ಉತ್ತರಪ್ರದೇಶದಲ್ಲಿನ ವಾಯು ಮಾಲಿನ್ಯಕ್ಕೆ ಪಾಕಿಸ್ತಾನ ಕಾರಣವೇ? ಹೌದಾದರೆ ಪಾಕಿಸ್ತಾನದ ಕೈಗಾರಿಕೆಗಳನ್ನು ಮುಚ್ಚಿಸಿ ಬಿಡೋಣವೆ? ಇದು ಶುಕ್ರವಾರ ಸುಪ್ರೀಂಕೋರ್ಟಿನಲ್ಲಿ ವಾಯು ಮಾಲಿನ್ಯದ ಕುರಿತು ನಡೆದ ಚರ್ಚೆ.
ʼಮಾಲಿನ್ಯದ ಗಾಳಿಯು ಹೆಚ್ಚಾಗಿ ಪಾಕಿಸ್ತಾನದಿಂದ ಬರುತ್ತಿದೆʼ ಎಂದು ಉತ್ತರ ಪ್ರದೇಶ ಸರ್ಕಾರ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿತು. ದೆಹಲಿ ಮತ್ತು ಹತ್ತಿರದ ನಗರಗಳಲ್ಲಿನ ಮಾಲಿನ್ಯದ ವಿಚಾರಣೆಯ ಸಂದರ್ಭದಲ್ಲಿ ಅದು ಹೀಗೆ ಉತ್ತರಿಸಿತು ʼಉತ್ತರಪ್ರದೇಶದಲ್ಲಿ ಗಾಳಿ ಬೀಸುತ್ತಿದೆ. ಗಾಳಿ ಹೆಚ್ಚಾಗಿ ಪಾಕಿಸ್ತಾನದಿಂದ ಬರುತ್ತಿದೆ. ಏನಾಗುತ್ತಿದೆಯೋ ಅದು ಯುಪಿಯಲ್ಲಿ ಎಂದೇನೂ ಅಲ್ಲʼ ಎಂದು ಯುಪಿ ಸರ್ಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಂಜಿತ್ ಕುಮಾರ್ ಹೇಳಿದರು..
ಇದರಿಂದ ಕೆರಳಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಪ್ರಶ್ನೆಯೊಂದನ್ನು ಹಾಕಿದರು, ಉತ್ತರಪ್ರದೇಶದ ವಕೀಲರಿಗೆ ಉತ್ತರಿಸಲು ಆಗಲೇ ಇಲ್ಲ. “ಹಾಗಾದರೆ ನೀವು ಪಾಕಿಸ್ತಾನದಲ್ಲಿನ ಕೈಗಾರಿಕೆಗಳ ನಿಷೇಧವನ್ನು ಬಯಸುತ್ತೀರಾ?”
ಮಾಲಿನ್ಯವನ್ನು ತಡೆಯಲು ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಮತ್ತು ಹಾಲಿನ ಉದ್ಯಮಗಳ ಮೇಲೆ ನಿರ್ಬಂಧಗಳನ್ನು ಹೇರದಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದ ಯುಪಿ ಸರ್ಕಾರ, ಪಾಕಿಸ್ತಾನವೇ ಮಾಲಿನ್ಯಕ್ಕೆ ಕಾರಣ ಎಂದಿತು.
ಸಕ್ಕರೆ ಕಾರ್ಖಾನೆಗಳು ಕೇವಲ ಎಂಟು ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಮತ್ತು ಅದು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಅವಧಿ ನೀಡಬೇಕಿದೆʼ ಎಂದು ಅದು ವಾದಿಸಿತು. ಈ ವಿಷಯವನ್ನು ವಾಯು ಗುಣಮಟ್ಟ ನಿರ್ವಹಣಾ ಆಯೋಗದೊಂದಿಗೆ (CAQM) ಚರ್ಚಿಸಲು ಉತ್ತರಪ್ರದೇಶಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ವಾಯುಮಾಲಿನ್ಯ ಕ್ರಮಗಳ ಅನುಸರಣೆಯನ್ನು ಫ್ಲೈಯಿಂಗ್ ಸ್ಕ್ವಾಡ್ಗಳು ಮೇಲ್ವಿಚಾರಣೆ ಮಾಡುತ್ತವೆ ಎಂದು ಆಯೋಗವು ಸುಪ್ರೀಂ ಕೋರ್ಟ್ಗೆ ಹೇಳಿಕೆಯಲ್ಲಿ ತಿಳಿಸಿದೆ. ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳು ಸದ್ಯಕ್ಕೆ ಮುಚ್ಚಿವೆ. ಮಾಲಿನ್ಯ ನಿಯಂತ್ರಣ ಕ್ರಮಗಳಿಗೆ ಗಂಭೀರ ಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಶುದ್ಧ ಇಂಧನದಲ್ಲಿ ಕಾರ್ಯನಿರ್ವಹಿಸದ ಕೈಗಾರಿಕೆಗಳನ್ನು ವಾರದ ದಿನಗಳಲ್ಲಿ ದಿನಕ್ಕೆ ಎಂಟು ಗಂಟೆಗಳವರೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಮತ್ತು ವಾರಾಂತ್ಯದಲ್ಲಿ ಮುಚ್ಚಲಾಗುವುದು ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಹೇಳಿದೆ.
ಮಾಲಿನ್ಯ ನಿಯಂತ್ರಣ ಕ್ರಮಗಳಿಗಾಗಿ ಗಂಭೀರ ಯೋಜನೆಯನ್ನು ರೂಪಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿನ್ನೆ 24 ಗಂಟೆಗಳ ಗಡುವನ್ನು ನೀಡಿತ್ತು. “ತುರ್ತು ಪರಿಸ್ಥಿತಿಯಲ್ಲಿ ನೀವು ತುರ್ತು ವಿಧಾನಗಳಲ್ಲಿ ಕೆಲಸ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.
ʼಪಾಕಿಸ್ತಾನ ಧ್ರುವದಿಂ ಯುಪಿ ಧ್ರುವಕೆ ಮಾಲಿನ್ಯ ಗಾಳಿಯು ಬೀಸುತಿದೆ…ʼ ಎಂದು ಹಾಡಲು ಹೋಗಿ ಸುಪ್ರೀಂಕೋರ್ಟ್ನಿಂದ ಯುಪಿ ಸರ್ಕಾರ ಉಗಿಸಿಕೊಂಡಂತಾಗಿದೆ.