ಬೆಂಗಳೂರು: ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಜಾಗವನ್ನು ಕಬಳಿಸಿ ಬಡವರನ್ನು ಯಾಮಾರಿಸಿ ಮಾರಾಟ ಮಾಡಿದ್ದ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಜಾಗವನ್ನು ತಮ್ಮದು ಎಂದು ನಂಬಿಸಿ ಬೇರೆಯವರಿಗೆ ಮಾರಿದ್ದ ವಾಸಿಂ ಹಾಗೂ ವಿಜಯ್ ಎನ್ನುವಾತನನ್ನು ಬಂಧಿಸಲಾಗಿದೆ.

ಕೋಗಿಲು ಲೇಔಟ್ನ ಸರ್ಕಾರಿ ಜಾಗ ಕಬಳಿಕೆ ಆರೋಪದಡಿ ಇಂಜಿನಿಯರ್ ಸಂತೋಷ್ ಕುಮಾರ್ ಕಡಾಡಿ ಎನ್ನುವವರು ನೀಡಿದ್ದ ದೂರಿನ ಮೇರೆಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಎ1 ಆರೋಪಿ ವಾಸಿಂ ಬೇಗ್ ಹಾಗೂ ಎ2 ವಿಜಯ್ ಕುಮಾರ್ ಇಬ್ಬರನ್ನು ಬಂಧಿಸಲಾಗಿದ್ದು, ಇಂದು ಇಬ್ಬರನ್ನೂ ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪ್ರಕರಣದ ಉಳಿದ ಆರೋಪಿಗಳಾದ ಮುನಿಯಂಜನಪ್ಪ ಹಾಗೂ ರಾಬೀನ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಇನ್ನು ಅಕ್ರಮ ಒತ್ತುವರಿ ತೆರವಿನಿಂದ ಕೋಗಿಲು ಲೇಔಟ್ನಲ್ಲಿ ಮನೆ ಕಳೆದುಕೊಂಡಿದ್ದ 26 ಕುಟುಂಬಗಳಿಗೆ ಶೀಘ್ರವೇ ಮನೆ ಸಿಗಲಿದೆ. 161 ಮನೆಗಳ ಪೈಕಿ 26 ಜನರ ದಾಖಲೆಗಳು ಕ್ಲಿಯರ್ ಆಗಿದ್ದು ಅವರಿಗೆ ಶೀಘ್ರದಲ್ಲೇ ಮನೆ ನೀಡಲಿದ್ದೇವೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.






