ಪ್ರಧಾನಿ ಮೋದಿ ಕುರಿತ ಹಾಡೊಂದು ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೂರು ನಿಮಿಷ ಐವತ್ತು ಸೆಕೆಂಡ್ಗಳ ಈ ಹಾಡಿನಲ್ಲಿ ಮೋದಿ ಆತಂಕದಲ್ಲಿದ್ದೂ, ಮಾತು ಮಾತಿಗೂ ಹೆದರುತ್ತಿದ್ದಾರೆ. ಕುರ್ಚಿ ಅಲುಗಾಡುತ್ತಿದೆ’ ಎಂದು ವ್ಯಂಗ್ಯ ಮಾಡಿದೆ.

ಖ್ಯಾತ ಪತ್ರಕರ್ತ ಪರಂಜಯ್ ಗುಹಾ ಠಾಕರ್ತಾ ನಿರ್ಮಿಸಿರುವ ಈ ಗೀತೆಗೆ ಸಾಹಿತ್ಯ ರಾಜೇಶ್ ನಿರ್ಮಲ್, ಸಂಗೀತ ಸಂಯೋಜನೆ ವೇದಿ ಸಿನ್ಹಾ, ಸಂಗೀತ ನಿರ್ಮಾಣವನ್ನು ಅಮರ್ತ್ಯ ಘೋಷ್ ಮಾಡಿದ್ದು, ಅದಿತಿ ಹಾಡಿದ್ದಾರೆ.

ರಾಮನ ಹೆಸರಿನಲ್ಲಿ ಮುಖವಾಡ ತೊಟ್ಟು ದೇಶವನ್ನೂ ಲೂಟಿ ಮಾಡಿದೆ, ದೇಶದ ಜನರನ್ನು ಭ್ರಮೆಯಲ್ಲಿ ಇರಿಸಿದೆ, ಧರ್ಮದ ಹೆಸರಿನಲ್ಲಿ ಒಡೆದು ಆಳಿದೆ ಎಂದು ಪ್ರಧಾನಿಯನ್ನು ಗುರಿಯಾಗಿಸಿಕೊಂಡಿರುವ ಹಾಡಿನ ಮೂಲಕ ಟೀಕಿಸಲಾಗಿದೆ.

ಬದಲಾವಣೆಯ ಮುನ್ಸೂಚನೆ ಸಿಕ್ಕಿದೆ, ಅಧಿಕಾರವೂ ಕೊನೆಯಾಗಲಿದೆ ಎಂಬ ಭರವಸೆಯೊಂದಿಗೆ ಹಾಡು ಕೊನೆಯಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಹಾಡು ಹೆಚ್ಚು ಮಹತ್ವ ಪಡೆದುಕೊಂಡಿದ್ದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.






