ಬೆಂಗಳೂರು : ರಾಮ ಮಂದಿರದ ಬೆನ್ನಲ್ಲೇ ಇದೀಗ ದೇಶದ ಮತ್ತೊಂದು ಐತಿಹಾಸಿಕ ದೇವಾಲಯದಲ್ಲಿ ಕಾಣಿಕೆ ಹುಂಡಿಯ ಹಣದಲ್ಲಿ ಅಕ್ರಮದ ವಾಸನೆ ಎದ್ದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಗಾಗಿ ಮೂವರು ಅಧಿಕಾರಿಗಳ ತಂಡವನ್ನು ಉತ್ತರಾಖಂಡ ಸರ್ಕಾರ ನೇಮಕ ಮಾಡಿದ್ದು, ಇದರಿಂದ ದೇಶದಲ್ಲಿನ ಧಾರ್ಮಿಕ ಕ್ಷೇತ್ರಗಳ ಹಣದ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ.

ಪ್ರಮುಖವಾಗಿ ಬದರಿನಾಥ ಕೇದಾರನಾಥ ಟ್ರಸ್ಟ್ ಕಮೀಟಿಯ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರದಲ್ಲಿ ಅವ್ಯವಹಾರದ ದೂರಗಳು ಬಂದ ಹಿನ್ನೆಲೆಯಲ್ಲಿ ದೇವಸ್ಥಾನದ ಆಪ್ತ ಸಹಾಯಕ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ತನಿಖೆಯಲ್ಲಿ ಬಯಲಾದ ಸತ್ಯವೇನು..?
ಪ್ರಾಥಮಿಕ ಮೂಲಗಳ ಪ್ರಕಾರ ಆಪ್ತ ಸಹಾಯಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಗಂಭೀರ ಲೋಪಗಳನ್ನು ಎಸಗಿದ್ದಾರೆ. ಈ ಕಾರಣಕ್ಕೆ ಟ್ರಸ್ಟ್ ವತಿಯಿಂದ ನೌಟಿಯಾಲ್ ಅವರಿಗೆ ಶೋ-ಕಾಸ್ ನೀಡಲಾಗಿತ್ತು. ನೋಟಿಸ್ಗೆ ನೀಡಿರುವ ಉತ್ತರ ಹಾಗೂ ಇದರ ತನಿಖೆಗಾಗಿ ನೇಮಕ ಮಾಡಿದ್ದ ಸಮಿತಿಯ ವರದಿಯಲ್ಲೂ ಲೋಪಗಳು ಕಂಡು ಬಂದಿವೆ. ಹೀಗಾಗಿ ಇಡೀ ತನಿಖೆಯು ಪೂರ್ಣಗೊಳ್ಳುವವರೆಗೂ ಪ್ರಮೋದ್ ನೌಟಿಯಾಲ್ ಅವರನ್ನು ಜ್ಯೋತಿರ್ಮಠದ ಟ್ರಸ್ಟ್ಗೆ ಕಳುಹಿಸಲಾಗಿದೆ.
ಇದನ್ನೂ ಓದಿ : Wayanad: ವಯನಾಡಿನಲ್ಲಿ ಭೀಕರ ಭೂಕುಸಿತ: 5 ಸಾ**, ಹಲವರು ಸಿಲುಕಿರುವ ಶಂಕೆ
ಇನ್ನೂ ಈ ವಿಷಯವು ಉತ್ತರಾಖಂಡ ಸರ್ಕಾರದ ಗಮನವನ್ನೂ ಸೆಳೆದಿದೆ. ಬದರಿನಾಥ ಧಾಮದಲ್ಲಿ ದೇಣಿಗೆ ಮತ್ತು ಕಾಣಿಕೆಗಳಿಗೆ ಸಂಬಂಧಿಸಿದ ಅಕ್ರಮಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿರ್ದೇಶನದ ಮೇರೆಗೆ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳನ್ನು 15 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವಂತೆ ಗಡುವು ನೀಡಲಾಗಿದೆ.
ಸರ್ಕಾರದ ಆದೇಶದಲ್ಲೇನಿದೆ..?
ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎರಡೂ ಸಮಿತಿಯವರು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ದೇವಾಲಯದಲ್ಲಿ ಸ್ವೀಕರಿಸಿದ ದೇಣಿಗೆಗಳ ವಿವಿಧ ಅಂಶಗಳು ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಸಮಿತಿಯು ವಿವರವಾದ ತನಿಖೆ ನಡೆಸಲಿದೆ ಎಂದು ಪ್ರವಾಸೋದ್ಯಮ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಆದೇಶ ಹೊರಡಿಸಿದ್ದಾರೆ. ಪ್ರಮುಖವಾಗಿ ಈ ಸಮಿತಿಯು ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲು ಟ್ರಸ್ಟ್ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು, ಹಣಕಾಸಿನ ವಿವರಗಳನ್ನು ಪರಿಶೀಲಿಸುವ ಕಾರ್ಯ ನಡೆಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಈ ಅಕ್ರಮದ ಬಗ್ಗೆ ಸಲ್ಲಿಕೆಯಾಗಿರುವ ದೂರುಗಳು ಮತ್ತು ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ದೇವಸ್ಥಾನದ ಟ್ರಸ್ಟ್ ಹೇಳಿದ್ದೇನು..?
ದೇಶವಲ್ಲದೆ ವಿದೇಶಗಳಿಂದ ದೇವಾಯಲಯದ ಮೇಲಿನ ನಂಬಿಕೆ ಹುಸಿಯಾಗದಂತೆ ಕಾಪಾಡಿಕೊಳ್ಳುವುದು ನಮ್ಮ ಹೊಣೆಗಾರಿಕೆ. ಅಪಾರ ಭಕ್ತರ ವಿಶ್ವಾಸವನ್ನುಉ ಉಳಿಸಿಕೊಂಡು ಎಲ್ಲವೂ ಪಾರದರ್ಶಕವಾಗಿ ನಡೆಯುವಂತೆ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ಲೋಪಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಹೇಮಂತ್ ದ್ವಿವೇದಿ ಅಭಯ ನೀಡಿದ್ದಾರೆ.
ಈಗಾಗಲೇ ದೇಶದಲ್ಲಿನ ದೇವಾಲಯದ ಆಡಳಿತ ಮಂಡಳಿಗಳಿಗೆ ತನಿಖೆಯ ಬಿಸಿ ಮುಟ್ಟಿದ ಸಮಯದಲ್ಲಿಯೇ ಧಾರ್ಮಿಕ ಕ್ಷೇತ್ರಗಳ ನಿರ್ವಹಣೆಯ ಬಗ್ಗೆ ಜನರಲ್ಲಿ ಬೇಸರದ ಛಾಯೆ ಆವರಿಸಿದೆ. ಹೀಗಿರುವಾಗ ಇದೀಗ ಬದರಿನಾಥ – ಕೇದಾರನಾಥ ದೇವಾಲಯದ ದೇಣಿಗೆ ವಿಚಾರದಲ್ಲಿ ಅವ್ಯವಹಾರದ ವಾಸನೆ ಎದ್ದಿರುವುದು ತನಿಖೆಯಲ್ಲಿ ಯಾವೆಲ್ಲ ಅಂಶಗಳು ಪತ್ತೆಯಾಗಲಿವೆ ಎಂಬುವುದು ಸದ್ಯದ ಕುತೂಹಲವಾಗಿದೆ.






