ರಸಗೊಬ್ಬರ ಬೆಲೆ ಏರಿಕೆ ಹಿನ್ನಲೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಏರಿಕೆ ಮಾಡಿ ರೈತರ ಮೇಲೆ ಬರೆಯೆಳೆಯುವ ಪ್ರಯತ್ನ ನಡೆಸಿದೆ ಎಂದಿದ್ದಾರೆ.
ಚುನಾವಣೆಯ ಸಂಧರ್ಭದಲ್ಲಿ ರಸಗೊಬ್ಬರಗಳ ಸಹಾಯಧನವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾವಣೆ ಮಾಡುತ್ತೇವೆ, ರೈತರು ಅಂಗಡಿಗಳಲ್ಲಿ ನೇರವಾಗಿ ರಸಗೊಬ್ಬರವನ್ನು ಖರೀದಿಸಬಹುದು ಎಂಬ ಭರವಸೆ ನೀಡಿತ್ತು. ಆದರೆ ಈಗ ರೈತರಿಗೆ ನೇರ ಸಹಾಯಧನವನ್ನು ಕೊಡದೆ, ಮಾತಿಗೆ ತಕ್ಕಂತೆ ನಡೆಯದೆ ಸರ್ಕಾರ ಏಕಾಏಕಿ ಖಾಸಗಿ ರಸಗೊಬ್ಬರ ಕಂಪನಿಗಳ ಮಾಲೀಕರ ಮರ್ಜಿಗೆ ಒಳಗಾಗಿರುವುದು ದುರಂತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
1200 ರೂ ಇದ್ದ ರಸಗೊಬ್ಬರದ ಬೆಲೆಯನ್ನು 1800 ರೂ ಗೆ ಏರಿಕೆ ಮಾಡಿ ರೈತರನ್ನು ಮತ್ತಷ್ಟು ಸಮಸ್ಯೆಗೀಡು ಮಾಡಿದೆ, ಇದು ಪ್ರಜಾಸತಾತ್ಮಕ ಹಾಗು ಜನಪರ ಕಾಳಜಿ ಹೊಂದಿದ ಸರ್ಕಾರ ಮಾಡುವ ಕೆಲಸವಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಕುರುಬೂರು ಶಾಂತಕುಮಾರ್, ರೈತರಿಗೆ ರಸಗೊಬ್ಬರದ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತೇನೆಂದು ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಸಹಾಯಧನ ಕೊಡುವುದಿರಲಿ, ರಸಗೊಬ್ಬರಕ್ಕೆ ದುಪ್ಪಟ್ಟು ಬೆಲೆ ಏರಿಕೆ ಮಾಡಿ ರೈತರನ್ನು ನಾಶ ಮಾಡಲು ಹೊರಟಿದ್ದಾರೆ. ರಸಗೊಬ್ಬರದ ಬೆಲೆ ಏರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ. ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ, ರಸಗೊಬ್ಬರಗಳ ಬೆಲೆ ವಿಪರೀತ ಏರಿಕೆಯಾಗುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ.ರಸಗೊಬ್ಬರಗಳ ಮೇಲೆ 45% ರಿಂದ 58% ಬೆಲೆ ಏರಿಕೆ: ಕಂಗಾಲಾದ ರೈತರು
ಭಾರತದಲ್ಲಿ ರೈತರು, ಕೂಲಿ ಕಾರ್ಮಿಕರು ಹೆಚ್ಚಿದ್ದಾರೆ. ಈ ರೀತಿ ಬೆಲೆ ಏರಿಕೆಯಿಂದ ಈ ವರ್ಗದ ಜನರು ಬದುಕು ಸಾಗಿಸುವುದು ಕಷ್ಟವಾಗಿದೆ. ದೊಡ್ಡ- ದೊಡ್ಡ ಉದ್ಯಮಿಗಳ ಪರವಾಗಿ ಕೇಂದ್ರ ಸರ್ಕಾರ ಇದೆ. ಬಡ ಜನರ ಪರವಾಗಿ ಅಲ್ಲ, ರೈತರ ಪರವಾಗಿ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲದಿರುವುದನ್ನು ಇದು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೃಷಿ ಪಂಸೆಟ್ಗಳ ಬಳಕೆ ದೃಷ್ಟಿಯಿಂದ 8 ಗಂಟೆಗಳ ನಿರಂತರ ವಿದ್ಯುತ್ ಕೊಡುತ್ತೇವೆಂದು ಸರ್ಕಾರ ಹೇಳುತ್ತಿದೆ. ಆದರೆ ಹಳ್ಳಿಗಾಡಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತಿದೆ. ಕೇವಲ 2-3 ಗಂಟೆಗಳ ಕಾಲ ಮಾತ್ರಾ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಇದರಿಂದ ಬೆಳೆಗಳು ಒಣಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದ್ದಾರೆ.