ಕರೊನಾ ಮಹಾಮಾರಿ ಮಹಾನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಮತ್ತು ಸೋಂಕು ತಡೆಗಾಗಿ ಸರ್ಕಾರ ಕಪ್ರ್ಯೂ ಜಾರಿಗೊಳಿಸಿದ್ದರಿಂದ ತಮ್ಮ ಹಳ್ಳಿಗಳತ್ತ ವಲಸೆ ಬರುತ್ತಿರುವ ಯುವಕರಿಗೆ ನರೇಗಾ ಕೆಲಸ ಬದುಕಿಗೆ ಆಸರೆಯಾಗಿದೆ.

ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಗ್ರಾಮೀಣ ಪ್ರದೇಶಗಳ ಜನರು ಉದ್ಯೋಗ ಅರಸಿ ಗುಳೆ ಹೋಗಬಾರದು ಮತ್ತು ಅವರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಜಿಸಿ ಸಂಪನ್ಮೂಲ ಹೆಚ್ಚಿಸುವ ಉದ್ದೇಶ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯದ್ದಾಗಿದೆ. ಆದರೆ ಕಳೆದ 2 ವರ್ಷದಿಂದ ನರೇಗಾ ಯೋಜನೆ ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಗ್ರಾಮೀಣ ಜನರಿಗೆ ಆಶಾಕಿರಣವಾಗಿದೆ.

ಎಕಾಏಕಿ ಪಟ್ಟಣ ಪ್ರದೇಶಗಳಿಂದ ಹಳ್ಳಿಗಳತ್ತ ಬಂದಿರುವ ಖಾಸಗಿ ಕಂಪನಿ ಉದ್ಯೋಗಿಗಳು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣ ಸೇರಿರುವ ನಿರುದ್ಯೋಗಿ ವಿದ್ಯಾವಂತ ಯುವಕರು, ಪದವೀಧರ ಯುವಕರು ಉದ್ಯೋಗ ಇಲ್ಲದೇ ಹಳ್ಳಿಯಲ್ಲಿ ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆಗೆ ನರೇಗಾ ಉತ್ತರ ಕಲ್ಪಿಸಿದೆ.
ನರೇಗಾದಡಿ ಕೃಷಿ, ಅರಣ್ಯ ಮತ್ತು ಗ್ರಾಪಂಚಾಯಿತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಬದು ನಿರ್ಮಾಣ, ಕೆರೆ ಹೂಳೆತ್ತುವುದು, ರೈತ ಸಂಪರ್ಕ ರಸ್ತೆ ಅಭಿವೃದ್ಧಿ ಇತರೇ ಕಾರ್ಯಗಳು ನಡೆಯುತ್ತಿವೆ. ಹಳ್ಳಿಗಳತ್ತ ಬಂದಿರುವ ಯುವಕರು ಊರಲ್ಲಿ ಕಾಲಹರಣ ಮಾಡುವ ಬದಲು ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿದ್ದಾರೆ.

ಕೈಯಲ್ಲಿ ಲ್ಯಾಪಟಾಪ್, ಮೊಬೈಲ್, ಬುಕ್, ಪೆನ್ ಹಿಡಿಯಬೇಕಾದ ಯುವಕರು ಹೆಗಲ ಮೇಲೆ ಗುದ್ದಲಿ, ಸಲಿಕೆ ಮತ್ತು ತಲೆಯ ಮೇಲೆ ಬುಟ್ಟಿ ಹೊತ್ತು ಕೆಲಸ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರಳ್ಳಿ, ಯಳವತ್ತಿ, ಅಡರಕಟ್ಟಿ, ಶಿಗ್ಲಿ, ಗೊಜನೂರ ಸೇರಿ ನಿತ್ಯ ತಾಲೂಕಿನ 14 ಗ್ರಾಮ ಪಂಚಾಯಿತು ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕೆಲಸದಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದಾರೆ.
ಆದ್ರಳ್ಳಿ ಗ್ರಾಮದಲ್ಲಿ ನರೇಗಾದಡಿ ನಡೆಯುತ್ತಿದ್ದ ಬದು ನಿರ್ಮಾಣ ಕಾರ್ಯದಲ್ಲಿ ಇಂಜನೀಯರಿಂಗ್ ಪದವೀಧರ ಪ್ರವೀಣ ಸೇರಿ ತಾಂಡಾದಿಂದ ಉದ್ಯೋಗ ಅರಸಿ ಗೋವಾ, ಮಂಗಳೂರ, ಉಡುಪಿ, ಬೆಂಗಳೂರು ಮತ್ತಿತರ ಕಡೆ ಹೋಗಿದ್ದ ಅನೇಕ ಯುವಕರು ನರೇಗಾದ ಕೆಲಸದಿಂದ ಕೊಡುವ 299 ರೂ ಬದುಕಿಗೆ ಆಸರೆಯಾಗಿದೆ.

ಪ್ರವೀಣ ಲಮಾಣಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ
ಬೆಳಗಾವಿಯ ಗೊಗಟೆ ಇಂಜನೀಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ವಿಭಾಗದಲ್ಲಿ ಓದುತ್ತಿರುವ ನಾನು ಕರೋನಾ ಎಪೆಕ್ಟ್ನಿಂದ ನಮ್ಮೂರು ಆದ್ರಳ್ಳಿ ತಾಂಡಾಕ್ಕೆ ಬಂದಿದ್ದೇನೆ. ನಮ್ಮದು ಬಡ ಕುಟುಂಬ ಮನೆಯಲ್ಲಿ ಪಾಲಕರು ನಿತ್ಯ ನಸುಕಿನಲ್ಲಿಯೇ ನರೇಗಾ ಕೆಲಸಕ್ಕೆ ಹೋಗುತ್ತಿದ್ದರು. ನಮಗಾಗಿ ಕಷ್ಟಪಟ್ಟು ದುಡಿಯುತ್ತಿರುವ ತಂದೆ-ತಾಯಿಗಳ ಜೊತೆಗೆ ನಾನೂ ಕೆಲಸ ಮಾಡಿದರೆ ಕುಟುಂಬಕ್ಕೆ ಆಸರೆಯಾಗುತ್ತದೆ. ರೈತ ಉಪಯೋಗಿ ನರೇಗಾ ಕೆಲಸಕ್ಕೆ ಕೈ ಜೋಡಿಸಿದಂತಾಗುತ್ತದೆ ಎಂಬ ಕಾರಣದಿಂದ ನರೇಗಾದಡಿ 15 ದಿನಗಳಿಂದ ಮೇಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸ ನನಗೆ ಬದುಕಿನ ಪಾಠ, ಪ್ರಾಯೋಗಿಕ ಅನುಭವ ಕಲಿಸಿದೆ. ಸರ್ಕಾರದ ಈ ಯೋಜನೆ ಅತ್ಯಂತ ಮಹತ್ವಪೂರ್ಣವಾಗಿದೆ.
ಆರ್.ವೈ. ಗುರಿಕಾರ- ತಾಪಂ ಇಓ-ಲಕ್ಷ್ಮೇಶ್ವರ ಅವರನ್ನು ಕೇಳಿದಾಗ, ಈ ಬಗ್ಗೆ ಹೇಳಿದ್ದು ಹೀಗೆ, “
ಕರೋನಾ ಹಿನ್ನೆಲೆ ಗ್ರಾಮೀಣ ಪ್ರದೇಶಗಳನ್ನು ಬಂದು ಸೇರಿಕೊಳ್ಳುತ್ತಿರುವ ಆರೋಗ್ಯವಂತ, ವಿದ್ಯಾವಂತ, ಖಾಸಗಿ ಕಂಪನಿ ಉದ್ಯೋಗಿ ಯುವಕರಿಗೆ ಕೂಡಲೇ ಜಾಬ್ಕಾರ್ಡ್ ನೀಡಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಈ ವೇಳೆ ಕರೋನಾ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಯುವಕರು ನರೇಗಾ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು.