೭೫ ವರ್ಷಗಳ ಕಾಲ ಹಕ್ಕುಗಳಿಗಾಗಿ ಹೋರಾಡುತ್ತಾ, ಹಕ್ಕುಗಳನ್ನು ಆಗ್ರಹಿಸುತ್ತಾ ಕಾಲ ವ್ಯರ್ಥಮಾಡಿದ್ದೇವೆ, ದೇಶ ಇದರಿಂದಲೇ ದುರ್ಬಲವಾಗಿದೆ. ಇನ್ನು ಹಕ್ಕುಗಳನ್ನು ಮರೆತು ಕರ್ತವ್ಯಗಳತ್ತ ಗಮನ ಹರಿಸೋಣ – ಇದು ಆಳುವ ವರ್ಗಗಳ ಸಂದೇಶ.
ಸ್ವಾತಂತ್ರ್ಯಾನಂತರದ ೭೫ ನೆಯ ವರ್ಷದಲ್ಲೂ ಭಾರತದ ಪ್ರತಿಯೊಬ್ಬ ನಾಗರಿಕನ ಬದುಕಿನ ಅತ್ಯಮೂಲ್ಯ ಅವಶ್ಯಕತೆಗಳಾದ ಉದ್ಯೋಗ, ಆರೋಗ್ಯ, ಶಿಕ್ಷಣ , ಮೂಲಭೂತ ಹಕ್ಕುಗಳು ಎಂದು ಸಾಂವಿಧಾನಿಕವಾಗಿ ಘೋಷಿಸಲ್ಪಟ್ಟಿಲ್ಲ.
ಸಾಂವಿಧಾನಿಕವಾಗಿ ಪ್ರಜೆಗಳಿಗೆ ಒದಗಿಸಲಾಗಿರುವ ಹಕ್ಕುಗಳನ್ನು ಜನತೆಗೆ ತಲುಪುವಂತೆ ಮಾಡಲು ಹೋರಾಟಗಳು ನಡೆದಿರುವುದರಿಂದಲೇ ಈ ದೇಶದ ಜನರು ಕೊಂಚ ನೆಮ್ಮದಿಯ ಬಾಳ್ವೆ ನಡೆಸಿದ್ದಾರೆ. ಆಹಾರದ ಹಕ್ಕು, ಅರಣ್ಯ ಹಕ್ಕು ಎಲ್ಲವೂ ಹೋರಾಟಗಳ ಮೂಲಕವೇ ದೊರೆತಿವೆ. ಯಾವುದನ್ನೂ ಸರ್ಕಾರಗಳು ಭಿಕ್ಷೆಯಾಗಿ ನೀಡಿಲ್ಲ. ಇವು ಪಡೆದಿರುವ ಹಕ್ಕುಗಳೇ ಹೊರತು ಕೊಟ್ಟಿರುವುದಲ್ಲ. ಇನ್ನೂ ಹಲವು ಹಕ್ಕುಗಳನ್ನು ಈ ದೇಶದ ಮಹಿಳೆಯರು, ಶೋಷಿತರು, ಬಡಜನರು, ಆದಿವಾಸಿಗಳು ಹೋರಾಟಗಳ ಮೂಲಕವೇ ಪಡೆದುಕೊಳ್ಳಬೇಕಿದೆ.
ಈ ಹೋರಾಟಗಳನ್ನು ವ್ಯರ್ಥ ಕಾಲಹರಣ ಎಂದು ಹೀಗಳೆಯುವ ಮುನ್ನ ಈ ದೇಶದ ಜನಪ್ರತಿನಿಧಿಗಳು ತಾವು ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವಲ್ಲಿ ಹೇಗೆ ವಿಫಲರಾಗಿದ್ದೇವೆ, ಎಲ್ಲಿ ಎಡವಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂಡರೆ ಸಾರ್ಥಕವಾದೀತು. ಈ ಹೋರಾಟಗಳಿಂದ, ಹಕ್ಕೊತ್ತಾಯಗಳಿಂದ ದೇಶ ದುರ್ಬಲವಾಗಿಲ್ಲ, ಸರ್ಕಾರಗಳ, ಜನಪ್ರತಿನಿಧಿಗಳ ನಿಷ್ಕ್ರಿಯತೆಯಿಂದ, ಭ್ರಷ್ಟತೆಯಿಂದ, ಅಪ್ರಾಮಾಣಿಕತೆಯಿಂದ, ಅಧಿಕಾರ ವ್ಯಾಮೋಹದಿಂದ ದೇಶ ದುರ್ಬಲವಾದಂತೆ ಕಾಣುತ್ತಿದೆ.
ಹಕ್ಕುಗಳಿಗಾಗಿ ಹೋರಾಡುವುದು ಸಾರ್ವಭೌಮ ಪ್ರಜೆಗಳಿಗೆ ಸಂವಿಧಾನ ನೀಡಿರುವ ಅತ್ಯಮೂಲ್ಯ ಹಕ್ಕು. ಇದನ್ನು ಕಸಿದುಕೊಳ್ಳುವ ಆಡಳಿತ ವ್ಯವಸ್ಥೆಗೆ ಗಣತಂತ್ರವನ್ನು ಪ್ರತಿನಿಧಿಸುವ ನೈತಿಕ ಹಕ್ಕು ಹೇಗಿರಲು ಸಾಧ್ಯ ?

ಈ ದೇಶದ ಕೋಟ್ಯಂತರ ಜನರು, ವಿಶೇಷವಾಗಿ ದುಡಿಯುವ ಜನರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವುದರಿಂದಲೇ ಭಾರತೀಯರಾದ ನಾವು ಇಂದು ಚಂದ್ರಲೋಕಕ್ಕೆ ಪಯಣಿಸುವಷ್ಟು ಮುನ್ನಡೆ ಸಾಧಿಸಿದ್ದೇವೆ. ಈ ದುಡಿಮೆಯ ಕೈಗಳನ್ನು, ದುಡಿಮೆಗಾರರ ಬೆವರನ್ನು ಗೌರವಿಸದೆ ಮತ್ತಷ್ಟು ಶೋಷಣೆಗೊಳಪಡಿಸಿ, ಅಸಂಖ್ಯಾತ ಶ್ರಮಿಕರ ಶ್ರಮದಿಂದ ನಿರ್ಮಿಸಲಾಗಿರುವ ದೇಶದ ಅತ್ಯಮೂಲ್ಯ ಸಂಪತ್ತನ್ನು, ಸಂಪನ್ಮೂಲಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾರ್ಪೋರೇಟ್ ಉದ್ಯಮಿಗಳಿಗೆ ಹರಾಜು ಹಾಕುತ್ತಿರುವ ಒಂದು ಆಡಳಿತ ವ್ಯವಸ್ಥೆ, ಕರ್ತವ್ಯದ ಬಗ್ಗೆ ಜನತೆಗೆ ಪಾಠ ಹೇಳಬೇಕಿಲ್ಲ.
ಈ ದೇಶದ ಜನತೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಸಂವಿಧಾನದ ಚೌಕಟ್ಟಿನಲ್ಲೇ ಹೋರಾಡುತ್ತಲೇ ಇರುತ್ತಾರೆ. ಸರ್ಕಾರಗಳನ್ನು ನಡೆಸುವ ಜನ ಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ನೈತಿಕತೆಯನ್ನು ಉಳಿಸಿಕೊಂಡು, ಸಾಂವಿಧಾನಿಕ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಗಣರಾಜ್ಯೋತ್ಸವದ ಆಚರಣೆಯೂ ಅರ್ಥಪೂರ್ಣವಾದೀತು.






