ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸದ್ಯ ಸುದ್ದಿಯಲ್ಲಿದ್ದಾರೆ. ಜೊತೆಗೆ ರಾಮ್ ಮಾಧವ್ ಕುರಿತು ಕೊಟ್ಟ ಹೇಳಿಕೆಗೆ ಲೀಗಲ್ ನೋಟಿಸ್ ಕೂಡ ನೀಡಲಾಗಿದೆ. ಇಷ್ಟಕ್ಕೂ ಹರಿಪ್ರಸಾದ್ ಅವರಿಗೆ ಲೀಗಲ್ ನೋಟಿಸ್ ಬಂದಿರುವುದಕ್ಕೆ ಕಾರಣ, ಅವರು ಈ ಹಿಂದೆ ಹೇಳಿದ್ದ ಒಂದು ಹೇಳಿಕೆ. ಅವರು ಹೇಳಿದ್ದ ಹೇಳಿಕೆ ಹೀಗಿತ್ತು. “ಪಾಕ್ ಅಧಿಕಾರಿಗಳ ಜೊತೆ ಬಿಜೆಪಿ ನಾಯಕ ರಾಮ್ ಮಾಧವ್ ಗೌಪ್ಯ ಸಭೆ ನಡೆಸಿದ್ದಾರೆ. ಕೊಲಂಬೋ ಹಾಗೂ ಲಂಡನ್ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂಬ ಬಗ್ಗೆ ಅವರು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದರು. ಈ ಆರೋಪಕ್ಕೆ ಬಿಎನ್ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ.

ಪಾಕ್ ಅಧಿಕಾರಿಗಳೊಂದಿಗೆ ರಾಮ್ ಮಾಧವ್ ಗೌಪ್ಯಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಾಮ್ ಮಾಧವ್ ಹೆಸರಿಗೆ ಕಳಂಕಗೊಳಿಸಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿ ಈ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್ಎಸ್ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಹರಿಪ್ರಸಾದ್ ರಾಮ್ ಮಾಧವ್ಗೆ ಕ್ಷಮೆ ಕೇಳಬೇಕೆಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

ಜಿಬಿಎ ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್, ಪಾಕ್ ಐಎಸ್ಐ ಮಾಜಿ ಮೇಜರ್ ಜನರಲ್ ಜೊತೆ ರಹಸ್ಯ ಮೀಟಿಂಗ್ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದರು. ಪಾಕ್ ಜೊತೆ ಚರ್ಚಿಸುವಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ ಅಂತಾನೂ ಆರೋಪ ಮಾಡಿದ್ದರು.

ಆಪರೇಷನ್ ಸಿಂಧೂರ್ ಆಗಿ ಇನ್ನೂ ವರ್ಷವೇ ಆಗಿಲ್ಲ. ಆಗಲೇ ಲಂಡನ್ಗೆ ಹೋಗಿ ರಾಮ್ ಮಾಧವ್ 4 ಸಭೆ ನಡೆಸಿದ್ದಾರೆ. ನಾನು ಬಿಜೆಪಿ ನಾಯಕ ರಾಮ್ ಮಾಧವ್ಗೆ ಕೇಳುತ್ತೇನೆ, ನೀವು ಬೆಂಗಳೂರಿಗೆ ಬರುವಾಗ ಇದಕ್ಕೆ ಉತ್ತರ ಕೊಡಬೇಕು. ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ವಿದೇಶಾಂಗ ಸಚಿವಾಲಯ ಸಭೆ ಮಾಡಬೇಕು. ಇವರು ವಿದೇಶಾಂಗ ಸಚಿವಾಲಯದಲ್ಲಿ ಮಂತ್ರಿ ಕೂಡ ಅಲ್ಲ. ಎಂಎಲ್ಎ ಅಲ್ಲ, ಎಂಪಿ ಅಲ್ಲ, ಕೇವಲ ಆರ್ಎಸ್ಎಸ್ ಪ್ರಚಾರಕ. ಹೀಗಿರುವಾಗ ಇವರಿಗೆ ಸಭೆ ಮಾಡೋಕೆ ಅಧಿಕಾರ ಕೊಟ್ಟವರು ಯಾರು ಎಂದು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್ ಹೇಳಿದ್ದರು. ಹರಿಪ್ರಸಾದ್ ಅವರ ಈ ಹೇಳಿಕೆ ರಾಮ್ ಮಾಧವ್ ಅವರಿಗೆ ಕಳಂಕ ತರುವಂಥದ್ದಾಗಿದೆ. ಹಾಗಾಗಿ ಮಾತಾಡಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟು, ಕ್ಷಮೆ ಕೇಳಬೇಕು ಅಂತ ಬಿಎನ್ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.







