ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಸಾಲು ಸಾಲು ಅನಾಹುತ ಸಂಭವಿಸಿದೆ. ಇದೀಗ ಅವಾಂತರಗಳ ಬಳಿಕ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಇಂಜಿನಿಯರ್ಗಳ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವಹಿಸಲು ಖಡಕ್ ಸೂಚನೆ ಕೊಟ್ಟಿದ್ದಾರೆ.
ಮಳೆ ಅನಾಹುತ ತಡೆಯಲು ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ.!!
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಬಿಬಿಎಂಪಿಯಲ್ಲಿ ಮಹತ್ತರವಾದ ಸಭೆ ನಡೆಸಿ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳನ್ನು ವಿಸ್ತರಿಸಲು ಸೂಚಿಸಿದರಲ್ಲದೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಹೆಚ್ಚಿನ ಮಳೆ ಬಂದಾಗ ನಗರದಲ್ಲಿ ರಾಜಕಾಲುವೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗುವಂತಹ ಘಟನೆಗಳ ತಡೆಗಟ್ಟುವ ಕ್ರಮಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆದ ಸಿಎಂ, ಈಗಾಗಲೇ ಕೆಲವು ಸ್ಥಳಗಳ ಪರಿಶೀಲನೆ ಆರಂಭವಾಗಿದ್ದು, ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಕೂಡಲೇ ದುರಸ್ತಿ ಕಾರ್ಯ ನಡೆಸಲು ಮತ್ತು ಹೊಸ ಕಾಲುವೆ ನಿರ್ಮಿಸಲು ಸೂಚನೆ ನೀಡಿದ್ದಾರೆ.
ನಗರದ ನೀರುಗಾವಲು ಪುನರ್ ನಿರ್ಮಾಣಕ್ಕೆ ಸಿಎಂ ಸೂಚನೆ.!!
ಇನ್ನು ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೃಹತ್ ನೀರುಗಾಲುವೆಗಳ ಪುನರ್ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲು ಹೇಳಿದರು. ಚರಂಡಿ ನೀರು ರಾಜಕಾಲುವೆ ಸೇರಲು ಒತ್ತುವರಿಯಿಂದ ಜಾಗದ ಅಭಾವವಿದೆ. ಬೆಂಗಳೂರಿನಲ್ಲಿ ಏಕಾಏಕಿ ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲ ಆದ್ದರಿಂದ ಹಂತಹಂತವಾಗಿ ತೆರವುಗೊಳಿಸಲು ಆದೇಶಿಸಿದ್ದಾರೆ. ಬಡವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಒತ್ತುವರಿ ತೆರವುಗೊಳಿಸಬೇಕಾಗಿದೆ. ಹೆಬ್ಬಾಳ ವ್ಯಾಲಿ ನೀರು ಸರಾಗವಾಗಿ ಹರಿದುಹೋಗಲು ರೈಲ್ವೆ ವೆಂಟ್ ಅಗಲೀಕರಣದ ಅಗತ್ಯವಿದೆ. ಪಾಲಿಕೆಯ ಅಧಿಕಾರಿಗಳು ಯಾವಾಗಲು ಸಜ್ಜಾಗಿರುವಂತೆಯೂ, ಈಗಾಗಲೇ ನಗರದಾದ್ಯಂತ ತೆಗೆದುಕೊಂಡಿರುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಲ್ಲೆಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲವೋ ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಮಳೆಯಿಂದಾಗುವ ಅನಾಹುತಕ್ಕೆ ಶಾಶ್ವತ ಪರಿಹಾರ.!!
110 ಹಳ್ಳಿಗಳಲ್ಲಿ ರಾಜಕಾಲುವೆಗಳ ಅಗಲೀಕರಣ ಮಾಡುವ ಅಗತ್ಯವಿದೆ. ಕಾಂಕ್ರೀಟ್ ಹಾಕಿ ರಾಜಕಾಲುವೆ ಅಗಲೀಕರಣ ಮಾಡಬೇಕಿದೆ. ವೃಷಭಾವತಿ, ಹೆಬ್ಬಾಳ, ಛಲಗಟ್ಟ, ಕೋರಮಂಗಲ ವ್ಯಾಲಿ ಸ್ವಚ್ಛಗೊಳಿಸೋಕೆ ಸೂಚನೆ ನೀಡಲಾಗಿದೆ. ಈಗಾಗಲೇ 400 ಕಿಲೋ ಮೀಟರ್ ರಾಜಕಾಲುವೆ ದುರಸ್ತಿಯಾಗಿದೆ. 94 ಕ್ರಿಟಿಕಲ್ ಪಾಯಿಂಟ್ಸ್ ಗುರ್ತಿಸಲಾಗಿದೆ. ಎರಡು ತಿಂಗಳಲ್ಲಿ ದುರಸ್ತಿಗೆ ಸೂಚನೆ ನೀಡಲಾಗಿದೆ. 51 ಕಿಲೋ ಪ್ರೈಮರಿ ಬೃಹತ್ ಕಾಲುವೆ ಶೀಘ್ರದಲ್ಲೇ ಆಗಬೇಕಿದೆ. ಉಳಿದಂತೆ 38 ಕಿಲೋ ಮೀಟರ್ ಸೆಕೆಂಡರಿ ಡ್ರೈನ್ ಆಗಬೇಕಿದೆ. ಇವೆಲ್ಲದಕ್ಕೂ 900 ಕೋಟಿ ವೆಚ್ಚ ಅಂದಾಜಿಸಲಾಗಿದೆ. ರಾಜಕಲುವೆ ದುರಸ್ತಿಗೆ 1060 ಕೋಟಿ ಬಿಡುಗಡೆಯಾಗಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು 718 ಕಟ್ಟಡಗಳಿವೆ ಶೀಘ್ರದಲ್ಲೇ ತೆರವು ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.
ಚರಂಡಿಗಳಲ್ಲಿ ನೀರು ಹೊರ ಹರಿಯುವುದಕ್ಕೆ ಮುಖ್ಯ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿ ಸರ್ಕಾರದಿಂದ ಸಂಪೂರ್ಣ ನೀಡುವುದಾಗಿ ಸ್ಪಷ್ಟಪಡಿಸಿದರು.
ಹೊಸದಾಗಿ ಎಲ್ಲೆಲ್ಲಿ ಕಾಲುವೆಗಳನ್ನು ನಿರ್ಮಿಸಲು ಅಗತ್ಯವಿದೆಯೋ ಅಲ್ಲಲ್ಲಿ ಇದಕ್ಕೆ ಸೂಕ್ತ ಸಲಹೆ-ಕ್ರಮಗಳನ್ನು ಸೂಚಿಸಿದರು.
ಒಟ್ಟಾರೆ ಸತತ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಹೈರಾಣಾಗಿ ಹೋಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಥಾ ಅನಾಹುತಗಳಿಗೆ ದಾರಿ ಮಾಡಿಕೊಡದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರಲ್ಲದೆ, ಶಾಶ್ವತ ಪರಿಹಾರಕ್ಕಾಗಿ ಇಂದು ಮಹತ್ವದ ಸಭೆ ನಡೆಸಿ ಕೆಲವು ನಿರ್ಧಾರ ಕೈಗೊಂಡಿದ್ದಾರೆ. ಅಂದಹಾಗೆ, ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇಂದಿನ ಸಭೆಯಲ್ಲಿ ಸಚಿವರು ಸೇರಿದಂತೆ ನಗರದ ಬಹುತೇಕ ಶಾಸಕರು ಭಾಗಿಯಾಗಿದ್ದರು.