ನಮ್ಮೂರನ್ನ ಅಭಿವೃದ್ಧಿ ಮಾಡಿ ಕೊಡಿ ಎಂದು ಕಂಡ ಕಂಡ ಜನಪ್ರತಿನಿಧಿಗಳನ್ನೆಲ್ಲಾ ಕೇಳಿದ್ದಾಯ್ತು. ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಪತ್ರಗಳನ್ನ ಸಲ್ಲಿಸಿದ್ದಾಯ್ತು. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಕೇವಲ ಟೊಳ್ಳು ಭರವಸೆಗಳೇ ಹೊರತು, ಊರು ಅಭಿವೃದ್ಧಿ ಕಾಣ್ಲಿಲ್ಲ. ಹೀಗಾಗಿ, ಗ್ರಾಮಸ್ಥರೆಲ್ಲಾ ಸೇರಿ ಒಂದು ನಿಲುವಿಗೆ ಬಂದಿದ್ದಾರೆ.
ಕಿತ್ತೋಗಿರೋ ಊರಿನ ಟಾರು ರಸ್ತೆಗಳು. ಜಲ್ಲಿ ಕಲ್ಲುಗಳೆಲ್ಲಾ ಮೇಲೆದ್ದು ಕಿತ್ತೋಗಿರೋ ರಸ್ತೆಯಲ್ಲೇ ವಾಹನಗಳು ಸಂಚರಿಸುವಂತಹ ಸ್ಥಿತಿ. ಮತ್ತೊಂದ್ಕಡೆ ಅರ್ಧಕ್ಕೆ ನಿಂತಿರೋ ರಸ್ತೆ ಕಾಮಗಾರಿ. ಇವೆಲ್ಲಾ ಚಿತ್ರಣಗಳನ್ನೆಲ್ಲಾ ನೋಡ್ತಿದ್ರೆ, ಆದಿ ಮಾನವರು ವಾಸಿಸುತ್ತಿದ್ದ ಕಾಲ ನೆನಪಾಗುತ್ತೆ.
21ನೇ ಶತಮಾನದಲ್ಲೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಪ್ರಗತಿಯೇ ಕಂಡಿಲ್ಲ. ಹೀಗಾಗಿ, ಗ್ರಾಮಸ್ಥರೆಲ್ಲಾ ಸೇರಿಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯನ್ನ, 7 ಜನ ಗ್ರಾಮ ಪಂಚಾಯಿತಿ ಸದಸ್ಯರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಮರಳಿನ ರಾಯಲ್ಟಿ ಬಾಕಿ ಇರುವ ಕಾರಣಕ್ಕೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. . ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು ಮೂರು ಬ್ಲಾಕ್ ಮರಳು ಕ್ವಾರೆಗಳಿವೆ.
ಇವುಗಳ ಮೂಲಕ ಸರ್ಕಾರವು ಶೇಕಡ 25ರ ಹಾಗೆ ಒಂದು ವರ್ಷಕ್ಕೆ 83 ಲಕ್ಷ ಹಣವನ್ನ ಗ್ರಾಮ ಪಂಚಾಯ್ತಿಗೆ ಸರ್ಕಾರ ನೀಡಬೇಕು. ಆದ್ರೆ, ಕಳೆದ ಎರಡು ವರ್ಷಗಳಿಂದ ಈ ಹಣ ಬಿಡುಗಡೆ ಮಾಡಿಲ್ಲ. ಮರಳಿನ ರಾಯಲ್ಟಿಗೆ ಸಂಬಂಧಿಸಿದಂತೆ ಸರ್ಕಾರದಿಂದ 1 ಕೋಟಿಗೂ ಹೆಚ್ಚಿನ ಅನುದಾನ ಬರಬೇಕಿದೆ. ಆದ್ರೀಗ, ಅನುದಾನ ಕೊರತೆಯಿಂದ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ.
ನಮ್ಮ ಊರೇ ಅಭಿವೃದ್ಧಿ ಮಾಡ್ಲಿಲ್ಲ ಅಂದ್ಮೇಲೆ, ಜನಪ್ರತಿನಿಧಿಗಳಿಗೆ ಓಟ್ ಹಾಕಿ ಏನ್ ಪ್ರಯೋಜನ. ಊರನ್ನ ಅಭಿವೃದ್ಧಿ ಮಾಡಿ ಕೊಡಿ, ಇಲ್ಲ ನಾವ್ ಮತ ಹಾಕಲ್ಲ ಅನ್ನೋದು ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗರ ಒಕ್ಕೊರಲಿನ ಮಾತು. ಇನ್ಮುಂದೆಯಾದ್ರೂ ಗ್ರಾಮಸ್ಥರ ಮನವಿಗೆ ಸರ್ಕಾರ ಮಣಿಯುತ್ತಾ ..? ಗ್ರಾಮದ ಅಭಿವೃದ್ಧಿ ಮಾಡುತ್ತಾ..? ಕಾದು ನೋಡಬೇಕು.