ಭಾರತಕ್ಕೆ ಪೆಗಾಸಸ್ ಹೊಸತೇನಲ್ಲ. 2019ರ ಕೊನೆಯ ದಿನಗಳಲ್ಲಿ ಇದು ನಮ್ಮ ಸಾರ್ವಜನಿಕ ಚರ್ಚೆಯ ಭಾಗವಾಗಿತ್ತು. ಟೊರೋಂಟೋ ವಿಶ್ವವಿದ್ಯಾಲಯದ ಪೌರ ಪ್ರಯೋಗಾಲಯದ ಸಂಶೋಧಕರು ಭಾರತದಲ್ಲಿ ಕೆಲವರ ದೂರವಾಣಿಗೆ ಕರೆ ಮಾಡಿ ಅವರ ವಾಟ್ಸಾಪ್ ಸಂಖ್ಯೆಯ ದುರ್ಬಳಕೆಯಾಗುತ್ತಿದೆ ಎಂದು ಎಚ್ಚರಿಸಿದ್ದರು. ಇದು ಕೊಂಚ ಗಲಿಬಿಲಿ ಉಂಟುಮಾಡಿತ್ತು ಆದರೆ ಈ ವಿವಾದ ಕೂಡಲೇ ತಣ್ಣಗಾಗಿ, ಸಾರ್ವಜನಿಕ ಚರ್ಚೆಯಿಂದ ಸದ್ದಿಲ್ಲದೆ ಮರೆಯಾಗಿತ್ತು. ಆಗಿನ ಚರ್ಚೆಯಲ್ಲಿ ಕೇಳಿಬಂದ ಮುಖ್ಯ ಅಂಶವೆಂದರೆ ವಾಟ್ಸಪ್ ಎಷ್ಟು ಸುರಕ್ಷಿತ ಎನ್ನುವುದು ಮತ್ತು ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಗೂಢಲಿಪೀಕರಣ ಎಷ್ಟು ದುರ್ಬಲವಾಗಿದೆ ಎನ್ನುವುದು.
ವಾಟ್ಸಪ್ ಸಂಸ್ಥೆ ತನ್ನ ಗ್ರಾಹಕರಿಗೆ ಸುರಕ್ಷತೆ ಮತ್ತು ಗೋಪ್ಯತೆಯ ವಿಚಾರದಲ್ಲಿ ನಡೆಸಿದ ಸಾರ್ವಜನಿಕ ಸಂಬಂಧಗಳ ಪ್ರಯತ್ನಗಳು ಅಷ್ಟಾಗಿ ಗಮನ ಸೆಳೆಯಲಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಈ ಎಲ್ಲ ಬೆಳವಣಿಗೆಯ ಪರಿಣಾಮ, ಭಾರತ ಸರ್ಕಾರ ಎನ್ಎಸ್ಒ ಸಿದ್ಧಪಡಿಸಿದ್ದ ಇಸ್ರೇಲಿನ ಸ್ಪೈವೇರ್ ಬೇಹುಗಾರಿಕೆಯ ತಂತ್ರವನ್ನು ಬಳಸಿ ತನ್ನದೇ ಪ್ರಜೆಗಳ ಮೇಲೆ ನಿಗಾವಹಿಸಿದ್ದನ್ನು ನಾವು ಗಮನಿಸಲೇ ಇಲ್ಲ. ಸಂಸತ್ತು ಮತ್ತು ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಸರ್ಕಾರವನ್ನು ಪ್ರಶ್ನಿಸಲೂ ಮುಂದಾಗಲಿಲ್ಲ. ಬಹುಶಃ ಈ ಬೇಹುಗಾರಿಕೆ ಕೇವಲ ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಭ್ರಮೆ ಸಾರ್ವಜನಿಕ ನಿರಾಸಕ್ತಿಗೆ ಕಾರಣವಾಗಿರಲೂಬಹುದು.
ಕಣ್ಗಾವಲಿನ ಪ್ರಭುತ್ವದ ಸೂಚನೆಗಳು
ಈ ಎಳೆಗಳನ್ನು ಕೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ದೀರ್ಘಕಾಲ ಮತ್ತು ಪದೇಪದೇ ಅಂತರ್ಜಾಲ ಸಂಪರ್ಕ ಕಡಿತವಾಗುವುದು; ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸುವವರ ವಿರುದ್ಧ ರಾಜದ್ರೋಹ ಕಾಯ್ದೆಯನ್ನು ಬಳಸುವುದು ; ಯುಎಪಿಎ ಕಾಯ್ದೆಯ ವ್ಯಾಪಕ ಬಳಕೆಯಾಗುತ್ತಿರುವುದು ; ದೇಶದ ಕೋಟ್ಯಂತರ ಜನರ ಬದುಕನ್ನು ಬಾಧಿಸುವ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಶಾಸನಗಳನ್ನು ಸಂಸತ್ತಿನಲ್ಲಿ ಅವಸರದಿಂದ ಅನುಮೋದಿಸುವುದು ; ಮಾಹಿತಿ ಗೋಪ್ಯತೆಯ ಮಸೂದೆಯನ್ನು ಒಂದು ಆಯ್ದ ಸಮಿತಿಗೆ ಒಪ್ಪಿಸುವುದು ; ಡಿಜಿಟಲ್ ಸುದ್ದಿ ತಾಣಗಳನ್ನು ನಿಯಂತ್ರಿಸಲು ನಿಯಮಗಳನ್ನು ರೂಪಿಸುವುದು ; ಮತ್ತು ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಳಸಿದ ತಂತ್ರಗಾರಿಕೆಗಳು, ಇವಾವುದೂ ಸಾರ್ವಜನಿಕರಲ್ಲಿ ಆಘಾತ ಉಂಟುಮಾಡಲಿಲ್ಲ. ಇವೆಲ್ಲವೂ ಪರಸ್ಪರ ಸಂಬಂಧ ಇಲ್ಲದ ವಿದ್ಯಮಾನಗಳು ಎಂದೇ ಭಾವಿಸಲಾಗಿತ್ತು. ಆದರೆ ಈ ಎಲ್ಲ ಬೆಳವಣಿಗೆಗಳೂ ಪರಸ್ಪರ ಸಂಬಂಧ ಹೊಂದಿವೆ ಎಂಬ ಆಲೋಚನೆಯಿಂದ ನೋಡಿದರೆ ಮತ್ತು ಈ ಬೆಳವಣಿಗೆಗಳ ಹಿಂದೆ ತೆರೆಮರೆಯಲ್ಲಿ ಪೆಗಾಸಸ್ ಕಾರ್ಯಪ್ರವೃತ್ತವಾಗಿದೆ ಎಂದು ಯೋಚಿಸಿದರೆ,ಭಾರತ ಒಂದು ಕಣ್ಗಾವಲಿನ ಪ್ರಭುತ್ವ ಎಂಬ ವಾಸ್ತವ ಮನದಟ್ಟಾಗುತ್ತದೆ.
ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡಿದರೆ, ಈ ಪ್ರತಿಯೊಂದು ಬೆಳವಣಿಗೆಯೂ ಕೆಲವೇ ದಿನಗಳ ಕಾಲ ಅಬ್ಬರದ ಸುದ್ದಿ ಮಾಡಿತ್ತು. ಕೆಲವೇ ದಿನಗಳು ಈ ವಿಚಾರಗಳ ಬಗ್ಗೆ ವಿಮರ್ಶಾತ್ಮಕ ಸಂಪಾದಕೀಯಗಳು ಕಂಡುಬಂದವು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚರ್ಚೆಗಳಿಗೊಳಗಾಯಿತು, ರಾಜಕೀಯ ಪಕ್ಷಗಳಿಂದ ಮತ್ತು ಮಾನವ ಹಕ್ಕು ಸಂಘಟನೆಗಳಿಂದ ಸಣ್ಣ ಮಟ್ಟದ ಪ್ರತಿರೋಧ ವ್ಯಕ್ತವಾಯಿತು. ಈಗಲೂ ಈ ಬೆಳವಣಿಗೆಗಳನ್ನು ಪ್ರತ್ಯೇಕವಾಗಿ, ಪರಸ್ಪರ ಸಂಬಂಧವಿಲ್ಲದಂತೆಯೇ ಭಾವಿಸಿದರೆ, ನಮ್ಮ ರಾಜಕೀಯ ಸಂಕಥನದಲ್ಲಿ ಪೆಗಾಸಸ್ನ ಎರಡನೆಯ ಆವೃತ್ತಿಯ ಪ್ರವೇಶದ ಸಾಧ್ಯತೆಗಳು ಮೊದಲ ಆವೃತ್ತಿಗಿಂತಲೂ ಭಿನ್ನವಾಗೇನೂ ಇರುವುದಿಲ್ಲ ಎಂಬ ಅಭಿಪ್ರಾಯವೇ ಉಳಿಯುತ್ತದೆ. ಆದರೆ ಈ ಬಾರಿ ಪೆಗಾಸಸ್ ಎರಡು ಮಹತ್ತರ ವ್ಯತ್ಯಾಸಗಳೊಂದಿಗೆ ಆಗಮಿಸಿದೆ.
ಸರ್ಕಾರದ ಗುರಿ ಮತ್ತು ಉದ್ದೇಶ
ಈ ಬಾರಿ ಸರ್ಕಾರ ವಹಿಸಿರುವ ಪಾತ್ರವನ್ನು ಕುರಿತಂತೆ ಹೆಚ್ಚು ಗಮನ ನೀಡಬೇಕಿದೆ. ವಾಟ್ಸಪ್ ಅಥವಾ ಇತರ ಸೇವಾ ಕಂಪನಿಗಳ ಗೂಢಲಿಪೀಕರಣ ಮತ್ತಿತರ ಸುರಕ್ಷತಾ ವಿಧಾನಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಿಲ್ಲ. ಈ ಕಣ್ಗಾವಲಿಗೆ ಒಳಗಾಗಿರುವ ವ್ಯಕ್ತಿಗಳು ಸಾಧಾರಣ ಕಾರ್ಯಕರ್ತರಲ್ಲ. ವಿರೋಧ ಪಕ್ಷದ ನಾಯಕರಿಂದ ಹಿಡಿದು, ಸಾಂವಿಧಾನಿಕ ಅಧಿಕಾರಿಗಳು, ಅಸಂಖ್ಯಾತ ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರು, ಸರ್ಕಾರದಲ್ಲಿರುವ ಸಚಿವರು, ಆಡಳಿತ ಪಕ್ಷದ ಸದಸ್ಯರು, ಹಲವು ರಾಜಕೀಯ ನಾಯಕರು, ನಿವೃತ್ತ ಅಥವಾ ಸೇವೆಯಲ್ಲಿರುವ ಅಧಿಕಾರಿಗಳು, ಹೀಗೆ ಸರ್ವವ್ಯಾಪಿಯಾಗಿ ಎಲ್ಲರನ್ನೂ ಒಳಗೊಂಡಿದೆ. ಈ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸರ್ಕಾರದ ದೃಷ್ಟಿಯಲ್ಲಿ ಪ್ರಭುತ್ವದ ಹಿತಾಸಕ್ತಿ ಮತ್ತು ಆಡಳಿತಾರೂಢ ಪಕ್ಷದ ಹಿತಾಸಕ್ತಿ ಒಂದೇ ಎಂದು ಭಾವಿಸಿದಂತಿದೆ. ನಿರ್ದಿಷ್ಟ ಕಣ್ಗಾವಲಿಗೆ ಗುರಿಯಾದ ಉದ್ದೇಶಿತ ವ್ಯಕ್ತಿಗಳ ಜಾಗತಿಕ ಪಟ್ಟಿಯನ್ನು ಮತ್ತು ಅದರ ವ್ಯಾಪಕತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಉದ್ದೇಶಿತ ಪತ್ರಿಕೆಗಳ ಸ್ಥಾನಮಾನಗಳನ್ನು ಗಮನಿಸಿದರೆ, ಗಡಿಯಾಚೆಗಿನ ಸಹಕಾರದಿಂದ ಕಾರ್ಯಗತವಾಗಿರುವ ಈ ಬೇಹುಗಾರಿಕೆಯ ಗಂಭೀರ ಪರಿಣಾಮಗಳನ್ನು ಊಹಿಸಬಹುದು.
ಪೆಗಾಸಸ್ನ ಎರಡನೆ ಆವೃತ್ತಿಯಲ್ಲಿ ಮತ್ತೊಂದು ವೈಶಿಷ್ಟ್ಯವೂ ಇದೆ. ಶಸ್ತ್ರಾಸ್ತ್ರ ಶ್ರೇಣಿಯ ಕಣ್ಗಾವಲು ಮತ್ತು ಸರ್ಕಾರದ ಸಹಯೋಗವನ್ನು ಇದು ಮುನ್ನೆಲೆಗೆ ತಂದಿದ್ದು ಜನರನ್ನು ಗೊಂದಲಕ್ಕೀಡುಮಾಡುವ ಯಾವುದೇ ಕ್ರಮವನ್ನು ಕಾಣಲಾಗುವುದಿಲ್ಲ. ಸರ್ಕಾರ ಮತ್ತು ತಂತ್ರಜ್ಞಾನದ ನಡುವಿನ ಸಂಘರ್ಷ ಎಂದೇ ಈವರೆಗೂ ಪರಿಗಣಿಸಲಾಗಿದ್ದ ಬೆಳವಣಿಗೆಗಳು ಜನರನ್ನು ಸರ್ಕಾರಕ್ಕೆ ಬೆಂಬಲ ಸೂಚಿಸುವಂತೆ ಪ್ರೇರೇಪಿಸಿದ್ದವು. ನಮ್ಮ ಪರವಾಗಿಯೇ ಪರಸ್ಪರ ಸಂಘರ್ಷದಲ್ಲಿ ತೊಡಗಿರುವಂತೆ ಸರ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಗಳು ವರ್ತಿಸಿದ್ದವು. ಆದರೆ ವಾಸ್ತವ ಎಂದರೆ, ಅದು ನಮ್ಮ ಖಾಸಗಿ ಮಾಹಿತಿಯನ್ನು ಪಡೆಯಲು ಮತ್ತು ನಿಯಂತ್ರಿಸಲು ನಡೆದ ಒಂದು ಸಂಘರ್ಷವಾಗಿತ್ತು. ಪ್ರಜೆಗಳ ಮಾಹಿತಿಯನ್ನು ಸಂಗ್ರಹಿಸಿ, ವಶಪಡಿಸಿಕೊಂಡು, ಪ್ರತಿರೋಧ ಇಲ್ಲವಾಗಿಸಿ, ವಿರೋಧ ಇಲ್ಲದಂತೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಮೇಲ್ನೋಟಕ್ಕೆ ಪ್ರಜೆಗಳ ಖಾಸಗಿತನ, ಗೋಪ್ಯತೆ ಮತ್ತು ಹಿತಾಸಕ್ತಿಯನ್ನು ಕಾಪಾಡಲೆಂದೇ ಸರ್ಕಾರ ಈ ತಂತ್ರಜ್ಞಾನ ಸಂಸ್ಥೆಗಳೊಡನೆ ಸೆಣಸಾಡುತ್ತಿದೆ ಎಂದು ಬಿಂಬಿಸಲಾಗಿತ್ತು.
ತಂತ್ರಜ್ಞಾನ ಕಂಪನಿಗಳು ನಮ್ಮ ಮಾಹಿತಿಯನ್ನು ಸಂಗ್ರಹಿಸಿ, ಅದರಿಂದಲೇ ಭವಿಷ್ಯತ್ತಿನ ಸಂಭಾವ್ಯ ಉತ್ಪನ್ನಗಳನ್ನು ಸಿದ್ಧಪಡಿಸಿ, ಜಾಹಿರಾತು ಕಂಪನಿಗಳಿಗೆ ಮಾರಾಟ ಮಾಡಲು ಸಜ್ಜಾಗಿದ್ದವು. ಪ್ರಜೆಗಳ ಮೇಲೆ ಕಣ್ಗಾವಲು ಸಾಧಿಸಲು ಸರ್ಕಾರ ಮತ್ತು ತಂತ್ರಜ್ಞಾನ ಕಂಪನಿಗಳು ಪರಸ್ಪರ ಪೈಪೋಟಿ ನಡೆಸಿರುವುದನ್ನು ಈ ಬೆಳವಣಿಗೆಗಳಲ್ಲಿ ಗಮನಿಸಬಹುದು. ಸರ್ಕಾರದ ಉದ್ದೇಶ ನಿಯಂತ್ರಣವಾಗಿದ್ದರೆ, ಕಂಪನಿಗಳ ಗುರಿ ಲಾಭಗಳಿಕೆಯಾಗಿತ್ತು. ಆದರೆ ಈ ಎರಡೂ ಸಂಸ್ಥೆಗಳ ಹಿತಾಸಕ್ತಿಗಳು ಒಂದಾಗುವ ಸಾಧ್ಯತೆಗಳು, ಮೇಲ್ನೋಟಕ್ಕೆ ಕಾಣದಿದ್ದರೂ, ಇದ್ದೇ ಇರುತ್ತವೆ. ಪೆಗಾಸಸ್ ವಿಚಾರದಲ್ಲಿ ಈ ಸಹಯೋಗ ಸ್ಪಷ್ಟವಾಗಿದೆ. ಎನ್ಎಸ್ಒ ತನ್ನ ಕಣ್ಗಾವಲು ತಂತ್ರಜ್ಞಾನವನ್ನು ಬಳಸಿ ಭಾರತದ ಪ್ರಜೆಗಳ ಮಾಹಿತಿಯನ್ನು ಶೇಖರಿಸಲು ಸರ್ಕಾರದೊಂದಿಗೆ ಪೈಪೋಟಿಯನ್ನೇನೂ ಮಾಡುವುದಿಲ್ಲ. ಇದು ಕೇವಲ ಕಣ್ಗಾವಲು ತಂತ್ರಜ್ಞಾನವನ್ನು ಒಂದು ಸೇವೆಯ ರೀತಿಯಲ್ಲಿ ಸರ್ಕಾರಕ್ಕೆ ಒದಗಿಸುವ ಒಂದು ವ್ಯವಹಾರವಷ್ಟೇ. ಈ ಹಿನ್ನೆಲೆಯಲ್ಲಿ ನೋಡಿದಾಗ, ಸರ್ಕಾರವನ್ನು ಒಂದು ಉತ್ತರದಾಯಿತ್ವ ಇರುವ ಸಂಸ್ಥೆ ಎಂದು ನೋಡಲು ಪೆಗಾಸಸ್ ಪ್ರಜೆಗಳಿಗೆ ಅವಕಾಶವನ್ನು ನೀಡಿದೆ ಎನ್ನಬಹುದು.
ಸರ್ಕಾರದ ದಾಷ್ಟ್ರ್ಯ ಮತ್ತು ಹಠಮಾರಿ ಧೋರಣೆ
ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಒಂದು ನಿರ್ದಿಷ್ಟ ಕಾರ್ಯತಂತ್ರವನ್ನು ಅನುಸರಿಸಿಯೇ ವರ್ತಿಸುತ್ತಿರುವುದು ಸ್ಪಷ್ಟ. ಈ ಮಾಹಿತಿ ಸೋರಿಕೆಯಿಂದ ಉದ್ಭವಿಸಿರುವ ಗಂಭೀರ ಪ್ರಶ್ನೆಗಳನ್ನು ಸರ್ಕಾರ ಅಲಕ್ಷಿಸಿದೆ. ಈ ಮಾಹಿತಿಯನ್ನು ಒದಗಿಸಿದ ಜಾಗತಿಕ ಸಂಸ್ಥೆ ಮತ್ತು ಮಾಧ್ಯಮ ಸಮೂಹಗಳು ನೀಡಿರುವ ಮಾಹಿತಿಗಳ ವಿಶ್ವಾಸಾರ್ಹತೆಯನ್ನೇ ಆಳುವ ವರ್ಗದ ಪ್ರತಿನಿಧಿಗಳು ಪ್ರಶ್ನಿಸಲಾರಂಭಿಸಿದ್ದಾರೆ. ಈ ಸುದ್ದಿಯನ್ನು ಪ್ರಕಟಿಸಿದ ಸಂಸ್ಥೆಗಳು ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಶಿಥಿಲಗೊಳಿಸುವ ದುರುದ್ದೇಶ ಹೊಂದಿವೆ ಎಂದು ಸರ್ಕಾರ ಆರೋಪಿಸುತ್ತದೆ. ಸರ್ಕಾರದ ಬೆಂಬಲಿಗರೂ ಸಹ ಈ ಸುದ್ಧಿ ಮಾಧ್ಯಮಗಳು ದೇಶಕ್ಕೆ ಅವಮಾನ ಮಾಡುವ ದುರುದ್ದೇಶ ಹೊಂದಿವೆ ಎಂದು ಆರೋಪಿಸುತ್ತಾರೆ. ಸೋರಿಕೆಯಾಗಿರುವ ಮಾಹಿತಿಯಲ್ಲಿ ಲಭ್ಯವಾಗಿರುವ ದೂರವಾಣಿ ಸಂಖ್ಯೆಗಳ ಮೂಲದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವ ಮೂಲಕ ಸರ್ಕಾರದ ಸಮರ್ಥಕರು ಇವೆಲ್ಲವೂ ಕ್ಷುಲ್ಲಕ ಆರೋಪಗಳು ಎಂದು ಹೇಳುತ್ತಾರೆ.
ಈ ಮಾಹಿತಿಯನ್ನು ಒದಗಿಸಿರುವ ಒಕ್ಕೂಟ ತನ್ನ ಪೀಠಿಕೆಯಲ್ಲಿ ಬಹಳ ಎಚ್ಚರಿಕೆಯ ಪದಗಳನ್ನು ಬಳಸಿರುವುದೇ , ಈ ಮಾಹಿತಿಯ ಮಹತ್ವವನ್ನು ಪ್ರಶ್ನಿಸುವಂತೆ ಮಾಡುತ್ತದೆ ಎನ್ನುವುದು ಸರ್ಕಾರದ ಸಮರ್ಥಕರ ಅಂಬೋಣ. ಈ ಒಕ್ಕೂಟವು ತಾನು ನೀಡಿರುವ ಮಾಹಿತಿ ಪರಿಪೂರ್ಣವಾದದ್ದು ಎಂದು ನೇರವಾಗಿ ಎಲ್ಲಿಯೂ ಹೇಳಿಲ್ಲ. ಎನ್ಎಸ್ಒ ಸಮೂಹದ ನೆರವು ಪಡೆದಿರುವ ಸರ್ಕಾರದ ದೃಷ್ಟಿಯಲ್ಲಿ ಮುಖ್ಯ ಎನಿಸುವ 50 ಸಾವಿರ ಫೋನ್ ಸಂಖ್ಯೆಗಳನ್ನು ಈ ಪಟ್ಟಿ ಸೂಚಿಸುತ್ತದೆ ಎಂದಷ್ಟೇ ಹೇಳಿದೆ. ಎನ್ಎಸ್ಒ ಸಂಸ್ಥೆಯ ನೆರವು ಕೋರಿರುವ ಸರ್ಕಾರ ತನ್ನ ಕಣ್ಗಾವಲಿಗೆ ಒಳಗಾಗಬೇಕಾದ ಸಂಭಾವ್ಯ ವ್ಯಕ್ತಿಗಳ ಪಟ್ಟಿಯನ್ನು ಒದಗಿಸಿರುವುದನ್ನು ಈ ಮಾಹಿತಿ ದೃಢೀಕರಿಸುತ್ತದೆ. ಈ ಪಟ್ಟಿಯು ಸರ್ಕಾರದ ಉದ್ದೇಶವನ್ನು ಸೂಚಿಸುವ ಒಂದು ಮಾಹಿತಿಯಾಗಿದ್ದು, ಈ ಪಟ್ಟಿಯಲ್ಲಿ ನೀಡಲಾಗಿರುವ ಸಂಖ್ಯೆಯನ್ನು ನಿಜಕ್ಕೂ ಶೋಧಿಸಲಾಗಿದೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ ಎಂದೂ ಹೇಳಲಾಗಿದೆ.
ಈ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳ ನಡುವೆ ಅಮೂಲ್ಯ ಮಾಹಿತಿ ಲಭಿಸಿದ್ದು ಸರ್ಕಾರ ಈ ಕುರಿತು ಚರ್ಚೆ ನಡೆಸಲೂ ಹಿಂಜರಿಯುತ್ತಿರುವುದು ಸ್ಪಷ್ಟ. ಸೂಚಿಸಲ್ಪಟ್ಟ ಕೆಲವು ಫೋನ್ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಮಾಹಿತಿಯಲ್ಲಿ ಲಭ್ಯವಾಗಿರುವ ಸಮಯ ಮತ್ತು ದಿನಾಂಕಕ್ಕೂ, ಪೆಗಾಸಸ್ ಚಟುವಟಿಕೆಯನ್ನು ಆರಂಭಿಸಿದ ಸಮಯಕ್ಕೂ ಹೋಲಿಕೆಯಾಗುತ್ತದೆ. ಕೆಲವೆಡೆ ಕೆಲವೇ ಕ್ಷಣಗಳ ಅಂತರ ಮಾತ್ರ ಕಾಣುತ್ತದೆ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ನಡೆಸಿದ ಒಂದು ಪರಿಶೀಲನೆಯ ಅನುಸಾರ, 67 ದೂರವಾಣಿ ಸಂಖ್ಯೆಗಳ ಪೈಕಿ 23 ಕಣ್ಗಾವಲಿಗೆ ಒಳಗಾಗಿವೆ. 14 ಸಂಖ್ಯೆಗಳಲ್ಲಿ ಈ ಪ್ರಯತ್ನವನ್ನು ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ. ಇನ್ನುಳಿದ ಸಂಖ್ಯೆಗಳು ಮೊಬೈಲ್ ಹ್ಯಾಂಡ್ಸೆಟ್ ಬದಲಾಯಿಸಿರುವುರಿಂದ ಅಥವಾ ಆಂಡ್ರಾಯ್ಡ್ ಬಳಕೆದಾರರು ತಮ್ಮ ಮಾಹಿತಿಯ ದಾಖಲೆಯನ್ನು ಸಂರಕ್ಷಿಸದೆ ಇರುವುದರಿಂದ ಯಾವುದೇ ಸೂಚನೆಯನ್ನು ನೀಡುತ್ತಿಲ್ಲ ಎಂದು ಅಮ್ನೆಸ್ಟಿ ಹೇಳಿದೆ. ಈ ಅಲ್ಪ ಮಾಹಿತಿಯನ್ನು ಆಧರಿಸಿಯೇ ಪೂರ್ಣಪ್ರಮಾಣದ ತನಿಖೆಯನ್ನು ಕೈಗೊಳ್ಳಬೇಕಿದೆ. ಎಲ್ಲ ಸೂಚಿತ ಸಂಖ್ಯೆಗಳನ್ನೂ ಕೂಲಂಕುಷವಾಗಿ ಪರಿಶೀಲಿಸುವ ಅವಶ್ಯಕತೆಯೂ ಇದೆ ಎನ್ನಲು ಈ ಮಾಹಿತಿಯೇ ಆಧಾರವಾಗಿದೆ.
ಭಾರತಕ್ಕೆ ಸಂಬಂಧಿಸಿದಂತೆ, ಈ ಪಟ್ಟಿಯಲ್ಲಿ ಮುನ್ನೂರು ಮೊಬೈಲ್ ಸಂಖ್ಯೆಗಳು ದಾಖಲಾಗಿವೆ. ಇವುಗಳ ಪೈಕಿ ಹತ್ತು ಸಂಖ್ಯೆಗಳ ಫೊರೆನ್ಸಿಕ್ ಪರೀಕ್ಷೆ ನಡೆಸಲಾಗಿದ್ದು ಈ ಸಂಖ್ಯೆಗಳು ಪೆಗಾಸಸ್ ಕಣ್ಗಾವಲಿಗೆ ಒಳಗಾಗಿರುವುದು ಅಥವಾ ಇದರ ಪ್ರಯತ್ನದ ಸೂಚನೆಗಳನ್ನು ನೀಡುತ್ತವೆ. ಈ ಮಾಹಿತಿಯೇ ಪರಿಪೂರ್ಣ ತನಿಖೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಆದರೆ ಸರ್ಕಾರ ಸೂಚಿತ, ಸಂಭಾವ್ಯ , ಸಾಧ್ಯತೆಯುಳ್ಳ ಎಂಬ ಪದಗಳ ಬಳಕೆಯನ್ನೇ ಗಮನದಲ್ಲಿಟ್ಟುಕೊಂಡು, ಬೇಹುಗಾರಿಕೆಯ ಆರೋಪಗಳನ್ನು ನಿರಾಕರಿಸುತ್ತಿದೆ. ಈ ಪಟ್ಟಿಯ ಮೂಲ ಆಕರವನ್ನೇ ಪ್ರಶ್ನಿಸುವ ಭಾರತ ಸರ್ಕಾರದ ಪ್ರತಿಪಾದನೆ ಅರ್ಥವಿಲ್ಲದ್ದು ತನಿಖಾ ಪತ್ರಿಕೋದ್ಯಮಕ್ಕೆ ತನ್ನ ಆಕರಗಳನ್ನು ಬಹಿರಂಗಪಡಿಸುವ ಅವಶ್ಯಕತೆ ಇಲ್ಲ. ತನ್ನ ಮೂಲ ಆಕರಗಳ ಗುರುತನ್ನು ಕಾಪಾಡುವುದು ಯಾವುದೇ ತನಿಖಾ ಪತ್ರಿಕೋದ್ಯಮದ ನೈತಿಕ ನಿಲುವು ಆಗಿರುತ್ತದೆ.
ಸರ್ಕಾರ ಮುಂದಿಡುವ ಪ್ರಶ್ನೆಗಳಷ್ಟೇ ಮುಖ್ಯವಾಗಿರುವುದು , ಸರ್ಕಾರ ಸಾರ್ವಜನಿಕ ವಲಯದ ಪ್ರಶ್ನೆಗಳನ್ನು ಉತ್ತರಿಸಲು ನಿರಾಕರಿಸುತ್ತಿರುವುದು. ಪೆಗಾಸಸ್ ಬೇಹುಗಾರಿಕೆ ತಂತ್ರಜ್ಞಾನವನ್ನು ಸರ್ಕಾರ ಖರೀದಿಸಿದೆಯೋ ಇಲ್ಲವೋ ಎಂದು ಸರ್ಕಾರ ದೃಢವಾಗಿ ಹೇಳುತ್ತಿಲ್ಲ. 2019ರಲ್ಲಿ ಪೆಗಾಸಸ್ ಮೊದಲು ಕಾಣಿಸಿಕೊಂಡಾಗಲೂ ಸರ್ಕಾರ ಸಮರ್ಪಕ ಉತ್ತರ ನೀಡಲಿಲ್ಲ. ಈ ಬಾರಿಯೂ ಯಾವುದೇ ಪ್ರತಿಕ್ರಿಯೆ ನೀಡದಿರಲು ದೃಢ ನಿಶ್ಚಯ ಮಾಡಿದಂತಿದೆ. ಬದಲಾಗಿ ರಾಜಕೀಯ ವಿರೋಧಿಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು, ಮಾನವ ಹಕ್ಕು ಸಂಘಟನೆಗಳನ್ನು ಮತ್ತು ನಾಗರಿಕ ಸಮಾಜವನ್ನು ನಿರಾಕರಿಸುವುದರಲ್ಲಿ ತೊಡಗಿದೆ. ನಾಗರಿಕ ಸಮಾಜ ಮತ್ತು ಮಾಧ್ಯಮಗಳೂ ಸಹ ಈ ಒತ್ತಡವನ್ನು ದೀರ್ಘ ಕಾಲ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರಕ್ಕೆ ತಿಳಿದಿದೆ. ಸಂಸತ್ತಿನಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿರುವ ಒಂದು ಸರ್ಕಾರ ದೃಢ ನಿಶ್ಚಯವನ್ನು ಹೊಂದಿದ್ದರೆ, ರಾಜಕೀಯ ವಿರೋಧಿಗಳ ಪ್ರಬಲ ಕ್ಷೀಣಿಸುವವರೆಗೂ ಕಾಯುವ ಮೂಲಕ ತನ್ನ ರಾಜಕೀಯ ಬಂಡವಾಳವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಉತ್ತರದಾಯಿತ್ವವನ್ನು ಮುನ್ನೆಲೆಗೆ ತರಲು ಶಕ್ತಿ ಇರುವ ಏಕೈಕ ಸಂಸ್ಥೆ ಎಂದರೆ ನ್ಯಾಯಾಂಗ. ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಉನ್ನತ ನ್ಯಾಯಾಂಗದ ಇತ್ತೀಚಿನ ನಡವಳಿಕೆಗಳು ಕೆಲವೊಮ್ಮೆ ಆಶಾದಾಯಕವಾಗಿದ್ದರೆ ಕೆಲವೊಮ್ಮೆ ನಿರಾಶಾದಾಯಕವಾಗಿಯೂ ಇದೆ. ನ್ಯಾಯಾಂಗ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದರ ಮೇಲೆ ಭಾರತದ ಭವಿಷ್ಯ ಅವಲಂಬಿಸಿದೆ. ನ್ಯಾಯಾಂಗದ ಮುಂದಿರುವ ಆಯ್ಕೆಗಳು ಸುಸ್ಪಷ್ಟವಾಗಿವೆ. ಹಾಲಿ ಕೇಂದ್ರ ಸರ್ಕಾರಕ್ಕೆ ಭಾರತವನ್ನು ಒಂದು ಕಣ್ಗಾವಲು ದೇಶವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸುವುದು ಒಂದು ಆಯ್ಕೆಯಾದರೆ, ಸರ್ಕಾರದ ನಡವಳಿಕೆಗೆ ತಡೆಯೊಡ್ಡಿ ಭಾರತದ ಪ್ರಜೆಗಳಿಗೆ ಒಂದು ಸ್ವತಂತ್ರ, ಉದಾರವಾದಿ ಪ್ರಭುತ್ವದಲ್ಲಿ ಬದುಕುವ ಅವಕಾಶವನ್ನು ನೀಡುವುದು ಮತ್ತೊಂದು ಆಯ್ಕೆ. ಇನ್ನು ಹೆಚ್ಚು ಸಮಯ ಉಳಿದಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ