ಕೆಲವು ಸಿನಿಮಾ ಸ್ಟಾರ್ಸ್ ತೆರೆಯ ಮೇಲಷ್ಟೇ ಹೀರೋಗಳಾಗಿರೋದಿಲ್ಲ. ತೆರೆ ಹಿಂದೆ ಕೂಡ ರಿಯಲ್ ಹೀರೋ ಆಗಿಯೇ ಕಾಣುತ್ತಾರೆ. ಅಂತಹ ರಿಯಲ್ ಹೀರೋಗಳ ಸಾಲಿಗೆ ಟಾಲಿವುಡ್ನ ಪವನ್ ಕಲ್ಯಾಣ್ ಕೂಡ ಸೇರಿದ್ದಾರೆ. ಹೌದು, ಪವನ್ ಕಲ್ಯಾಣ್ ಅಂದಾಕ್ಷಣ, ನೆನಪಾಗೋದೇ ಸೂಪರ್ ಸ್ಟಾರ್. ಅವರ ಅದ್ಬುತ ಸಿನಿಮಾಗಳು, ತರಹೇವಾರಿ ಪಾತ್ರಗಳು. ಹಲವು ಸೋಲು-ಗೆಲುವು ಕಂಡರೂ ಇದ್ದಂಗೆ ಇದ್ದ ಪವನ್ ಕಲ್ಯಾಣ್, ಅಂಧ್ರ ಡಿಸಿಎಂ ಕೂಡ. ಈಗಲೂ ಅವರಿಗೆ ಬಣ್ಣದ ಲೋಕದ ಮೇಲಿನ ನಂಟು ಬಿಟ್ಟಿಲ್ಲ. ತನ್ನ ಫ್ಯಾನ್ಸ್ ಮೇಲಿನ ಪ್ರೀತಿ ಬತ್ತಿಲ್ಲ. ಮಾನವೀಯ ಗುಣಕ್ಕೆ ಅವರದ್ದೊಂದು ಕಾರ್ಯ ಇದೀಗ ಸಾಕ್ಷಿಯಾಗಿದೆ.

ಪವನ್ ಕಲ್ಯಾಣ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಅವರನ್ನು ಪ್ರೀತಿಸುವ ಮನಸ್ಸುಗಳಿವೆ. ಅಂತಹ ಪವನ್ ಕಲ್ಯಾಣ್ಗೆ ತೆಲಂಗಾಣದ ಹನಮಕೊಂಡದ ಜಿಲ್ಲೆಯ ಹನುಮಾನ್ ನಗರದ ಹುಡುಗ ನಿರಂಜನ್ ಕೂಡ ಅಪ್ಪಟ ಅಭಿಮಾನಿ. ಆ ಅಭಿಮಾನಿಗೆ ಹದಿನೇಳು ವರ್ಷ. ಆದರೆ, ಆ ಹರ್ಷ ಈಗಿಲ್ಲ. ಕಾರಣ, ನಿರಂಜನ್ ಇಹಲೋಕ ತ್ಯಜಿಸಿದ್ದಾನೆ.

ಹಲವು ದಿನಗಳಿಂದ ನಿರಂಜನ್ ಮಾರಕ ಕಾಯಿಲೆಯಿಂದ ಬಳಲುತ್ತಿದ್ದ. ಅದೆಷ್ಟೇ ಚಿಕಿತ್ಸೆ ಕೊಡಿಸಿದ್ದರೂ ಜೀವ ಉಳಿಯಲಿಲ್ಲ. ಪವನ್ ಕಲ್ಯಾಣ್ ದೊಡ್ಡ ಅಭಿಮಾನಿಯಾಗಿದ್ದ ಆತ ಕೊನೆಯ ದಿನಗಳಲ್ಲಿ ಆ ಹುಡುಗ ತನ್ನ ಪ್ರೀತಿಯ ಹೀರೋನನ್ನು ನೋಡಬೇಕು ಅನ್ನೋ ಆಸೆ ವ್ಯಕ್ತಪಡಿಸಿದ್ದ. ಹೇಗೋ ಈ ವಿಷಯ, ಪವನ್ ಕಲ್ಯಾಣ್ ಅವರವರೆಗೂ ತಿಳಿದು ಹೋಯಿತು. ಕೊನೆಗೆ ತನ್ನ ಫ್ಯಾನ್ ಆಸೆಯನ್ನು ಈಡೇರಿಸಬೇಕು ಅಂತ ನಿರ್ಧರಿಸಿದರು. ಜೂನ್ ಹದಿನೇಳರಂದು ತನ್ನ ಅಭಿಮಾನಿ ನಿರಂಜನ್ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಬಂದಿದ್ದರು.

ಆ ಬಾಲ ಅಭಿಮಾನಿ ನಿರಂಜನ್ ಜೊತೆ ಕೆಲ ಹೊತ್ತು ಸಮಯ ಕಳೆದಿದ್ದರು. ಆ ಮೂಲಕ ತನ್ನ ಪ್ರೀತಿಯ ಹೀರೋನನ್ನು ನೋಡಬೇಕು ಎಂದು ಆಸೆಪಟ್ಟಿದ್ದ ಹುಡುಗನ ಮೊಗದಲ್ಲಿ ಮಂದಹಾಸ ಮೂಡಿದ್ದು ನಿಜ. ಅಷ್ಟೇ ಅಲ್ಲ, ಆ ಅಭಿಮಾನಿಯ ಕೋರಿಕೆಯೊಂದನ್ನೂ ಈಡೇರಿಸಿದ್ದರು ಪವನ್ ಕಲ್ಯಾಣ್. ಇಷ್ಟಕ್ಕೂ ಆ ಅಭಿಮಾನಿಯ ಕೋರಿಕೆ ಹೀಗಿತ್ತು…. “ನನಗೆ ರಾಮ್ಚರಣ್ ಸರ್ ಬಳಿ ಇರುವ ಅದೇ ತಳಿಯ ನಾಯಿಮರಿ ಬೇಕುʼ ಅಂತ ಕೇಳಿಕೊಂಡಿದ್ದ ಅಭಿಮಾನಿ ನಿರಂಜನ್. ಫ್ಯಾನ್ ಹೇಳಿದ್ದೇ ತಡ, ಸಂಜೆ ವೇಳೆಯ ಹೊತ್ತಿಗೆ ತಮ್ಮ ಆಪ್ತರ ಮೂಲಕ ಆತನ ಮನೆಗೆ ಆ ತಳಿಯ ನಾಯಿ ಮರಿಯೊಂದನ್ನು ಕಳಿಸಿದ್ದರು ಪವನ್ ಕಲ್ಯಾಣ್. ಜೊತೆಗೆ ಐಪ್ಯಾಡ್ ವೊಂದನ್ನೂ ಕೊಡಿಸಿದ್ದರು. ಹೆಚ್ಚು ಕಮ್ಮಿ ಮುಕ್ಕಾಲು ಗಂಟೆಯವರೆಗೆ ನಿರಂಜನ್ ಬೆಡ್ ಪಕ್ಕವೇ ಕುಳಿತು ಮಾತನಾಡಿಸಿದ್ದರು. ಈ ವೇಳೆ, ಆ ಅಭಿಮಾನಿಯ ಕುಟುಂಬದ ಹಿನ್ನೆಲೆ, ತಮ್ಮ ಮೇಲಿನ ಅಭಿಮಾನ ಎಲ್ಲದರ ಬಗ್ಗೆಯೂ ವಿಚಾರಿಸಿದ್ದರು ಪವನ್ ಕಲ್ಯಾಣ್.

ಪವನ್ ಕಲ್ಯಾಣ್ ತನ್ನ ಅಭಿಮಾನಿಯಾಗಿದ್ದ ನಿರಂಜನ್ ಮನೆಗೆ ಭೇಟಿ ನೀಡಿದ್ದ ಕುರಿತು ಒಂದಷ್ಟು ಜನ ರಾಜಕೀಯವಾಗಿ ಟೀಕೆ ಮಾಡಿದ್ದರು. ಆ ಟೀಕೆಗೆ ಜನಸೇನಾನಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ‘ಓಜಿ-2ʼ ಸಿನಿಮಾ ಮಾಡ್ತೀನಿ. ಚಿತ್ರದ ಕಾರ್ಯಕ್ರಮಕ್ಕೆ ನೀನೇ ಮುಖ್ಯ ಅತಿಥಿಯಾಗಿ ಬರಬೇಕು ಅಂತ ನಿರಂಜನ್ಗೆ ಪವನ್ ಕಲ್ಯಾಣ್ ಹೇಳಿದ್ದರು. ಆದರೆ, ಅದು ಈಡೇರಲೇ ಇಲ್ಲ. ಇತ್ತೀಚೆಗೆ ‘ಓಜಿ-2ʼ ಸಿನಿಮಾ ಘೋಷಣೆಯಾಗಿದೆ. ಪವನ್ ಕಲ್ಯಾಣ್ ಫ್ಯಾನ್ ನಿರಂಜನ್, ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ ಸಮಸ್ಯೆಯಿಂದ ಬಳಲುತ್ತಿದ್ದ. ಇದು ಆನುವಂಶಿಕ ಖಾಯಿಲೆ. ಕಾಲ ಕ್ರಮೇಣ ಸ್ನಾಯುಗಳು ದುರ್ಬಲಗೊಂಡು ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆ ಆಗುತ್ತದೆ. ಹದಿನೇಳು ವರ್ಷದ ನಿರಂಜನ್ ಈ ಸಮಸ್ಯೆಯಿಂದ ಕಳೆದ ಒಂದು ದಶಕದಿಂದಲೂ ಬಾಲಕನಂತಿದ್ದ. ದೇಹದಲ್ಲಿ ಯಾವುದೇ ಬೆಳವಣಿಗೆಯೂ ಕಾಣಲಿಲ್ಲ. ಹಾಗಾಗಿ ಹಾಸಿಗೆಯಲ್ಲೇ ದಿನ ಸವೆಸಯುವಂತಾಯ್ತು. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಚಿಕ್ಕಂದಿನಿಂದಲೂ ಪವನ್ ಕಲ್ಯಾಣ್ ಸಿನಿಮಾಗಳನ್ನು ನೋಡಿ ಬೆಳೆದ ನಿರಂಜನ್, ಊರಲ್ಲಿ ಚೋಟಾ ಗಬ್ಬರ್ ಸಿಂಗ್ ಅಂತಾನೇ ಗಮನ ಸೆಳೆದಿದ್ದ. ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದ. ಡೈಲಾಗ್ ಹೇಳುತ್ತಿದ್ದ. ನಿರಂಜನ್ ಚಿಕಿತ್ಸೆಗಾಗಿ ಪವನ್ ಕಲ್ಯಾಣ್ ಒಂದು ಲಕ್ಷ ರೂ. ಹಣದ ನೆರವನ್ನೂ ನೀಡಿದ್ದರು. ಅಷ್ಟೇ ಅಲ್ಲ ಕುಟುಂಬ ನಿರ್ವಹಣೆಗಾಗಿ ಆತನ ಪೋಷಕರಿಗೆ ಕ್ಯಾಂಟೀನ್ ಆರಂಭಿಸಲು ಸಹಾಯ ಮಾಡುವುದಾಗಿ ಹೇಳಿದ್ದರು. ಆದರೆ, ಪ್ರೀತಿಯ ಅಭಿಮಾನಿ ನಿರಂಜನ್ ಬಾರದ ಲೋಕಕ್ಕೆ ಹೋಗಿಬಿಟ್ಟ. ಅದು ನಿರಂಜನ್ ಕುಟುಂಬದ ಸದಸ್ಯರಿಗೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಹೇಳಲಾಗದಷ್ಟು ದುಃಖವಾಯ್ತು.

ನಿರಂಜನ್ ಜೀವ ನಿಂತ ಕುರಿತು ಆತನ ತಂದೆ ಪ್ರತಿಕ್ರಿಯಿಸಿದ್ದು ಹೀಗೆ… “ಎರಡು ದಿನಗಳ ಹಿಂದೆ ನಿರಂಜನ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಆಸ್ಪತ್ರೆಗೆ ಹೋಗಿದ್ದೆವು. ಅಸ್ತಮಾ ಬಂತು, ಹೃದಯಬಡಿತ ನಿಂತು ಹೋಗಿದೆ ಎಂದು ಹೇಳಿದ್ವಿ. ಅದಕ್ಕೆ ವೈದ್ಯರು ನಿರಂಜನ್ ದೇಹವೆಲ್ಲಾ ವಿಷಮ ಸ್ಥಿತಿ ತಲುಪಿದೆ. ಬದುಕೋದು ಕಷ್ಟ ಅಂದರು. ನಂತರ ಮತ್ತೊಂದು ಆಸ್ಪತ್ರೆಗೆ ಹೋದೆವು ಚಿಕಿತ್ಸೆ ಕೊಟ್ಟರು. ಎಲ್ಲಾ ಸರಿ ಹೋಯ್ತು ಎಂದುಕೊಳ್ಳುವ ವೇಳೆಗೆ ಜೀವಬಿಟ್ಟಿದ್ದಾನೆ ಅಂದರು. ಅಲ್ಲಿಯವರೆಗೂ ಪವನ್ ಕಲ್ಯಾಣ್ ಅವರನ್ನು ಕೇಳುತ್ತಲೇ ಇದ್ದ. ಕೊನೆ ಕೊನೆಗೆ ಪವನ್ ಕಲ್ಯಾಣ್ ಕೊಟ್ಟ ನಾಯಿಮರಿಯನ್ನು ರಾಕ್ಸಿ ಎಂದು ಕರೆದ ಅಷ್ಟೇ… ಪವನ್ ಕಲ್ಯಾಣ್ ನಿಜಕ್ಕೂ ದೇವರು. ಇಷ್ಟು ವರ್ಷಗಳಿಂದ ನಿರಂಜನ್ ನೋವು ಅನುಭವಿಸುತ್ತಿದ್ದ. ಕೊನೆಗೆ ಪವನ್ ಸರ್ ನೋಡುವ ಬಯಕೆ ಹೊಂದಿದ್ದರಿಂದ ಅವರು ಬಂದು ಆತನ ಆಸೆ ಈಡೇರಿಸಿದರು ಅಂತ ನಿರಂಜನ್ ತಂದೆ ಭಾವುಕರಾಗಿ ಹೇಳುತ್ತಾರೆ. ಅದೇನೆ ಇರಲಿ, ಅಭಿಮಾನಿಗಳ ಪಾಲಿಗೆ ಕೆಲವು ರೀಲ್ ಹೀರೋಗಳು ರಿಯಲ್ನಲ್ಲೂ ಹೀರೋಗಳಾಗುತ್ತಾರೆ ಅನ್ನುವುದಕ್ಕೆ ಇದು ಸಾಕ್ಷಿ






