ಸಾರ್ವಜನಿಕ ಸಾರಿಗೆ ಸಂಸ್ಥೆ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಹೂಡಿರುವ ಮುಷ್ಕರವು ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲಂತೂ ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳು ಸೇವೆ ಸ್ಥಗಿತಗೊಳಿಸಿವೆ. ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಹಿಂದೇಟು ಹಾಕಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಸರ್ಕಾರವು, ಖಾಸಗಿ ವಾಹನಗಳನ್ನು ಏರ್ಪಾಡು ಮಾಡಿದರೂ, ಸಾರ್ವಜನಿಕ ಸಂಸ್ಥೆಗಳ ಸೇವೆಯ ಕೊರತೆಯನ್ನು ನೀಗಿಸಲು ಖಾಸಗಿ ಬಸ್ಗಳು ವಿಫಲವಾಗಿವೆ.
ಇದರಿಂದ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರ ಸಂದಣಿ ಇಲ್ಲದೆ ಬಿಕೋ ಎನಿಸಿದೆ. ಬೆರಳೆಣಿಕೆಯ ಖಾಸಗಿ ವಾಹನಗಳು ಕೂಡಾ ಪ್ರಯಾಣಿಕರು ಭರ್ತಿಯಿಲ್ಲದೆ ನಷ್ಟದಲ್ಲಿ ಬಸ್ ಚಲಾಯಿಸಲು ಹಿಂದೆ ಮುಂದೆ ನೋಡಿದ್ದಾರೆ.

ನಾವು ಧರ್ಮಸ್ಥಳಕ್ಕೆ ಹೋಗಲು ಈಗಾಗಲೇ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಬುಕ್ ಮಾಡಿದ್ವಿ. ಬಸ್ ಮುಷ್ಕರದಿಂದ ಇವತ್ತು ಟಿಕೆಟ್ ಹಣ ಮರುಪಾವತಿಯಾಗಿದೆ. ದೇವಸ್ಥಾನಕ್ಕೆ ಹೊರಟು, ಹಿಂತಿರುಗುವುದಕ್ಕೆ ಮನಸ್ಸು ಬಾರದ ಕಾರಣ ನಾವು ಇಲ್ಲಿ ಬಸ್ಗೆ ಕಾಯುತ್ತಿದ್ದೇವೆ. ಅಧಿಕಾರಿಗಳು ಬಸ್ ಇದೆ ಎಂದು ಹೇಳಿದ್ದರೂ ಯಾವುದೇ ಬಸ್ಗಳು ಧರ್ಮಸ್ಥಳಕ್ಕೆ ಇದುವರೆಗೂ ಹೋಗಿಲ್ಲ. ಸುಮಾರು ಮೂರು ತಾಸುಗಳಿಂದ ನಾವು ಇಲ್ಲಿ ಬಸ್ಗೆ ಕಾಯುತ್ತಿದ್ದೇವೆ ಎಂದು ಪ್ರಯಾಣಿಕ ವೆಂಕಟೇಶ್ ಎಂಬವರು ಹೇಳಿದ್ದಾರೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಖಾಸಗಿ ವೋಲ್ವೋ ಬಸ್ ಚಾಲಕರೊಬ್ಬರು, ನಮ್ಮದು ಟೂರಿಸ್ಟ್ ಬಸ್, ಕೇವಲ 2 ರಿಂದ 3 ಕಿಮೀ ಮೈಲೇಜ್ ದೊರೆಯುತ್ತದೆ. ಡೀಸೆಲ್ ಖರೀದಿಯಲ್ಲಿ ನಮಗೆ ಯಾವುದೇ ವಿನಾಯಿತಿ ಇಲ್ಲ, ಹಾಗಾಗಿ ಲಾಂಗ್ ಜರ್ನಿಗೆ ಸುಮಾರು 20 ರಿಂದ 25 ಸಾವಿರ ಖರ್ಚು ಬೀಳುತ್ತದೆ. ಪ್ರಯಾಣಿಕರು ತುಂಬದೆ ಯಾತ್ರೆ ಶುರು ಮಾಡಿದರೆ ನಷ್ಟದಿಂದ ಬಸ್ ಓಡಿಸಬೇಕಾಗುತ್ತದೆ. ಹಾಗಾಗಿ ಬೆರಳಣಿಕೆಯ ಯಾತ್ರಿಕರನ್ನು ಮಾತ್ರ ನಂಬಿಕೊಂಡು ಸರ್ಕಾರಿ ಬಸ್ಗಳಂತೆ ರಸ್ತೆಗೆ ಇಳಿಸಲಾಗುವುದಿಲ್ಲ ಎಂದಿದ್ದಾರೆ.


ನೌಕರರ ಮುಷ್ಕರದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಾನ್ಸ್ಪೋರ್ಟ್ ಕಮಿಷನರ್ ಶಿವಕುಮಾರ್, ಬಸ್ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಕೂಡದೆಂದು, ಕರೋನಾ ಹಿನ್ನೆಲೆಯಲ್ಲಿ ಟ್ಯಾಕ್ಸ್ ಕಟ್ಟಲಾಗದೆ ರಸ್ತೆಗೆ ಇಳಿಯದ ಖಾಸಗಿ ಬಸ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಒಂದು ತಿಂಗಳುಗಳ ಕಾಲ ಖಾಸಗಿ ಬಸ್ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಮುಷ್ಕರದ ಭಾಗವಾಗಿ ರಾಜ್ಯದ ಸುಮಾರು 25000 ಸಾರ್ವಜನಿಕ ಬಸ್ಗಳು ರಸ್ತೆಗೆ ಇಳಿದಿಲ್ಲ. ಸರ್ಕಾರದ ವತಿಯಿಂದ ಕೇವಲ 5 ರಿಂದ 6 ಸಾವಿರದಷ್ಟು ಖಾಸಗಿ ಬಸ್ಗಳನ್ನು ಮಾತ್ರ ಪರ್ಯಾಯವಾಗಿ ಇಳಿಸಲು ಸಾಧ್ಯವಾಗಿದೆ. ಹಾಗಾಗಿ ಸಂಚಾರದಲ್ಲಿ ವ್ಯತ್ಯಯವಾಗಿದೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.





