ಮೂರನೇ ಅಂಶ–ಕ್ರಿಶ್ಚಿಯನ್ನರು
ಕೇರಳದ ಧಾರ್ಮಿಕ ವೈವಿಧ್ಯಮಯ ಜನಸಂಖ್ಯಾ ರಚನೆಯು ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ರಾಜಕೀಯ ಮುನ್ನಡೆ ಸಾಧಿಸಲು ಸಾಧ್ಯವಾಗದಿರಲು ಕಾರಣವೆಂದು ಹೇಳಲಾಗುತ್ತಿದೆ. ಆದರೂ, ಪಕ್ಷವು ಈಗ ಹಿಂದೂಗಳಲ್ಲಿ ಮಾತ್ರವಲ್ಲದೆ ಕ್ರಿಶ್ಚಿಯನ್ನರಲ್ಲಿಯೂ (Hindus but Christians) ಬೆಂಬಲದ ನೆಲೆಯನ್ನು ನಿರ್ಮಿಸುವ ಕೆಲಸ ಮಾಡುತ್ತಿದೆ.
“ಕೇರಳದಲ್ಲಿ ಸುಮಾರು 30 ಪ್ರತಿಶತ ಮತದಾರರು ಮುಸ್ಲಿಮರು (Muslims ). ಈ ಜನಸಂಖ್ಯಾಶಾಸ್ತ್ರವು ಬಿಜೆಪಿಗೆ ಅಡ್ಡಿಯಾಗಿದೆ ಮತ್ತು ಅದಕ್ಕಾಗಿಯೇ ನಾವು ಸಮಸ್ಯೆ ಆಧಾರಿತ ರಾಜಕೀಯದಲ್ಲಿ ಕ್ರಿಶ್ಚಿಯನ್ನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಇಸ್ಲಾಮಿಕ್ ಉಗ್ರವಾದವು ಮೊದಲು ಹಿಂದೂಗಳನ್ನು ಮತ್ತು ನಂತರ ಕ್ರಿಶ್ಚಿಯನ್ನರನ್ನು ಗುರಿಯಾಗಿಸುತ್ತದೆ ”ಎಂದು ಕೇರಳದ ಬಿಜೆಪಿ ಅಧ್ಯಕ್ಷ ಪಿ. ಸುರೇಂದ್ರನ್ (P. Surendran, BJP president in Kerala) ಹೇಳುತ್ತಾರೆ. ಆದರೆ ಕೇರಳದ ಕ್ರಿಶ್ಚಿಯನ್ ಸಮುದಾಯವು “ದ್ವಂದ್ವದಲ್ಲಿದೆ” ಎನ್ನುತ್ತಾರೆ ಜಕಾರಿಯಾ.
“ಕೇರಳದಲ್ಲಿ ಕ್ರಿಶ್ಚಿಯನ್ನರು (Christian community) ಅತ್ಯಧಿಕ ಆಸ್ತಿಯನ್ನು ಹೊಂದಿದ್ದಾರೆ, ಬಹುಶಃ ಸಿಪಿಎಂ ನಾಯಕರ ಆಸ್ತಿಗಿಂತಲೂ ಹೆಚ್ಚು. ಅವರ ವ್ಯಾಪಾರ ಹಿತಾಸಕ್ತಿಗಳನ್ನು, ವೈಯಕ್ತಿಕ ಹಿತಾಸಕ್ತಿಗಳನ್ನು ರಕ್ಷಿಸುವವರ ಪರವಾಗಿರುತ್ತಾರೆ ಅವರು” ಎಂದು ಜಕಾರಿಯಾ ಹೇಳುತ್ತಾರೆ.
ಮುಸ್ಲಿಮರು ದೊಡ್ಡ ಅಲ್ಪಸಂಖ್ಯಾತರಾಗಿರುವುದರಿಂದ ಅವರನ್ನು ಓಲೈಸುವ ಕಾಂಗ್ರೆಸ್ ಕ್ರಿಶ್ಚಿಯನ್ನರನ್ನು ಲಘುವಾಗಿ ತೆಗೆದುಕೊಳ್ಳುತ್ತದೆ ಎಂದು ಕ್ರಿಶ್ಚಿಯನ್ನರು ಭಾವಿಸುತ್ತಾರೆ. ಕ್ರಿಶ್ಚಿಯನ್ನರು ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಂಬಲಿಸಿರಬಹುದು ಆದರೆ ಅದು ಸಮುದಾಯವನ್ನು ಕರ್ನಾಟಕದಲ್ಲಿ ಎಲ್ಲಿ ಇಟ್ಟಿದೆ ಎಂದು ನೋಡಿ. ಇದು ವಿಷಾದನೀಯ” ಎನ್ನುತ್ತಾರೆ ಮಾರ್ಗರೇಟ್ ಆಳ್ವಾ.
ಭೂಸುಧಾರಣೆ, ಜಾಗತೀಕರಣ ಮತ್ತು ರಾಜಕೀಯ ಸಂಘರ್ಷಗಳು
ಕರಾವಳಿ ಕರ್ನಾಟಕ ಮತ್ತು ಕೇರಳ (coastal Karnataka and Kerala) ಎರಡರಲ್ಲೂ, ಜಾಗತೀಕರಣಗೊಂಡ ಜಗತ್ತಿನ ಭೂಸುಧಾರಣೆಗಳು ಮತ್ತು ಅಂತರಾಷ್ಟ್ರೀಯ ವ್ಯಾಪಾರದಿಂದ ಉಂಟಾಗುವ ಸಾಮಾಜಿಕ ಬದಲಾವಣೆಗಳೊಂದಿಗೆ ರಾಜಕೀಯ ಸಂಘರ್ಷಗಳು ಮಿಳಿತಗೊಂಡಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಭೂ-ಹಿಡುವಳಿ ವರ್ಗಗಳು (land-holding classes) ಮತ್ತು ಭೂರಹಿತರ (landless ) ನಡುವಿನ ಸ್ಪಷ್ಟ ಅಂತರವು ಮೊದಲಿನಂತೆ ಗಟ್ಟಿಯಾಗಿಲ್ಲ. “ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಭೂಮಿ ಮತ್ತು ಹಿಡುವಳಿ ಸುಧಾರಣೆಗಳ ಕಾರಣಗಳಿಗಾಗಿ ಎಡಪಂಥೀಯರು ಪ್ರಮುಖ ಪಾತ್ರ ವಹಿಸಿದ್ದರು ಆದ್ದರಿಂದ 1980 ರ ದಶಕದವರೆಗೆ ಸಾಕಷ್ಟು ಜನ ಬೆಂಬಲವನ್ನು ಹೊಂದಿದ್ದರು” ಎಂದು ಕರ್ನಾಟಕ ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ (Karnataka DYFI president Muneer Katipalla) ಹೇಳುತ್ತಾರೆ. “ಶ್ರೀಮಂತ ಮೇಲ್ಜಾತಿ ಭೂಮಾಲೀಕರು ಮತ್ತು ಬಡ ಕಾರ್ಮಿಕ ವರ್ಗದ ನಡುವೆ ಘರ್ಷಣೆಗಳು ಇದ್ದುದರಿಂದ ಕೋಮು ರಾಜಕೀಯಕ್ಕೆ (communal politics ) ಯಾವುದೇ ಸ್ಥಳವಿರಲಿಲ್ಲ” – ಎಂದೂ ಅವರು ಹೇಳುತ್ತಾರೆ.

ಭೂಸುಧಾರಣೆಯಿಂದಾಗಿ ಹಿಡುವಳಿದಾರರೂ ಭೂಮಿಯನ್ನು ಹೊಂದಲು ಕಾರಣವಾಯಿತು, ಇದು ತುಲನಾತ್ಮಕವಾಗಿ ಶ್ರೀಮಂತ ಕಾರ್ಮಿಕ ವರ್ಗದ ಹೊಸ ಪೀಳಿಗೆಯನ್ನು ಸೃಷ್ಟಿಸಿತು ಮತ್ತು “ಜಾತಿ ಡೈನಾಮಿಕ್ಸ್ ಅನ್ನು ಛಿದ್ರಗೊಳಿಸಿತು” (shattered caste dynamics) ಎಂದು ಕಾಟಿಪಳ್ಳ ಹೇಳುತ್ತಾರೆ.
ಈ ಪ್ರದೇಶದ ಮೇಲೆ ಭೂಸುಧಾರಣಾ ಕಾಯ್ದೆಯ ಪ್ರಭಾವದ ಕುರಿತು ಸಂಶೋಧಿಸಿ ಪುಸ್ತಕ ಬರೆದಿರುವ ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ವಿಶ್ಲೇಷಕ ಪ್ರೊಫೆಸರ್ ನರೇಂದರ್ ಪಾಣಿ ಅವರು , ಕೇರಳ ಮತ್ತು ಕರ್ನಾಟಕವು ಬದಲಾವಣೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿವೆ ಎಂದು ಹೇಳುತ್ತಾರೆ. “ಕೇರಳದಲ್ಲಿ, ಭೂಮಾಲೀಕರು ರಾಜ್ಯವನ್ನು ತೊರೆದು ಇತರ ಪ್ರದೇಶಗಳಿಗೆ ತೆರಳಿದರು, ಬೇರೆಡೆಯಿಂದ ಬಂದ ಉದ್ಯಮಿಗಳಿಗೆ ಜಾಗವನ್ನು ಬಿಟ್ಟುಕೊಟ್ಟರು. ಕರ್ನಾಟಕದಲ್ಲಿ ಬಂಡವಾಳವು ಕೃಷಿಯಿಂದ ಶಿಕ್ಷಣ, ಆರೋಗ್ಯ ಮತ್ತು ಹೋಟೆಲ್ಗಳಿಗೆ ಸ್ಥಳಾಂತರಗೊಂಡಿತು” ಎಂದು ಪಾನಿ ಹೇಳುತ್ತಾರೆ.
ಅವರ ಪ್ರಕಾರ, 1974 ರಲ್ಲಿ ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಮೇಲ್ಜಾತಿಯ ಹಿಂದೂ ಭೂಮಾಲೀಕರು ಕೃಷಿಯ ಹೊರತಾಗಿ ಇತರ ಕ್ಷೇತ್ರಗಳೆಡೆಗೆ ಹೊರಳಿಕೊಂಡರು ಮತ್ತು ಜಾತಿ ಗುರುತುಗಳನ್ನು ಮೀರಿ ಜನರನ್ನು ಸಜ್ಜುಗೊಳಿಸುವ ಮೂಲಕ ಮತ್ತು ಅವರನ್ನು ಹಿಂದೂ ಹೆಸರಿನಲ್ಲಿ ಒಗ್ಗೂಡಿಸುವ ಮೂಲಕ ಪ್ರಾಬಲ್ಯವನ್ನು ಪ್ರತಿಪಾದಿಸುವುದನ್ನು ಮುಂದುವರೆಸಿದರು.
“ಹಿಂದೂಗಳಾಗಿ ಒಟ್ಟಾದರೆ ಐಕ್ಯತೆಯ ಗುರುತನ್ನು ಹೊಂದಿರುವ ಮುಸ್ಲಿಮರ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಬಹುದೆಂದು ಅವರು ಭಾವಿಸಿದ್ದರು. ಆದರೆ ಜಾಗತೀಕರಣಗೊಂಡ ಆರ್ಥಿಕತೆಯಲ್ಲಿ, ಮುಸ್ಲಿಮರು ಗಲ್ಫ್ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಹೊಂದಿದ್ದರು ಮತ್ತು ಅವರಿಗೆ ಸಂಪತ್ತು ಕ್ರೋಢೀಕರಿಸಲು ಸಾಧ್ಯವಾಯಿತು. ಆರಂಭಿಕ ಹಿಂದೂ ಬಂಡವಾಳವು ಶಿಕ್ಷಣಕ್ಕೆ ಹೋಯಿತು, ಮುಸ್ಲಿಂ ಬಂಡವಾಳವೂ ಸಹ ಶಿಕ್ಷಣಕ್ಕೆ ಮೀಸಲಾಯಿತು. ಹಾಗಾಗಿಯೇ ನೀವು ಈ ಭಾಗದಲ್ಲಿ ಯಶಸ್ವಿ ಹಿಂದು ಒಡೆತನದ ಉದ್ಯಮಗಳು ಮತ್ತು ಮುಸ್ಲಿಂ ಒಡೆತನದ ಸಂಸ್ಥೆಗಳನ್ನು ನೋಡುತ್ತೀರಿ” ಎಂದು ಪಾನಿ ಹೇಳುತ್ತಾರೆ. ಈ ವಿದ್ಯಮಾನವು ಜಾಗತೀಕರಣಗೊಂಡ ಆರ್ಥಿಕತೆಯಲ್ಲಿ ಒಂದು ರಾಷ್ಟ್ರದಲ್ಲಿ ಧಾರ್ಮಿಕ ಬಹುಸಂಖ್ಯಾತರಾಗಿರುವುದರಿಂದ ಅಲ್ಪಸಂಖ್ಯಾತರ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ ಎಂಬುವುದನ್ನು ರುಜುವಾತು ಮಾಡಿತು. ಹಾಗಾಗಿ ಕರಾವಳಿ ಪ್ರದೇಶಗಳಲ್ಲಿ ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಪ್ರಯತ್ನವು ಮುಸ್ಲಿಮರು ಆರ್ಥಿಕ ಸ್ವಾತಂತ್ರ್ಯ ಗಳಿಸುವಲ್ಲಿ ಮತ್ತಷ್ಟು ನೆರವಾಯಿತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಅಧ್ಯಕ್ಷರಾದ ಒ.ಎಂ.ಎ. ಸಲಾಂ ಸಹ 1980ರ ನಂತರದ ಸುಧಾರಣೆಗಳು ಮುಸ್ಲಿಮರ ಆರ್ಥಿಕತೆಯನ್ನು ಸುಧಾರಿಸಿದವು ಎನ್ನುತ್ತಾರೆ. “ಕೇರಳದಲ್ಲಿ ಮುಸ್ಲಿಮರು ಐತಿಹಾಸಿಕವಾಗಿ ಅತ್ಯಂತ ಬಡವರಾಗಿದ್ದರು ಆದರೆ 1970 ಮತ್ತು 1980 ರ ದಶಕದಲ್ಲಿ ಪ್ರತಿ ಮನೆಯವರು ತಮ್ಮ ಸದಸ್ಯರನ್ನು ಗಲ್ಫ್ ದೇಶಗಳಿಗೆ ಕೆಲಸ ಮಾಡಲು ಕಳುಹಿಸಲು ಪ್ರಾರಂಭಿಸಿದರು. ಅವರು ಶ್ರೀಮಂತರಾಗಿ ಮನೆಗೆ ಮರಳಿದರು ಮತ್ತು ಸಣ್ಣ ಮತ್ತು ದೊಡ್ಡ ವ್ಯಾಪಾರಗಳನ್ನು ಇಲ್ಲಿ ಸ್ಥಾಪಿಸಿದರು” ಎಂದು ಅವರು ಹೇಳುತ್ತಾರೆ.
ಆದರೆ, ಉತ್ತಮ ಆದಾಯಕ್ಕಾಗಿ ಗಲ್ಫ್ ದೇಶಗಳಿಗೆ ವಲಸೆ ಹೋದದ್ದು ತನ್ನದೇ ಆದ ಸಮಸ್ಯೆಗಳನ್ನು ಸಹ ಸೃಷ್ಟಿಸಿತು. “ಹೆಚ್ಚು ಜನರು ಸೌದಿಗೆ ಹೋದರು, ಕೇರಳದಲ್ಲಿ ವಹಾಬಿಸಂ ಹೆಚ್ಚು ನಿಯಂತ್ರಣವನ್ನು ಗಳಿಸಿತು. ವಹಾಬಿಸಂ ಕೇರಳ ಮುಸ್ಲಿಂ ಸಂಸ್ಕೃತಿಯನ್ನು ಮೂಲಭೂತವಾದದೊಂದಿಗೆ ನಾಶಪಡಿಸಿತು. ವಹಾಬಿಸಂ ಮುಸ್ಲಿಮರಿಗೆ ಮರಣದಂಡನೆಯಾಗಿದೆ” ಎಂದು ಪಾಲ್ ಜಕಾರಿಯಾ ಹೇಳುತ್ತಾರೆ.
ಚುನಾವಣೆಯ ದಿನ ಮರೆತೇ ಹೋಗುವ ಕೋಮು ಸೌಹಾರ್ದತೆ
ಡಿಸೆಂಬರ್ 2017 ರಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಕರಾವಳಿ ಪಟ್ಟಣವಾದ ಹೊನ್ನಾವರದಲ್ಲಿ ಇಬ್ಬರ ನಡುವಿನ ಜಗಳ ಕೋಮು ಗಲಭೆಗೆ ಕಾರಣವಾಯಿತು. ಮೀನುಗಾರ ಸಮುದಾಯದ ಪರೇಶ್ ಮೇಸ್ತಾ ಎಂಬ 18 ವರ್ಷದ ಯುವಕ ಗಲಭೆ ನಡೆದ ದಿನ ನಾಪತ್ತೆಯಾಗಿದ್ದರು. ಅವರ ಕೊಳೆತ ಶವ ಸಮೀಪದ ಕೊಳದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡು ಬಂತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮೇಸ್ತಾ ಅವರನ್ನು ಮುಸ್ಲಿಂ ಗುಂಪು ಚಿತ್ರಹಿಂಸೆ ನೀಡಿ ಹತ್ಯೆಗೈದಿದೆ ಎಂದು ಆರೋಪಿಸಿದರು. ಇದು ಉತ್ತರ ಕನ್ನಡದಾದ್ಯಂತ ಇನ್ನಷ್ಟು ಹಿಂಸಾಚಾರಕ್ಕೆ ಕಾರಣವಾಯಿತು, ಇನ್ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ಕಾರಿಗೆ ಸಹ ಬೆಂಕಿ ಹಚ್ಚಲಾಯಿತು.
ಪೊಲೀಸ್ ತನಿಖೆಯು ಇದೊಂದು ಆಕಸ್ಮಿಕ ಸಾವು ಮತ್ತು ಕೊಲೆಯಲ್ಲ ಎಂದು ತೀರ್ಮಾನಿಸಿದ ನಂತರವೂ ಪ್ರತಿಭಟನೆಗಳು ಉಲ್ಬಣಗೊಂಡವು, ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು. ನಾಲ್ಕು ವರ್ಷ ಕಳೆದರೂ ಸಿಬಿಐ ಇನ್ನೂ ವರದಿ ಸಲ್ಲಿಸಿಲ್ಲ. ರಾಜ್ಯ ವಿಧಾನ ಪರಿಷತ್ತಿಗೆ 2021 ರ ಚುನಾವಣೆಯ ಸಮಯದಲ್ಲಿ ಮತ್ತೆ ಮೆಸ್ತಾ ಅವರ ಸಾವು ಮುನ್ನಲೆಗೆ ಬರುವವರೆಗೂ ಸಾರ್ವಜನಿಕ ನೆನಪಿನಿಂದ ಈ ಘಟನೆ ಮಾಸಿತ್ತು.

ಸುರೇಶ್ ಭಟ್ ಅವರು ಚುನಾವಣೆ ಹತ್ತಿರ ಬಂದಾಗ ಕರಾವಳಿ ಕರ್ನಾಟಕದಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗುತ್ತವೆ ಎಂದು ದಾಖಲೆ ಸಮೇತ ಹೇಳುತ್ತಾರೆ. ಇದನ್ನು ಒಪ್ಪಿಕೊಳ್ಳುವ ಪೊಲೀಸರು “ಚುನಾವಣಾ ವರ್ಷದಲ್ಲಿ ಕೋಮು ಘಟನೆಗಳು ಹೆಚ್ಚಾಗುವ ಸ್ಪಷ್ಟ ಪ್ರವೃತ್ತಿ ಕರಾವಳಿಯಲ್ಲಿ ಇದೆ. ಚುನಾವಣೆಯ ನಂತರ ಘಟನೆಗಳು ಮತ್ತು ಅದರ ತೀವ್ರತೆಯಲ್ಲಿ ವ್ಯತ್ಯಾಸವಿರುತ್ತದೆ” ಎನ್ನುತ್ತಾರೆ.
“ಇತ್ತೀಚಿನ ದಿನಗಳಲ್ಲಿ ಯಕ್ಷಗಾನದ ಪ್ರಸಂಗಗಳನ್ನು ಸಹ ಕೋಮುವಾದದ ಛಾಯೆಯೊಂದಿಗೆ ಬರೆಯಲಾಗುತ್ತಿದೆ” ಎಂದು ಉಡುಪಿ ಮುಸ್ಲಿಂ ಒಕ್ಕೂಟದ ಮಾಜಿ ಪದಾಧಿಕಾರಿಯೊಬ್ಬರು ಹೇಳುತ್ತಾರೆ. “ಪೂಜೆಗಳು, ಆರಾಧನೆಗಳು, ದೇವಾಲಯಗಳು, ವಿಶೇಷ ಧಾರ್ಮಿಕ ಸಭೆಗಳು ಸಹ ಕೋಮು ವಿಭಜನೆಯ ಸ್ಥಳಗಳಾಗಿ ಬಳಸಲ್ಪಡುತ್ತವೆ.” ರಾಜಕೀಯವು ಚರ್ಚುಗಳು ಮತ್ತು ಮಸೀದಿಗಳನ್ನು ಕೂಡ ಬಿಟ್ಟಿಲ್ಲ ಎಂದು ಅವರು ಹೇಳುತ್ತಾರೆ
“ವಿಪರ್ಯಾಸವೆಂದರೆ, ಉಡುಪಿಯ ಅತಿದೊಡ್ಡ ಮೀನುಗಾರಿಕಾ ಕಂಪನಿಯನ್ನು ಮುಸ್ಲಿಂ ಮತ್ತು ಹಿಂದೂ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ, ಆದರೆ ಚುನಾವಣಾ ದಿನದಂದು ಎಲ್ಲಾ ಸಾಮರಸ್ಯ ಮರೆತುಹೋಗುತ್ತದೆ” ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.
Also Read : ಕರಾವಳಿ ಕರ್ನಾಟಕ & ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? – ಭಾಗ 2
ಕೇರಳ ಅಥವಾ ಕರ್ನಾಟಕದಲ್ಲಿ ತನ್ನ ಎಲ್ಲಾ ಕ್ರಮಗಳು ಕೇವಲ “ಪ್ರತಿಕ್ರಿಯೆ” ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. “ನಮ್ಮ ಸಿದ್ಧಾಂತಗಳು ಮತ್ತು ಪಕ್ಷಗಳು ವಿಭಿನ್ನವಾಗಿರಬಹುದು ಆದರೆ, ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯವನ್ನು ಮತಪತ್ರಗಳ ಮೂಲಕ ತೋರಿಸಬೇಕು ಮತ್ತು ಬುಲೆಟ್ಗಳ ಮೂಲಕ ಅಲ್ಲ. ಇದು ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ. ಅಧಿಕಾರದಲ್ಲಿರುವವರು ನಮ್ಮ ಕಾರ್ಯಕರ್ತರ ಮೇಲಿನ ಹಲ್ಲೆಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ’’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಮತ್ತು ಕೇರಳದ ಸಿಪಿಎಂ ಆಡಳಿತದಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಒಂದೆಡೆ ರಾಜಕೀಯ ನಾಯಕರು ಪರಸ್ಪರರ ಮೇಲೆ ದೋಷಾರೋಪಣೆ ಸಲ್ಲಿಸುತ್ತಲೇ ಇದ್ದಾರೆ. ಇನ್ನೊಂದೆಡೆ ಹಿಂಸೆಯಿಂದ, ಕೋಮು ಗಲಭೆಗಳಿಂದ ತಮ್ಮ ಮಕ್ಕಳನ್ನು ಕಳೆದುಕೊಂಡ ಮನೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಶುಹೈಬ್, ಪ್ರಶಾಂತ್ ಪೂಜಾರಿ, ಮತ್ತು ಪರೇಶ್ ಮೇಸ್ತ ಕುಟುಂಬಸ್ಥರು ಹೇಳುವಂತೆ ಹೊಸ ರಾಜಕೀಯ ಕೊಲೆಯಾದಾಗಲೆಲ್ಲಾ ಆಘಾತಕಾರಿ ನೆನಪುಗಳು ಮರುಕಳಿಸುತ್ತವೆ. ಮತ್ತು ರಾಜಕೀಯ ಒಲವು ಏನೇ ಇದ್ದರೂ ತಮ್ಮ ಪುತ್ರರ ಹಂತಕರಿಗೆ ಶಿಕ್ಷೆಯಾಗಲೇಬೇಕು ಎಂಬುವುದೇ ಎಲ್ಲಾ ಪೋಷಕರ ಮನವಿಯಾಗಿದೆ.
ಮೂಲ : ದಿ ಪ್ರಿಂಟ್