ಆಡಳಿತಗಾರರ ನಿರ್ಲಕ್ಷ್ಯ, ವೈದ್ಯಕೀಯ ವ್ಯವಸ್ಥೆ ಹದಗೆಟ್ಟಿರುವುದೇ ಕರೋನಾ ಎರಡನೇ ಅಲೆಯ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿರುವುದೆಂಬುವುದು ಸಾರ್ವಜನಿಕರಿಗೆ ತಿಳಿದಿರುವ ವಿಯಷ, ಬೆಡ್, ಆಕ್ಸಿಜನ್, ಸೂಕ್ತ ಚಿಕಿತ್ಸೆಯಿಲ್ಲದೆ ಸೋಂಕಿಗೆ ಬಲಿಯಾಗುತ್ತಿದ್ದು, ಮತ್ತೊಂದೆಡೆ ಮೃತಪಟ್ಟ ವ್ಯಕ್ತಿಗಳ ಶವ ಸಾಗಿಸಲು ಮೆಡಿಕಲ್ ಟ್ರಾನ್ಸ್ ಪೋರ್ಟ್ ವಾಹನಗಳ ಕೊರತೆ ಎದುರಾಗಿದೆ. ಏಪ್ರಿಲ್ 27 ರಂದು ಒಂದೇ ಆಂಬ್ಯುಲೆನ್ಸ್ನಲ್ಲಿ 22 ಸೋಂಕಿತರ ಶವವನ್ನು ಚಿತಾಗಾರಕ್ಕೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಬೀಡ್ನಲ್ಲಿರುವ ಸ್ವಾಮಿ ರಮಾನಂದ್ ತೀರ್ಥ ಗ್ರಾಮೀಣ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಕರೋನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಇರಿಸಲಾಗಿತ್ತು. ನಂತರ ಅಂತ್ಯಸಂಸ್ಕಾರಕ್ಕೆ ಚಿತಾಗಾರಕ್ಕೆ ಸಾಗಿಸಲು ಆಂಬ್ಯುಲೆನ್ಸ್ಗಳ ಕೊರತೆಯಿದುದ್ದರಿಂದ 22 ಶವಗಳನ್ನು ಒಂದೇ ವಾಹನದಲ್ಲಿ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ನಮ್ಮ ಆಸ್ಪತ್ರೆಯಲ್ಲಿ ಸರಿಯಾದ ಆಂಬ್ಯುಲೆನ್ಸ್ಗಳ ವ್ಯವಸ್ಥೆಯಿಲ್ಲದಿರುವುದರಿಂದ 22 ಶವಗಳನ್ನು ಒಂದೇ ಆಂಬ್ಯುಲೆನ್ಸ್ನಲ್ಲಿ ಸಾಗಿಸಬೇಕಾಯಿತು ಎಂದು ಆಸ್ಪತ್ರೆ ಡೀನ್ ಡಾ.ಶಿವಾಜಿ ಸುಕ್ರೆ ತಿಳಿಸಿದ್ದಾರೆ. ಕರೋನಾ ಮೊದಲ ಅಲೆ ಕಾಣಿಸಿಕೊಂಡಾಗ ನಮ್ಮ ಆಸ್ಪತ್ರೆಯಲ್ಲಿ 05 ಆಂಬ್ಯುಲೆನ್ಸ್ಗಳಿದ್ದವು. ನಂತರ 03 ಆಂಬ್ಯುಲೆನ್ಸ್ಗಳನ್ನು ಹಿಂಪಡೆದಿದ್ದರಿಂದ ಈ ಸನ್ನಿವೇಶ ನಿರ್ಮಾಣವಾಗಿದೆ ಎಂದಿದ್ದಾರೆ.
ಶವಗಳನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಸ್ಥಳೀಯರು ಮತ್ತು ನೆಟ್ಟಿಗರು ಆಸ್ಪತ್ರೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.