ಅಕ್ಕಿ ಕೇಳಿದ ರೈತನ ಬಳಿ ಸತ್ತು ಹೋಗು ಅಂದಿರುವುದನ್ನೂ ಸಚಿವ ಉಮೇಶ್ ಕತ್ತಿ ಸಮರ್ಥನೆ ಮಾಡಿ ತಮ್ಮ ಉದ್ಧಟತನವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಯಾರು ಈಶ್ವರ ನನಗೆ ಗೊತ್ತಿಲ್ಲ. ಅಕ್ಕಿ ಕಡಿತ ಮಾಡಿದ್ದಾರೆ ಸಾಯಬೇಕೋ ಅಂತಾ ಕೇಳಿದ, ಸತ್ತು ಹೋಗಪ್ಪಾ ಅಂದೆ. ಅವನು ಸಾಯ್ತೀನಿ ಅಂದ್ರೆ ನಾನೇನು ಉತ್ತರ ಕೊಡಲಿ ಎಂದು ಉಡಾಫೆಯಿಂದ ಪ್ರಶ್ನಿಸಿದ್ದಾರೆ.
ಈ ವೇಳೆ ಮಾಧ್ಯಮದವರು, ನೀನು ಸಾಯಬೇಡ ಅಂತ ಸಮಾಧಾನ ಹೇಳಿ ಧೈರ್ಯ ತುಂಬುವುದ ಜನಪ್ರತಿನಿಧಿಯೊಬ್ಬರ ಕರ್ತವ್ಯ ಅಂದಾಗ, ನಾನು ಅಷ್ಟು ದೊಡ್ಡ ಮನುಷ್ಯ ಅಲ್ಲ ಎಂದು ಪ್ರತ್ಯುತ್ತರಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಬಂದಿದೆ ಮೇ ತಿಂಗಳಲ್ಲಿ ನೋಡೋಣ ಅಂತ ಹೇಳಿದ್ದೇನೆ. ಆರೂವರೆ ಕೋಟಿ ಜನರಿಗೆ ಉತ್ತರ ಕೊಡುತ್ತಾ ಎಲ್ಲಿ ಹೋಗಲಿ ನಾನು? ಸತ್ತು ಹೋಗ್ಲಾ ಅಂತ ಕೇಳಿದ್ರೆ ನಾನೇನು ಉತ್ತರಿಸಲಿ ಹೇಳಿ? ಲಾಕ್ಡೌನ್ ಪರಿಸ್ಥಿತಿಯಲ್ಲಿ ಮೇ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಪಡಿತರ ವಿತರಣೆ ಮಾಡುತ್ತೆ ಎಂದು ಸಚಿವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಲಾಕ್ಡೌನ್ ಸಂಧರ್ಭದಲ್ಲೂ ಪಡಿತರ ಕಡಿತದ ಕುರಿತಂತೆ ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಸಚಿವರನ್ನು ಪ್ರಶ್ನಿಸಿದ್ದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡುತ್ತೇವೆ. ಲಾಕ್ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಲಾಕ್ಡೌನ್ ಇದೆ, ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಈಶ್ವರ್ ಪ್ರಶ್ನಿಸಿದಕ್ಕೆ ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ. ಹಾಗೂ ಇನ್ನಮುಂದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಸದ್ಯ ಆಹಾರ ಸಚಿವರ ಈ ಆಡಿಯೋ ವೈರಲ್ ಆಗಿದೆ. ಸಚಿವರ ಉದ್ಧಟತನಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಕತ್ತಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ – ಡಿಕೆ ಶಿವಕುಮಾರ್ ಒತ್ತಾಯ
ಅಕ್ಕಿ ಕೇಳಿದವರಲ್ಲಿ ಸತ್ತು ಹೋಗು ಎಂದಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಅಧಿಕಾರ ಇರುವವರ ಬಳಿ ಜನರು ಕೇಳುತ್ತಾರೆ. ಅದಕ್ಕೆ ಸ್ಪಂದಿಸಬೇಕಿರುವುದು ಅವರ ಕರ್ತವ್ಯ. ಅಕ್ಕಿ ಕೇಳಿರುವುದರಲ್ಲಿ ತಪ್ಪೇನಿದೆ? ಅಕ್ಕಿ ಕೇಳಿದರೂ ಸಾಯಿ ಅಂತ ಹೇಳುವ ವ್ಯಕ್ತಿ ಮಂತ್ರಿ ಸ್ಥಾನದಲ್ಲಿ ಯಾಕೆ ಇರಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಹಾಗೂ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.