ಪ್ರತೀ ಬಾರಿ ಮುಸ್ಲಿಂರನ್ನು ಬಾಯ್ಕಾಟ್ ಮಾಡಲು ಕರೆ ನೀಡುತ್ತಿದ್ದ ಹಿಂದೂ ಮುಖಂಡ ಯತಿ ನರಸಿಂಹಾನಂದ್ ಗಿರಿ, ಈ ಬಾರಿ ತ್ರಿವರ್ಣ ಧ್ವಜವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಹರ್ ಘರ್ ತಿರಂಗ ಅಭಿಯಾನವನ್ನು ಬಹಿಷ್ಕರಿಸಿ ಕೇಸರಿ ಧ್ವಜ ಹಾರಿಸಿ ಎಂದು ಅವರು ಹೇಳಿದ್ದಾರೆ.
ದ್ವೇಷಪೂರಿತ ಭಾಷಣ ಮಾಡಿದ ಕಾರಣಕ್ಕಾಗಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ನರಸಿಂಗಾನಂದ್, ಈ ಬಾರಿ ರಾಷ್ಟ್ರಧ್ವಜದ ವಿರುದ್ಧವೇ ತಮ್ಮ ದ್ವೇಷವನ್ನು ವ್ಯಕ್ತಪಡಿಸಿದ್ದಾರೆ.
“ತ್ರಿವರ್ಣಧ್ವಜ ತಯಾರಿಸಲು ಪಶ್ಚಿಮ ಬಂಗಾಳ ಮೂಲದ ಸಲಾವುದ್ದೀನ್ ಎಂಬವರ ಕಂಪೆನಿಗೆ ದೊಡ್ಡ ಕಾಂಟ್ರಾಕ್ಟ್ ನೀಡಲಾಗಿದೆ. ಇದು ಹಿಂದೂಗಳ ವಿರುದ್ಧ ನಡೆಸುತ್ತಿರುವ ಷಡ್ಯಂತ್ರ. ನೀವು (ಹಿಂದೂಗಳು) ಬದುಕುಳಿಯಬೇಕೆಂದರೆ, ಹರ್ ಘರ್ ತಿರಂಗ ಅಭಿಯಾನದ ಹೆಸರಿನಲ್ಲಿ ಮುಸ್ಲೀಮರಿಗೆ ಹಣ ಕೊಡುವುದನ್ನು ನಿಲ್ಲಿಸಿ. ತ್ರಿವರ್ಣಧ್ವಜ ಹಾರಿಸಲೇಬೇಕು ಅಂತಾದರೆ ಹಳೆಯ ಧ್ವಜವನ್ನು ಹಾರಿಸಿ. ಆದರೆ, ಸಲಾವುದ್ದೀನ್’ಗೆ ನಿಮ್ಮ ಹಣ ನೀಡಬೇಡಿ,” ಎಂದು ಅವರು ಹೇಳಿದ್ದಾರೆ.
ಈ ಕುರಿತಾದ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬ ಹಿಂದೂ ಕೂಡಾ ತಮ್ಮ ಮನೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಬೇಕು ಎಂದು ಹೇಳೂತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ.
“ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು. ಹಿಂದೂಗಳ ಹಣದಿಂದ ಮುಸ್ಲೀಮರನ್ನು ಶ್ರೀಮಂತರಾಗಿಸಿ ನಂತರ ಹಿಂದೂಗಳ ಮಕ್ಕಳನ್ನು ಕೊಲ್ಲಿಸುತ್ತಾರೆ. ಈ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ,” ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಲಾವುದ್ದೀನ್ ಮೊಂಡಲ್ ಅವರು ತಮಗೆ ಸಿಕ್ಕಿರುವ ಕಾಂಟ್ರಾಕ್ಟ್ ಬಗ್ಗೆ ಮಾತನಾಡಿ, ನಾಲ್ಕರಿಂದ ಐದು ಕೋಟಿ ರಾಷ್ಟ್ರಧ್ವಜವನ್ನು ತಯಾರಿಸುವ ಗುರಿ ಇದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕದ್ದು ನಿಜಕ್ಕೂ ಹೆಮ್ಮೆ ತಂದಿದೆ. ಇದರಿಂದಾಗುವ ವ್ಯವಹಾರಕ್ಕಿಂತ ಈ ಹೆಮ್ಮೆಯ ಭಾವನೆ ಅತ್ಯಂತ ಮುಖ್ಯವಾದದ್ದು ಎಂದು ಹೇಳಿದ್ದಾರೆ.