ದೇಶದಲ್ಲಿ ಎರಡನೇ ಅಲೆಯ ರೂಪಾಂತರಿ ಕೋವಿಡ್ ಸೋಂಕು ದಿನೇ ದಿನೇ ಏರುಮುಖವಾಗಿದೆ. ಈಗಾಗಲೇ ಸರ್ಕಾರ ಲಾಕ್ ಡೌನ್ ಘೋಷಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು ಕೋವಿಡ್ ಹರಡದಂತೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸುವುದಾಗಿ ಹೇಳಿದೆ. ಏನೇ ಸರ್ಕಾರ ನಿರ್ಬಂಧ ವಿಧಿಸಿದರೂ ಜನರು ಮಾತ್ರ ಕ್ಯಾರೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳದೆ ಟೀಕೆಗೆ ಗ್ರಾಸವಾಗಿದ್ದಾರೆ.
ರಾಜ್ಯದಲ್ಲಿ ಮಂಗಳವಾರ ಕೊರೊನಾ ಪ್ರಕರಣ ಹೆಚ್ಚು ದಾಖಲಾಗಿದ್ದು, ಒಂದೇ ದಿನ 6,150 ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಏರಿಕೆ ಕಂಡಿದ್ದು, ನಿನ್ನೆ 39 ಸೋಂಕಿತರು ಸಾವನ್ನಪ್ಪಿದ್ದಾರೆ. ಹಾಗು 3,487 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 45,107 ಸಕ್ರಿಯ ಪ್ರಕರಣಗಳಿದ್ದು, 351 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗೂ ಕೊರೊನಾದಿಂದ ಮೃತರ ಸಂಖ್ಯೆ 12,696ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 10,26,584ರ ಗಡಿ ತಲುಪಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.6.02 ಮತ್ತು ಮರಣ ಪ್ರಮಾಣ ಶೇ.0.63ಕ್ಕೆ ಏರಿಕೆ ಕಂಡಿದೆ. ಇಂದು ಒಟ್ಟು 1,02,021 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೀದರ್, ಮಂಡ್ಯ, ಹಾಸನ, ತುಮಕೂರಿನಲ್ಲಿ ಶತಕ ಬಾರಿಸಿರುವ ಕೊರೊನಾ, ಕಲಬುರಗಿ ಮತ್ತು ಮೈಸೂರಿನಲ್ಲಿ ಡೆಬಲ್ ಸೆಂಚುರಿ ದಾಖಲಿಸಿದೆ. ಇನ್ನುಳಿದಂತೆ ರಾಜಧಾನಿ ಬೆಂಗಳೂರು ಕೊರೊನಾ ಬಾಹುಗಳಲ್ಲಿ ಬಂಧಿಯಾಗ್ತಿದೆಯಾ ಆನ್ನೋ ಆತಂತ ಎದುರಾಗಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಮರಣ ಕೇಕೆಯೊಂದಿಗೆ ಸ್ಫೋಟಗೊಂಡಿದ್ದು, 4,266 ಜನಕ್ಕೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿಯೇ 26 ಜನರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 32,605 ಸಕ್ರಿಯ ಪ್ರಕರಣಗಳಿವೆ.

ಕೊರೋನಾ ಸೋಂಕು ಪ್ರಕರಣಗಳ ಏರುಗತಿಯನ್ನು ಗಮನಿಸಿದರೆ ಇದು ಕೂಡ ಕಳೆದ ವರ್ಷದಂತೆಯೇ ಜನರ ಪ್ರಾಣ ತೆಗೆಯುವುದರಲ್ಲಿ ಸಂದೇಹವೇ ಇಲ್ಲ. ಸೋಂಕು ತಡೆಗೆ ಸರ್ಕಾರ ಮೊದಲಿಗೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಮುಂದಾಗಿದೆ. ಆದರೆ ಕೋವಿಡ್ ಲಸಿಕೆ ಪಡೆದುಕೊಳ್ಳುವಲ್ಲಿಯೂ ಜನರ ನಿರಾಸಕ್ತಿ ಎದ್ದು ಕಾಣುತ್ತಿದೆ. ಕೋವಿಡ್ ಲಸಿಕೆ ಕಂಡು ಹಿಡಿಯುವದಕ್ಕೂ ಮೊದಲು ಕೋವಿಡ್ ಲಸಿಕೆ ಎರಡು ಬಾರಿ ತೆಗೆದುಕೊಂಡರೆ ಕೋವಿಡ್ ಸೋಂಕು ತಗುಲುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಕೋವಿಡ್ ಲಸಿಕೆ ಪಡೆದುಕೊಂಡವರಿಗೂ ಕೋವಿಡ್ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ಅವರು ಎರಡು ಬಾರಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಅವರಿಗೆ ಮೊನ್ನೆ ಪುನಃ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು ಔಷಧದ ಗುಣಮಟ್ಟದ ಬಗ್ಗೆಯೇ ಸಂಶಯ ಮೂಡಿಸುತ್ತಿದೆ. ಕೆಲವೆಡೆ ಕೋವಿಡ್ ಲಸಿಕೆ ಪಡೆದ ನಂತರವೂ ಜನರು ಸಾವನ್ನಪ್ಪಿದ ಘಟನೆ ನಡೆದಿದೆ.

ಈಗ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರವೊಂದನ್ನು ಬರೆದಿದ್ದು 18 ವರ್ಷ ಪ್ರಾಯ ಮೀರಿದ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವಂತೆ ಒತ್ತಾಯಿಸಿದೆ. ಪ್ರಧಾನ ಮಂತ್ರಿಯನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ದೇಶಾದ್ಯಂತ ವ್ಯಾಪಿಸಿರುವ ಕೋವಿಡ್ -19 ರ ಎರಡನೇ ರೂಪಾಂತರಿ ಸೋಂಕನ್ನು ಉಲ್ಲೇಖಿಸಲಾಗಿದ್ದು ಎಲ್ಲರಿಗೂ ಲಸಿಕೆಗಳನ್ನು ನೀಡಲು ಒತ್ತಾಯಿಸಿದೆ. ರೋಗದ ಎರಡನೇ ಅಲೆಯ ಶೀಘ್ರ ಹರಡುವಿಕೆಯ ದೃಷ್ಟಿಯಿಂದ, ನಮ್ಮ ವ್ಯಾಕ್ಸಿನೇಷನ್ ಕಾರ್ಯತಂತ್ರವನ್ನು ಅತ್ಯಂತ ತುರ್ತಾಗಿ ಕೋವಿಡ್ ವಿರುದ್ದ ಹೋರಾಟದ ಮೊದಲ ಹೆಜ್ಜೆಯಾಗಿ ಎಲ್ಲರಿಗೂ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ಸಿನೆಮಾ ಹಾಲ್ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳಂತಹ ಅನಿವಾರ್ಯವಲ್ಲದ ಪ್ರದೇಶಗಳಿಗೆ ವಾಕ್-ಇನ್ ವ್ಯಾಕ್ಸಿನೇಷನ್ ಸೌಲಭ್ಯಗಳು ಮತ್ತು ಸೀಮಿತ ಅವಧಿಯ ನಿರಂತರ ಲಾಕ್ ಡೌನ್ ಮಾಡಿ ಕರೋನಾ ನಿಯಂತ್ರಣಕ್ಕೆ ಕ್ರಮವನ್ನು ಕೈಗೊಳ್ಳಬೇಕೆಂದು ಪತ್ರದಲ್ಲಿ ಐಎಂಎ ಒತ್ತಾಯಿಸಿದೆ. ಐಎಂಎ ಮೊದಲ ದಿನದಿಂದಲೇ ಸರ್ಕಾರದ ಲಸಿಕೆ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಹಾಯ ಮಾಡುತ್ತಿದೆ, ಮತ್ತು ವ್ಯಾಕ್ಸಿನೇಷನ್ ಹೆಚ್ಚಿಸಲು ನಾವು ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧರಿದ್ದೇವೆ. ಇತರ ದೇಶಗಳಿಗೆ ಹೋಲಿಸಿದರೆ, ನಮ್ಮ ವ್ಯಾಕ್ಸಿನೇಷನ್ ದರವು ತುಂಬಾ ಕಡಿಮೆಯಾಗಿದೆ. ನಾವು ಎರಡನೇ ಅಲೆಯ ಕೋವಿಡ್ ಸೋಂಕು ಬಹಳ ದೀರ್ಘ ಕಾಲ ಉಳಿಯಲಿದೆ ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಅಗತ್ಯತೆಯನ್ನೂ ಪತ್ರದಲ್ಲಿ ಒತ್ತಿ ಹೇಳಿದ್ದು ಅದಕ್ಕಾಗಿಯೇ ನಾವು ಈ ಪತ್ರವನ್ನು ಬರೆದಿದ್ದೇವೆ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್ ಲೆಲೆ ಅವರು ತಿಳಿಸಿದ್ದಾರೆ.

ಪತ್ರದಲ್ಲಿ, ಐಎಂಎ ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್ ವೈಯಕ್ತಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸೋಂಕು ಪ್ರಕರಣಗಳನ್ನು ನಿರ್ಬಂಧಿಸಲು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ವ್ಯಾಕ್ಸಿನೇಷನ್ ಡ್ರೈವ್ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೇರಿಸ ಬೇಕು ಹಾಗು ವ್ಯಾಕ್ಸಿನೇಷನ್ ಡ್ರೈವ್ ಅನ್ನು ಜಾರಿಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಖಾಸಗಿ ಚಿಕಿತ್ಸಾಲಯಗಳಿಗೆ ಲಸಿಕೆ ನೀಡಲು ಮತ್ತು ಜಿಲ್ಲಾ ಮಟ್ಟದ ಕಾರ್ಯಪಡೆಗಳನ್ನು ರಚಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಐಎಂಎ ಒತ್ತಾಯಿಸಿದೆ. ಇದಲ್ಲದೆ ಸಾರ್ವಜನಿಕ ಸ್ಥಳಗಳಿಗೆ ಹೋಗಲು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ರೇಷನ್ ಉತ್ಪನ್ನಗಳನ್ನು ಸ್ವೀಕರಿಸಲು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಕಡ್ಡಾಯ ಪ್ರಮಾಣಪತ್ರವನ್ನಾಗಿ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಏಪ್ರಿಲ್ 6 ನೇ ತಾರೀಖೀನವರೆಗೆ ದೇಶದಲ್ಲಿ 8,31,10,926 ಜನರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲಾಗಿದೆ. ಮಾರ್ಚ್ ಮಧ್ಯ ಭಾಗದಿಂದ ದೇಶವು ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ ಮತ್ತು ಏಪ್ರಿಲ್ 4 ರಂದು ಮೊದಲ ಬಾರಿಗೆ ನಿತ್ಯ ಸೋಂಕು ವರದಿಯಾಗುವ ಪ್ರಕರಣವು ಒಂದು ಲಕ್ಷವನ್ನೂ ಮೀರಿ ಹೊಸ ದಾಖಲೆಯನ್ನೇ ಬರೆದಿವೆ . ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಮರಣದ ಸಂಖ್ಯೆ ಏರುವುದರಲ್ಲಿ ಸಂದೇಹವೇ ಇಲ್ಲ.





