ಕೋವಿಶೀಲ್ಡ್ ಲಸಿಕೆ ಪಡೆದ ವೈದ್ಯೆ ಡಾ ಸ್ನೇಹಾಲ್ ಲುನಾವತ್ ಅವರ ಸಾವಿಗೆ ಲಸಿಕೆಯ ಅಡ್ಡಪರಿಣಾಮವೇ ಕಾರಣ ಎಂಬುದು ನ್ಯಾಷನಲ್ ಅಡ್ವರ್ಸ್ ಈವೆಂಟ್ಸ್ ಫಾಲೋಯಿಂಗ್ ಇಮ್ಯುನೈಸೇಷನ್(AEFI) ವರದಿಯಲ್ಲಿ ಖಚಿತವಾದ ಬೆನ್ನಲ್ಲೇ ಲಸಿಕೆ ತಯಾರಿಸಿದ ಆಸ್ಟ್ರಾಜೆನೆಕಾ ಕಂಪನಿಯ ಮುಖ್ಯಸ್ಥ ಬಿಲ್ ಗೇಟ್ಸ್ ಮತ್ತು ಸಂಸ್ಥೆಯ ಭಾರತೀಯ ಪಾಲುದಾರ ಆಧಾರ್ ಪೂನಾವಾಲಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಇಂಡಿಯನ್ ಬಾರ್ ಅಸೋಸಿಯೇಷನ್ ಎಂಬ ಜಾಲತಾಣದಲ್ಲಿ ಪ್ರಕರಣದ ಸಂಖ್ಯೆಯೊಂದಿಗೆ [Kiran Yadav Vs. State and ors.Criminal Writ Petition (St.) 18017 of 2021] ಮಾಹಿತಿ ಪ್ರಕಟಿಸಿದ್ದು, ಹಲವು ವಿದೇಶಿ ಜಾಲತಾಣ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಹಾರಾಷ್ಟ್ರ ಮೂಲದ 33 ವರ್ಷದ ಡಾ ಸ್ನೇಹಾಲ್, ಗುರುಗ್ರಾಮದಲ್ಲಿ ವೃತ್ತಿನಿರತರಾಗಿದ್ದರು. ಜನವರಿ 28ರಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದ ಅವರಿಗೆ ಫೆಬ್ರವರಿ 3ರಿಂದ ತೀವ್ರತರನಾದ ತಲೆನೋವು ಕಾಣಿಸಿಕೊಂಡಿತ್ತು, ಬಳಿಕ ಅವರು ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಗುರುಗ್ರಾಮಕ್ಕೆ ತೆರಳಿದ ಬಳಿಕ ಅಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ನರಸಂಬಂಧಿತ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೂ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಔರಂಗಾಬಾದ್ ಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಚ್ 1ರಂದು ಮಾರ್ಗಮಧ್ಯೆ ಸಾವು ಕಂಡಿದ್ದರು. ಲಸಿಕೆ ಪಡೆದ ಬಳಿಕ ವೈದ್ಯೆಯ ದಿಢೀರ್ ಅನಾರೋಗ್ಯದ ಕುರಿತು ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ, ಕೇಂದ್ರ ಆರೋಗ್ಯ ಸಚಿವಾಲಯ ಸೇರಿದಂತೆ ಹಲವರ ಮೊರೆ ಹೋಗಿದ್ದರೂ, ಕುಟುಂಬಕ್ಕೆ ಯಾವುದೇ ನೆರವು ಅಥವಾ ಸ್ಪಂದನೆ ಸಿಕ್ಕಿರಲಿಲ್ಲ.
ಬಳಿಕ ವೈದ್ಯೆಯ ಸಾವಿನ ಹಿನ್ನೆಲೆಯಲ್ಲಿ ಅವರ ಕುಟುಂಬ ನ್ಯಾಷನಲ್ ಅಡ್ವರ್ಸ್ ಈವೆಂಟ್ಸ್ ಫಾಲೋಯಿಂಗ್ ಇಮ್ಯುನೈಸೇಷನ್(AEFI) ಮತ್ತು ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ದೂರು ನೀಡಿದ್ದರು. ಪ್ರಕರಣದ ಪರಿಶೀಲನೆ ನಡೆಸಿದ್ದ ಎಇಎಫ್ ಐ, ಕಳೆದ ಅಕ್ಟೋಬರಿನಲ್ಲಿ ಸಾವಿಗೆ ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮವೇ ಕಾರಣ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿತ್ತು. ಈ ನಡುವೆ ವೈದ್ಯೆಯ ಕುಟುಂಬ ಆಲ್ ಇಂಡಿಯಾ ಡ್ರಗ್ಸ್ ನೆಟ್ವರ್ಕ್(ಎಐಡಿಎನ್) ಸಂಘಟನೆಯ ನೆರವಿನೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಗೂ ಮೊರೆ ಹೋಗಿತ್ತು. WHO ಕೂಡ ಪ್ರಕರಣದ ಕುರಿತು ತನಿಖೆ ಆರಂಭಿಸಿತ್ತು. ಅಲ್ಲದೆ, ಘಟನೆ ನಡೆದು ಏಳು ತಿಂಗಳು ಕಳೆದರೂ ಲಸಿಕೆ ಸಾವಿನ ಕುರಿತು ಅಧಿಕೃತ ವರದಿ ನೀಡದ ಎಇಎಫ್ ಐ ಮೇಲೆ ಮಾಹಿತಿ ಹಕ್ಕು ಅರ್ಜಿಯ ಮೂಲಕವೂ ಒತ್ತಡ ಹಾಕಲಾಗಿತ್ತು.
ಇದೀಗ ಎಇಎಫ್ ಐ ಅಧಿಕೃತವಾಗಿ ವೈದ್ಯೆಯ ಸಾವಿಗೆ ಕೋವಿಶೀಲ್ಡ್ ಲಸಿಕೆಯೇ ಕಾರಣ ಎಂಬುದನ್ನು ಒಪ್ಪಿಕೊಂಡ ಬಳಿಕ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದು, ಕೋವಿಶೀಲ್ಡ್ ಲಸಿಕೆ ತಯಾರಕ ಸಂಸ್ಥೆ ಆಸ್ಟ್ರಾ ಜೆನೆಕಾದ ಬಿಲ್ ಗೇಟ್ಸ್, ಆ ಕಂಪನಿಯ ಭಾರತೀಯ ಪಾಲುದಾರ ಸಂಸ್ಥೆ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕ ಆಧಾರ್ ಪೂನಾವಾಲಾ ಹಾಗೂ ಆ ಲಸಿಕೆ ಸುರಕ್ಷಿತ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಜನರನ್ನು ನಂಬಿಸಿದ ಭಾರತ ಸರ್ಕಾರದ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಬಾರ್ ಅಸೋಷಿಯೇಷನ್ ವರದಿ ಮಾಡಿದೆ.
ಆ ವರದಿಯ ಪ್ರಕಾರ, ತಮ್ಮ ಮಗಳ ಸಾವಿಗೆ ಕಾರಣವಾದ ಈ ಲಸಿಕೆ ಅತ್ಯಂತ ಸುರಕ್ಷಿತ ಎಂದು ಹೇಳಿ ಹಾದಿತಪ್ಪಿಸಿದ ಹಿನ್ನೆಲೆಯಲ್ಲಿ ಬಿಲ್ ಗೇಟ್ಸ್ ಸೇರಿದಂತೆ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಸಿಬಿಐ ತನಿಖೆ ನಡೆಸಬೇಕು. ಆರೋಪಿಗಳನ್ನು ಸುಳ್ಳು ಪತ್ತೆ ಮತ್ತು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೆ 1000 ಕೋಟಿ ರೂ. ಪರಿಹಾರಕ್ಕೆ ಅಹವಾಲು ಸಲ್ಲಿಸಿರುವ ಅರ್ಜಿದಾರರು, ತತಕ್ಷಣಕ್ಕೆ ಮಧ್ಯಂತರ ಪರಿಹಾರವಾಗಿ ನೂರು ಕೋಟಿ ರೂಪಾಯಿಗಳನ್ನು ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಬಿಲ್ ಗೇಟ್ಸ್ ಮತ್ತು ಆಧಾರ್ ಪೂನಾವಾಲಾ ಅವರನ್ನು ಕೂಡಲೇ ಸಿಬಿಐ ವಶಕ್ಕೆ ಪಡೆದು ತನಿಖೆ ನಡೆಸಬೇಕು. ಆ ಮೂಲಕ ಕೋಟ್ಯಂತರ ಮಂದಿ ಭಾರತೀಯರ ಪ್ರಾಣದ ಜೊತೆ ಆಟವಾಡಿರುವ ಅವರು ಭಾರತೀಯರ ವಿರುದ್ಧ ನಡೆಸಿರುವ ಸಂಚಿನ ಕುರಿತು ಸಮಗ್ರ ಮಾಹಿತಿ ಹೊರತೆಗೆಯಬೇಕು ಎಂದೂ ಅರ್ಜಿಯಲ್ಲಿ ಕೋರಿದ್ದಾರೆ ಎಂದು ಇಂಡಿಯನ್ ಬಾರ್ ಅಸೋಸಿಯೇಷನ್ ಹೇಳಿದೆ.