ಶ್ರೀಲಂಕಾವು ಆರ್ಥಿಕ ಮತ್ತು ರಾಜಕೀಯವಾಗಿ ಅಧಪತನಕ್ಕಿಳಿದಿರುವುದು ನಿಸ್ಸಂದೇಹವಾಗಿ ಭಾರತಕ್ಕೆ ಗಂಭೀರ ಆತಂಕದ ವಿಷಯವಾಗಿದೆ. ಯಾಕೆಂದರೆ ಶ್ರೀಲಂಕಾವು ಭಾರತಕ್ಕೆ ಕೇವಲ ನೆರೆಯ ರಾಷ್ಟ್ರ ಮಾತ್ರವಲ್ಲ ಹಿಂದೂ ಮಹಾಸಾಗರದಲ್ಲಿ ಅದು ನಿರ್ವಹಿಸುತ್ತಿರುವ ಆಯಕಟ್ಟಿನ ಪಾತ್ರಕ್ಕಾಗಿಯೂ ಭಾರತಕ್ಕೆ ಆ ರಾಷ್ಟ್ರದ ಆಗುಹೋಗು ಮುಖ್ಯವಾಗುತ್ತದೆ.
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು ದೀರ್ಘಾವಧಿಯ ಅಸ್ಥಿರತೆಯು ಶ್ರೀಲಂಕಾ ಅಥವಾ ಭಾರತ ಎರಡಕ್ಕೂ ಒಳ್ಳೆಯದಲ್ಲ. ಎರಡೂ ದೇಶಗಳ ಭವಿಷ್ಯವು ಭೌಗೋಳಿಕ ಸಾಮೀಪ್ಯ ಮತ್ತು ನಾಗರಿಕತೆಯ ಬಂಧಗಳ ಕಾರಣದಿಂದ ಪರಸ್ಪರ ಹೆಣೆದುಕೊಂಡಿದೆ. ಶ್ರೀಲಂಕಾವು ಏಷ್ಯಾದ ಎರಡು ಪ್ರಮುಖ ಶಕ್ತಿಗಳ ಪೈಪೋಟಿಗೆ ಅಖಾಡವಾಗಿದೆ ಎಂಬುದು ಮತ್ತೊಂದು ಆಯಾಮವಾಗಿದ್ದು, ಅಲ್ಲಿನ ಪ್ರಕ್ಷುಬ್ಧತೆಯ ಬಗ್ಗೆ ಭಾರತ ಗಮನಹರಿಸಲೇಬೇಕಾಗಿದೆ.
ರಾಜಪಕ್ಸೆ ಅವರು ಚೀನಾದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದವರಾಗಿದ್ದು ಅಧಿಕಾರದಲ್ಲಿದ್ದಾಗ ಭಾರತದ ಭದ್ರತಾ ಕಾಳಜಿಯ ಕಡೆಗೆ ಅಲ್ಪಗಮನವನ್ನೂ ಹರಿಸಿರಲಿಲ್ಲ. ಹೀಗಿದ್ದರೂ, ಕೊಲಂಬೊದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸರ್ಕಾರ ಇಲ್ಲದಿರುವುದು ಭಾರತದ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ ದ್ವೀಪ ರಾಷ್ಟ್ರದ ಜರ್ಜರಿತ ಆರ್ಥಿಕತೆ ಮರಳಿ ಹಳಿಗೆ ಬರದಿದ್ದರೆ ಲಂಕಾದ ನಿರಾಶ್ರಿತರ ಸಮಸ್ಯೆಯೂ ಭಾರತಕ್ಕೆ ಕಾಡುವ ಅಪಾಯವಿದೆ.
ಶ್ರೀಲಂಕಾದಲ್ಲಿನ ರಾಜಕೀಯ ನಿರ್ವಾತವು $3 ಬಿಲಿಯನ್ ಬೇಲ್ಔಟ್ ಪ್ಯಾಕೇಜ್ಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳನ್ನು ವಿಳಂಬಗೊಳಿಸಬಹುದು. ಇದು ದ್ವೀಪ ರಾಷ್ಟ್ರದ ಆರ್ಥಿಕ ಸಂಕಷ್ಟಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಶ್ರೀಲಂಕಾವನ್ನು ಅನಿರ್ದಿಷ್ಟವಾಗಿ ಆರ್ಥಿಕವಾಗಿ ಬೆಂಬಲಿಸಲು ಭಾರತಕ್ಕೂ ಸಾಧ್ಯವಿಲ್ಲ.
ಮತ್ತೊಂದೆಡೆ ದ್ವೀಪ ರಾಷ್ಟ್ರದ ಸರ್ಕಾರವು ದಿವಾಳಿತನವನ್ನು ಘೋಷಿಸಲು ಕಾರಣವಾದ ಆರ್ಥಿಕ ಬಿಕ್ಕಟ್ಟು ದೀರ್ಘಕಾಲದಿಂದಲೇ ದೇಶದಲ್ಲಿ ಅಸ್ತಿತ್ವದಲ್ಲಿದ್ದರೂ ಸಹ ಗೋಟಬಯ ರಾಜಪಕ್ಸೆ ಅವರ ನಿರಂಕುಶ ಆಡಳಿತಕ್ಕೆ ಇಂತಹ ಅಕಾಲಿಕ ಅಂತ್ಯವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮೇಲಾಗಿ ಜುಲೈ 9 ರಂದು ಶ್ರೀಲಂಕಾದ ಅಧ್ಯಕ್ಷೀಯ ನಿವಾಸದಿಂದ ಪಲಾಯನ ಮಾಡಲು ಗೋಟಬಯ ಮಾಲ್ಡೀವ್ಸ್ನಲ್ಲಿ ಆಶ್ರಯ ಪಡೆದಿದ್ದರೂ ಅಲ್ಲಿಯೂ ಜನರಿಂದ ವಿರೋಧ ಎದುರಿಸಬೇಕಾಯಿತು.
2019 ರಲ್ಲಿ ಸಿಂಹಳ-ಬೌದ್ಧ ಬಹುಮತದ ಮೇಲೆ ಕೇಂದ್ರೀಕೃತವಾದ ಚುನಾವಣಾ ಪ್ರಚಾರ ನಡೆಸಿ ತಾನೊಬ್ಬ ಶಕ್ತಶಾಲಿ ನಾಯಕನಾಗಿದ್ದು ತನ್ನ ನಾಯಕತ್ವದಲ್ಲಿ ಮಾತ್ರ ದೇಶದ ಭದ್ರತೆ ಸುರಕ್ಷಿತವಾಗಿರುತ್ತದೆ ಎಂಬಂತೆ ಚಿತ್ರಿಸಿ ಅಧಿಕಾರದ ಗದ್ದುಗೆ ಏರಿದ್ದರು ರಾಜಪಕ್ಸೆ. ಈಸ್ಟರ್ ಭಾನುವಾರದಂದೇ ನಡೆದ ಬಾಂಬ್ ದಾಳಿಯ ಸುಳಿವು ಅವರ ಭದ್ರತಾ ಪಡೆಗಳಿಗೆ ಸಿಕ್ಕಿರಲಿಲ್ಲ ಎನ್ನುವುದೂ ಚುನಾವಣೆಯ ಮೇಲೆ ಪ್ರಭಾವ ಬೀರಲಿಲ್ಲ.
ಮೂರು ತಿಂಗಳ ಹಿಂದೆ ದ್ವೀಪ ರಾಷ್ಟ್ರದಲ್ಲಿ ಮತ್ತು ಕೊಲಂಬೊದ ಕಡಲತೀರದ ಗಾಲ್ ಫೇಸ್ನಲ್ಲಿ ಪ್ರಾರಂಭವಾದ ದೇಶವ್ಯಾಪಿ ಪ್ರತಿಭಟನೆಗಳು ಜುಲೈ 9 ರಂದು ಅಧ್ಯಕ್ಷೀಯ ನಿವಾಸದ ಮೇಲೆ ದಾಳಿ ಮಾಡುವಲ್ಲಿ ಅಂತ್ಯಗೊಂಡವು. ತನ್ನ ಕೋಟೆಯ ಮೇಲೆ ದಾಳಿ ನಡೆಯಲಿದೆ ಎನ್ನುವ ಸೂಚನೆ ಸಿಕ್ಕ ರಾಜಪಕ್ಸೆ ಅಷ್ಟರಲ್ಲಾಗಲೇ ಅಲ್ಲಿಂದ ಪಲಾಯನ ಮಾಡಿದ್ದರು. ಅಲ್ಲಿನ ಪ್ರಜೆಗಳು ಅಧ್ಯಕ್ಷೀಯ ನಿವಾಸದ ಕೊಳದಲ್ಲಿ ಸ್ನಾನ ಮಾಡುವ, ಹಾಸಿಗೆಗಳ ಮೇಲೆ ವಿಶ್ರಾಂತಿ ಪಡೆಯುವ, ಜಿಮ್ ಉಪಕರಣಗಳನ್ನು ಬಳಸುವ ಮತ್ತು ಗ್ರ್ಯಾಂಡ್ ಪಿಯಾನೋದಲ್ಲಿ ಸಂಗೀತ ನುಡಿಸುವ ಫೋಟೋಗಳು ಮತ್ತು ವೀಡಿಯೊಗಳು ವಿಶ್ವಾದ್ಯಾಂತ ವೈರಲ್ ಆಗಿವೆ.
ಮುಂದುವರೆಯುವುದು….