ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ. ಜೈಲು ನಿಯಮಗಳನ್ನು ಮೀರಿ ಬೇರೊಬ್ಬ ಕೈದಿಯ ಸವಲತ್ತು ಬಳಸಿಕೊಂಡು ಪತ್ನಿಗೆ ದೂರವಾಣಿ ಕರೆ ಮಾಡಿರುವ ಆರೋಪ ಪ್ರದೋಷ್ ವಿರುದ್ಧ ಕೇಳಿಬಂದಿದೆ.
ಜೈಲು ಮ್ಯಾನ್ಯುಯಲ್ ಪ್ರಕಾರ, ಕೈದಿಯೊಬ್ಬರು ಮುಂಚಿತವಾಗಿ ನೋಂದಾಯಿಸಿಕೊಂಡಿರುವ ಮೂರು ದೂರವಾಣಿ ಸಂಖ್ಯೆಗಳಿಗಷ್ಟೇ ಕರೆ ಮಾಡಲು ಅವಕಾಶವಿದೆ. ಆದರೆ ಪ್ರದೋಷ್ ಈಗಾಗಲೇ ಮೂವರು ವಕೀಲರ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪತ್ನಿಗೆ ಕರೆ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿಯೊಬ್ಬರ ನೆರವಿನಿಂದ ಬೇರೊಬ್ಬ ಕೈದಿಯ ಸವಲತ್ತು ಬಳಸಿಕೊಂಡು ಪತ್ನಿಯೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಕೈದಿಯ ಮೂಲಕ ‘ಸಂತೋಷ್’ ಎಂಬ ಹೆಸರಿನಲ್ಲಿ ಪತ್ನಿಯ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ಕರೆ ಮಾಡಲಾಗಿದೆ ಎಂಬ ಮಾಹಿತಿ ದೂರಿನಲ್ಲಿ ಉಲ್ಲೇಖವಾಗಿದೆ.

ಈ ಪ್ರಕರಣದಲ್ಲಿ ಮೌನೇಶ್ ಹೆಚ್ ಎಂಬ ಜೈಲು ಸಿಬ್ಬಂದಿ ಪ್ರದೋಷ್ಗೆ ನೆರವು ನೀಡಿದ್ದಾರೆ ಎನ್ನಲಾಗಿದ್ದು, ಜೈಲು ಅಧಿಕಾರಿಗಳ ಗಮನಕ್ಕೆ ವಿಷಯ ಬಂದ ಬಳಿಕ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಲಾಗಿದೆ.ಜೈಲು ಅಧಿಕಾರಿಗಳು ನೀಡಿರುವ ದೂರಿನಲ್ಲಿ ಆರೋಪಿ ಪ್ರದೋಷ್ ಹಾಗೂ ಅವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ಸಿಬ್ಬಂದಿ ಮೌನೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಮ್ಮೆ ಜೈಲಿನೊಳಗಿನ ನಿಯಮ ಉಲ್ಲಂಘನೆಯ ಆರೋಪ ಮುನ್ನೆಲೆಗೆ ಬಂದಿದೆ.






