ರಾಷ್ಟ್ರ ರಾಜಕಾರಣದಲ್ಲಿ ಇತ್ತೀಚಿಗೆ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ 5 ರಾಜ್ಯಗಳಲ್ಲಿ ಒಟ್ಟು 6 ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ.ಇದರಲ್ಲಿ ಐವರು ಬಿಜೆಪಿಯವರಾದರೆ ಮತ್ತೊಬ್ಬರು ಕಾಂಗ್ರೆಸ್ನವರು.
ಈಗ ರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟ ನೋಡಿದರೆ ಮುಂಬರುವ ಚುನಾವಣೆಗಳಲ್ಲಿ ಆ ಪಕ್ಷಗಳಿಗೆ ನಾಯಕತ್ವ ಬದಲಾವಣೆ ಕೂಗಿನಲ್ಲಿ ಹಿರಿಯ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ನಾವು ಹೇಳಲು ಹೊರಟಿರುವುದು ಪಂಜಾಬ್ ಮತ್ತು ಕರ್ನಾಟಕ ರಾಜಕೀಯ ಮೇಲಾಟದ ಬಗ್ಗೆ.
ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಅದರ ಮುಂದಿನ ನಡೆಯಂತೆ ಮುಖ್ಯಮಂತ್ರಿ ಬದಲಾವಣೆ ಮಾಡಿಸುವಲ್ಲಿ ಅಲ್ಲಿನ ನಾಯಕರು, ಶಾಸಕರು, ಸಚಿವರು ಯಶಸ್ವಿಯಾಗಿದ್ದರು. ಅದರಂತೆ, ಕರ್ನಾಟಕದಲ್ಲಿಯು ಸಹ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಕೇಳಿಬಂದಿತ್ತು ಅದರಂತೆ, ಮುಖ್ಯಮಂತ್ರಿ ಬದಲಾವಣೆ ಮಾಡಿಸುವಲ್ಲಿ ಬಿಜೆಪಿಯಲ್ಲಿನ ವಿರೋಧಿ ಬಣ ಯಶಸ್ವಿಯಾಗಿತ್ತು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ. ಆದರೆ, ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಯಸ್ಸಿನ ಕಾರಣವನ್ನು ಕೊಟ್ಟು ಅವರನ್ನು ಕೆಳಗಿಳಿಸಲಾಗಿತ್ತು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ ವಿರೋಧಿ ಬಣ ಕೂಡ ಬಿಜೆಪಿ ಕಾರ್ಯಕರ್ತರ ಮತ್ತು ಯಡಿಯೂರಪ್ಪನವರ ಆಪ್ತ ಬಳಗದ ಕೆಂಗಣ್ಣಿಗೆ ಗುರಿಯಾಗಿದ್ದರು.
ಅದರಂತೆ ಪಂಜಾಬ್ನಲ್ಲಿ ಕೂಡ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ದ ಭಿನ್ನಬಿಪ್ರಾಯ ಭುಗಿಲೆದ್ದಿತ್ತು. ಅದರಂತೆ ಅವರ ಪಕ್ಷದ ಹೈ ಕಮಾಂಡ್ ಅವರಿಗೆ ರಾಜೀನಾಮೆಯನ್ನು ನೀಡಲು ಸೂಚಿಸಿತ್ತು. ಅದರಂತೆ ಅವರು ರಾಜೀನಾಮೆಯನ್ನು ಸಹ ನೀಡಿದರು. ಗುರುವಾರ ಸುದ್ದೀಘೋಷ್ಠಿ ನಡೆಸಿದ ಅವರು ತಾವು ಕಾಂಗ್ರೆಸ್ ಪಕ್ಷ ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ ಮತ್ತು ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಸಂಜೆ ಅಮಿತ್ ಷಾರನ್ನು ಭೇಟಿ ಮಾಡಿದ ಕ್ಯಾಪ್ಟನ್ ಷಾರೊಂದಿಗೆ ಕೆಲವು ಹೊತ್ತು ಮಾತುಕತೆ ನಡೆಸಿದರು ಇದು ಅವರು ಬಿಜೆಪಿ ಸೇರುವ ವದಂತಿಗಳಿಗೆ ಪುಷ್ಟಿ ನೀಡಿದವು. ಒಂದು ವೇಳೆ ಅವರು ಬಿಜೆಪಿಗೆ ಸೇರ್ಪಡೆಯಾದರೆ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನವನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಮೊದಲಿನಿಂದಲು ವಿರೋಧಿಸುತ್ತಾ ಬಂದಿರುವ ಕ್ಯಾಪ್ಟನ್ ಬಿಜೆಪಿ ಸೇರಿದರೆ ಕೇಂದ್ರ ಸರ್ಕಾರದ ಪರ ಮೃದು ಧೋರಣೆ ತಾಳಬೇಕಾಗುತ್ತದೆ ಎಂದು ಹೇಳಲಾಗಿದೆ.
ಯಡಿಯೂರಪ್ಪ ಮತ್ತು ಅಮರೀಂದರ್ ಸಿಂಗ್ ಸಮಾನ ವಯಸ್ಸಿನವರು ಆದರೆ ಅಮರೀಂದರ್ ಸಿಂಗ್ರವರಿಗೆ ಕೊಡುತ್ತಿರುವ ಅವಕಾಶವನ್ನ ಯಡಿಯೂರಪ್ಪನವರಿಗೆ ಯಾಕೆ ಕೊಡಲಿಲ್ಲ ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ. ಏಕೆಂದರೆ, ಇದೇ ಬಿಎಸ್ವೈರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅವರಿಗೆ ವಯಸ್ಸಾಗಿದೆ ಎಂಬ ಕಾರಣವನ್ನು ನೀಡಿ ಅವರನ್ನು ಕೆಳಗಿಳಿಸಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ಗೆ ಕ್ಯಪ್ಟನ್ರನ್ನು ಪಕ್ಷಕ್ಕೆ ಆಹ್ವಾನಿಸುವ ಸಮಯದಲ್ಲಿ ಅವರಿಗೆ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಆಮಿಷವನ್ನು ನೀಡಿದಾಗ ವಯಸ್ಸಿನ ಮಿತಿ ಬರಲಿಲ್ಲವೇ ಎಂಬುದು ಈಗ ಪ್ರಶ್ನೆಯಾಗಿ ಉದ್ಭವಿಸಿದೆ.
ಭಾರತದಲ್ಲಿನ ಎರಡನೇ ಅಲೆ ಶುರುವಾಗುವ ಮುನ್ನ ನಡೆದಿದ ಪಂಚ ರಾಜ್ಯ ಚುನಾವನೆಯಲ್ಲಿ ಬಿಜೆಪಿ ಪಕ್ಷ ಕೇರಳದಲ್ಲಿ 88ವರ್ಷದ ಮೆಟೋಮ್ಯಾನ್ ಶೀಧರನ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ, ಬಿಜೆಪಿಯಲ್ಲಿ ಹೊಸ ತಲೆಮಾರಿನ ನಾಯಕರ ಆಗಮನದ ನಂತರ ಬಿಜೆಪಿಯಲ್ಲಿ 75ವರ್ಷ ದಾಟಿದವರಿಗೆ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲವೆಂದು ತಿಳಿಸಲಾಗಿದೆ. ಇದೇ ಕಾರಣಕ್ಕೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲಾಗಿತ್ತು.
ಇದೀಗ ಕ್ಯಾಪ್ಟನ್ ಮತ್ತು ಶ್ರೀಧರನ್ ಅವರಿಗೆ ಬಿಜೆಪಿಯಲ್ಲಿನ ಮಿತಿಗಿಂತ ಹೆಚ್ಚಿನ ವಯಸ್ಸಾಗಿದ್ದರು ಪಕ್ಷಕ್ಕೆ ಲಾಭವಾಗುತ್ತದೆ ಎಂಬ ನಿಟ್ಟಿನಲ್ಲಿ ಅವರಿಗೆ ಕೊಡುತ್ತಿರುವ ಅವಕಾಶವನ್ನು ಬಿಎಸ್ವೈಗೆ ಕೊಟ್ಟಿದ್ದರೆ ರಾಜ್ಯದಲ್ಲಿ ಬಿಜೆಪಿಯನ್ನು ಮತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದದು ಮಾತ್ರ ಸುಳ್ಳಲ್ಲ.
ಬಿಜೆಪಿ ಹೈಕಮಾಂಡ್ನ ಈ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಬಿಜೆಪಿಗೆ ಹೇಗೆ ಮುಳುವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.