ಬಳ್ಳಾರಿಯ ರಾಜಕಾರಣ ನಿಂತಿರುವುದೇ ಗಣಿ ದಂಧೆಯ ಮೇಲೆ. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಗಣಿ ಮಾಫಿಯಾದ ಕುಳಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಒಂದಿಷ್ಟು ಆಂತರಿಕ ಒಪ್ಪಂದಗಳನ್ನು ಮಾಡಿಕೊಂಡು ಪರಸ್ಪರ ನೆರವಾಗುತ್ತಾರೆ.
ಈಗ ಬಳ್ಳಾರಿ ವಿಧಾನ ಪರಿಷತ್ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ಘೋಷಣೆ ಆಗಲಿದೆ. ಕಾಂಗ್ರೆಸ್ನ ಕೆ.ಸಿ ಕೊಂಡಯ್ಯ ಸದ್ಯಕ್ಕೆ ಇಲ್ಲಿ ಎಂಎಲ್ಸಿ. ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಆಯ್ಕೆಯಾದ ಎಂಎಲ್ಸಿಗಳ ಅವಧಿ ಮುಗಿಯುತ್ತಿದ್ದು ಸದ್ಯದಲ್ಲೇ ಚುನಾವಣೆ ಘೋಷಣೆ ಆಗಬಹುದು.
ಕಳೆದೆ ಸಲ ರೆಡ್ಡಿ-ರಾಮುಲುಗಳ ತೆರೆಮರೆಯ ಬೆಂಬಲದಿಂದ ಕಾಂಗ್ರೆಸ್ನ ಕೊಂಡಯ್ಯ ಸುಲಭ ಜಯ ಸಾಧಿಸಿದ್ದರು. ಈ ಸಲವೂ ಅದೇ ಪರಿಸ್ಥಿತಿ ಇದೆ. ಏಕೆಂದರೆ ಬಳ್ಳಾರಿ ಜಿಲ್ಲೆಯ ಪ್ರಗತಿಪರರು ಹೇಳುವಂತೆ ಕೊಂಡಯ್ಯ ಗಣಿ ಮಾಫಿಯಾದ ಗಿಣಿ. ಈಗಾಗಲೇ ಕೊಂಡಯ್ಯ ಮೊದಲ ಸುತ್ತಿನಲ್ಲಿ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸುವ ಕಾರ್ಯಕ್ರಮ ಮುಗಿಸಿದ್ದಾರಂತೆ. ಕೆಲವು ಕಡೆ ಬಿಜೆಪಿ ಕಾರ್ಯಕರ್ತರನ್ನೂ ಇದಕ್ಕೆ ಬಳಸಿಕೊಂಡಿದ್ದಾರೆ ಎಂಬ ಮಾತೂ ಇವೆ.
ಕೊಂಡಯ್ಯ ಎರಡು ಸಲ ಎಂ.ಪಿ ಆಗಿದ್ದರು. ನಂತರ ಸೋನಿಯಾ ಗಾಂಧಿಯವರಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಇದರ ಫಲವಾಗಿ ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು. ಈಗ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕೊಂಡಯ್ಯನವರಿಗೆ ಇನ್ನೊಂದು ಬಿರುದು ಇದೆ: ಅದು ‘ಜಿಂದಾಲ್ ಏಜೆಂಟ್’ ಎಂಬುದು. ಹೌದು ಕೊಂಡಯ್ಯ ಬಹಿರಂಗವಾಗಿಯೇ ಜಿಂದಾಲ್ ಪರ ಬ್ಯಾಟಿಂಗ್ ಮಾಡುತ್ತ ಬಂದವರು. ಜಿಂದಾಲ್ ಯೋಜನೆಗಳು ಸರಾಗವಾಗಿ ನಡೆಯಲು ಸರ್ಕಾರಿ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸುತ್ತ ಬಂದವರು.
ಇದರಲ್ಲಿ ಮುಚ್ಚುಮರೆ ಏನಿಲ್ಲ. ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3 ಸಾವಿರ ಎಕರೆ ಭೂಮಿಯನ್ನು ವರ್ಗಾವಣೆ ಮಾಡಲು ಹೊರಟಾಗ ಸದನದಲ್ಲಿ ಕಾಂಗ್ರೆಸ್ ಇದನ್ನು ಆಕ್ಷೇಪಿಸಿ ಹೋರಾಟ ಮಾಡುತ್ತಿದ್ದರೆ, ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೊಂಡಯ್ಯ, ಜಿಂದಾಲ್ಗೆ ಭೂಮಿ ಬರ್ಗಾವಣೆ ಮಾಡುವುದೇ ಸೂಕ್ತ ಮತ್ತು ಹಾಗೇ ಮಾಡಲೇಬೇಕು ಎಂದು ಘಂಟಾಘೋಷವಾಗಿ ಸಾರಿದ್ದರು.
ಇನ್ನೊಂದು ಸಲ ತುಂಗಭದ್ರಾ ನದಿ ನೀರಿನ ಕೊರತೆಯಾದಾಗ ಜಿಂದಾಲ್ಗೆ ನೀರು ಸರಬರಾಜು ನಿಲ್ಲಿಸುವ ಅನಿವಾರ್ಯತೆ ಇತ್ತು. ಆಗಲೂ ಪ್ರೆಸ್ಮೀಟ್ ಮಾಡಿದ್ದ ಕೊಂಡಯ್ಯನವರು ರೈತರ ಪರ ನಿಲ್ಲದೇ, ಜಿಂದಾಲ್ಗೆ ಯಾವ ಕಾರಣಕ್ಕೂ ನೀರು ಸರಬರಾಜು ನಿಲ್ಲಿಸಬಾರದು ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ಜಿಂದಾಲ್ ಒಡೆಯ ಸಜ್ಜನ್ ಜಿಂದಾಲ್ರ ಕೃಪಕಟಾಕ್ಷ ಕೊಂಡಯ್ಯರ ಮೇಲಿದೆ. ರಾಜಕೀಯವಾಗಿ ನೋಡಿದರೆ ಕೊಂಡಯ್ಗನವರ ಗಾಡ್ಫಾದರ್ ಮಲ್ಲಿಕಾರ್ಜುನ ಖರ್ಗೆ. ಹೀಗಾಗಿ ಈ ಸಲವೂ ಮೇಲಿನ ಎಲ್ಲ ಕಾರಣಗಳಿಂದ ಕೊಂಡಯ್ಯನವರಿಗೆ ಮತ್ತೆ ಟಿಕೆಟ್ ಗ್ಯಾರಂಟಿ.
ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವಿನ ಸಂಬಂಧ ಚೆನ್ನಾಗಿದೆ. ಇತ್ತ ಕಡೆ ಹೊಸಪೇಟೆ (ವಿಜಯನಗರ) ಶಾಸಕ ಮತ್ತು ಸಚಿವ ಆನಂದಸಿಂಗ್ ಜೊತೆಗೂ ಕೊಂಡಯ್ಯನವರ ದೋಸ್ತಿ ಚೆನ್ನಾಗಿದೆ. ಹೀಗಾಗಿ ತೆರೆಮರೆಯಲ್ಲಿ ಕೊಂಡಯ್ಯ ಗೆಲುವಿಗೆ ಇವರೆಲ್ಲ ಸಹಕರಿಸಲಿದ್ದಾರೆ.
ಕಳೆದ ಸಲ ಕೊಂಡಯ್ಯ ವಿರುದ್ಧ ಬಿಜೆಪಿ ಚನ್ನಬಸನಗೌಡ ಎಂಬ ‘ವೀಕ್’ ಕ್ಯಾಂಡಿಡೇಟ್ ಹಾಕಿತ್ತು. ಈಗ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಚನ್ನಬಸನಗೌಡ ಮತ್ತೆ ಟಿಕೆಟ್ ಬಯಸಿದ್ದಾರೆ. ಇದರ ಬದಲು ತೀವ್ರ ಸ್ಪರ್ಧೆ ನೀಡಬಲ್ಲ ಎಚ್. ಆರ್ ಗವಿಯಪ್ಪ ಅಥವಾ ಕಾರ್ತಿಕ್ ಘೋರ್ಪಡೆ ಅವರನ್ನು ಕಣಕ್ಕೆ ಇಳಿಸುವುದು ಉತ್ತಮ್ಮ ಎಂದು ಬಿಜೆಪಿಯ ಒಂದು ಗುಂಪು ವಾದಿಸುತ್ತಿದೆ. ಗವಿಯಪ್ಪ ಮತ್ತು ಕಾರ್ತಿಕ್ ಘೋರ್ಪಡೆ ಇಬ್ಬರೂ ಏಕಕಾಲಕ್ಕೆ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದವರು. ಎಚ್.ಆರ್ ಗವಿಯಪ್ಪ ಕಾಂಗ್ರೆಸ್ನಿಂದ ಬಳ್ಳಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಿತರಾಗಿದ್ದರು. ಈಗ ಗವಿಯಪ್ಪನವರಿಗೆ ಎಂಎಲ್ಸಿ ಆಗುವುದು ಇಷ್ಟವಿಲ್ಲ. ಮತ್ತೆ ಎಂಎಲ್ಎ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಅವರ ಗುರಿ.
ಘೋರ್ಪಡೆ ಮನೆತನದ ಕಾರ್ತಿಕ್ ಘೋರ್ಪಡೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸಹೋದರಿ ಯಶೋಧರಾ ರಾಜೆ ಕುಟುಂಬದ ಜೊತೆಗೆ ಬೀಗತನ ಮಾಡಿದ್ದಾರೆ. ಯಶೋಧರಾ ರಾಜೆ ಕೂಡ ಮಧ್ಯಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಸಚಿವೆಯೂ ಆದವರು. ಹೀಗಾಗಿ ಕಾರ್ತಿಕ್ ಅವರಿಗೆ ಟಿಕೆಟ್ ಸಿಗುವುದು ಸುಲಭ. ಆದರೆ 60 ವರ್ಷದ ಅವರಿಗೇ ಇದರಲ್ಲಿ ಆಸಕ್ತಿ ಇಲ್ಲ.
ಹೀಗಾಗಿ ಮತ್ತೆ ಚನ್ನಬಸನಗೌಡರಿಗೇ ಬಿಜೆಪಿ ಟಿಕೆಟ್ ಸಿಗುವುದು ಪಕ್ಕಾ ಆಗಿದೆ. ಆಗ ಮತ್ತೆ ಕೊಂಡಯ್ಯ ಹಾದಿ ಸುಗಮವಾಗಬಹುದು. ಕಾಂಗ್ರೆಸ್ನಿಂದ ಕೊಂಡಯ್ಯ ಅಲ್ಲದೇ ಮಾಜಿ ಶಾಸಕ, ಮಾಜಿ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಕೂಡ ಆಕಾಂಕ್ಷಿ. ಹಾಗೆಯೇ ಮಾಜಿ ಸಚಿವ ಸಂತೋಷ್ ಲಾಡ್ ಮುಂಡರಗಿ ನಾಗರಾಜ್ ಎಂಬಾತನಿಗೆ ಟಿಕೆಟ್ ಕೊಡಿಸುವ ಯತ್ನ ಮಾಡುತ್ತಿದ್ದಾರೆ. ಬಳ್ಳಾರಿ ಮೂಲದ ಈ ಮುಂಡರಗಿ ನಾಗರಾಜ್ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ.
ಇಲ್ಲಿ ಅನಿಲ್ ಲಾಡ್ಗೆ ಏಕಾಏಕಿ ಟಿಕೆಟ್ ನೀಡಲು ಯಾವ ಕಾರಣಗಳೂ ಇಲ್ಲ. ಮುಂಡರಗಿ ನಾಗರಾಜ್ಗೂ ಟಿಕೆಟ್ ಸಿಗುವುದು ಕಷ್ಟ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸೋತು ಬಂದಿರುವ ಸಂತೋಷ್ ಲಾಡ್ ಬಳ್ಳಾರಿಯಲ್ಲಿ ಮತ್ತೆ ತಮ್ಮ ಅಸ್ತಿತ್ವ ಸಾರಲು ಮುಂಡರಗಿ ನಾಗರಾಜ್ ಹೆಸರನ್ನು ಮುಂದೆ ತರುತ್ತಿದ್ದಾರಷ್ಟೇ.
ಹೀಗಾಗಿ ಸಿಟ್ಟಿಂಗ್ ಎಂಎಲ್ಸಿ ಕೆ.ಸಿ ಕೊಂಡಯ್ಯನವರಿಗೇ ಮತ್ತೊಂದು ಅವಕಾಶ ಸಿಗಲಿದೆ. ಬಿಜೆಪಿಯ ರೆಡ್ಡಿ-ರಾಮುಲು, ಆನಂದ್ಸಿಂಗ್ ಅವರ ಪರೋಕ್ಷ ಸಹಾಯ ಮತ್ತು ಉದ್ಯಮಿ ಸಜ್ಜನ ಜಿಂದಾಲ್ ಅವರ ‘ನಿಧಿ’ ಕೊಂಡಯ್ಯ ಪರ ಕೆಲಸ ಮಾಡಲಿವೆ!
ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳ ರಾಜಕೀಯ ದಿವಾಳಿತನಕ್ಕೆ ಈ ವಿದ್ಯಮಾನ ಸಾಕ್ಷಿಯಾಗಿದೆ.