ನಾಯಕತ್ವ ಬದಲಾವಣೆಯ ಕೂಗಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಧ್ಯಾಹ್ನ ವರಿಷ್ಡರ ಸಂದೇಶ ಹೊತ್ತು ರಾಜ್ಯಕ್ಕೆ ಆಗಮಿಸುತ್ತಿರು ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಗಳು ಭುಗಿಲೆದ್ದಿವೆ.

ಕಳೆದ ಒಂದು ತಿಂಗಳಿನಿಂದ ಕರೋನಾ ಸಂಕಷ್ಟದಲ್ಲಿ ರಾಜ್ಯದ ಉದ್ದಗಲಕ್ಕೆ, ಹಳ್ಳಿ ಮೂಲೆಗಳಲ್ಲೂ ಅಪಾರ ಸಾವು ನೋವಿನ ನಡುವೆ ಜನ ಹೈರಾಣಾಗಿರುವಾಗ, ಆಡಳಿತ ಪಕ್ಷದಲ್ಲಿ ಸಚಿವರು, ಶಾಸಕರು, ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಗಾಗಿ ನಾಯಕತ್ವ ಬದಲಾವಣೆಯ ಅಭಿಯಾನ ಆರಂಭಿಸಿದ್ದರು. ಶಾಸಕರು, ಸಚಿವರು ಸಾಲು ಸಾಲಾಗಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತ ಹಸ್ತಕ್ಷೇಪದಂತಹ ಗಂಭೀರ ದೂರುಗಳನ್ನು ಹೊತ್ತು ದೆಹಲಿಯ ವರಿಷ್ಠರ ಮನೆಗಳ ಮಂದೆ ನಿರಂತರ ಪರೇಡ್ ನಡೆಸಿದ್ದರು.

ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದ ಹೈಕಮಾಂಡ್ ಇದೀಗ ಪರಿಸ್ಥಿತಿ ಕೈಮೀರುತ್ತಿರುವ ಸೂಚನೆ ಅರಿತು ಅರುಣ್ ಸಿಂಗ್ ಅವರನ್ನು ದೌಡಾಯಿಸಿದೆ.
ವರಿಷ್ಠರ ಸಂದೇಶ ಹೊತ್ತು ಬಂದಿರುವ ಅರುಣ್ ಸಿಂಗ್, ಬುಧವಾರ ಮಧ್ಯಾಹ್ನ ರಾಜಧಾನಿಗೆ ಬಂದಿಳಿಯಲಿದ್ದು, ಸಂಜೆ ಹೊತ್ತಿಗೆ ಬಿಜೆಪಿ ಸಚಿವರ ಸಭೆ ನಡೆಸಲಿದ್ದಾರೆ. ಬಳಿಕ ಗುರುವಾರ ಇಡೀ ದಿನ ಶಾಸಕರ ಸಭೆ, ಸಚಿವರು ಮತ್ತು ಪ್ರಮುಖ ನಾಯಕರೊಂದಿಗೆ ಮುಖಾಮುಖಿ ಚರ್ಚೆಗಳನ್ನು ಕೂಡ ಅರುಣ್ ಸಿಂಗ್ ನಡೆಸಲಿದ್ದಾರೆ ಎನ್ನಲಾಗಿದೆ.ಆದರೆ, ಅರುಣ್ ಸಿಂಗ್ ದೆಹಲಿಯಿಂದ ಹೊರಟು, ರಾಜ್ಯಕ್ಕೆ ಬಂದಿಳಿಯುವ ಮುನ್ನವೇ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ರಾಜ್ಯ ರಾಜಕಾರಣ ಸಾಕ್ಷಿಯಾಗಿದೆ.
ಮುಖ್ಯವಾಗಿ ಈ ಹಿಂದೆ ಸಿಎಂ ಯಡಿಯೂರಪ್ಪ ತಮ್ಮ ಖಾತೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಪಕ್ಷದ ಹೈಕಮಾಂಡ್ ಮಾತ್ರವಲ್ಲದೆ, ನೇರವಾಗಿ ರಾಜ್ಯಪಾಲರಿಗೇ ದೂರು ನೀಡಿ ಸಂಚಲನ ಸೃಷ್ಟಿಸಿದ್ದ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿಗಳೂ ಸೇರಿದಂತೆ ಸರ್ಕಾರ ಮತ್ತು ಪಕ್ಷದ ವಿಷಯದಲ್ಲಿ ಯಾವುದೇ ದೂರುಗಳಿದ್ದರೂ ಶಾಸಕರು ಮತ್ತು ಸಚಿವರು ಅರುಣ್ ಸಿಂಗ್ ಅವರಿಗೆ ನೇರವಾಗಿ ಇಲ್ಲವೇ ಸಚಿವರು ಮತ್ತು ಶಾಸಕರ ಸಭೆಯಲ್ಲಿ ಮಂಡಿಸಬಹುದು. ತಮ್ಮ ಅಳಲು, ಅಸಮಾಧಾನ ತೋಡಿಕೊಳ್ಳಬಹುದು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.ಸಹಜವಾಗೇ, ಆರ್ ಎಸ್ ಎಸ್ ಮತ್ತು ಪರಿವಾರದ ಆಪ್ತರಾದ ಹಿರಿಯ ನಾಯಕರಾಗಿ ಈಶ್ವರಪ್ಪ ಅವರ ಈ ಹೇಳಿಕೆ ಸಿಎಂ ವಿರೋಧಿ ಬಣಕ್ಕೆ ಪಕ್ಷದ ವರಿಷ್ಠರಿಂದಲೇ ಬಂದ ಸಂದೇಶದ ಪರೋಕ್ಷ ಅಭಿವ್ಯಕ್ತಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಅಲ್ಲದೆ, ಯಡಿಯೂರಪ್ಪ ನಂತರದ ಅತ್ಯುನ್ನತ ನಾಯಕರಾಗಿ ಈಶ್ವರಪ್ಪ ಹೇಳಿಕೆಯ ಬೆನ್ನಲ್ಲೇ ಭಿನ್ನಮತೀಯರ ಬಣದಲ್ಲಿ ಚಟುವಟಿಕೆ ಚುರುಕುಗೊಂಡಿದ್ದು, ಸಂಜೆಯ ಸಚಿವರ ಸಭೆಯಲ್ಲಿಯೇ ಎಲ್ಲವನ್ನೂ ಬಹಿರಂಗವಾಗಿಯೇ ಮಂಡಿಸುವ ಅಂತಿಮ ಪ್ರಯತ್ನಗಳು ಅರವಿಂದ್ ಬೆಲ್ಲದ್ ಮತ್ತು ಸಿ ಪಿ ಯೋಗೀಶ್ವರ್ ಪಾಳೆಯದಲ್ಲಿ ಬಿರುಸುಗೊಂಡಿವೆ.
ಮತ್ತೊಂದು ಕಡೆ ಯಡಿಯೂರಪ್ಪ ಪರ ಬಣದ ತಂತ್ರಗಾರಿಕೆಯ ಹೊಣೆ ಹೊತ್ತಿರುವ ಅವರ ಪುತ್ರ ವಿಜಯೇಂದ್ರ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕೂಡ ಚುರುಕಾಗಿದ್ದು, ಶಾಸಕರ ಸಹಿ ಸಂಗ್ರಹವೂ ಸೇರಿದಂತೆ ಭಿನ್ನರ ಬಣಕ್ಕೆ ಪ್ರತಿ ತಂತ್ರವಾಗಿ ಹಲವು ತಯಾರಿಗಳನ್ನು ನಡೆಸಿದ್ದಾರೆ.

ಆ ಎಲ್ಲಾ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಬಿಜೆಪಿಯ ಬಹುದಿನಗಳ ಹಾವು ಏಣಿ ಆಟಕ್ಕೆ ಇಂದೇ ತೆರೆ ಬಿದ್ದರೂ ಅಚ್ಚರಿ ಇಲ್ಲ ಎಂದೂ ಹೇಳಲಾಗುತ್ತಿದೆ. ಹಾಗಾಗಿ ಮಧ್ಯಾಹ್ನದ ಹೊತ್ತಿಗೆ ರಾಜಧಾನಿಗೆ ಅರುಣ್ ಸಿಂಗ್ ಬಂದಿಳಿಯುವ ಮುಂಚೆಯೇ ಬಿಜೆಪಿಯಲ್ಲಿ ಭರ್ಜರಿ ರಾಜಕೀಯ ಸಂಚಲನ ಆರಂಭವಾಗಿದೆ. ಈ ಸಂಚಲನದ ಮುಂದಿನ ಪರಿಣಾಮಗಳೇನು ಮತ್ತು ಅವು ಬಿಜೆಪಿ ಮತ್ತು ರಾಜ್ಯ ರಾಜಕಾರಣದಲ್ಲಿ ತರುವ ಕ್ಷಿಪ್ರ ಬದಲಾವಣೆಗಳನ್ನು ಕಾದುನೋಡಬೇಕಿದೆ.





