ಆಂಧ್ರ ಪ್ರದೇಶದಲ್ಲಿ ರಾಜಕೀಯ ಬೇಗುದಿ ತಾರಕಕ್ಕೇರಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ ಮತ್ತು ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ನಡುವೆ ಘರ್ಷಣೆ ಉಂಟಾಗಿದೆ. ಸದ್ಯ ಈ ಕಿಚ್ಚು ಆಂಧ್ರದ ಗಡಿ ದಾಟಿ ಕೇಂದ್ರದ ಅಂಗಳವನ್ನು ತಲುಪಿದೆ.
ಹೌದು, ಈಗ ಆಂಧ್ರದಲ್ಲಿ ಅಕ್ಷರಶಃ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿದೆ. ಸಿಎಂ ಜಗನ್ ವಿರುದ್ಧ ಟಿಡಿಪಿ ನಾಯಕ ಬಳಸಿದ ಅಸಂಸದೀಯ ಪದ ವೈಎಸ್ಆರ್ಸಿಪಿ ನಾಯಕರು ಮತ್ತು ಕಾರ್ಯಕರ್ತರನ್ನ ರೊಚ್ಚಿಗೇಳುವಂತೆ ಮಾಡಿತ್ತು. ಹೀಗಾಗಿ ಗುಂಟೂರಿನ ಮಂಗಳಗಿರಿಯಲ್ಲಿರುವ ಟಿಡಿಪಿ ರಾಜ್ಯ ಪ್ರಧಾನ ಕಚೇರಿ ಮೇಲೆ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿದ್ದರು. ಇದನ್ನ ವಿರೋಧಿಸಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಆಂಧ್ರ ಅಕ್ಟೋಬರ್ 20ನೇ ತಾರೀಕು ಬಂದ್ಗೆ ಕರೆ ನೀಡಿದ್ರು.
ಅಸಲಿಗೆ ಕಿಡಿ ಹೊತ್ತಿಕೊಂಡಿದ್ದು ಹೇಗೆ?
- ಸಿಎಂ ಜಗನ್ ವಿರುದ್ಧ ಟಿಡಿಪಿ ವಕ್ತಾರ ಪಟ್ಟಾಭಿ ಟೀಕೆ
- ಬುಡಕಟ್ಟು ಪ್ರದೇಶದಲ್ಲಿ ಗಾಂಜಾ ಬೆಳೆಯುವಿಕೆ ವಿರುದ್ಧ ಧ್ವನಿ
- ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಏಕೆ? ಅಂತ ಪ್ರಶ್ನೆ
- ವೈಎಸ್ಆರ್ಸಿಪಿ ನಾಯಕರ ವಿರುದ್ಧ ಗಂಭೀರ ಆರೋಪ
- ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪ
- ಸರ್ಕಾರ ಟೀಕಿಸುವ ಭರದಲ್ಲಿ ಜಗನ್ ವಿರುದ್ಧ ಕೆಟ್ಟ ಪದ ಬಳಕೆ
- ಪಟ್ಟಾಭಿಯ ಕೆಟ್ಟ ಪದಬಳಕೆ ವಿರುದ್ಧ ಸಿಡಿದ ವೈಎಸ್ಆರ್ಸಿಪಿ
- ರಾಜ್ಯದ ಹಲವು ಭಾಗಗಳಲ್ಲಿ ಟಿಡಿಪಿ ಕಚೇರಿಗಳ ಮೇಲೆ ದಾಳಿ
- ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಪ್ರತಿಕೃತಿಗಳ ದಹಣ
- ಪಟ್ಟಾಭಿ ಮತ್ತು ನಾಯ್ಡು ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಟಿಡಿಪಿ ವಕ್ತಾರ ಪಟ್ಟಾಭಿ ಟೀಕೆ ಮಾಡಿದ್ದು, ವಿಶಾಖ್ಪಟ್ಟನಂನ ಬುಡಕಟ್ಟು ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದರು. ಅಲ್ಲದೆ ವೈಎಸ್ಆರ್ಸಿಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ವೈಎಸ್ಆರ್ಸಿಪಿ ಕೆಲವು ನಾಯಕರು ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು.
ಇದಲ್ಲದೆ ಸರ್ಕಾರ ಟೀಕಿಸುವ ಭರದಲ್ಲಿ ಜಗನ್ ವಿರುದ್ಧ ಕೆಲ ಕೆಟ್ಟ ಪದ ಬಳಕೆ ಮಾಡಿದ್ರು. ಪಟ್ಟಾಭಿಯವರ ಕೆಟ್ಟ ಪದಬಳಕೆಯ ವಿರುದ್ಧ ಸಿಡಿದ ವೈಎಸ್ಆರ್ಸಿಪಿ ಕಾರ್ಯಕರ್ತರು ರಾಜ್ಯದ ಹಲವು ಭಾಗಗಳಲ್ಲಿ ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಪ್ರತಿಕೃತಿಗಳ ದಹನ ಮಾಡಿ ಪಟ್ಟಾಭಿ ಮತ್ತು ನಾಯ್ಡು ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.
ಇನ್ನು ಈ ಎಲ್ಲ ಬೆಳವಣಿಗೆ ಬಳಿಕ ಮಾತಾಡಿದ ಟಿಡಿಪಿ ವಕ್ತಾರ ಪಟ್ಟಾಭಿ, ದೇಶದಲ್ಲಿ ಎಲ್ಲಿಗೆ ಹೋದರೂ, ಆಂಧ್ರಪ್ರದೇಶದಿಂದ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ನಾನು ಮತ್ತು ನಮ್ಮ ಪಕ್ಷದ ಹಿರಿಯ ನಾಯಕರು ಸರ್ಕಾರವನ್ನು ಪ್ರಶ್ನಿಸಿದ್ದೆವು. ಆಂಧ್ರಪ್ರದೇಶದಲ್ಲಿ ಡ್ರಗ್ಸ್ ವ್ಯವಹಾರದ ಬಗ್ಗೆ ಪ್ರಶ್ನಿಸಿದ್ದರಿಂದ ಅವರು ದಾಳಿ ಮಾಡಿದ್ದಾರೆ ಎಂದರು.
ವೈಎಸ್ಆರ್ಸಿಪಿ ದಾಳಿ ಖಂಡಿಸಿ ಟಿಡಿಪಿಯಿಂದ ಆಂಧ್ರಪ್ರದೇಶ ಬಂದ್ಗೆ ಕರೆ ನೀಡಲಾಗಿತ್ತು. ಪಕ್ಷದ ಕಚೇರಿಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದ್ರು. ಆಂಧ್ರದಲ್ಲಿ ಸಂವಿಧಾನದ 356 ನೇ ವಿಧಿ ಜಾರಿಗೊಳಿಸಬೇಕು, ಈ ಮೂಲಕ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಚಂದ್ರಬಾಬು ಒತ್ತಾಯಿಸಿದ್ದಾರೆ. ಅಲ್ಲದೆ ಕಚೇರಿ ಮೇಲಿನ ದಾಳಿ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಆಂಧ್ರ ಬಂದ್ ಹಿನ್ನಲೆ ಪ್ರತಿಭಟಿಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸ್ ವಶಕ್ಕೆ ಪಡೆದಿದ್ದರು. ಈ ಹಿನ್ನಲೆ ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ವಿರುದ್ಧ ಕಿಡಿ ಕಾರಿದ ಅವರು, ಸಿಎಂ ಜೊತೆ ಒಪ್ಪಂದ ಮಾಡಿಕೊಂಡು ಕಾರ್ಯಕರ್ತರ ಮೇಲೆ ಪೂರ್ವಯೋಜಿತ ದಾಳಿ ನಡೆಸಿದ್ದಾರೆಂದು ಆರೋಪಿಸಿದ್ದರು.
ಈ ಎಲ್ಲ ಬೆಳವಣಿಗೆ ಬೆನ್ನಲ್ಲೆ ಟಿಡಿಪಿ ಮುಖ್ಯಸ್ಥರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯಿಸಿ ಅಮಿತ್ ಶಾ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆಂದು ನಾಯ್ಡು ಹೇಳಿದ್ದಾರೆ.
ಒಟ್ಟಾರೆ ರಾಜಕೀಯ ಕೆಸರೆರಚಾಟದಿಂದ ಹೊತ್ತಿಕೊಂಡ ಕಿಡಿ ಈಗ ಜ್ವಾಲೆಯಾಗಿ ಪಸರಿಸಿದೆ. ಇಡೀ ಆಂಧ್ರಪ್ರದೇಶ ರಾಜಕೀಯ ಬೇಗುದಿಯಿಂದ ಕಾದು ಕೆಂಡದಂತಾಗಿದೆ. ಸದ್ಯ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದೆ.