ರಸಗೊಬ್ಬರ ಬೆಲೆ ಏರಿಕೆ ಕುರಿತಂತೆ ದೇಶದ ರೈತರು ಕಂಗಾಲಾಗಿದ್ದು, ರಸಗೊಬ್ಬರಗಳ ಮೇಲಿನ ದರ ಏರಿಕೆಯನ್ನು ಖಂಡಿಸುತ್ತಿದ್ದಾರೆ. ಬೆಲೆ ಏರಿಕೆ ಕುರಿತಂತೆ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕರೋನಾ ಸಂಕಷ್ಟದ ನಡುವೆ ರಸಗೊಬ್ಬರಗಳ ಬೆಲೆ ಏರಿಸಿ ರೈತರಿಗೆ ಬರೆ ಎಳೆಯಲಾಗಿದೆ ಎಂದಿದ್ದಾರೆ.
ರಸಗೊಬ್ಬರ ಬೆಲೆ ಏರಿಕೆ ಕೇಂದ್ರ ರಾಜ್ಯ ಸರ್ಕಾರಗಳ ಗೋಮುಖ ವ್ಯಾಘ್ರ ನಡವಳಿಕೆಯಾವುದೇ ಕಾರಣಕ್ಕೂ ರಸಗೊಬ್ಬರ ಬೆಲೆ ಏರಿಕೆ ಮಾಡುವುದಿಲ್ಲ. ಹಳೆಯ ದರದಲ್ಲಿಯೇ ರಸಗೊಬ್ಬರಗಳು ಮಾರಾಟವಾಗುತ್ತದೆ ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ರಾಜ್ಯ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳುತ್ತಲೇ ಬೆಲೆ ಏರಿಕೆ ಮಾಡಿ ರೈತರನ್ನು ಮೋಸಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ರಸಗೊಬ್ಬರಗಳಿಗೆ ಹೊಸ ದರ ನಿಗದಿಯಾಗಿದೆ. ಡಿಎಪಿ ಪ್ರತಿ ಚೀಲಕ್ಕೆ 1200 ರಿಂದ ಏರಿಕೆ ಮಾಡಿ 1900 ಹೊಸ ದರ ನಿಗದಿ ಮಾಡಿ ರಸಗೊಬ್ಬರ ಕಂಪನಿಗಳು ಆದೇಶ ಹೊರಡಿಸಿವೆ.
ಕರೋನಾ ಲಾಕ್ ಡೌನ್ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿತ ಹಣ್ಣು-ತರಕಾರಿಗಳನ್ನು ಬೀದಿ ಬೀದಿಯಲ್ಲಿ ಸುರಿಯುತ್ತಿದ್ದಾರೆ. ಖರೀದಿದಾರರು ಇಲ್ಲದ ಕಾರಣ ಕೆಲವು ರೈತರು ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ ಸಾಲ ಮಾಡಿದ ರೈತ ಅಂಗೈಯಲ್ಲಿ ಆಕಾಶ ನೋಡುವಂತಾಗಿದೆ. ಇಂಥ ಸಂದರ್ಭದಲ್ಲಿ ರೈತರಿಗೆ ಬೇಕಾದ ರಸಗೊಬ್ಬರ ಬೆಲೆ ಏರಿಕೆ ಮಾಡಲು ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು 1 ಲಕ್ಷ 30 ಸಾವಿರ ಕೋಟಿಯಿಂದ 54 ಸಾವಿರ ಕೋಟಿಗೆ ಇಳಿಕೆ ಮಾಡಿದ ಕಾರಣ ಬೆಲೆ ಏರಿಕೆಯಾಗಿದೆ. ರೈತರ ತಲೆ ಮೇಲೆ ಚಪ್ಪಡಿ ಎಳೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೂಡಲೇ ಬೆಲೆ ಇಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಸಚಿವರುಗಳು ಸುಳ್ಳು ಸಂದೇಶಗಳನ್ನು ಮಾಧ್ಯಮಗಳ ಮೂಲಕ ಬಿತ್ತುವ ಮೂಲಕ ರೈತರನ್ನ ದಾರಿತಪ್ಪಿಸುತ್ತಿದ್ದಾರೆ. ರೈತರು ಎಚ್ಚೆತ್ತುಕೊಂಡು ಸುಳ್ಳು ಹೇಳುವ ಮಂತ್ರಿಗಳಿಗೆ ಮುಖಕ್ಕೆ ಮಂಗಳಾರತಿ ಮಾಡಿ ಸರಿಯಾದ ಪಾಠ ಕಲಿಸಬೇಕು. ಇನ್ನಾದರೂ ರೈತರು ಎಚ್ಚೆತ್ತುಕೊಂಡು ರಸಗೊಬ್ಬರ ಖರೀದಿ ನಿಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ಬೇಕಾದ ಆಹಾರವನ್ನು ಮಾತ್ರ ಬೆಳೆದುಕೊಂಡರೆ ಆಗ ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.