ಅಕ್ರಮ ಸಕ್ರಮ ತಡೆಯಾಜ್ಞೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ವಿನಾಯಿತಿ ಕೋರಲು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಲು ಅಭ್ಯಂತರವಿಲ್ಲ ಎಂದು ನಮ್ಮ ಬೆಂಗಳೂರು ಫೌಂಡೇಷನ್ ಸ್ಪಷ್ಟಪಡಿಸಿದೆ. ಅಕ್ರಮ ಸಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಕಾರಣ ಹಲವು ಬಡವ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮನೆ, ವಾಸಿಸುವ ಸ್ಥಳಗಳನ್ನು ಕ್ರಮಬದ್ಧಗೊಳಿಸಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಬಂದಿದೆ. ಹೀಗಾಗಿ ಅಕ್ರಮ ಸಕ್ರಮ ತಡೆಯಾಜ್ಞೆಯಿಂದ ಕೆಲ ವರ್ಗಗಳಿಗೆ ವಿನಾಯಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ಗೆ ಸರ್ಕಾರ ಮನವಿ ಸಲ್ಲಿಸಲು ನಮ್ಮ ಬೆಂಗಳೂರು ಫೌಂಡೇಶನ್ ಗೆ ತಕರಾರು ಇಲ್ಲ ಎಂದು ತಿಳಿಸಿದೆ.
ನಮ್ಮ ಬೆಂಗಳೂರು ಫೌಂಡೇಶನ್ (ಎನ್ಬಿಎಫ್) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಎನ್ ಅವರಿಗೆ ಬರೆದ ಪತ್ರದಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಮತ್ತು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಕ್ರಮ ಸಕ್ರಮದಲ್ಲಿ ವಿನಾಯಿತಿ ನೀಡಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದೆ.
2016 ರಲ್ಲಿ ಕಾಂಗ್ರೆಸ್ ಸರ್ಕಾರವು ಅಕ್ರಮ ಸಕ್ರಮ ಶಾಸನವನ್ನು ತರಲು ಹೊರಟಾಗ ಎನ್ಬಿಎಫ್ ಸುಪ್ರೀಂ ಕೋರ್ಟ್ನಲ್ಲಿ ಅದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಕ್ರಮ ಸಕ್ರಮಕ್ಕೆ ಸಂಪೂರ್ಣವಾಗಿ ತಡೆಯಾಜ್ಞೆ ನೀಡಿತ್ತು. ಇದರಿಂದ ಹಲವು ದಶಕಗಳಿಂದ ಅರಣ್ಯ ಸಮೀಪ, ಹಾಗೂ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಅಕ್ರಮ ಸಕ್ರಮ ಅಡಿಯಲ್ಲಿ ನಿವೇಶನ ಸಿಗದೆ ಸಮಸ್ಯೆ ಆರಂಭಗೊಂಡಿತ್ತು. ಈ ಕಾರಣವನ್ನು ಮುಂದಿಟ್ಟುಕೊಂಡು ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರ ತರಲು ಉದ್ದೇಶಿಸಿದಾಗ ತಡೆಯಾಗಿದ್ದ ನಮ್ಮ ಬೆಂಗಳೂರು ಫೌಂಡೇಶನ್ ಈಗ ಬೊಮ್ಮಾಯಿ ಸರ್ಕಾರ ಅಕ್ರಮ ಸಕ್ರಮ ತಡೆಯಾಜ್ಞೆಯಿಂದ ಬಡ ಮಧ್ಯಮ ವರ್ಗಕ್ಕೆ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್ ಗೆ ಹೋಗಲು ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದೆ.