ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಈ ಬೆನ್ನಲ್ಲೇ ಆಡಳಿತ ಹಾಗೂ ವಿಪಕ್ಷಗಳ ನಡುವೆ ಕೆಸರೆರಚಾಟ ಜೋರಾಗಿದೆ. ಈ ನಡುವೆಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ ವಾಗ್ದಾಳಿ ನಡೆಸಿದ್ದಾರೆ.

ಮಾನ್ಯ ಕುಮಾರಸ್ವಾಮಿ ಅವರೇ, ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! ಕಾಂಗ್ರೆಸ್ ವಿರೋಧಿಸಿದ್ದು ‘ಮಹಿಳಾ ಮೀಸಲಾತಿ’ಯನ್ನಲ್ಲ, ದಕ್ಷಿಣ ಭಾರತದ ಕತ್ತು ಹಿಸುಕುವ ‘ಕ್ಷೇತ್ರ ಪುನರ್ವಿಂಗಡಣೆ’ (Delimitation) ಮಸೂದೆಯನ್ನು! ಇವೆರಡರ ವ್ಯತ್ಯಾಸ ಅರಿಯದಷ್ಟು ಅಜ್ಞಾನವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ದೇವಾಲಯಗಳ ಚಿನ್ನ ಬಳಕೆ ಬಗ್ಗೆ ಫಾದರ್ ಪೌಲ್ ಹೇಳಿಕೆ ವಿವಾದಕ್ಕೆ ದಾರಿ
2023ರಲ್ಲೇ ಪಾಸ್ ಆದ ಮಹಿಳಾ ಮಸೂದೆಯನ್ನು ಏಪ್ರಿಲ್ 16, 2026ರವರೆಗೂ ನಿಮ್ಮ ಮೋದಿ ಸರ್ಕಾರ ನೋಟಿಫೈ (Notify) ಮಾಡಿಲ್ಲ. ಜಾರಿಗೆ ಬಾರದ ಮಸೂದೆಗೆ ತಿದ್ದುಪಡಿ ತರಲು ಹೇಗೆ ಸಾಧ್ಯ? 2026ರ ಜನಗಣತಿ ಶುರುವಾಗಿದ್ದರೂ, 2011ರ ಗಣತಿಯನ್ನೇ ನೆಪಮಾಡಿ ಕ್ಷೇತ್ರ ವಿಂಗಡಣೆಗೆ ಹೊರಟಿರುವುದೇಕೆ? ಎಂದು ಕಿಡಿಕಾರಿದ್ದಾರೆ.
ಮಹಿಳೆಯರ ಮೇಲೆ ನಿಮಗೆ ನಿಜವಾದ ಕಾಳಜಿ ಇದ್ದರೆ, ಈಗಿರುವ 543 ಸೀಟುಗಳಲ್ಲೇ ನಾಳೆಯೇ 33% ಮೀಸಲಾತಿ ಜಾರಿಗೊಳಿಸಿ; ಅದಕ್ಕೆ ನಮ್ಮ ಬೆಂಬಲವಿದೆ. ವಿಪಕ್ಷಗಳೊಂದಿಗೆ ಚರ್ಚಿಸದೆ ಕೇವಲ ಮಹಿಳೆಯರ ಅನುಕಂಪ ಗಿಟ್ಟಿಸುವ ಮೋದಿಯವರ ಪಿ.ಆರ್ (PR) ಸ್ಟಂಟ್ ಈಗ ಬಯಲಾಗಿದೆ. ಮೊದಲು ಕನ್ನಡಿಗರ ಹಿತ ಕಾಯುವುದನ್ನು ಕಲಿಯಿರಿ! ಎಂದು ನಟರಾಜ್ ಗೌಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.






