ಯಾರೇ ಆಗಲಿ ಹಿಂದುತ್ವದ ಸುದ್ದಿಗೆ ಬಂದರೆ ಭಾರೀ ಅನುಭವಿಸ್ತೀರಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬುಧವಾರ, ಶಿರಾಳಕೊಪ್ಪದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ನಡೆಸಿದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಚೈತ್ರಾ ಕುಂದಾಪುರ ಅವರ ಹೇಳಿಕೆಯನ್ನು ಕೇವಲ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಕ್ಕೆ ಅಂಗಡಿಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಅವರಿಗೆ ಎಷ್ಟು ಸೊಕ್ಕು ಇರಬೇಕು. ಈ ವ್ಯವಸ್ಥೆ ರಾಜ್ಯದಲ್ಲಾಗಲಿ ದೇಶದಲ್ಲಾಗಲಿ ನಡೆಯಲು ಬಿಡೋದಿಲ್ಲ. ಹಿಂದುತ್ವದ ಸುದ್ದಿಗೆ ಬಂದರೆ ಭಾರೀ ಅನುಭವಿಸುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ಮುಸಲ್ಮಾನರು ಬಹಳ ತಲೆಹರಟೆಗಳಾಗಿದ್ದು, ತಾವೇ ಮುಸ್ಲಿಮರ ಉದ್ಧಾರಕರು ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದೂ ಸಚಿವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಕುರುಬ ಸಮುದಾವನ್ನು ಎಸ್ಟಿ ಮೀಸಲಾತಿ ಗೆ ಸೇರಿಸುವ ವಿಚಾರದಲ್ಲಿ ಸಿದ್ದರಾಮಯ್ಯ ವಿರೋಧ ಮಾಡಿದ್ದಾರೆಂದು ನಾನೆಲ್ಲೂ ಹೇಳಿಕೆ ನೀಡಿಲ್ಲ. ಅವರು ಯಾಕೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿಕೆ ನೀಡಿದ್ದಾರೆ ಅದನ್ನು ತಿಳಿದುಕೊಂಡು ಉತ್ತರಿಸುವೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ನಡೆದಿದೆ. ಆ ಹೋರಾಟಕ್ಕೆ ನಾನು ಕೈಜೋಡಿಸಿದ್ದೆ. ನಾನು ಯಾವುದೇ ಚರ್ಚೆಗೂ ಸಿದ್ಧ. ಸಿದ್ಧರಾಮಯ್ಯ ಮಾತ್ರವಲ್ಲ, ಬೇರೆ ಯಾರ ಜೊತೆ ಆದರ್ರೂ ನಾನು ಬಹಿರಂಗ ಚರ್ಚೆ ಗೆ ಸಿದ್ಧ ಎಂದು ಈಶ್ವರಪ್ಪ ಹೇಳಿದರು.
ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ: ಸಿದ್ದರಾಮಯ್ಯ ಅವರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿದ್ಧರಾಮಯ್ಯ ಬಿಎ ಸ್ ವೈ ಭೇಟಿ ವಿಚಾರ, ಆ ಹಿನ್ನೆಲೆಯಲ್ಲಿ ಐಟಿ ರೇಡ್ ಈ ಎಲ್ಲ ಸಂಗತಿ ಗಳ ಕುರಿತು ದಾಖಲೆ ಇದ್ಧರೆ ಬಹಿರಂಗ ಪಡಿಸಿ ಎಂದು ಸವಾಲು ಹಾಕಿದರು.
ಒಬ್ಬ ಮಾಜಿ ಸಿಎಂ ಆಗಿ ವಿಪಕ್ಷ ನಾಯಕರ ಸ್ಥಾನದ ಕುರಿತು ಕೀಳು ಮಟ್ಟದ ಹೇಳಿಕೆ ಸೂಕ್ತವಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬದುಕಿದೆ ಎನ್ನುವುದನ್ನು ತೋರಿಸಲು ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಹಾಗೇ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತ ಮಾಧ್ಯಮ ಸುದ್ದಿಗೆ ಈಶ್ವರಪ್ಪ ಕಟುವಾಗಿ ಪ್ರತಿಕ್ರಿಯಿಸಿದ್ದು, ಎಲ್ಲಾ ಊಹಾತೀತ ಸುದ್ದಿ ಮಾಡುವವರು ನೀವು. ನೀವೇ ಸುದ್ದಿ ಸೃಷ್ಡಿಸಿಕೊಂಡು ನಂತರ ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡ್ತಿರೋ ಇಲ್ವೋ ಅಂತಾ ನಮಗೆ ಪ್ರಶ್ನೆ ಕೇಳಿದ್ರೆ ನಾನೇಂತ ಉತ್ತರ ನೀಡಲಿ. ಮುಖ್ಯವಾಗಿ ವಿಜಯೇಂದ್ರರಾಗಲಿ ಯಡಿಯೂರಪ್ಪನವರಾಗಿ, ಮಂತ್ರಿ ಸ್ಥಾನ ಬೇಕು ಅಂತಾ ಯಾರ ಬಳಿ ಕೇಳಿದ್ದಾರೆ ಹೇಳಿ ಎಂದು ಗರಂ ಆದರು.