ಮನುಜ ಸಂವೇದನೆ, ಸೌಜನ್ಯ , ಸಭ್ಯತೆ ಮತ್ತು ನಾಗರಿಕ ಪ್ರಜ್ಞೆಗೆ ದ್ಯೋತಕವಾದ ರಂಗಭೂಮಿಯ ವೇದಿಕೆಯೊಂದರಲ್ಲಿ ನಿಂತು, ಮಕ್ಕಳಿಂದ ವೃದ್ಧರವರೆಗೂ ಇರುವ ಸಾರ್ವಜನಿಕ ಪ್ರೇಕ್ಷಕ ವೃಂದವನ್ನುದ್ದೇಶಿಸಿ, “ತಾಯಿ” ವಸ್ತುವನ್ನೊಳಗೊಂಡ ಸ್ತ್ರೀಕೇಂದ್ರಿತ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡುವಾಗ ತಮ್ಮೊಳಗಿನ “ಹಾಸ್ಯಪ್ರಜ್ಞೆ” ಕೊಂಚ ಜಾಗೃತವಾಗಿರಬೇಕಿತ್ತಲ್ಲವೇ ಹಿರೇಮಗಳೂರು ಕಣ್ಣನ್ ಅವರೇ!! ಹಲವರನ್ನು ನಗಿಸಿದ ನಿಮ್ಮ “ಹಾಸ್ಯ’ವು ಯಾರನ್ನಾದರೂ ನೋಯಿಸಿದೆ ಎಂದು ನಿಮಗೆ ಭಾಸವಾಗಿದ್ದರೆ ಆ ನೋವಿನ ಕಾರಣವೂ ನಿಮಗೆ ತಿಳಿದಿರಬೇಕಲ್ಲವೇ ? ಇದು ನೋವಿನ ಪ್ರಶ್ನೆ ಅಲ್ಲ. ಸಂವೇದನೆ ಇರುವ ಯಾವುದೇ ಮನಸ್ಸನ್ನು ಕಾಡುವ ನಿಮ್ಮ ಅಸೂಕ್ಷ್ಮತೆಯ ಪ್ರಶ್ನೆ. ನಿಮ್ಮ ಮೊಮ್ಮಕ್ಕಳ ವಯಸಿನ ಹೆಣ್ಣು ಮಕ್ಕಳು ತೊಡುವ ಒಂದು ತುಂಡು ವಸ್ತ್ರ ನಿಮ್ಮನ್ನು ಹಾಸ್ಯದ ಹೆಸರಿನಲ್ಲಿ ಅಶ್ಲೀಲತೆಯೆಡೆಗೆ ದೂಡಬೇಕಿತ್ತೇ ?
ನೀವು ನಿಂತ ವೇದಿಕೆ ಟಿವಿ ವಾಹಿನಿಯ ಹರಟೆ ಕಟ್ಟೆ ಆಗಿರಲಿಲ್ಲ ಅಲ್ಲವೇ ? ಅದು ಮನರಂಜನೆಯ ತಾಣ ಆಗಿರಲಿಲ್ಲ. ಗಂಭೀರ ಬೌದ್ಧಿಕ ಚಿಂತನೆಯ ಆವರಣದಲ್ಲಿ ನೀವು ಮಾತನಾಡುತ್ತಿದ್ದಿರಿ ಅಲ್ಲವೇ ? ಅಲ್ಲಿ ನೀವೇ ಹೇಳುವ ಪವಿತ್ರಾತ್ಮದ “ತಾಯಿ ” ಅಮೂರ್ತ ರೂಪದಲ್ಲಿ ಕಲಾಭಿವ್ಯಕ್ತಿಯಾಗಿ ಇದ್ದಳಲ್ಲವೇ ? ನಿತ್ಯ ಪೂಜೆ ಮಾಡುವ ನಿಮಗೆ ಆ ಅಮೂರ್ತತೆಯ ಪರಿವೆ ಇದ್ದಿದ್ದರೆ ನಿಮ್ಮ ” ಹಾಸ್ಯಪ್ರಜ್ಞೆಯೊಂದಿಗೆ ವಿಚಾರ ಹಂಚಿಕೊಳ್ಳುವ ” ವಾಂಛೆ ಸ್ವಯಂ ನಿಯಂತ್ರಿತವಾಗಬೇಕಿತ್ತಲ್ಲವೇ ? ನಿಮ್ಮ ಮಾತುಗಳಲ್ಲಿ ದುರುದ್ದೇಶ ಇರಲಿಲ್ಲ ಎಂದಿದ್ದೀರಿ ಸಂತೋಷ ಆದರೆ ಮನದಾಳದ ದ್ವೇಷದ ಅಥವಾ ಅಸಡ್ಡೆಯ ಛಾಯೆ ಇದ್ದುದನ್ನು ಕಂಡಿದ್ದೇವೆ. ಇಲ್ಲದಿದ್ದರೆ ಒಂದು ಸಮುದಾಯದ ಹುಡುಗಿಯರು ತೊಡುವ ಉಡುಪು ನಿಮ್ಮ “ಹಾಸ್ಯ ಪ್ರಜ್ಞೆ” ಗೆ ಸಿಲುಕಿ ನಿಮ್ಮನ್ನು ಬೆತ್ತಲೆ ಜಗತ್ತಿಗೆ ಕೊಂಡೊಯ್ಯುತ್ತಿರಲಿಲ್ಲ ಅಲ್ಲವೇ ? ಸ್ತ್ರೀ ಸಂವೇದನೆ ಮತ್ತು ಮಾನವೀಯ ಪ್ರಜ್ಞೆಯನ್ನು ಗೌರವಿಸುವ ಯಾರಿಗೇ ಆದರೂ ನಿಮ್ಮ ” ಹಾಸ್ಯಪ್ರಜ್ಞೆ” ಆಘಾತ ಉಂಟುಮಾಡಿರಲೇಬೇಕು.
ನಿಮ್ಮ ಅಶ್ಲೀಲ ನುಡಿಗಳನ್ನು ಸಮರ್ಥಿಸಿಕೊಳ್ಳಲು ” ಗ್ರಾಮ್ಯ ಭಾಷೆ” ಯನ್ನು ಗುರಾಣಿಯಾಗಿ ಬಳಸಿಕೊಳ್ಳುವುದು ಅರ್ಥಹೀನ ಎನಿಸುವುದಿಲ್ಲವೇ ? ಗ್ರಾಮ್ಯ ಭಾಷೆಯಲ್ಲಿ ಸೌಜನ್ಯ ಸಭ್ಯತೆ ಮಾನವ ಪ್ರೀತಿ ಇರುತ್ತದೆಯಲ್ಲವೇ ? ನೀವು ಅಪ್ಪಟ ಶಿಷ್ಟ ಭಾಷೆಯಲ್ಲೇ ಮಾತನಾಡಿದ್ದೀರಿ , ಸೊಂಟದ ಕೆಳಗಿನ ಮಾತುಗಳು ಎಂದಾಕ್ಷಣ ಅದು ಗ್ರಾಮ್ಯ ಆಗಿಬಿಡುವುದೇ ? ಕನ್ನಡ ವಿದ್ವಾಂಸರಾಗಿ ನಿಮಗೆ ಗ್ರಾಮ್ಯಭಾಷೆಯ ಬಗ್ಗೆ ಇಷ್ಟು ಅಸೂಕ್ಷ್ಮತೆ ಇರುವುದು ಆಘಾತಕಾರಿಯಾಗಿ ಕಾಣುತ್ತದೆ. ಇಷ್ಟಾದರೂ ನೀವು ಕ್ಷಮೆ ಯಾಚಿಸಲು ಹಿಂಜರಿಯುತ್ತಿದ್ದೀರೇಕೆ ? ಜಾತ್ಯಾತೀತತೆ ಎಂದರೆ ಕೇವಲ ಎರಡು ಧರ್ಮಗಳ ಕುರಿತ ಭಾವನೆ ಅಲ್ಲ. ಅದರ ಕ್ಯಾನ್ವಾಸ್ ದೊಡ್ಡದು. ರಂಗಭೂಮಿಯೇ ಅದಕ್ಕೆ ಸಾಕ್ಷಿ. ಆ ರಂಗಭೂಮಿಯ ವೇದಿಕೆಯಲ್ಲಿ ನಿಂತು, ಸಂವೇದನಾಶೂನ್ಯರಂತೆ ” ಹಾಸ್ಯಪ್ರಜ್ಞೆ ” ಯನ್ನು ಮೆರೆಯುವುದು ವಿದ್ವತ್ ಲೋಕವನ್ನು ಪ್ರತಿನಿಧಿಸುವ ನಿಮ್ಮಂಥವರಿಗೆ ಶೋಭಿಸುವುದಿಲ್ಲ.
ನಿಮ್ಮ ಮಾತುಗಳನ್ನು ” ಅಭಿವ್ಯಕ್ತಿ ಸ್ವಾತಂತ್ರ್ಯ”ದ ನೆಪದಲ್ಲಿ ಸಮರ್ಥಿಸಿಕೊಳ್ಳುವ ರಂಗಾಯಣ ನಿರ್ದೇಶಕರ ಬಗ್ಗೆ ಯಾರಿಗೂ ಸಂದೇಹವೇ ಇರದಂತೆ ಅವರೇ ಸಮಾರೋಪ ಭಾಷಣ ಮಾಡಿದ್ದಾರೆ. ಆದರೆ ನಿಮ್ಮ ಹಾಸ್ಯಪ್ರಜ್ಞೆಯ ಧಾಟಿಗೆ ನಿಮ್ಮಲ್ಲಿಯಾದರೂ, ಪಾಪಪ್ರಜ್ಞೆ ಮೂಡದಿದ್ದರೂ, ಕನಿಷ್ಠ ಅಪರಾಧಿ ಪ್ರಜ್ಞೆಯಾದರೂ ಮೂಡಬೇಕಿತ್ತಲ್ಲವೇ ? ನಿಮ್ಮ ಪರವಾಗಿ ಪ್ರಜ್ಞಾವಂತ ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸಲು ಸಾಧ್ಯವೇ ? ಯೋಚಿಸಿ ಕಣ್ಣನ್ ಅವರೇ !