ವಿಲೀನಗೊಳಿಸುವ ಮೂಲಕ ದೇಶದಲ್ಲಿನ ರಾಷ್ಟ್ರೀಯಕೃತ ಬ್ಯಾಂಕುಗಳ ಸಂಖ್ಯೆಯನ್ನು ತಗ್ಗಿಸುತ್ತಿರುವ ಪ್ರಧಾನಿ ಮೋದಿ ಸರ್ಕಾರ ಈಗ, ಬ್ಯಾಂಕುಗಳ ಖಾಸಗೀಕರಣಕ್ಕೂ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಿದೆ. ಖಾಸಗೀಕರಣಗೊಳಿಸುವ ಬ್ಯಾಂಕುಗಳ ಪಟ್ಟಿಯಲ್ಲಿ ನಾಲ್ಕು ಹೆಸರುಗಳಿವೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಇಂಡಿಯಾ- ಈ ನಾಲ್ಕು ಬ್ಯಾಂಕುಗಳ ಪೈಕಿ ಎರಡು ಬ್ಯಾಂಕುಗಳು ಮುಂದಿನ ವಿತ್ತೀಯ ವರ್ಷದಲ್ಲಿ ಖಾಸಗೀಕರಣಗೊಳ್ಳಲಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉದ್ದೇಶತ ಬ್ಯಾಂಕುಗಳ ನೌಕರರಿಗೆ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್ಎಸ್) ಘೋಷಿಸಿದೆ. ಬ್ಯಾಂಕಿಂಗ್ ನೌಕರರ ಸಂಘಟನೆಗಳು ಖಾಸಗೀಕರಣವನ್ನು ವಿರೋಧಿಸಿವೆ.
ನವೆಂಬರ್ 29 ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅನ್ನು ಮಂಡಿಸಲಿದೆ. ಎನ್ಡಿಟಿವಿ ವರದಿ ಪ್ರಕಾರ, ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಲಾಗಿರುವ 26 ಮಸೂದೆಗಳ ಪಟ್ಟಿಯಲ್ಲಿ ಪ್ರಸ್ತಾವಿತ ಪಟ್ಟಿಯಲ್ಲಿ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆಯೂ ಸೇರಿವೆ.
ಬ್ಯಾಂಕಿಂಗ್ ಕಂಪನಿಗಳ 1970 ಮತ್ತು 1980 ( ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆಗಳಲ್ಲಿ ತಿದ್ದುಪಡಿಗಳನ್ನು ಮಾಡಬೇಕಾಗಿದೆ, ಮತ್ತು 1949ರ ಬ್ಯಾಂಕಿಂಗ್ ಕಾಯಿದೆಗೆ ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಬೇಕಾಗಿದೆ.
ಅಧಿಕೃತ ಮೂಲಗಳ ಪ್ರಕಾರ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನುಮಂಡಿಸಿ, ಪರಿಗಣಿಸಿ ಮತ್ತು ಅಂಗೀಕಾರಿಸುವುದಕ್ಕಾಗಿ ಪಟ್ಟಿ ಮಾಡಲಾಗಿದೆ.
ಬಂಡವಾಳ ಹಿಂತೆಗೆದ ಯೋಜನೆಯಡಿ ಪ್ರಸಕ್ತ ವಿತ್ತೀಯ ವರ್ಷ 2021-22ದಲ್ಲಿ 1.75 ಲಕ್ಷ ಕೋಟಿ ರುಪಾಯಿ ಸಂಗ್ರಹಿಸುವ ಗುರಿಯನ್ನು ಸಾಧಿಸಲು ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವುದಾಗಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದರು.
ಇದಲ್ಲದೇ, ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಮಸೂದೆಗಳ ಪೈಕಿ ಮತ್ತೊಂದು ಮಹತ್ವದ ಮಸೂದೆಯೆಂದರೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021 ಸೇರಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ ಅನ್ನು ಪ್ರತ್ಯೇಕಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಕಾಯ್ದೆಯನ್ನು ತಿದ್ದುಪಡಿ ಮಾಡುವುದು ಮಸೂದೆಯ ಉದ್ದೇಶವಾಗಿದೆ.
ಸಾರ್ವತ್ರಿಕ ಪಿಂಚಣಿ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಪಿಎಫ್ಆರ್ಡಿಎ ಬಲಪಡಿಸಲು ವಿತ್ತ ಸಚಿವರ 2020 ರ ಬಜೆಟ್ ಘೋಷಿತ ಭರವಸೆಯನ್ನು ಉದ್ದೇಶಿತ ಮಸೂದೆಯು ಪೂರೈಸುತ್ತದೆ. ಪಿಎಫ್ಆರ್ಡಿಎ ಕಾಯಿದೆ ತಿದ್ದುಪಡಿಯೊಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಟ್ರಸ್ಟ್ ನ ಅಧಿಕಾರಗಳು, ಕಾರ್ಯಗಳು ಮತ್ತು ಕರ್ತವ್ಯಗಳು, ಪ್ರಸ್ತುತ ಪಿಎಫ್ಆರ್ಡಿಎ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್) ನಿಯಮಗಳು 2015 ರ ಅಡಿಯಲ್ಲಿ ನಿಗದಿಪಡಿಸಲಾಗಿದ್ದು, ತಿದ್ದುಪಡಿಯ ನಂತರ ಇದು ಚಾರಿಟಬಲ್ ಟ್ರಸ್ಟ್ ಅಥವಾ ಕಂಪನಿಗಳ ಕಾಯಿದೆಯ ಅಡಿಯಲ್ಲಿ ಬರಬಹುದಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಟ್ರಸ್ಟ್ ಅನ್ನು ಪಿಂಚಣಿ ನಿಯಂತ್ರಣ ವ್ಯಾಪ್ತಿಯಿಂದ ಪ್ರತ್ಯೇಕವಾಗಿರಿಸುವುದು ಮತ್ತು ಹದಿನೈದು ಸದಸ್ಯ ಬಲದ ಆಡಳಿತ ಮಂಡಳಿಯಿಂದ ನಿರ್ವಹಿಸುವ ಉದ್ದೇಶವನ್ನು ಉದ್ದೇಶಿತ ಮಸೂದೆಯು ಹೊಂದಿದೆ. ಪಿಂಚಣಿ ಕಾಪು ನಿಧಿಗೆ ಹೆಚ್ಚು ದೇಣಿಗೆ ನೀಡುವ ವಲಯಕ್ಕೆ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಲಿದೆ.