22ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಹತ್ತನೆಯ ತರಗತಿ ಭವಿಷ್ಯದ ಮೊದಲ ಮೆಟ್ಟಿಲಾದರೆ ಪಿಯುಸಿ ಮೊದಲ ಘಟ್ಟ. ಪದವಿ ವ್ಯಾಸಂಗ, ಉನ್ನತ ವ್ಯಾಸಂಗಗಳಿಗೆ ಬಾಗಿಲು ತೆರೆಯುವ ಈ ಘಟ್ಟ ೧೮ ವಯಸು ದಾಟುವ ಯುವಪೀಳಿಗೆಗೆ ಮತದಾನದ ಹಕ್ಕನ್ನೂ ನೀಡುತ್ತದೆ. ತಮ್ಮ ಭವಿಷ್ಯದ ಕನಸುಗಳಿಗೆ ವಿದ್ಯಾರ್ಥಿಗಳು ರೆಕ್ಕೆ ಪುಕ್ಕಗಳನ್ನು ಜೋಡಿಸುವುದೂ ಈ ಹಂತದಲ್ಲೇ. ಈ ಘಟ್ಟದಲ್ಲಿ ಕೊಂಚ ಪಲ್ಲಟವಾದರೂ ಭವಿಷ್ಯಕ್ಕೆ ಧಕ್ಕೆ ಉಂಟಾಗುತ್ತದೆ.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಶುಭ ಕೋರುವುದರೊಂದಿಗೆ ಅವರಲ್ಲಿ ಭರವಸೆಯನ್ನು ತುಂಬುವುದು ನಾಗರಿಕತೆ ಇರುವ ಸಮಾಜದ ಕರ್ತವ್ಯ. ಹಾಗೆಯೇ ಈ ಸಮಾಜದ ಆಡಳಿತ ನಿರ್ವಹಿಸುವ ಸರ್ಕಾರದ ಕರ್ತವ್ಯವೂ ಹೌದು. ತಳಮಟ್ಟದ ದುಡಿಯುವ ವರ್ಗಗಳಿಗೆ ಶಿಕ್ಷಣವೇ ಗಗನ ಕುಸುಮವಾಗುತ್ತಿರುವ ಹೊತ್ತಿನಲ್ಲಿ, ಉದ್ಯೋಗ ಮರೀಚಿಕೆಯಾಗುತ್ತಿರುವ ಹೊತ್ತಿನಲ್ಲಿ, ವಿದ್ಯಾರ್ಥಿ ಸಮುದಾಯ ನೆಮ್ಮದಿಯಿಂದ, ನಿಶ್ಚಿಂತರಾಗಿ, ಯಾವುದೇ ಭೀತಿ ಆತಂಕಗಳಿಲ್ಲದೆ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳುವುದು ಆಡಳಿತ ವ್ಯವಸ್ಥೆಯ ನೈತಿಕ ಕರ್ತವ್ಯ.
ಆದರೆ ಈಗ ಮತ್ತೊಮ್ಮೆ ಹಿಜಾಬ್ ವಿವಾದ ಮುಸ್ಲಿಂ ಹೆಣ್ಣುಮಕ್ಕಳನ್ನು ಆತಂಕಕ್ಕೆ ದೂಡಿದೆ. ಯಾವುದೇ ಧಾರ್ಮಿಕ ವಸ್ತ್ರಧಾರಣೆಗೆ ಅವಕಾಶವಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಘೋಷಿಸುವ ಮೂಲಕ ಶಿಕ್ಷಣ ಸಚಿವರು ಈ ಆತಂಕವನ್ನು ಹೆಚ್ಚಿಸಿದ್ದಾರೆ. ಹಿಜಾಬ್ ವಿವಾದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾತ್ರ ಸಂಬಂಧಿಸಿದ ವಿಚಾರ. ಖಾಸಗಿ ಶಾಲೆಗಳಲ್ಲಿ ಭಿನ್ನ ನಿಯಮಗಳೂ ಇರಲಿಕ್ಕೆ ಸಾಧ್ಯ . ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಲ್ಲಿ ಎರಡೂ ವರ್ಗದವರು ಇರುತ್ತಾರೆ. ಹಿಜಾಬ್ ನಿರ್ಬಂಧ ಕೋರ್ಟ್ ಆದೇಶದ ಮೇರೆಗೇ ವಿಧಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಪರೀಕ್ಷೆಯ ಸಂದರ್ಭದಲ್ಲಿ ವಿನಾಯಿತಿ ನೀಡುವ ವಿವೇಚನಾಧಿಕಾರ ಸರ್ಕಾರಕ್ಕೆ ಇದ್ದೇ ಇರುತ್ತದೆ.

ಆದರೆ ಕರ್ನಾಟಕ ಸರ್ಕಾರ ತನ್ನ ವಿವೇಚನೆಯನ್ನು ಬಳಸುತ್ತಿಲ್ಲ. ಇತ್ತ ಪರೀಕ್ಷೆ ಬರೆಯುವ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ವಾರಸುದಾರರ ಒತ್ತಡಗಳಿಗೆ ಮಣಿದು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಮುಂದಾಗುವ ಲಕ್ಷಣಗಳೂ ಕಾಣುತ್ತಿಲ್ಲ. ತಮ್ಮ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಘಟ್ಟದಲ್ಲಿ ತಮ್ಮದೇ ಸ್ವಂತ ನಿಲುವು ತಳೆಯುವ ವಿವೇಚನಾಧಿಕಾರವನ್ನು ಮುಸ್ಲಿಂ ಹೆಣ್ಣು ಮಕ್ಕಳಿಗೆ ನೀಡುವುದೂ ಇಲ್ಲ. ಮುಸ್ಲಿಂ ಸಮುದಾಯದ ಪ್ರಜ್ಞಾವಂತರು, ವಿವೇಕಯುತ ಸುಶಿಕ್ಷಿತರು ಈ ವಿಚಾರದಲ್ಲಿ ಕೊಂಚ ವಿವೇಚನೆಯಿಂದ ಯೋಚಿಸಿದರೆ, ತಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ತಪ್ಪಿಸಬಹುದು.
ಸಮುದಾಯದ ದೃಷ್ಟಿಯಿಂದ, ಧಾರ್ಮಿಕ ಅಸ್ಮಿತೆಯ ದೃಷ್ಟಿಯಿಂದ ಇದನ್ನು ತಾತ್ವಿಕ ಸೋಲು ಎಂದು ಭಾವಿಸಿ, ಭಾವಾವೇಶಕ್ಕೊಳಗಾಗುವುದರ ಬದಲು,ವಿಷಯ ನ್ಯಾಯಾಲಯದಲ್ಲಿರುವುದರಿಂದ ಮುಂದೆ ನ್ಯಾಯ ಸಿಗಬಹುದು ಎಂಬ ವಿಶ್ವಾಸದೊಂದಿಗೆ, ಮುಸ್ಲಿಂ ಸಮುದಾಯದ ನಾಯಕರು, ವಿವೇಕಯುತ ಪ್ರತಿನಿಧಿಗಳು, ತಮ್ಮ ಹೆಣ್ಣು ಮಕ್ಕಳಿಗೆ ಹಿಜಾಬ್ ಇಲ್ಲದೆಯೂ ಪರೀಕ್ಷೆ ಬರೆಯಲು ಅನುಮತಿ ನೀಡುವುದು ಸೂಕ್ತ. ಹಿಜಾಬ್ ವ್ಯಕ್ತಿಯ ಧಾರ್ಮಿಕ ಅಸ್ಮಿತೆಯನ್ನು ಪ್ರತಿನಿಧಿಸಬಹುದು ಅದರೆ ಅದು ಭವಿಷ್ಯವನ್ನು ನಿರ್ಧರಿಸುವುದಿಲ್ಲ. ನೂರಾರು, ಸಾವಿರಾರು ಹೆಣ್ಣು ಮಕ್ಕಳು ಈ ಅಸ್ಮಿತೆ ಮತ್ತು ಅಸ್ತಿತ್ವದ ಮುಲಾಜಿಗೆ ಬಲಿಯಾಗುವುದು ಅಮಾನುಷ ಎನಿಸುತ್ತದೆ. ಮುಸ್ಲಿಂ ಸಮುದಾಯ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಸಮುದಾಯದೊಳಗಿನ ವಿವೇಚನಾಶೀಲ ಮನಸುಗಳು ಮಾತನಾಡಬೇಕಿದೆ.
ಸರ್ಕಾರ ಮತ್ತು ಸಮುದಾಯದ ಹಗ್ಗ ಜಗ್ಗಾಟದಲ್ಲಿ ಹೆಣ್ಣುಮಕ್ಕಳ ಭವಿಷ್ಯ ಹಾಳಾಗುವುದು ನಾಗರಿಕತೆಯ ಲಕ್ಷಣವಲ್ಲ. ಸರ್ಕಾರ ತನ್ನ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಆದರೆ ಸಮುದಾಯ ಹೀಗೆ ನಿರ್ದಯಿಯಾಗಿರಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಅಸ್ಮಿತೆಯನ್ನು ಉಳಿಸಲಿ ಆದರೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಕೊಡುವ ಸಾಧನವಾಗದಿರಲಿ. ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿ. ದಯಮಾಡಿ ಅವಕಾಶ ಮಾಡಿಕೊಡಿ. ಸರ್ಕಾರ ಕಣ್ಣು ಕಿವಿ ಮುಚ್ಚಿಕೊಂಡಿದೆ, ಸಮುದಾಯವಾದರೂ ತೆರೆದು ನೋಡುವ ವಿವೇಕ ಹೊಂದಿರಲಿ.






