ಪ್ರವಾದಿ ಮೊಹಮ್ಮದ್ ವಿರುದ್ಧ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಮಾಡಿದ ನಿಂದನೆಗಳನ್ನು ಹಲವಾರು ಗಲ್ಫ್ ರಾಷ್ಟ್ರಗಳು ಖಂಡಿಸಿದ ಬೆನ್ನಲ್ಲೇ, ಸೋಮವಾರ ಜಗತ್ತಿನ ಇನ್ನಿತರ ದೇಶಗಳು ಕೂಡಾ ಪ್ರವಾದಿ ವಿರುದ್ಧದ ನಿಂದನೆಯನ್ನು ಕಟುವಾಗಿ ಪ್ರಶ್ನಿಸಿದೆ.
ಪಕ್ಷವು “ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ” ಮತ್ತು “ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಅಥವಾ ಅವಮಾನಿಸುವ ಯಾವುದೇ ಸಿದ್ಧಾಂತವನ್ನು ಬಲವಾಗಿ ವಿರೋಧಿಸುತ್ತದೆ” ಎಂದು ಹೇಳುವ ಮೂಲಕ ಬಿಜೆಪಿಯು ಶರ್ಮಾ ಮತ್ತು ಜಿಂದಾಲ್ ಅವರನ್ನು ಉಚ್ಚಾಟಿಸಿದೆ.
ಯುಎಇಯ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ, “ಬಿಜೆಪಿ ವಕ್ತಾರರ ಹೇಳಿಕೆಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಖಂಡಿಸಿದೆ, ಪ್ರವಾದಿ ಮುಹಮ್ಮದ್ ಅವರ ಅವಮಾನಿಸಿದ್ದರ ವಿರುದ್ಧ ಖಂಡನೆ ಮತ್ತು ತಿರಸ್ಕಾರವನ್ನು ವ್ಯಕ್ತಪಡಿಸುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಂತರರಾಷ್ಟ್ರೀಯ ಸಹಕಾರ (MoFAIC) ನೈತಿಕ ಮತ್ತು ಮಾನವೀಯ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾದ ಎಲ್ಲಾ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು UAE ದೃಢವಾಗಿ ತಿರಸ್ಕರಿಸುತ್ತದೆ ಎಂದು ದೃಢಪಡಿಸಿದೆ.
ಇನ್ನು, ಜೋರ್ಡಾನ್ ವಿದೇಶಾಂಗ ಸಚಿವಾಲಯವು ಕೂಡಾ “ಪ್ರವಾದಿ ಮುಹಮ್ಮದ್ ಅವರ ಆಕ್ರಮಣಕಾರಿ ಹೇಳಿಕೆಗಳನ್ನು ಪ್ರಬಲ ಪದಗಳಲ್ಲಿ” ಖಂಡಿಸಿದೆ.
ಒಮನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಖಲೀಫಾ ಅಲ್ಹಾರ್ತಿ ಅವರು ಭಾರತೀಯ ರಾಯಭಾರಿಯನ್ನು ಭೇಟಿಯಾಗಿದ್ದು, “ಪ್ರವಾದಿಯವರ ಆಕ್ಷೇಪಾರ್ಹ ಹೇಳಿಕೆಗಳನ್ನು ಓಮನ್ ಸುಲ್ತಾನೇಟ್ ಖಂಡಿಸಿರುವುದಾಗಿ” ತಿಳಿಸಿದ್ದಾರೆ.
“ಇಸ್ಲಾಂ ಧರ್ಮದ ನಿಜವಾದ ಸ್ವರೂಪ ಮತ್ತು ಬೋಧನೆಗಳನ್ನು ವಿರೂಪಗೊಳಿಸುವ ಮತ್ತು ಪವಿತ್ರ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಲು ಪ್ರಯತ್ನಿಸುವ ಎಲ್ಲಾ ಮತ್ತು ಯಾವುದೇ ಕ್ರಮವನ್ನು ಮಾಲ್ಡೀವ್ಸ್ ಸರ್ಕಾರವು ಯಾವುದೇ ನಿರ್ಬಂಧವಿಲ್ಲದೆ ಖಂಡಿಸುತ್ತದೆ” ಎಂದು ಮಾಲ್ಡೀವ್ಸ್ನ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
ಆ ಸಾಲಿಗೆ ಇಂಡೋನೇಶ್ಯಾ ಕೂಡಾ ಸೇರಿದ್ದು, ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತ ನಿಲುವನ್ನು ಪ್ರಕಟಿಸಿದ ಇಂಡೋನೇಶ್ಯ, ” ಭಾರತದ ಇಬ್ಬರು ರಾಜಕಾರಣಿಗಳು ಪ್ರವಾದಿ ಮುಹಮ್ಮದ್ ರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು ಇಂಡೋನೇಶ್ಯ ಬಲವಾಗಿ ಖಂಡಿಸುತ್ತದೆ. ಈ ಸಂದೇಶವನ್ನು ಜಕಾರ್ತದಲ್ಲಿರುವ ಭಾರತೀಯ ರಾಯಭಾರಿಗೂ ಕಳುಹಿಸಲಾಗಿದೆ” ಎಂದು ಹೇಳಿದೆ.
“ಮೌಲಾನ ಮೋದಿ, ಶೇಮ್ಆನ್ ಬಿಜೆಪಿ” ಅಭಿಯಾನ
ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ವಜಾಗೊಳಿಸಿದ ಕುರಿತಂತೆ ಹಿಂದುತ್ವವಾದಿಗಳು ಹಾಗೂ ಬಲಪಂಥೀಯರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. #ModiShamesIndia #ShameOnBJP ಮೊದಲಾದ ಹ್ಯಾಷ್ಟ್ಯಾಗ್ ಗಳು ಟ್ವಿಟರಿನಲ್ಲಿ ಟ್ರೆಂಡ್ ಆಗಿದ್ದು, ಪ್ರವಾದಿ ನಿಂದನೆ ಮಾಡಿರುವ ನೂಪುರ್ ಶರ್ಮಾಳಿಗೆ ಬೆಂಬಲಿಸಿ ಹಲವಾರು ಬಲಪಂಥೀಯರು ಅಭಿಯಾನ ನಡೆಸಿದ್ದಾರೆ. ವಿದೇಶಿ ರಾಜ್ಯಗಳ ಒತ್ತಡಕ್ಕೆ ಮಣಿದು ನೂಪುರ್ ರನ್ನು ಉಚ್ಛಾಟಿಸಿರುವುದು ಬೆಂಬಲಿಗರಿಗೆ ನುಂಗಲಾರದ ತುತ್ತಾಗಿವೆ.