ಮೂಲಕ 2023ರ ಚುನಾವಣೆಗೂ ತಯಾರಿ ಆರಂಭಿಸಿ
- ನಾಯಕರ ಜೊತೆ ಸಂಪರ್ಕದಲ್ಲಿರಿ, ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಿ
- ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿಗಳ ಪ್ರಸ್ತಾಪ ಮಾಡಿ
- ಬೈ ಎಲೆಕ್ಷನ್ ಸೇರಿ ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ರೂ ನೀವು ಭಾಗಿಯಾಗಬೇಕು ಅಂತಾ ಸುರ್ಜೇವಾಲಾಗೆ ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ನೀಡಿದೆ. ಜೊತೆಗೆ ಪಕ್ಷದಲ್ಲಿರುವ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ, ಗೊಂದಲ ಮೂಡದಂತೆ ಎಚ್ಚರ ವಹಿಸಿ. ಎಲ್ಲ ನಾಯಕರನ್ನೂ ಜೊತೆಗೂಡಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು ಅಂತಾ ಸಲಹೆ ನೀಡಿದೆ ಎನ್ನಲಾಗಿದೆ.
ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬನ್ನಿ ಅಂತಾ ಕಾಂಗ್ರೆಸ್ ವರಿಷ್ಟರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಬೈ ಎಲೆಕ್ಷನ್ ಮೂಲಕ 2023ರ ಚುನಾವಣೆಗೂ ತಯಾರಿ ಆರಂಭಿಸಿ. ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿರಿ, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಿ, ಜೊತೆಗೆ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿಗಳನ್ನ ಪ್ರಸ್ತಾಪ ಮಾಡಿ ಅಂತಾ ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಈ ಸಂಬಂಧ ಮಾತಾಡಿದ ಸುರ್ಜೇವಾಲ ರಾಜ್ಯದ ಬೊಮ್ಮಾಯಿ ಸರ್ಕಾರ ಕಾಲಿನ ಉಗುರಿನಿಂದ, ತಲೆಗೂದಲಿನ ತನಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವಜನ ಪಕ್ಷಪಾತದಲ್ಲಿ ಮುಳುಗಿದೆ. ಬೆಂಗಳೂರು ಉಸ್ತುವಾರಿಗಾಗಿ ತಮ್ಮಲ್ಲೇ ಕಚ್ಚಾಡುತ್ತಿರುವವರು ರಾಜ್ಯದ ಅಭಿವೃದ್ಧಿ ಹೇಗೆ ಮಾಡುತ್ತಾರೆ? ಉಸ್ತುವಾರಿಗಾಗಿ ಕಚ್ಚಾಡುತ್ತರುವುದರ ಅರ್ಥ ಇಷ್ಟೇ ಸಿಎಂಗೆ ಯಾರು ಹೆಚ್ಚಿನ ದುಡ್ಡು ಸಂದಾಯ ಮಾಡುತ್ತಾರೋ ಅವರಿಗೆ ಬೆಂಗಳೂರು ಉಸ್ತುವಾರಿ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇತ್ತ ವಿಜಯಪುರದಲ್ಲಿ ಪ್ರಚಾರಕ್ಕೆ ಹೊರಟಿದ್ದ ಕಾಂಗ್ರೆಸ್ ವಾಹನಗಳನ್ನ ಚುನಾವಣಾ ಅಧಿಕಾರಿಗಳು ತಡೆದಿದ್ದರು. ಬಳಿಕ ಅನುಮತಿ ಇಲ್ಲದೆ ಪ್ರಚಾರಕ್ಕೆ ಹೊರಟ್ಟಿದೆ ಎಂದು ತೆರೆದ ವಾಹನವನ್ನ ಸಿಂದಗಿ ಕ್ಷೇತ್ರ ವ್ಯಾಪ್ತಿಯ ಕೊನ್ನೊಳ್ಳಿ ಚೆಕ್ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಜಿಲ್ಲಾಧಿಕಾರಿ, ಚುನಾವಣಾಧಿಕಾರಿಗಳಿಂದ ಅನುಮತಿ ಪತ್ರ ತರುವವರೆಗೂ ವಾಹನಗಳನ್ನ ಬಿಡುವುದಿಲ್ಲ ಅಂತಾ ತಡೆಹಿಡಿದಿದ್ರು ಸಿಂದಗಿಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ನಾಜೀಯ ಶಕೀರ್ ಅಂಗಡಿ ಪರ ಭರ್ಜರಿ ಪ್ರಚಾರ ಮಾಡಿದ್ರು. ಈ ವೇಳೆ ಮಾತನಾಡಿದ ಅವ್ರು, ಕಾಂಗ್ರೆಸ್ನವರ ನಿಜವಾದ ಡ್ರಾಮ ಏನು ಎಂಬುದು ಮುಸ್ಲಿಂ ಸಮಾಜಕ್ಕೂ ಅರ್ಥ ಆಗ್ತಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ, ಕಾಂಗ್ರೆಸ್, ಬಿಜೆಪಿ ಏನೇ ಅಪಪ್ರಚಾರ ಮಾಡಿದ್ರೂ, ಏನೇ ತಂತ್ರಗಳನ್ನು ಮಾಡಿದ್ರೂ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಖಚಿತ ಎಂದಿದ್ದಾರೆ.
ಇನ್ನು ಎರಡು ಕ್ಷೇತ್ರಗಳ ಗೆಲುವಿಗಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕವಾಗಿ ಕ್ಯಾಂಪೇನ್ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಎಸ್ವೈ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ನಾಯಕತ್ವ ಬದಲಾದ್ರೂ ಬಿಎಸ್ವೈ ವರ್ಚಸ್ಸು ಕಡಿಮೆ ಆಗಿಲ್ಲವೆಂಬ ಸಂದೇಶವನ್ನ ಹೈಕಮಾಂಡ್ಗೆ ರವಾನಿಸಲು ಬಿಎಸ್ವೈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಉಪಚುನಾವಣೆ ಗೆಲುವಿಗೆ ಮೂರು ಪಕ್ಷಗಳು ಭಾರೀ ಸರ್ಕಸ್ ಮಾಡ್ತಿವೆ. ಆದರೆ, ಈ ಮಿನಿ ಕದನದಲ್ಲಿ ಮತದಾರ ಯಾರಿಗೆ ಮಣೆ ಹಾಕ್ತಾನೆ ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.