ಸುಮಾರು ಆರು ತಿಂಗಳ ಬಳಿಕ ಎರಡನೇ ಬಾರಿಗೆ ‘ಬುಲ್ಲಿ ಬಾಯಿ’ ಎಂಬ ವೇದಿಕೆಯ ಮೂಲಕ ಇಂಟರ್ನೆಟ್ ಟ್ರೋಲ್ಗಳು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವಹೇಳನಕಾರಿ ಶೀರ್ಷಿಕೆಗಳೊಂದಿಗೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಜುಲೈನಲ್ಲಿ ‘ಸುಲ್ಲಿ ಡೀಲ್ಸ್’ ಎಂಬ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ 80 ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರ ಪ್ರೊಫೈಲ್ಗಳನ್ನು ರಚಿಸಿ ‘ದಿನದ ಡೀಲ್’ (ಡೀಲ್ ಆಫ್ ದಿ ಡೇ) ಎಂದು ಶೀರ್ಷಿಕೆ ನೀಡಿ ಹರಾಜಿಗೆ ಇಡಲಾಗಿತ್ತು. ಈ ಅಪ್ಲಿಕೇಷನ್ನಲ್ಲಿ ಮಹಿಳೆಯರು ಆನ್ಲೈನ್ನ ಇತರ ಪ್ಲಾಟ್ಫಾರ್ಮ್ಗಳಲ್ಲಿ ಅಪ್ಲೋಡ್ ಮಾಡಿದ್ದ ಫೊಟೋಗಳನ್ನು ಬಳಸಲಾಗಿತ್ತು. ಸುಲ್ಲಿ ಎಂಬುವುದು ಒಂದು ಅವಹೇಳನಕಾರಿ ಹಿಂದಿ ಗ್ರಾಮ್ಯ ಪದವಾಗಿದ್ದು, ಬಲಪಂಥೀಯ ಹಿಂದೂ ಟ್ರೋಲ್ಗಳು ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಲು ಬಳಸುತ್ತಾರೆ. ಈ ಪ್ರಕರಣದಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ, ಆದರೆ, ಇಲ್ಲಿಯವರೆಗೆ ಆರೋಪಿಗಳ ವಿರುದ್ಧ ಯಾವುದೇ ಮಹತ್ವದ ಕ್ರಮ ಕೈಗೊಳ್ಳಲಾಗಿಲ್ಲ.
ಇದೀಗ ಸುಮಾರು ಆರು ತಿಂಗಳ ಬಳಿಕ ಎರಡನೇ ಬಾರಿಗೆ ‘ಬುಲ್ಲಿ ಬಾಯಿ’ ಎಂಬ ವೇದಿಕೆಯ ಮೂಲಕ ಇಂಟರ್ನೆಟ್ ಟ್ರೋಲ್ಗಳು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವಹೇಳನಕಾರಿ ಶೀರ್ಷಿಕೆಗಳೊಂದಿಗೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಅಪ್ಲಿಕೇಷನ್ನಲ್ಲಿ ಮಹಿಳೆಯರನ್ನು ಅಗೌರವಿಸುವ ಏಕೈಕ ಉದ್ದೇಶದಿಂದ ಮುಸ್ಲಿಂ ಮಹಿಳೆಯರಿಗೆ (‘ಬುಲ್ಲಿ’ ಎಂಬ ಅವಹೇಳನಕಾರಿ ಪದವನ್ನು ಬಳಸಿ) ‘ಹರಾಜು’ ನಡೆಸುತ್ತದೆ. ಅವರ ಒಪ್ಪಿಗೆಯಿಲ್ಲದೆ ಅವರ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮಹಿಳೆಯರು, ಪತ್ರಕರ್ತೆಯರು, ರಾಜಕಾರಣಿಗಳು, ಸಿನಿಮಾ ನಟಿಯರು, ವಿವಿಧ ವಯೋಮಾನದ ಮಹಿಳೆಯರನ್ನು ಅಸಹ್ಯಕರ ಆ್ಯಪ್ನಲ್ಲಿ ‘ಹರಾಜಿಗೆ’ ಪಟ್ಟಿ ಮಾಡಲಾಗಿದೆ.
ಪತ್ರಕರ್ತೆ ಇಸ್ಮತ್ ಅರಾ ಸೇರಿದಂತೆ ವೆಬ್ಸೈಟ್ನಲ್ಲಿ ‘ಬುಲ್ಲಿ ಬಾಯಿ ಆಫ್ ದಿ ಡೇ’ ಎಂದು ಕರೆಯಲ್ಪಟ್ಟ ಅನೇಕ ಮಹಿಳೆಯರು ಈ ಬಗ್ಗೆ ವರದಿ ಮಾಡಿದ್ದಾರೆ.
ಈ ಪೈಕಿ ಇಸ್ಮತ್ ಅರಾ ಅವರು ಐಪಿಸಿ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153 ಬಿ (ರಾಷ್ಟ್ರೀಯ ಏಕೀಕರಣಕ್ಕೆ ಹಾನಿಯುಂಟುಮಾಡುವ ಆರೋಪಗಳು), 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಎಫ್ಐಆರ್ ದಾಖಲಿಸಲು ಕೋರಿ ದೆಹಲಿ ಪೊಲೀಸರ ಸೈಬರ್ ಕ್ರೈಮ್ ಸೆಲ್ಗೆ ದೂರು ಸಲ್ಲಿಸಿದ್ದಾರೆ. ತನ್ನ ದೂರಿನಲ್ಲಿ, ಅರಾ ಅವರು ‘ಬುಲ್ಲಿ ಆಫ್ ದಿ ಡೇ’ ಎಂಬ ನುಡಿಗಟ್ಟು “ಮಹಿಳೆಯರನ್ನು ಅವಮಾನಿಸುತ್ತದೆ” ಎಂದಿದ್ದು ಇಡೀ ಪ್ರಕರಣದ ಹಿಂದಿರುವ ಪಿತೂರಿಯನ್ನು ತನಿಖೆ ಮಾಡಲು ಪೊಲೀಸರನ್ನು ವಿನಂತಿಸಿದ್ದಾರೆ.
“ಸಾಮಾಜಿಕ ಮಾಧ್ಯಮವು ಸಾರ್ವಜನಿಕ ಅಭಿವ್ಯಕ್ತಿಯ ರೂಪವಾಗಿರುವುದರಿಂದ ಸಾಮಾನ್ಯವಾಗಿ ಮಹಿಳೆಯರನ್ನು ಮತ್ತು ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಸಮಾಜದ ಸ್ತ್ರೀದ್ವೇಷದ ವಿಭಾಗವು ಕೀಳಾಗಿ ಚಿತ್ರಿಸುವುದನ್ನು ಮತ್ತು ಅವಹೇಳನ ಮಾಡುವುದನ್ನು ಒಪ್ಪಿಕೊಳ್ಳಲಾಗದು” ಎಂದು ಅರಾ ಅವರು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ಬುಲ್ಲಿ ಡೀಲ್ಸ್ ಡೊಮೇನ್ ಅನ್ನು ಹೋಸ್ಟ್ ಮಾಡಲಾದ ಮೈಕ್ರೋಸಾಫ್ಟ್-ಮಾಲೀಕತ್ವದ ಗಿಟ್ಹಬ್ನ್ನೂ ದೂರಿನಲ್ಲಿ ಹೆಸರಿಸಲಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ಇತರೆಡೆಗಳಲ್ಲಿ ಧ್ವನಿಯೆತ್ತಿರುವ ಹಲವಾರು ಮುಸ್ಲಿಂ ಮಹಿಳೆಯರು ತಮ್ಮ ಫೋಟೋಗಳು ಅಪ್ಲಿಕೇಶನ್ನಲ್ಲಿ ಇದೆ ಎಂದು ದೂರಿದ್ದಾರೆ. 2016ರಲ್ಲಿ ನಾಪತ್ತೆಯಾಗಿರುವ ಜೆಎನ್ಯು ವಿದ್ಯಾರ್ಥಿ ನಜೀಬ್ನ ತಾಯಿಯೂ ಈ ಪಟ್ಟಿಯಲ್ಲಿದ್ದಾರೆ.
ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 153 ಎ, 153 ಬಿ, 354 ಎ ಮತ್ತು 509 ರ ಅಡಿಯಲ್ಲಿ ದಾಖಲಿಸಿದ್ದಾರೆ ಮತ್ತು ಪ್ರಕರಣವನ್ನು ಪೊಲೀಸ್ ಸೂಪರಿಂಟೆಂಡೆಂಟ್ ಮಂಜೂರ್ ಆಲಂ ಅವರಿಗೆ ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, ಮುಂಬೈ ಪೊಲೀಸರ ಸೈಬರ್ ಕ್ರೈಮ್ ವಿಭಾಗವು ವೇದಿಕೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಪಿಟಿಐಗೆ ತಿಳಿಸಿದೆ. ಹೆಚ್ಚುವರಿಯಾಗಿ, ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ತನಿಖೆ ಮಾಡುವ ನೋಡಲ್ ಏಜೆನ್ಸಿಯಾದ ಮಹಾರಾಷ್ಟ್ರ ಸೈಬರ್, ಸಿದ್ರಾಹ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಸಿದ್ರಾಹ್ ಅವರ ಛಾಯಾಚಿತ್ರವು ಆಕೆಯ ಒಪ್ಪಿಗೆಯಿಲ್ಲದೆ ವೇದಿಕೆಯಲ್ಲಿ ಕಾಣಿಸಿಕೊಂಡಿತ್ತು.
ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಾಗಲಿಲ್ಲ. ಆದರೆ ಬುಲ್ಲಿ ಬಾಯ್ ವಿಚಾರದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು ಮುಂಬೈ ಪೊಲೀಸ್ ಸೈಬರ್ ಸೆಲ್ ಬೆಂಗಳೂರಿನ 21 ವರ್ಷದ ಯುವಕನನ್ನೂ ಬಂಧಿಸಿದೆ. ಕಾನೂನು ಜಾರಿ ಅಧಿಕಾರಿಗಳು ಶಂಕಿತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ, ಆದರೆ ಐಪಿಸಿ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 (ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಮತ್ತು 354 ಎ (ಲೈಂಗಿಕ ಕಿರುಕುಳ ಮತ್ತು ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎನ್ನಲಾಗಿದೆ.
ಹಲವಾರು ರಾಜಕೀಯ ಮುಖಂಡರು ಸಹ ಪ್ರಕರಣದ ಬಗ್ಗೆ ಮಾತನಾಡಿದ್ದು ತುರ್ತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. “ಅಪಾಯಕಾರಿ ಮುಸ್ಲಿಂ ವಿರೋಧಿ ಸ್ತ್ರೀದ್ವೇಷದ ಈ ಯೋಜನೆಯು ಮತ್ತೆ ಬಂದಿರುವುದು ಸ್ವೀಕಾರಾರ್ಹವಲ್ಲ. ಕಳೆದ ಬಾರಿ ಏನನ್ನೂ ಮಾಡಿಲ್ಲ ಎಂಬ ಧೈರ್ಯದಿಂದಲೇ ಈ ಶಕ್ತಿಗಳು ಇದನ್ನು ಪುನಾರವರ್ತಿಸಿದೆ. ಏಕೆಂದರೆ ವ್ಯವಸ್ಥೆಯೇ ಅವರನ್ನು ಬೆಂಬಲಿಸುತ್ತಿದೆ” ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಂಪರ್ಕ ಸಚಿವರಾದ ಅಶ್ವಿನಿ ವೈಷ್ಣವ್
ಅವರು “ಇಂದು ಬೆಳಗ್ಗೆಯೇ ಬಳಕೆದಾರರನ್ನು ನಿರ್ಬಂಧಿಸಿರುವುದನ್ನು GitHub ದೃಢಪಡಿಸಿದೆ. ಸಿಇಆರ್ಟಿ ಮತ್ತು ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ” ಎಂದಿದ್ದಾರೆ .
ಆದರೆ ಗಿಟ್ಹಬ್ ಆ್ಯಪ್ ತೆಗೆದುಹಾಕುವುದು ಸಾಕಾಗುವುದಿಲ್ಲ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. “ಮಹಿಳೆಯರ ಅವಮಾನ ಮತ್ತು ಕೋಮುದ್ವೇಷದ ವಿರುದ್ಧ ನೀವು ಒಂದೇ ಧ್ವನಿಯಲ್ಲಿ ಮಾತಾಡಿದಾಗ ಮಾತ್ರ ಇದು ನಿಲ್ಲುತ್ತದೆ. ಕಾಲ ಬದಲಾಗಿದೆ, ಆದ್ದರಿಂದ ನಿಮ್ಮ ಹಣೆಬರಹವನ್ನು ಬದಲಿಸಿ ಮತ್ತು ಇದು ಮಾತನಾಡುವ ಸಮಯ” ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಖರ್ಗೆ ಅವರು “ಮುಸ್ಲಿಂ ಮಹಿಳೆಯರಿಗೆ ನೀಡುತ್ತಿರುವ ಈ ಅಸಹ್ಯಕರ ಕಿರುಕುಳವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಬಿಜೆಪಿ ನಾಯಕತ್ವದಿಂದ ಅಲ್ಪಸಂಖ್ಯಾತರ ಮೇಲಿನ ಪುನರಾವರ್ತಿತ ಅಮಾನವೀಯತೆಯ ಪರಿಣಾಮವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ಎನ್ಸಿಪಿ ನಾಯಕ ನವಾಬ್ ಮಲಿಕ್ ಟ್ವೀಟ್ ಮಾಡಿ,
“ಸುಲ್ಲಿಡೀಲ್ಸ್ನಲ್ಲಿ ಆನ್ಲೈನ್ನಲ್ಲಿ ಧ್ವನಿ ಎತ್ತುವ ಮುಸ್ಲಿಂ ಮಹಿಳೆಯರನ್ನು ಹರಾಜು ಮಾಡುವುದನ್ನು ನೋಡುವುದು ಅತ್ಯಂತ ನೋವಿನ ಸಂಗತಿ ಮತ್ತು ನಾನು ಈಗಾಗಲೇ ಇಬ್ಬರು ಸಂತ್ರಸ್ತರೊಂದಿಗೆ ದೂರವಾಣಿ ಸಂಭಾಷಣೆಯನ್ನೂ ನಡೆಸಿದ್ದೇನೆ. ನಾನು ಗೃಹ ಸಚಿವ ದ್ವಾಲ್ಸೆಪಾಟೀಲ್ ಜಿ ಅವರಿಗೆ ಪತ್ರ ಬರೆಯುತ್ತೇನೆ ಮತ್ತು ತನಿಖೆಗೆ ಒತ್ತಾಯಿಸುತ್ತೇನೆ. ಮಹಾರಾಷ್ಟ್ರ ರಾಷ್ಟ್ರದ ಹೆಣ್ಣುಮಕ್ಕಳೊಂದಿಗೆ ಯಾವಾಗಲೂ ನಿಲ್ಲುತ್ತದೆ!” ಎಂದಿದ್ದಾರೆ.