ಕಾಂಗ್ರೆಸ್ ಪಕ್ಷ ಹುಟ್ಟಿನಿಂದಲೇ ಒಡಕನ್ನು ಒಡಲೊಳಗೆ ಇಟ್ಟುಕೊಂಡುಬಂದಿದೆ. ‘ನಾಯಕರ ಭಾರ’ ಕೂಡ ಅದರ ಜನ್ಮಕ್ಕಂಟಿದ ಜಾಡ್ಯ. ಕಾರ್ಯತಂತ್ರದ ಶೂನ್ಯತೆ ಅದರ ಇನ್ನೊಂದು ನೂನ್ಯತೆ. ಬೇಜವಾಬ್ದಾರಿತನ, ಸಮಯ ಸಾಧಕ ಮನಸ್ಥಿತಿ ಕಾಲೆಳೆದಾಟಗಳಿಗೆ ಅದು ಪೇಟೆಂಟ್ ತೆಗೆದುಕೊಂಡಿದೆಯೇನೋ ಎನ್ನುವಷ್ಟು ಪ್ರಖ್ಯಾತಿ. ಇಂಥ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವವರು ಎಲ್ಲಾ ಸಮಸ್ಯೆಗಳನ್ನು ಅರಿತು, ಎಲ್ಲವುಗಳಿಗೆ ಮದ್ದು ಅರೆಯಬೇಕು. ಎಲ್ಲರೊಳಗೊಂದಾಗಿ ಎಲ್ಲರನ್ನು ಒಂದಾಗಿ ಕೊಂಡೊಯ್ಯುವ ಪ್ರಯತ್ನ ಪಡಬೇಕು. ಆದರೆ ರಾಜ್ಯ ಕಾಂಗ್ರೆಸಿನಲ್ಲಿ ಸಮಸ್ಯೆ ಬಗೆಹರಿಸಬೇಕಾದವರೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕಾದವರೇ ಒಡಕಿನ ಬೀಜಗಳನ್ನು ಬಿತ್ತುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ‘ಬಂಡೆ’ ಎಂದು ಕರೆಯುತ್ತವೆ. ‘ಕ್ಯಾಚಿ’ ಪದಗಳಿಗೆ ಜೋತುಬಿದ್ದಿರುವ ಟಿವಿ ಮಾಧ್ಯಮಗಳು ಕನಕಪುರದ ಬಂಡೆಗಳಿಗೆ ರಿಲೇಟ್ ಮಾಡಿ ಹಾಗೆ ಹೇಳುತ್ತವೆ. ಆದರೆ ನಿಜವಾಗಿಯೂ ಡಿ.ಕೆ. ಶಿವಕುಮಾರ್ ಅವರ ‘ಭಂಡತನ’ವನ್ನು ಮರೆಯುತ್ತವೆ. ಡಿ.ಕೆ. ಶಿವಕುಮಾರ್ ಎಷ್ಟು ಭಂಡರೆಂದರೆ ‘ಇದೇ ನನ್ನ ಬಂಡವಾಳ’ ಎಂದು ನಂಬಿ, ನಡೆದುಕೊಳ್ಳುವ ಮಟ್ಟಿಗೆ ಎಂದು ಕೂಡ ಹೇಳಲಾಗುತ್ತದೆ.
ಸದ್ಯ ಡಿ.ಕೆ. ಶಿವಕುಮಾರ್ ಅವರಿಗೆ ‘ರಾಜ್ಯ ಬಿಜೆಪಿ ನಾಯಕರ ಆಂತರಿಕ ಕಚ್ಚಾಟ, ಕುರ್ಚಿ ಕಾದಾಟ, ಕರೋನಾ ಸಂದರ್ಭದಲ್ಲೂ ಅವರು ನಡೆಸಿರುವ ಭ್ರಷ್ಟಾಚಾರ, ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ, ಇನ್ನಿತರ ‘ಅಸಹ್ಯ’ಗಳಿಂದಾಗಿ 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರಲಿದೆ’ ಎನಿಸಿದೆ. ಪಕ್ಷ ಗೆದ್ದರೂ ಜನಪ್ರಿಯತೆ ದೃಷ್ಟಿಯಲ್ಲಿ ನಮಗಿಂತ ನೂರು ಮೈಲಿ ದೂರ ಇರುವ, ಬಹುತೇಕ ಶಾಸಕರ ಬೆಂಬಲ ಹೊಂದಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪೈಪೋಟಿ ನೀಡಿ ತಾವು ಮುಖ್ಯಮಂತ್ರಿ ಆಗುವುದು ಬಹಳ ಕಷ್ಟ’ ಎನಿಸಿದೆ. ಈ ಹಿನ್ನಲೆಯಲ್ಲಿ ‘ಬೇರೆಯದೇ ಕಾರ್ಯಯೋಜನೆ’ ಕೈಗೆತ್ತಿಕೊಂಡಿದ್ದಾರೆ ಡಿಕೆಶಿ ಎನ್ನುತ್ತಾರೆ ಅವರ ಆಪ್ತವಲಯದ ಒಬ್ಬರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿ ಪೂರೈಸುವುದೇ ಕಷ್ಟ. ಅವರೀಗ ನೇಪಥ್ಯಕ್ಕೆ ಸರಿಯುವ ಸಮಯ. ಇಲ್ಲದಿದ್ದರೆ ಬಿ.ಎಲ್. ಸಂತೋಷ್ ಬಣ ಒತ್ತಾಯಪೂರ್ವಕವಾಗಿ ನೇಪಥ್ಯಕ್ಕೆ ತಳ್ಳಲಿದೆ. ರಾಜಕೀಯ ಅನಿಶ್ಚಿತತೆ ಕಂಡು ಬೇಸರಗೊಂಡಿರುವ ರಾಜ್ಯದ ಜನ ಮತ್ತೆ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಸಿ ಅತಂತ್ರ ಪರಿಸ್ಥಿತಿ ನಿರ್ಮಿಸುವುದಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ಆಯಾ ಪಕ್ಷಗಳಲ್ಲಿ ಬೇರೆ ಸಮರ್ಥ ನಾಯಕರಿಲ್ಲ. ಆದುದರಿಂದ ಬೇರೆಯಾರಿಂದಲೂ ತಮಗೆ ಭಯ ಇಲ್ಲ, ಭಯ ಇರುವುದು ಸಿದ್ದರಾಮಯ್ಯ ಅವರಿಂದ ಎಂಬುದು ಡಿ.ಕೆ. ಶಿವಕುಮಾರ್ ಅವರ ಬಲವಾದ ನಂಬಿಕೆ. ಹಾಗಾಗಿ ಅವರ ಸದ್ಯದ ಒನ್ ಪಾಯಿಂಟ್ ಅಜೆಂಡಾ ಏನೆಂದರೆ ‘ಆಪರೇಷನ್ ಸಿದ್ದರಾಮಯ್ಯ!’
ಸಿದ್ದರಾಮಯ್ಯ ಅವರನ್ನು ಕೆಣಕಿ ಯಶಸ್ಸು ಸಾಧಿಸುವುದು ಸುಲಭವಲ್ಲ ಎಂಬುತ್ತು ರಾಜರಾಜೇಶ್ವರಿ ನಗರ ಉಪಚುನಾವಣೆ ವೇಳೆಯೇ ಸಾಬೀತಾಗಿತ್ತು. ಆಗಲೇ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮತ್ತು ಶಾಸಕಿ ಸೌಮ್ಯಾ ರೆಡ್ಡಿ ‘ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’ ಎಂಬ ‘ಅಭಿಪ್ರಾಯ ರೂಪಿಸುವ ಅಭಿಯಾನಕ್ಕೆ ಚಾಲನೆ ಕೊಡಲು ನೋಡಿದರು. ಶಾಸಕ ಜಮೀರ್ ಅಹಮದ್ ಖಾನ್ ಮತ್ತಿತರರು ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬುದನ್ನು ಇನ್ನಷ್ಟು ಗಟ್ಟಿಯಾಗಿ ಹೇಳಿದ ಕಾರಣಕ್ಕೆ ಮತ್ತು ಜಿ.ಸಿ. ಚಂದ್ರಶೇಖರ್ ಹಾಗೂ ಸೌಮ್ಯಾ ರೆಡ್ಡಿ ಹೊರತುಪಡಿಸಿ ಬೇರಾರೂ ಡಿ.ಕೆ. ಶಿವಕುಮಾರ್ ಪರ ಸೊಲ್ಲೆತ್ತದ ಕಾರಣಕ್ಕೆ ಆರಂಭದಲ್ಲೇ ಸೋಲೊಪ್ಪಿಕೊಳ್ಳಬೇಕಾಯಿತು.
ನಂತರ ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ವೇಳೆ ಸಿದ್ದರಾಮಯ್ಯ ಹಿಂದುಳಿದ ವರ್ಗ ಬಲಿಜ ಸಮುದಾಯದ ರಕ್ಷಾ ರಾಮಯ್ಯಗೆ ಬೆಂಬಲ ಘೋಷಿಸುತ್ತಿದ್ದಂತೆ ಡಿ.ಕೆ. ಶಿವಕುಮಾರ್ ‘ಅಲ್ಪಸಂಖ್ಯಾತರ’ ದಾಳ ಉರುಳಿಸಿದರು. ಮೊಹಮ್ಮದ್ ನಳಪಾಡ್ ಗೆ ಬೆಂಬಲ ಸೂಚಿಸಿದರು. ಚುನಾವಣೆಗೂ ಮುನ್ನವೇ ಹೀಗೆ ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಳಪಾಡ್ ಜಿದ್ದಿಗೆ ಬಿದ್ದಿದ್ದರು. ಈ ಬೆಂಕಿಗೆ ತುಪ್ಪ ಸುರಿದಂತೆ ಯೂತ್ ಕಾಂಗ್ರೆಸ್ ಚುನಾವಣೆ ಫಲಿತಾಂಶ ಗೊಂದಲಮಯವಾಗಿತ್ತು. ಫಲಿತಾಂಶದ ಪ್ರಕಾರ ‘ಕಡಿಮೆ ಮತ ಪಡೆದಿದ್ದರೂ ರಕ್ಷಾ ರಾಮಯ್ಯ ಗೆದ್ದಿದ್ದರು, ಹೆಚ್ಚು ಮತ ಪಡೆದ ಮೊಹಮ್ಮದ್ ನಳಪಾಡ್ ಅನರ್ಹರಾಗಿದ್ದರು’ ಇದನ್ನು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಗೆಲುವು ಎಂದೇ ವ್ಯಾಖ್ಯಾನಿಸಲಾಗಿತ್ತು. ಈ ಗೊಂದಲ ಇನ್ನೂ ಬಗೆಹರಿದಿಲ್ಲ.
ಈ ನಡುವೆ ‘ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದರೆ ಕರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿರುತ್ತಿದ್ದರು’ ಎಂಬ ಟ್ವೀಟ್ ಬಂತು. ಎಂದಿನಂತೆ ಸಿದ್ದರಾಮಯ್ಯ ಬಣದಿಂದ ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬ ಕೂಗು ಬಲವಾಗಿಯೇ ಕೇಳಿಬಂತು. ಅದು ಎಷ್ಟು ಜೋರಾಗಿತ್ತೆಂದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸೂಚನೆ ಕೊಟ್ಟರೂ ಸಿದ್ದರಾಮಯ್ಯ ಬೆಂಬಲಿಗರು ಸುಮ್ಮನಾಗಲಿಲ್ಲ. ಮತ್ತೆ ಡಿ.ಕೆ. ಶಿವಕುಮಾರ್ ಮುಖಭಂಗ ಅನುಭವಿಸಬೇಕಾಯಿತು.
ಈಗ, ‘ಹಿಂದಿನ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಕಾಂಗ್ರೆಸ್ ಬಿಟ್ಟು ಹೋಗಿದ್ದವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ ಸಿದ್ದರಾಮಯ್ಯ. ಅವರು ಹಾಗೆ ಹೇಳಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್, ‘ರಾಜಕೀಯ ನಿಂತ ನೀರಲ್ಲ, ಯಾರು ಬೇಕಾದರೂ ಕಾಂಗ್ರೆಸ್ ಸೇರಬಹುದು. ಸೇರ ಬಯಸುವವರು ಅರ್ಜಿ ಹಾಕಿಕೊಳ್ಳಲಿ’ ಎಂದಿದ್ದಾರೆ. ಡಿಕೆಶಿ ಮಾತುಗಳಲ್ಲಿ ‘ಇತರೆ ಪಕ್ಷದವರನ್ನು ತಮ್ಮತ್ತ ಸೆಳೆದು ಪಕ್ಷ ಸಂಘಟನೆ ಮಾಡುವುದಕ್ಕಿಂತ ಸಿದ್ದರಾಮಯ್ಯ ಅವರಿಗೆ ಎದಿರೇಟು ಕೊಡುವ’ ಉದ್ದೇಶವೇ ಎದ್ದು ಕಾಣುತ್ತಿದೆ. ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಪರವಾಗಿ ಅಭಿಪ್ರಾಯ ರೂಪಿಸಿಕೊಳ್ಳಬೇಕು ಎಂಬ ಹಪಹಪಿಕೆ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಮಟ್ಟಹಾಕದ ಹೊರತು ತಮ್ಮ ಪರ ಅಭಿಪ್ರಾಯ ರೂಪಿಸಲು ಸಾಧ್ಯವಿಲ್ಲ ಎನಿಸಿ ಅವರನ್ನು ಸೋಲಿಸುವ ಉಮೇದು ಹುಟ್ಟುಕೊಂಡಿದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಹೊಸ ಯುದ್ಧಕ್ಕೆ ರಣವೀಳ್ಯ ನೀಡಿದ್ದಾರೆ.