ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಹಗರಣದ ಕುರಿತಂತೆ ಶೇಷಾದ್ರಿಪುರಂ ಠಾಣೆಯಲ್ಲಿ ನೀಡಲಾಗಿದ್ದ ದೂರಿನ ವಿಚಾರಣೆಯನ್ನು ಪೊಲೀಸರು ಮುಕ್ತಾಯಗೊಳಿಸಿದ್ದು, ಇದೀಗ ಪೊಲೀಸರ ವಿರುದ್ಧವೇ ಜನಾಧಿಕಾರ ಸಂಘರ್ಷ ಪರಿಷತ್ ದೂರು ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಡಿಎ ಪ್ರಾಜೆಕ್ಟ್ ಸಂಬಂಧಿಸಿದಂತೆ ಮುಖ್ಯಮಂತ್ರಿ ಪುತ್ರ, ಅಳಿಯ ಹಾಗೂ ಮೊಮ್ಮಗ ಗುತ್ತಿಗೆದಾರರಿಂದ ಸುಲಿಗೆ ಮಾಡಿದ್ದಾರೆ ಎಂದು ಕನ್ನಡ ಖಾಸಗಿ ಟಿವಿ ವಾಹಿನಿಯೊಂದು ಸರಣಿ ವರದಿ ಮಾಡಿತ್ತು. ಈ ವರದಿ ಆಧಾರದಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ವಿಜಯೇಂದ್ರ ಮತ್ತಿತರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿತ್ತು.
Also Read: ಸಿಎಂ ಪುತ್ರ ವಿಜಯೇಂದ್ರ ಬಳಿಕ ಅಳಿಯ, ಮೊಮ್ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು!
ಆದರೆ, ಆ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂಜರಿದಿದ್ದಾರೆ ಮಾತ್ರವಲ್ಲ, ದೂರು ನೀಡಿರುವ ಕುರಿತಂತೆ ಸೀಕೃತಿ ಪತ್ರ ಕೂಡಾ ನೀಡದೆ, ದೂರನ್ನು ಏಕಪಕ್ಷೀಯವಾಗಿ ಮುಕ್ತಾಯಗೊಳಿಸಿದ್ದಾರೆಂದು ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ್ ಅಯ್ಯರ್ ʼಪ್ರತಿಧ್ವನಿʼಗೆ ಹೇಳಿದ್ದಾರೆ.
ʼನಾವು ದೂರು ನೀಡಿ ಒಂದು ವಾರ ಕಾದಿದ್ದೇವೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಮಾತ್ರವಲ್ಲ, ದೂರು ನೀಡಿರುವ ಕುರಿತು ಸ್ವೀಕೃತಿ ಪತ್ರ ಕೂಡಾ ನೀಡಿಲ್ಲ. ಈ ಕುರಿತು ಠಾಣಾ ಇನ್ಸ್ಪೆಕ್ಟರ್ ಹಾಗೂ ಡಿಸಿಪಿ (ಸೆಂಟ್ರಲ್) ವಿರುದ್ಧವೇ ದೂರು ದಾಖಲಿಸಿದ್ದೇವೆ. ಸಿಆರ್ಪಿಸಿ ಪ್ರಕಾರ ದೂರು ಸ್ವೀಕರಿಸಿದ ತಕ್ಷಣವೇ ಎಫ್ಐಆರ್ ದಾಖಲಿಸಬೇಕಾಗಿರುವುದು ಪೊಲೀಸರ ಕರ್ತವ್ಯ. ಎಫ್ಐಆರ್ ದಾಖಲಿಸದಿರುವುದು ಕರ್ತವ್ಯ ಲೋಪ ಮಾತ್ರವಲ್ಲ, ಐಪಿಸಿ 217 ಪ್ರಕಾರ ಕ್ರಿಮಿನಲ್ ಕೃತ್ಯ ಕೂಡಾ. ಹಾಗಾಗಿ ಐಪಿಸಿ 217 ಅಡಿಯಲ್ಲಿ ಡಿಸಿಪಿ ಅನುಚೇತನ್ ಹಾಗಾಗಿ ಶೇಷಾದ್ರಿಪುರಂ ಇನ್ಸ್ಪೆಕ್ಟರ್ ಎಂ ಎನ್ ಕೃಷ್ಣಮೂರ್ತಿ ವಿರುದ್ಧ ದೂರು ನೀಡಿದ್ದೇವೆʼ ಎಂದು ಆದರ್ಶ್ ಅಯ್ಯರ್ ಹೇಳಿದ್ದಾರೆ.
Also Read: ಬಹುಕೋಟಿ ಹಗರಣ ಆರೋಪ: ಬಿ ವೈ ವಿಜಯೇಂದ್ರ ವಿರುದ್ಧ ಡಿಜಿಐಜಿಗೆ ದೂರು
ಸಿಎಂ ಯಡಿಯೂರಪ್ಪ ಅವರ ಕುಟುಂಬಸ್ಥರನ್ನು ರಕ್ಷಿಸಲು ಪೊಲೀಸರು ಉದ್ದೇಶಪೂರ್ವಕವಾಗಿಯೇ ಎಫ್ಐಆರ್ ದಾಖಲಿಸದೆ ಏಕಪಕ್ಷೀಯವಾಗಿ ದೂರಿನ ಅರ್ಜಿಯನ್ನು ತರಾತುರಿಯಲ್ಲಿ ಮುಕ್ತಾಯಗೊಳಿಸಿದ್ದಾರೆ ಎಂದು ಆರೋಪಿಸಿರುವ ಅಯ್ಯರ್ ಮುಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಸಿಸಿಆರ್ ಮೂವ್ ಮಾಡುತ್ತೇವೆ ಎಂದೂ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA) 576 ಕೋಟಿ ರೂಪಾಯಿಗೆ ಹೌಸಗ್ ಪ್ರಾಜೆಕ್ಟ್ ಟೆಂಡರ್ ಕರೆಯುತ್ತದೆ. ಈ ಟೆಂಡರ್ ನಲ್ಲಿ ಇಬ್ಬರು ಬಿಲ್ಡರ್ ಗಳು ಪಾಲ್ಗೊಂಡಿರುತ್ತಾರೆ. ಅಂತಿಮವಾಗಿ ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿಗೆ ಟೆಂಡರ್ ಸಿಗುತ್ತದೆ. ಆ ಬಳಿಕ ವಿಜಯೇಂದ್ರ ರಾಮಲಿಂಗಂ ಕಂಪನಿ ಮಾಲೀಕರಿಗೆ ಕರೆ ಮಾಡಿ ಟೆಂಡರ್ ಕ್ಲೋಸ್ ಮಾಡುವ ಬೆದರಿಕೆ ಹಾಕುತ್ತಾರೆ. ಹಾಗಾಗಬಾರದು ಎನ್ನುವುದಿದ್ದರೆ ತಮ್ಮ ಆಪ್ತ ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ನೀಡುತ್ತಾರೆ.
ಇದೇ ವೇಳೆ ವಿಜಯೇಂದ್ರನಿಗೆ ಹಣ ಕೊಡುವುದಾಗಿ ಹೇಳಿ ಬಿಡಿಎ ಆಯುಕ್ತ ಪ್ರಕಾಶ್ ಕಂಟ್ರಾಕ್ಟರ್ ಬಳಿ 12 ಕೋಟಿ ಹಣವನ್ನು ಪಡೆದಿರುತ್ತಾರೆ. ಇದನ್ನು ಕಂಟ್ರಾಕ್ಟರ್ ವಿಜಯೇಂದ್ರನಿಗೆ ತಿಳಿಸುತ್ತಾರೆ. ಆದರೆ ವಿಜಯೇಂದ್ರ ‘ಹಣ ಬಂದಿಲ್ಲವಲ್ಲ’ ಎನ್ನುತ್ತಾರೆ. ಆಗ ತಮ್ಮ ಹೆಸರನ್ನು ಬಳಸಿಕೊಂಡು ಕಂಟ್ರಾಕ್ಟರ್ ಬಳಿ ಹಣ ವಸೂಲಿ ಮಾಡಿದ ಪ್ರಕಾಶ್ ವಿರುದ್ಧ ವಿಜಯೇಂದ್ರ ದೂರು ದಾಖಲಿಸುವುದಿಲ್ಲ. ಏಕೆಂದರೆ ಪ್ರಕಾಶ್ ಬಿಡಿಎ ಆಯುಕ್ತ ಹುದ್ದೆಗೆ ಬರಲು ವಿಜಯೇಂದ್ರನಿಗೆ 15 ಕೋಟಿ ರೂಪಾಯಿ ಕೊಟ್ಟಿರುತ್ತಾರೆ.
Also Read: ಎಸಿಬಿ ಮೆಟ್ಟಿಲೇರಿದ ಸಿಎಂ ಪುತ್ರ ವಿಜಯೇಂದ್ರ ಹಗರಣ
ಇಷ್ಟೇ ಅಲ್ಲ, ಕೆಲ ದಿನಗಳಲ್ಲೇ ಆ ಕಂಟ್ರಾಕ್ಟರ್ ಯಡಿಯೂರಪ್ಪನವರ ಮೊಮ್ಮಗ ಶಶಿಧರ್ ಮರಡಿಯ ಅಕೌಂಟಿಗೆ 7.40 ಕೋಟಿ ರೂಪಾಯಿಗಳನ್ನು ಆರ್ ಆರ್ಜಿಎಸ್ (RTGS) ಮೂಲಕ ವರ್ಗ ಮಾಡುತ್ತಾರೆ. ಬೆಂಗಳೂರಿನ ಶೇಷಾದ್ರಿಪುರಂನ HDFC ಬ್ಯಾಂಕ್ ಶಾಖೆಯಲ್ಲಿರುವ ಶಶಿಧರ ಮರಡಿ ಅಕೌಂಟಿಗೆ ಹಣ ಸಂದಾಯವಾಗುತ್ತದೆ ಎಂದು ಕಳೆದ ತಿಂಗಳು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು.
ಇದೇ ವಿಚಾರವನ್ನು ಕನ್ನಡ ಖಾಸಗಿ ಚಾನೆಲ್ ಒಂದು ಸರಣಿ ವರದಿ ನಡೆಸಿತ್ತು. ಚಾನೆಲ್ ವರದಿಯನ್ನು ಆಧರಿಸಿ ʼಸಿಎಂ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಸಿಎಂ ಮೊಮ್ಮಗ ಶಶಿಧರ ಮರಡಿಯವರು ರಾಮಲಿಂಗಂ (ಕನ್ಸ್ಸ್ಟ್ರಕ್ಸನ್) ಎಂಬುವವರಿಂದ ಹಣ ನೀಡದಿದ್ದರೆ ನಿಮ್ಮ ಬಿಡಿಎ ಪ್ರಾಜೆಕ್ಟ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿ ಆರ್ಟಿಜಿಎಸ್ ಮೂಲಕ ಅಪಾರ ಪ್ರಮಾಣದ (17 ಕೋಟಿ ರೂಗಳು) ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. 1860 ರ ಭಾರತೀಯ ದಂಡ ಸಂಹಿತೆಯ(IPC) 120 (ಬಿ), ಸುಲಿಗೆ IPC 384, SEC 34ರ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಜನಾಧಿಕಾರ ಸಂಘರ್ಷ ಪರಿಷತ್ ದೂರು ನೀಡಿ ಆಗ್ರಹಿಸಿತ್ತು.
ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿ ಮತ್ತು ಖಾಸಗಿ ಮಾಧ್ಯಮದ ಮುಖ್ಯಸ್ಯ ರಾಕೇಶ್ ಶೆಟ್ಟಿ ಅವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ಕೋರಿತ್ತು. ಆದರೆ ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸದೆ ಪ್ರಭಾವಿಗಳ ಲಾಬಿಗೆ ಮಣಿದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.