ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರುನಲ್ಲಿ ಮಳೆಯ ಪರಿಣಾಮ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿ, ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ತಮ್ಮ ಪೋಸ್ಟ್ನಲ್ಲಿ, “ಈ ಸರ್ಕಾರಕ್ಕೆ ಮುಖ್ಯವಾದ ಇನ್ಫ್ರಾಸ್ಟ್ರಕ್ಚರ್ ಎಂದರೆ ಸಿಎಂ ಕುರ್ಚಿಯ ನಾಲ್ಕು ಕಾಲುಗಳು ಮಾತ್ರ. ನಮ್ಮ ಡಿಸಿಎಂ ‘ಚೇರ್ ಫೈಟ್’ನಲ್ಲಿ ಪರಿಣತಿ ಹೊಂದಿದ್ದಾರೆ, ಆದರೆ ನೆರೆದಿರುವ ಬೆಂಗಳೂರನ್ನು ನಾವಿಗೇಟ್ ಮಾಡಲು ಗೊತ್ತಿಲ್ಲ” ಎಂದು ಟೀಕಿಸಿದ್ದಾರೆ.

ಅವರು “ಬ್ರ್ಯಾಂಡ್ ಬೆಂಗಳೂರು” ಹೆಸರಿನಲ್ಲಿ ನೀಡಿದ್ದ ಭರವಸೆ ಕೇವಲ ಕೆಲವು ಗಂಟೆಗಳ ಮಳೆಗೆ ನೀರಿನಲ್ಲಿ ಮುಳುಗುತ್ತಿದೆ. ಜನರು ಸಂಕಷ್ಟದಲ್ಲಿರುವಾಗ, ನಗರ ಮೂಲಸೌಕರ್ಯ ಕುಸಿಯುತ್ತಿರುವಾಗ ಡಿಸಿಎಂ ಹಾಗೂ ನಗರಾಭಿವೃದ್ಧಿ ಸಚಿವರು ನೆಲಮಟ್ಟದಲ್ಲಿ ಕಾಣಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರ ಫೋಟೋಗೆ “Missing” ಎಂದು ಹಾಕಿ ವ್ಯಂಗ್ಯ ಮಾಡಿದ್ದಾರೆ.

ಇತ್ತೀಚಿನ ಭಾರೀ ಮಳೆಯಿಂದ ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಜನರು ಕೆಲಸಗಳಿಗೆ ತೆರಳಲು ಸಂಕಷ್ಟ ಅನುಭವಿಸುತ್ತಿದ್ದು, ಮನೆಗಳು ಹಾಗೂ ವಾಣಿಜ್ಯ ಪ್ರದೇಶಗಳಿಗೂ ನೀರು ನುಗ್ಗಿರುವ ಘಟನೆಗಳು ವರದಿಯಾಗಿವೆ.ಈ ನಡುವೆ ನಿಖಿಲ್ ಕುಮಾರಸ್ವಾಮಿ ಮಾಡಿರುವ ಈ ಟೀಕೆ ರಾಜಕೀಯವಾಗಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.






