ಬೆಂಗಳೂರು : ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹಾಗೂ ಇತರೆ ಅಗತ್ಯ ಸೇವೆಗಳ ಬೆಲೆ ಏರಿಕೆ ಕುರಿತ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಜನಸಾಮಾನ್ಯರ ಮೇಲೆಯೇ ಹೋಗುತ್ತದೆ. ಇದರಿಂದಾಗಿ ಅನೇಕ ಹೊಟೇಲ್ ಗಳು ಬಂದ್ ಆಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನವಿಡಬೇಕಿತ್ತು. ಸರ್ಕಾರ ಜನರ ಮೇಲಿನ ಹೊರೆ ಇಳಿಸಬೇಕು. ಬೆಲೆ ಏರಿಕೆಯಿಲ್ಲದೇ ಜನಸಾಮಾನ್ಯ ನಿಶ್ಚಿಂತೆಯಿಂದ ಬದುಕುವ ದಾರಿಯನ್ನು ಕೇಂದ್ರ ಸರ್ಕಾರ ಮಾಡಬೇಕಿದೆ ಎಂದು ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪಾಕ್–ಅಫ್ಘಾನ್ ಗಡಿಯಲ್ಲಿ ತೀವ್ರ ಉದ್ವಿಗ್ನತೆ: ಪಾಕಿಸ್ತಾನದ ವೈಮಾನಿಕ ದಾಳಿ, ತಾಲಿಬಾನ್ ಖಂಡನೆ
ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರದೇಶ ಅಭಿವೃದ್ಧಿಗೆ 600 ಕೋಟಿ ಅನುದಾನ ಬಿಡುಗಡೆ ವಿಚಾರವನ್ನು ಮಾತ್ರ ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ? ನಿನ್ನೆ ಸಚಿವ ಸಂಪುಟ ಸಭೆಯಲ್ಲಿ 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಬಳಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ವಿಚಾರ ಬಿಟ್ಟು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನ ಬಗ್ಗೆ ಮಾತ್ರ ಮಾತನಾಡುವುದೇಕೆ? ಎಂದು ಡಿಕೆ ಶಿವಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.






