ಬೆಂಗಳೂರು : ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಅಬ್ಬರ ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಧ್ರುವ ಸರ್ಜಾ ಕೂಡ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷೆ ಮಟ್ಟ ತಲುಪಿದ್ದು ನಿಜಾನಾ? ಈ ಪ್ರಶ್ನೆಗೆ ಸದ್ಯ ಯಾರ ಬಳಿ ಉತ್ತರವಿಲ್ಲ. ಈ ಸಿನಿಮಾ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಸೌಂಡ್ ಮಾಡಿದ್ದು ಸುಳ್ಳಲ್ಲ. ಆದರೆ, ಬಾಕ್ಸಾಫೀಸ್ ನಲ್ಲಿ ಸದ್ದು ಆಗಲೇ ಇಲ್ಲ ಅನ್ನೋದು ಲೇಟೆಸ್ಟ್ ಸುದ್ದಿ.

ಹೌದು ಕೆಡಿ ರಿಲೀಸ್ ಆಗಿ ಇಪ್ಪತ್ತು ದಿನಗಳಾಗಿವೆ. ಈ ಇಪ್ಪತ್ತು ದಿನದಲ್ಲಿ ಕೆಡಿ ಗಳಿಸಿದ್ದು ಎಷ್ಟು? ಇದು ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆಯೋ ಇಲ್ಲವೋ ಅನ್ನೋದೇ ಈ ಹೊತ್ತಿನ ಸುದ್ದಿ. ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ತಯಾರಾಗಿದೆ ಅನ್ನೋದು ಸಿನಿಮಾ ತಂಡದ ಮಾತು. ಸುಮಾರು 100 ರಿಂದ 12೦ ಕೋಟಿ ಬಜೆಟ್ ಅನ್ನೋದು ಸುದ್ದಿ. ಹಾಗಂತ ಈ ಬಜೆಟ್ ಕುರಿತು ತಂಡ್ ಯಾರಬ್ಬರೂ ಮಾತಾಡಿಲ್ಲ. ಒಟ್ಟಲ್ಲಿ ದೊಡ್ಡ ಬಜೆಟ್ ಅಷ್ಟೇ. ಸದ್ಯ ಇಷ್ಟೊಂದು ಬಜೆಟ್ ಹಾಕಿ ಮಾಡಿರುವ ಕೆಡಿ ಚಿತ್ರಕ್ಕೆ ಓಟಿಟಿ, ಆಡಿಯೋ ರೈಟ್ಸ್ ಇತ್ಯಾದಿಗಳಿಂದ ಒಂದಷ್ಟು ಆದಾಯವೇನೋ ಬಂದಿದೆ. ಆದರೆ, ಬಾಕ್ಸಾಫೀಸಲ್ಲಿ ಮಾತ್ರ ಇದು ಸೋಲುಂಡ ಸಾಧ್ಯತೆ ಇದೆ. ಹಾಗಾಗಿ ಇದು ಲಾಭಕ್ಕಿಂತ ನಷ್ಟದಲ್ಲೇ ಇದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರ.
ಈ ಇಪ್ಪತ್ತು ದಿನಗಳಲ್ಲಿ ಚಿತ್ರ ಕೇವಲ 23 ಕೋಟಿ ರೂ. ಗಳಿಕೆ ಕಂಡಿದೆ ಎಂಬ ಲೆಕ್ಕಾಚಾರವಿದೆ. ಮೇ 1 ರಂದು ಸಿನಿಮಾ ರಿಲೀಸ್ ಆಗಿತ್ತು. ಮೇ 20 ಕ್ಕೆ ಮೂರು ವಾರಗಳು ಆಗಿವೆ. ಇಪ್ಪತ್ತು ದಿನಗಳ ಗಳಿಕೆ ಲೆಕ್ಕದ ಬಗ್ಗೆ ಅಂದರೆ ಇದು ಅಂದಾಜು ಹೇಳುವುದಾದರೆ, ಕೆಡಿ ತೆರೆಗೆ ಬಂದ ಮೊದಲ ನಾಲ್ಕು ದಿನ ಮಾತ್ರ ಜೋರು ಸದ್ದು ಮಾಡಿತ್ತು. ಮೊದಲ ನಾಲ್ಕು ದಿನಕ್ಕೆ 13.3 ಕೋಟಿ ರು. ಗಳಿಕೆ ಕಂಡಿತ್ತು. ಆ ನಂತರ ಸಿನಿಮಾದ ಕಲೆಕ್ಷನ್ ಕುಗ್ಗತೊಡಗಿತ್ತು. ಮೇ.16 ರ ಮಂಗಳವಾರ ಬರೀ 19 ಲಕ್ಷ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಒಟ್ಟು ರಾಜ್ಯದೆಲ್ಲೆಡೆ ೩೦೦ ಪ್ರದರ್ಶನಗಳಿದ್ದವು.
ಕೆಡಿ ಈವರೆಗೆ 23 ಕೋಟಿ ರೂ. ಗಳಿಕೆ ಮಾಡಿದೆ. ಬೇರೆ ಹಕ್ಕುಗಳು ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಕೆಲವು ಮಾಹಿತಿ ಪ್ರಕಾರ ಈ ಕೆಡಿ ಸಿನಿಮಾ ಬಿಗ್ ಬಜೆಟ್ ಹೊಂದಿದೆ. 100 ರಿಂದು 120 ಕೋಟಿ ರೂ. ಬಜೆಟ್ ಅನ್ನೋ ಸುದ್ದಿ. ಈ ಲೆಕ್ಕ ಗಮನಿಸಿದರೆ ನಿರ್ಮಾಣ ಸಂಸ್ಥೆಗೆ ನಷ್ಟ ಗ್ಯಾರಂಟಿ ಅನ್ನೋದು ಸಿನಿ ಪಂಡಿತರ ಮಾತು.
ಅದೇನೆ ಇರಲಿ, ಜೋಗಿ ಪ್ರೇಮ್ ಅಬ್ಬರದಲ್ಲೇ ಚಿತ್ರ ಮಾಡಿದ್ದರು. ಆದರೆ, ಸಿನಿಮಾ ನಿರಿಕ್ಷೆ ಮಟ್ಟ ತಲುಪಲಿಲ್ಲ ಅನ್ನೋದು ಹಲವರ ಅಂಬೋಣ. ಇನ್ನು ಸಿನಿಮಾದಲ್ಲಿ ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಧ್ರುವ ಫ್ಯಾನ್ಸ್ ಸಖತ್ ಖುಷಿಯಲ್ಲಂತೂ ಇದ್ದಾರೆ. ಆದರೆ, ಹೂಡಿಕೆ ಮಾಡಿದ ನಿರ್ಮಾಣ ಸಂಸ್ಥೆ ಅಷ್ಟೊಂದು ಹಣವನ್ನು ಹೇಗೆ ವಾಪಾಸ್ ಪಡೆಯೋದು ಅನ್ನೋ ಯೋಚನೆಯಲ್ಲಿರೋದು ಗ್ಯಾರಂಟಿ. ಸಿನಿಮಾ ಒಳ್ಳೆಯ ಮೇಕಿಂಗ್ ನಲ್ಲೇ ತಯಾರಾಗಿತ್ತು. ಎಲ್ಲೂ ಕೂಡ ಕಮ್ಮಿ ಇಲ್ಲದ್ದಂತೆ ನಿರ್ಮಾಣ ಸಂಸ್ಥೆ ನೋಡಿಕೊಂಡಿತ್ತು. ಆದರೆ, ಜನ ಬಿಗಿಯಾಗಿ ಅಪ್ಪಿಕೊಳ್ಳಲಿಲ್ಲವಷ್ಟೇ.
ವರದಿ : ವಿಜಯ ಭರಮಸಾಗರ,
ಹಿರಿಯ ಸಿನಿಮಾ ಪತ್ರಕರ್ತರು..





