ಪ್ರತಿಧ್ವನಿ ನ್ಯೂಸ್ ವಿಶೇಷ ವರದಿ..
ಬೆಂಗಳೂರು : ದೇಶದಲ್ಲಿ ಈಗಾಗಲೇ ದೆಹಲಿಯ ರೈತ ಹೋರಾಟ 383 ದಿನಗಳ (13 ತಿಂಗಳು) ಕಾಲ ನಿರಂತರವಾಗಿ ನಡೆಯುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ನಡೆದಿದ್ದ ಚಳುವಳಿ ಅವಿಸ್ಮರಣೀಯವಾಗಿದೆ. ರೈತ ಹೋರಾಟದ ಬಗ್ಗೆ ಅಂದಿನ ಕೇಂದ್ರ ಸಚಿವರು ಉಡಾಫೆ ಹೇಳಿಕೆಗಳನ್ನು ನೀಡುವ ಮೂಲಕ ರೈತರನ್ನು ಅವಮಾನಿಸುವ ಕೆಲಸ ಮಾಡಿದ್ದರು.

ಆದರೆ ಇದೀಗ ಕೇಂದ್ರ ಸರ್ಕಾರದ ಬೇಜವಾಬ್ದಾರಿಯ ವಿರುದ್ಧ ಅದರಲ್ಲೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವಲ್ಲಿ ವಿಫಲವಾಗಿರುವ ಕೇಂದ್ರದ ವಿರುದ್ಧ ಯುವಕರು ಬೀದಿಗಿಳಿದಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆಗಾಗಿ ದೇಶದಲ್ಲಿ ನೂತನವಾಗಿ ಅಸ್ತಿತ್ವದಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವದಿ ಹೋರಾಟವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಈಗಾಗಲೇ ಒಂದು ಹಂತದಲ್ಲಿ ಬೆಂಗಳೂರು, ಪುಣೆ, ರಾಜಸ್ತಾನ, ಅಮೃತಸರ, ನಾಗಪುರ ಸೇರಿದಂತೆ ದೇಶದ ವಿವಿಧ ಮಹಾನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಆದರೂ ಇದಕ್ಕೆ ಜಗ್ಗದ ಕೇಂದ್ರ ಸರ್ಕಾರ ತನ್ನ ಆದ್ಯ ಹೊಣೆಗಾರಿಕೆಯಿಂದ ಓಡಿ ಹೋಗುವ ಕೆಲಸ ಮಾಡುತ್ತಿದೆ. ಇದೇ ನೀಟ್ ಪ್ರಶ್ನೆ ಪತ್ರಿಕೆ ವಿಚಾರದಲ್ಲಿ ಮನನೊಂದು, ಆಘಾತಕ್ಕೊಳಗಾಗಿ ತಮ್ಮದಲ್ಲದ ತಪ್ಪಿಗೆ 12ಕ್ಕೂ ಅಧಿಕ ವಿದ್ಯಾರ್ಥಿಗಳು ಆತ್ಮಹತ್ಯೆಗೊಳಗಾಗಿದ್ದಾರೆ.
ಇದನ್ನೂ ಓದಿ : ಥಿಯೇಟರ್ನಲ್ಲಿ ಚಿತ್ರ ಪ್ಲಾಫ್; ಯುಟ್ಯೂಬ್ನಲ್ಲಿ ನೂರು ಕೋಟಿ ವೀವ್ಸ್! ಹರಿದು ಬಂತು ಕೋಟಿ ಕೋಟಿ ಹಣ!
ಸಾಲ ಸೂಲ ಮಾಡಿ ಮಕ್ಕಳಲ್ಲಿ ವೈದ್ಯರ ಕನಸು ಕಂಡ ನೂರಾರು ಕುಟುಂಬಗಳು ಬೀದಿಗೆ ಬರುವ ಸನ್ನಿವೇಶ ದೇಶದಲ್ಲಿಂದು ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಹೊಣೆಗಾರಿಕೆ ಹೊರಬೇಕಿದ್ದ, ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕಿದ್ದ ಧರ್ಮೇಂದ್ರ ಪ್ರದಾನ್ ಅಧರ್ಮಿಯಂತೆ ನೀಟ್ ಆಕಾಂಕ್ಷಿಗಳ ಭವಿಷ್ಯಕ್ಕೆ ವ್ಯವಸ್ಥಿತವಾಗಿ ಕೊಳ್ಳಿ ಇಡುವ ಕೆಲಸ ಮಾಡಿದ್ದಾರೆಂಬ ಆಕ್ರೋಶದ ಮಾತುಗಳು ಪ್ರತಿಯೊಬ್ಬ ಸ್ಪರ್ಧಾರ್ಥಿಗಳಲ್ಲಿವೆ.
ಕನಿಷ್ಠ ಸೌಜನ್ಯ ತೋರದ ನಿರ್ದಯಿ ಮಂತ್ರಿ..?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗಿನಿಂದ ಇಂದಿನವರೆಗೂ ಸಮರ್ಪಕ, ಸೂಕ್ತ ಉತ್ತರ ದೊರೆಯದಿರುವುದು ನಿಜಕ್ಕೂ ದುರಂತ!. ದೆಹಲಿ ರೈತ ಹೋರಾಟವನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆದಿದ್ದ ಈ ಹಿಂದಿನ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಗಿರಿರಾಜ್ ಸಿಂಗ್ ಅವರಂತೆಯೇ ಈ ಯುವ ಚಳುವಳಿಗೆ ಧರ್ಮೇಂದ್ರ ಪ್ರದಾನ್ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು “ಉಗ್ರರ ಬಿ-ಟೀಮ್” ಎಂದಿರುವುದು ಅವರಲ್ಲಿಯ ಹತಾಶೆ ಎದ್ದು ಕಾಣುತ್ತಿದೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳುವ ಸೌಜನ್ಯ ತೋರದಿರುವುದು ಪ್ರದಾನ್ ನಡೆಯು ಕೋಪಕ್ಕೆ ಕಾರಣವಾಗಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಆನ್ಯಾಯಕ್ಕೊಳಗಾಗಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಆತ್ಮಹತ್ಯೆಗೆ ಒಳಗಾದ ಆಕಾಂಕ್ಷಿಗಳ ಸಾವಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಈ ಹೋರಾಟ ಮುಂದುವರೆದಿದೆ. ಕಳೆದ 11 ದಿನಗಳಿಂದ ನವದೆಹಲಿಯ ಜಂತರ್ ಮಂತರ್ನಲ್ಲಿ ದೇಶದ ಖ್ಯಾತ ವಿಜ್ಞಾನಿ ಹಾಗೂ ಪರಿಸರವಾದಿ ಸೋನಮ್ ವಾಂಗ್ಚುಕ್ ಕೂಡ ಉಪವಾಸ ಸತ್ಯಾಗ್ರಹದ ಭಾಗವಾಗಿದ್ದಾರೆ. ಇನ್ನುಳಿದಂತೆ ಕಾಕ್ರೋಚ್ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿ ಕೇಂದ್ರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಹೊಣೆಗಾರಿಕೆ, ಶಿಕ್ಷಣ ವ್ಯವಸ್ಥೆ ಸುಧಾರಣೆಯ ಡಿಮ್ಯಾಂಡ್..!
ಪ್ರಮುಖವಾಗಿ ದೇಶದ ಪರೀಕ್ಷಾ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಅಲ್ಲದೆ ಭ್ರಷ್ಟ ಹಾಗೂ ಅದಕ್ಷ ಶಿಕ್ಷಣ ಸಚಿವ ಪ್ರದಾನ್ ನೀಡಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳು ಈ ಹೋರಾಟದ ಅಜೆಂಡಾಗಳಾಗಿವೆ. ಅಂದರೆ ಶಿಕ್ಷಣ ಸಚಿವರ ಜವಾಬ್ದಾರಿಯ ಗಂಭೀರತೆಯು ಮುಂಬರುವ ಯಾವುದೇ ಮಂತ್ರಿಗಳಿಗೆ ಅರ್ಥವಾಗಬೇಕು. ದೇಶದ ಎಲ್ಲ ವ್ಯವಸ್ಥೆಗೆ ಮೂಲ ಕಾರಣವಾಗಿರುವ ಶಿಕ್ಷಣದ ವಿಚಾರದಲ್ಲಿ ಹಿನ್ನಡೆಯಾಗಬಾರದು. ಅದರ ಮಹತ್ವ ಮತ್ತು ಶಿಕ್ಷಣ ಸಚಿವರ ಹುದ್ದೆಯ ಘನತೆಯ ಬಗ್ಗೆಯೂ ಮುಂಬರುವವರಿಗೆ ಅರಿವಿರಬೇಕು ಎಂಬ ನಿಟ್ಟಿನಲ್ಲಿ ಪ್ರದಾನ್ ರಾಜೀನಾಮೆ ಪಾಠವಾಗಲಿದೆ ಎಂಬುವುದು ಹೋರಾಟಗಾರರ ವಾದವಾಗಿವೆ.

ಮುಖ್ಯವಾಗಿ ಬಡವರ ಮಕ್ಕಳು ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಬೇಕಾದರೆ ದೇಶದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ಬದಲಾಗಬೇಕು, ಶಿಕ್ಷಣ ಮಾಫಿಯಾ, ಫೀಸ್ ಕಿರುಕುಳ ಎಲ್ಲವೂ ನಿಲ್ಲಬೇಕಿದೆ ಎಂಬ ವಿದ್ಯಾರ್ಥಿ ಹಾಗೂ ಪೋಷಕ ಸ್ನೇಹಿ ಇನ್ನೊಂದು ಬೇಡಿಕೆಯಾಗಿದೆ. ಆದರೆ ಹೋರಾಟ ಹಾಗೂ ಅಹವಾಲು, ಬೇಡಿಕೆಗಳ ದಿಶೆಯಲ್ಲಿ ಇದೊಂದು ಭಾಗವಾದರೆ, ರಾಜಕೀಯವಾಗಿಯೂ ಈ ವಿಚಾರ ಸಾಕಷ್ಟು ಕಾವು ಪಡೆದುಕೊಂಡಿದೆ.
ಬಿಜೆಪಿಯಿಂದ ಪ್ರಶ್ನಿಸುವ ಹಕ್ಕು ಮೊಟಕುಗೊಳಿಸುವ ಷಡ್ಯಂತ್ರ..!
ಕಳೆದ ಎರಡು ಅವಧಿಯಲ್ಲದೆ ಈಗ ಮೂರನೇ ಬಾರಿಯೂ ಅಧಿಕಾರದಲ್ಲಿರುವ ಬಿಜೆಪಿಯನ್ನು ಪ್ರಶ್ನೆ ಮಾಡಬಾರದಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ಬಿಸುವುದು ಸಂವಿಧಾನಬದ್ಧವಾಗಿರುವ ಹಕ್ಕಾಗಿದ್ದರೂ ಇದನ್ನು ಮೊಟಕುಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಲೇ ಬಂದಿದೆ. ತನ್ನ ಆಡಳಿತ ವೈಫಲ್ಯಗಳನ್ನು ಎತ್ತಿ ಹಿಡಿದು ಪ್ರಶ್ನಿಸುವವರನ್ನು ದೇಶದಲ್ಲಿ ಬಿಜೆಪಿ ತನ್ನ ಶತ್ರುವಿನಂತೆ ಕಾಣುತ್ತಿದೆ. ಕಳೆದ 2014ರಿಂದಲೂ ದೇಶದಲ್ಲಿ ಸಂವಿಧಾನದ ವಿಚಾರದಲ್ಲಿ ನಿರೀಕ್ಷಿತ ಪಾಲನೆಯಾಗದಿರುವುದು ಇಂದಿಗೂ ಅದು ತನ್ನ ಎಲ್ಲೇ ಮೀರುತ್ತಿರುವುದನ್ನು ಪ್ರಸ್ತುತ ಘಟನೆಗಳನ್ನು ನೋಡಿದಾಗ ಅರ್ಥವಾಗುತ್ತದೆ.
ಇದನ್ನೂ ಓದಿ : ₹10 ಪಿನ್ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್ ಫುಟ್ಪಾತ್ ಅಭಿಯಾನ!
ಅದರಂತೆಯೇ ನೀಟ್ ಹೋರಾಟವನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಆರಂಭಿಕ ದಿನಗಳಲ್ಲಿ ತನ್ನ ಶಕ್ತಿ ಮೀರಿ ಯತ್ನಗಳು ನಡೆದಿದ್ದವು ಎಂಬ ವಾದಗಳೂ ಇವೆ. ಆದರೆ ಅದು ಸಾಧ್ಯವಾಗಲಿಲ್ಲ, ಟ್ವೀಟ್ಟರ್, ಇನ್ಸ್ಟ್ರಾಗ್ರಾಂನಲ್ಲಿ ಹಿಂಬಾಲಕರನ್ನು ಹೊಂದಿ ವಿಪಕ್ಷಗಳ ನಿದ್ದೆ ಹಾರುವಂತೆ ಮಾಡಿತ್ತು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿರುವ ಹೋರಾಟವೊಂದು ಭೌತಿಕ ಸ್ವರೂಪ ಪಡೆದುಕೊಂಡು ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಯುವಕರ ಕಣ್ಣನ್ನು ತೆರೆಸುವ ಕಾರ್ಯಕ್ಕೆ ಮುಂದಾಗಿದೆ. ಆಡಳಿತ ಯಂತ್ರವನ್ನು ಪ್ರಶ್ನಿಸುವ ಶಕ್ತಿಯನ್ನು ನೀಡುತ್ತಿದೆ. ಇದರಿಂದ ಪ್ರೇರಿತರಾಗಿ ಯುವ ಸಮೂಹ ಸರ್ಕಾರಕ್ಕೆ ಚಾಟಿ ಬೀಸುವ ಕಾರ್ಯ ನಡೆಸುತ್ತಿದೆ.

ಪ್ರಶ್ನಿಸಿದ್ರೆ ಉಡಾಫೆ, ಹಾಸ್ಯಾಸ್ಪದ ಹೇಳಿಕೆಗಳ ಪರಾಕಾಷ್ಟೆ..!
ಇಷ್ಟೆಲ್ಲ ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಜಾಣ ಮೌನಕ್ಕೆ ಶರಣಾಗಿದೆ. ಎಲ್ಲ ಗೊತ್ತಿದ್ದು ಏನೂ ತಿಳಿಯದಂತೆ ವರ್ತಿಸುತ್ತಿರುವುದು ನೀಟ್ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯನ್ನು ಪ್ರಶ್ನೆ ಮಾಡುವವರಿಗೆ ಇಂದಿಗೂ ದೇಶವಿರೋಧಿ ಅಂತಲೇ ಬಿಂಬಿಸುವ ಕೆಲಸಕ್ಕೆ ಬ್ರೇಕ್ ಅಂತೂ ಬಿದ್ದಿಲ್ಲ. ಕತ್ತಲೆಯಲ್ಲಿದ್ದ ತಪ್ಪನ್ನು ಬೆಳಕಿಗೆ ತರುವವವರನ್ನು ಇದೇ ತುಕ್ಡೆ ತುಕ್ಡೆ ಗ್ಯಾಂಗ್ನಲ್ಲಿ ಹುದ್ದೆ ನೀಡುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಇನ್ನೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹೋರಾಟಗಾರರನ್ನು “ವೈರಸ್” ಎನ್ನುವಂತೆ ಕರೆಯುವ ಮೂಲಕ ತಮ್ಮ ಬುದ್ಧಿಮತ್ತೆಯನ್ನು ಬಟಾಬಯಲು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ರೀತಿಯ ಬೇಜವಾಬ್ದಾರಿ, ಉಡಾಫೆ ಹಾಗೂ ಹಾಸ್ಯಸ್ಪದ ಹೇಳಿಕೆಗಳು ಪರಾಕಾಷ್ಟೆ ಮರೆಯುತ್ತವೆ. ಇವೆಲ್ಲ ಕೇವಲ ತಮ್ಮ ತಪ್ಪಿನಿಂದ ನುಣುಚಿಕೊಂಡು ಓಡಿಹೋಗುವುದರ ಭಾಗವಷ್ಟೇ ಎನ್ನುವುದು ಸುಳ್ಳಲ್ಲ.
ಈಗ ದೇಶದ ಜನರಿಗೆ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ದೂರವಾಗುತ್ತಿದೆ. ಪರೀಕ್ಷೆಗಳ ಮೇಲಿನ ನಿರೀಕ್ಷೆ ಕಮರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರ ಹೊಲಸ್ಸು ರಾಜಕೀಯದಲ್ಲಿ ಮುಳುಗಿ ಮಕ್ಕಳ ಭವಿಷ್ಯಕ್ಕೆ ಸಂಚಕಾರ ತಂದಿಡುವ ಕೆಲಸ ಮಾಡುತ್ತಿದೆ. ಮಾತ್ತೆತ್ತಿದರೆ ಸಂವಿಧಾನ, ಕಾನೂನು ಎನ್ನುವ ಬಿಜೆಪಿ ತನಗೆ ಯಾವುದೂ ಅನ್ವಯಿಸಲ್ಲ. ಆದರೆ ದೇಶದ ವಿರೋಧ ಪಕ್ಷಗಳಿಗೆ, ಜನ ಸಾಮಾನ್ಯರಿಗಷ್ಟೇ ಎನ್ನುವಂತೆ ದುರ್ವರ್ತನೆ ತೋರುತ್ತಲೇ ಬರುತ್ತಿದೆ. ಹೀಗಾಗಿ ದೇಶದಲ್ಲಿನ ಕಾನೂನು ಸುವ್ಯವಸ್ಥ ಅಪಾಯದಲ್ಲಿವೆ ಎಂಬ ಚರ್ಚೆಗಳು ವ್ಯಾಪಕವಾಗಿವೆ.

ಸರ್ಕಾರ/ನಾಯಕರನ್ನು ಟೀಕಿಸುವುದು ದೇಶವಿರೋಧಿ ನಡೆ ಅಲ್ಲ , ಬಿಜೆಪಿ ಮನಗಾಣಲಿ..
ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದರೂ ಸಹ ಸರ್ವಾಧಿಕಾರಿ ಆಡಳಿತದ ಅಡಿಯಲ್ಲಿದ್ದಂತೆ ಭಾಸವಾಗುತ್ತಿದೆ. ಕಾರಣ ಬಿಜೆಪಿಯ ಅದರಲ್ಲೂ ಕೇಂದ್ರ ಸರ್ಕಾರದ ದಮನಕಾರಿ ನೀತಿಗಳಿಂದ ಎನ್ನುವುದು ಇಲ್ಲಿ ಗಮನಾರ್ಹ. ಆದರೆ ಬಿಜೆಪಿ ನಡೆ, ನಿಲುವ, ವಿಚಾರಗಳು ಏನೇ ಇದ್ದರೂ ನೆಲದ ಕಾನೂನು ಎಲ್ಲರಿಗೂ ಒಂದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡುವುದು ಸರ್ಕಾರಗಳ ಮೊದಲ ಆದ್ಯತೆಯಾಗಿರಬೇಕು. ಆದರೆ ದುರ್ದೈವವೆಂದರೆ ಪ್ರದಾನ್ ಆ ಅರ್ಹತೆಯನ್ನು ಉಳಿಸಿಕೊಂಡಿಲ್ಲ ಎನ್ನುವುದು ಲಕ್ಷಾಂತರ ವಿದ್ಯಾರ್ಥಿಗಳ ಅಳಲಾಗಿದೆ.
ಹೋರಾಟಗಾರರ ಆರೋಗ್ಯದಲ್ಲಿ ಏರು – ಪೇರಾದರೆ ಮುಂದಿನ ಅನಾಹುತಗಳಿಗೆ ಕೇಂದ್ರ ಸರ್ಕಾರ ಹಾಗೂ ಧರ್ಮೇಂದ್ರ ಪ್ರದಾನ್ ನೇರ ಹೊಣೆಗಾರರಾಗುತ್ತಾರೆ ಎಂದು ಈಗಾಗಲೇ ಕಾಕ್ರೋಚ್ ಜನತಾ ಪಾರ್ಟಿ ಎಚ್ಚರಿಸಿದೆ. ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರಜೆಗಳಿಗೆ ಶಾಂತಿಯುತ ಪ್ರತಿಭಟನೆ, ವ್ಯಕ್ತಿ ವಿರುದ್ಧ, ಪ್ರಶ್ನಿಸುವ ಹಕ್ಕು ಇದೆ (ಆರ್ಟಿಕಲ್ 19). ಸರ್ಕಾರ/ನಾಯಕರನ್ನು ಟೀಕಿಸುವುದು ದೇಶವಿರೋಧಿ ನಡೆಯಲ್ಲ ಎನ್ನುವುದನ್ನು ಬಿಜೆಪಿ ತಿಳಿದುಕೊಳ್ಳಬೇಕಿದೆ.

ಒಟ್ಟಿನಲ್ಲಿ ತಮ್ಮ ದುರಾಡಳಿತ, ಹೊಣೆಗೇಡಿತನ, ಜನವಿರೋಧಿ ನೀತಿಗಳನ್ನು ಪ್ರಶ್ನಿಸುವವರಿಗೆ ಭಯೋತ್ಪಾದಕರು, ದೇಶ ವಿರೋಧಿಗಳ ಪಟ್ಟ ಕಟ್ಟುವ ಮನಸ್ಥಿತಿಯಿಂದ ಇನ್ನಾದರೂ ಬಿಜೆಪಿ ಹೊರಬಂದು ಸಾಂವಿಧಾನಿಕ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವುದರ ಜೊತೆಗೆ ಆಡಳಿತ ಯಂತ್ರದ ಮೇಲೆ ದೇಶದ ಜನರ, ವಿದ್ಯಾರ್ಥಿಗಳ ವಿಶ್ವಾಸ ಮೂಡುವಂತೆ ಮಾಡುವ ಬಹುದೊಡ್ಡ ಚಾಲೇಂಜ್ ಇದೆ ಎನ್ನುವುದನ್ನು ಮರೆಯದಿರಲಿ.






