ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಟ್ಟು ಧ್ವಜಾರೋಹಣ ಮಾಡಲು ನ್ಯಾಯಾಧೀಶರು ನಿರಾಕರಣೆ ಮಾಡಿ ಸಂವಿಧಾನ ಶಿಲ್ಪಿಗೆ ಮತ್ತು ಸ್ವತಃ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ವಿವಿಧ ದಲಿತ ಮತ್ತು ಪ್ರಗತಿಪರ ವಕೀಲರು ಹಾಗೂ ಹೋರಾಟಗಾರರು ಬುಧವಾರ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ ೭೩ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಅಂಬೇಡ್ಕರ್ ಅವರ ಭಾವಚಿತ್ರ ಪೂಜೆಗೆ ನಿರಾಕರಿಸಿ ಆ ಫೋಟೋ ತೆರವು ಮಾಡಿಸಿದ್ದಾರೆ ಮತ್ತು ಆ ವೇಳೆ ದಲಿತ ವಕೀಲರು ನ್ಯಾಯಾಧೀಶರ ಕ್ರಮವನ್ನು ಪ್ರಶ್ನಿಸಿ ಸಮಾರಂಭ ಬಹಿಷ್ಕರಿಸಿ ಹೊರನಡೆದರು ಎನ್ನಲಾದ ವೀಡಿಯೋ ಒಂದು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ರಾಯಚೂರಿನಲ್ಲಿ ಘಟನೆಯನ್ನು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
“ನ್ಯಾಯಾಧೀಶರ ವಿರೋಧದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಅಂಬೇಡ್ಕರ್ ಭಾವಚಿತ್ರವನ್ನು ತಗೆದಿದ್ದರು. ತಕ್ಷಣವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳ ವಕೀಲರು ನ್ಯಾಯಾಧೀಶರ ನಡೆಯನ್ನು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿ ಹೊರನಡೆದರು. ಆ ಬಳಿಕ ನ್ಯಾಯಾಧೀಶರು ಮತ್ತು ಅಯೋಜಕರ ನಡುವೆ ಚರ್ಚೆ ನಡೆದು ಕಳೆದ ವರ್ಷ ಈ ಸಂಬಂಧ ಅಂಬೇಡ್ಕರ್ ಭಾವಚಿತ್ರ ಪೂಜೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿ ತೋರಿಸಿ ಮನವರಿಕೆ ಮಾಡಿದ ಬಳಿಕ ಮತ್ತೆ ಅಂಬೇಡ್ಕರ್ ಫೋಟೋ ಇಟ್ಟು ಪೂಜೆ ಸಲ್ಲಿಸಲಾಗಿದೆ. ಆದರೆ ನ್ಯಾಯಾಧೀಶರ ನಡೆ ಸಂವಿಧಾನ ಶಿಲ್ಪಿಗೆ ಮಾಡಿದ ಅವಮಾನ. ಇದನ್ನು ಖಂಡಿಸಿ ನಾವು ಹೋರಾಟ ನಡೆಸುತ್ತಿದ್ದೇವೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಅಂಬೇಡ್ಕರ್ ಅವರ ಭಾವಚಿತ್ರವನ್ನು ಗಣರಾಜ್ಯೋತ್ಸವದಂದು ಇಟ್ಟು ಪೂಜಿಸಬೇಕು ಎಂಬ ಚರ್ಚೆಗಳು ಪ್ರತಿವರ್ಷ ಕೇಳಿಬರುತ್ತವೆ. ಹೀಗಾಗಿ ಅಂಬೇಡ್ಕರ್ ಫೋಟೋವನ್ನು ಗಣರಾಜ್ಯೋತ್ಸವದಂದು ಇಡಬೇಕು ಎಂದು ರಾಜ್ಯ ಸರ್ಕಾರ ಕಳೆದ ವರ್ಷವೇ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಕಡೆ ಗಣರಾಜ್ಯೋತ್ಸ ಆಚರಣೆ ವೇಳೆ ಸಂವಿಧಾನ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಅಂಬೇಡ್ಕರ್ ಭಾವಚಿತ್ರ ಇಟ್ಟು ಗೌರವಿಸಲಾಗುತ್ತಿದೆ.
ಆದರೆ ರಾಯಚೂರು ನ್ಯಾಯಾಲಯದ ಆವರಣದಲ್ಲಿ ನಡೆದಿದೆ ಎನ್ನಲಾದ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ರಾಯಚೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ವರದಿಯಾಗಿವೆ. ಮತ್ತು ಖಂಡನಾ ಹೇಳಿಕೆಗಳು ಹೊರಬಿದ್ದಿವೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಲವು ಸಾಹಿತಿ ಲೇಖಕರು, ಹೋರಾಟಗಾರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಗೆ ಅವಮಾನ ಎಸಗುವ ಇಂತಹ ಘಟನೆಗಳು ದುರಾದೃಷ್ಟಕರ ಎಂಬ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.






