ಇಂಧನ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಭಾರತದ ರೈತ ಸಮುದಾಯ ರಸಗೊಬ್ಬರಗಳ ಮೇಲಿನ ಬೆಲೆ ಏರಿಕೆಯಿಂದ ತೀವ್ರವಾಗಿ ಕಂಗೆಟ್ಟಿದೆ. ಭಾರತೀಯ ರೈತ ರಸಗೊಬ್ಬರ ಸಹಕಾರಿ (IFFCO) ರಸಗೊಬ್ಬರಗಳ ಮೇಲಿನ ಬೆಲೆಯನ್ನು 45 ರಿಂದ 58 ಶೇಕಡಾದಷ್ಟು ತೀವ್ರವಾಗಿ ಏರಿಸಿದೆ.
ಯೂರಿಯಾ ನಂತರ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ರಸಗೊಬ್ಬರವಾದ ಡಿ-ಅಮೋನಿಯಂ ಫಾಸ್ಫೇಟ್ (DAP) 50 ಕೆಜಿ ಚೀಲಕ್ಕೆ 58 ಶೇಕಡಾ ಹೆಚ್ಚಾಗಿದೆ. ಅಂದರೆ, 1200 ರುಪಾಯಿಗಳಿದ್ದ ಚೀಲಕ್ಕೆ ಇನ್ನುಮುಂದೆ ರೈತರು 1900 ರುಪಾಯಿ ತೆರಬೇಕಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಭಿನ್ನ NPKS (ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕ) ಅನುಪಾತದ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಯನ್ನು ಇಫ್ಕೊ ಗಮನಾರ್ಹವಾಗಿ ಹೆಚ್ಚಿಸಿದೆ. ಎನ್ಪಿಕೆಎಸ್ 10:26:26 ಅನುಪಾತದ ಒಂದು ಚೀಲಕ್ಕೆ, ರೂ 1,175 ರಿಂದ 1,775 ಕ್ಕೆ ಏರಿಕೆಯಾಗಿದೆ. ಎನ್ಪಿಕೆಎಸ್ 12:32:16 ಅನುಪಾತದ ಒಂದು ಚೀಲಕ್ಕೆ 1,185 ರೂ.ನಿಂದ 1,800 ಗೆ ಏರಿಕೆಯಾಗಿದೆ. ಮತ್ತು ಎನ್ಪಿಕೆಎಸ್ 20: 20: 0: 13 ಅನುಪಾತದ ಒಂದು ಚೀಲಕ್ಕೆ 925 ರೂ.ಗಳಿಂದ ರೂ 1,350 ತನಕ ಏರಿಕೆಯಾಗಿದೆ. ಹೊಸ ಬೆಲೆಗಳು ಏಪ್ರಿಲ್ 1 ರಿಂದ ಜಾರಿಯಲ್ಲಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಸಗೊಬ್ಬರಗಳ ಬೆಲೆಗಳ ಮೇಲೆ ಸರ್ಕಾರ ಅನಿಯಂತ್ರಿತವಾಗಿವೆ. ರಸಗೊಬ್ಬರಗಳ ಬೆಲೆ ಏರಿಸುವ ಇಫ್ಕೋ ಕ್ರಮವು ರಾಜಕೀಯ ಹಿತಾಸಕ್ತಿ ಇಲ್ಲ. ಬೆಲೆ ಏರಿಕೆಯಲ್ಲಿ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಇಫ್ಕೋ ವಕ್ತಾರರು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯಿಂದಾಗಿ ಇಲ್ಲಿ, ಇಫ್ಕೋ ಬೆಲೆ ಏರಿಸಿದೆ. ಕಳೆದ ಐದಾರು ತಿಂಗಳಲ್ಲಿ ಅಂತರಾಷ್ಟ್ರೀಯ ದರಗಳಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ಅಕ್ಟೋಬರಿನಲ್ಲಿ 400 ಡಾಲರ್ ತೆತ್ತು ಒಂದು ಟನ್ ಡಿಎಪಿ ಆಮದು ಮಾಡಿಕೊಂಡಿದ್ದರೆ, ಪ್ರಸಕ್ತ ದರ 540 ಡಾಲರ್ ಗೆ ಏರಿದೆ. ಅದೇ ರೀತಿ ರಸಗೊಬ್ಬರಗಳ ತಯಾರಿಕೆಗೆ ಅಗತ್ಯವಾದ ಅಮೋನಿಯಾ ಹಾಗೂ ಸಲ್ಫರ್ ಗಳಂತ ರಾಸಾಯನಿಕ ವಸ್ತುಗಳ ಬೆಲೆ ಅನುಕ್ರಮವಾಗಿ 280 ಡಾಲರ್ ನಿಂದ 500 ಡಾಲರ್ ವರೆಗೆ ಹಾಗೂ 85 ಡಾಲರ್ನಿಂದ 220 ಡಾಲರ್ ವರೆಗೆ ಏರಿಕೆಯಾಗಿದೆ. ಯೂರಿಯಾ ಹಾಗೂ ಮ್ಯುರಿಯೇಟ್ ಪೊಟ್ಯಾಷ್ ಬೆಲೆ ಅನುಕ್ರಮವಾಗಿ 275 ಡಾಲರಿಂದ 380 ಡಾಲರ್ವರೆಗೆ ಹಾಗೂ 230 ಡಾಲರ್ನಿಂದ 280 ಡಾಲರ್ವರೆಗೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತಂತೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರಿಗೆ ರಸಗೊಬ್ಬರದ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತೇನೆಂದು ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಸಹಾಯಧನ ಕೊಡುವುದಿರಲಿ, ರಸಗೊಬ್ಬರಕ್ಕೆ ದುಪ್ಪಟ್ಟು ಬೆಲೆ ಏರಿಕೆ ಮಾಡಿ ರೈತರನ್ನು ನಾಶ ಮಾಡಲು ಹೊರಟಿದ್ದಾರೆ. ರಸಗೊಬ್ಬರದ ಬೆಲೆ ಏರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ. ಮೋದಿ ಅಧಿಕಾರಕ್ಕೆ ಬಂದ ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ, ರಸಗೊಬ್ಬರಗಳ ಬೆಲೆ ವಿಪರೀತ ಏರಿಕೆಯಾಗುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ.
ಭಾರತ ರೈತರು, ಕೂಲಿ ಕಾರ್ಮಿಕರು ಹೆಚ್ಚಿರುವ ದೇಶ, ಈ ರೀತಿ ಬೆಲೆ ಏರಿಕೆಯಿಂದ ಈ ವರ್ಗದ ಜನರ ಬದುಕು ಸಾಗಿಸುವುದು ಕಷ್ಟವಾಗಿದೆ. ದೊಡ್ಡ ದೊಡ್ಡ ಉದ್ಯಮಿಗಳ ಪರವಾಗಿ ಕೇಂದ್ರ ಸರ್ಕಾರ ಇದೆ. ಬಡ ಜನರ ಪರವಾಗಿ ಅಲ್ಲ, ರೈತರ ಪರವಾಗಿ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲದಿರುವುದನ್ನು ಇದು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.