ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ವಿಮರ್ಶೆ ಮಾಡುವವರಿಗಾಗಿ…. ಆಡಳಿತರೂಢರ ಸಾಧನೆಯ ವಿಮರ್ಶೆಗೆ ಹಲವಾರು ಮಾನದಂಡಗಳಿವೆ. ಒಬ್ಬ ಪತ್ರಕರ್ತನಾಗಿ ನಾನು ಆರಿಸಿಕೊಂಡ ಮಾನದಂಡಗಳೆಂದರೆ “” Intent ಮತ್ತು Deed. ಇದನ್ನು ಒಪ್ಪುವವರು ಒಪ್ಪಬಹುದು, ಒಪ್ಪದವರು ಬಿಟ್ಹಾಕಬಹುದೆಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಹಾಗೂ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ರಾಜಕೀಯ ಜಾಣ ನಡೆಯ ಬಗ್ಗೆ ಮಟ್ಟು ವಿಶ್ಲೇಷಿಸಿರುವ ಬರಹ ಇಲ್ಲಿದೆ ನೋಡಿ..!
‘’ಇಂಟೆಂಟ್’’ ಎಂದರೆ ಉದ್ದೇಶ, ‘’ಡೀಡ್’’ ಎಂದರೆ ಉದ್ದೇಶದದ ಅನುಷ್ಠಾನ. ನನ್ನ ಪ್ರಕಾರ ಸಿದ್ದರಾಮಯ್ಯನವರ ‘’ಇಂಟೆಂಟ್’’ ಪ್ರಾಮಾಣಿಕವಾದುದು, ಒಂದು ಸರ್ಕಾರ ಬಡವರು, ನೊಂದವರು, ಶೋಷಿತರ ಪರವಾಗಿ ಇರಬೇಕು, ಸಂಪತ್ತು ಮತ್ತು ಅವಕಾಶಗಳಲ್ಲಿ ಅವರಿಗೆ ಸಮಪಾಲು ಸಿಗಬೇಕು ಎನ್ನುವುದು ಅವರ ಉದ್ದೇಶ. ‘’ಭಾಗ್ಯ’’ಗಳಿಂದ ‘’ಗ್ಯಾರಂಟಿ’’ಗಳವರೆಗೆ ಎಲ್ಲ ಯೋಜನೆಗಳು ಇದೇ ಉದ್ದೇಶದಿಂದ ಹುಟ್ಟಿಕೊಂಡಿರುವುದು.
ಎಲ್ಲ ಟೀಕೆ-ಟಿಪ್ಪಣಿ, ಪ್ರತಿರೋಧಗಳನ್ನು ಎದುರಿಸಿ ಆ ಯೋಜನೆಗಳ ಅನುಷ್ಠಾನವನ್ನೂ ಅವರು ಮಾಡಿದ್ರು, ಸಮಸ್ಯೆಯಾಗಲಿಲ್ಲ. ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಕೂಡಾ ಅವರ ಇಂಟೆಂಟ್ ಪ್ರಾಮಾಣಿಕವಾದುದು ಮತ್ತು ಸಂಶಾಯತೀತವಾದುದು. ಆದರೆ ನಾವೆಲ್ಲರೂ ಬಯಸಿದಂತೆ ಇವುಗಳನ್ನು ಅನುಷ್ಠಾನಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ನಿಜ. ಅಂದರೆ ಉದ್ದೇಶದ ಅನುಷ್ಠಾದಲ್ಲಿ ಅವರು ಸೋತಿದ್ದಾರೆ.. ಇದಕ್ಕೆ ಕಾರಣಗಳೂ ಇವೆ.
ಇದನ್ನೂ ಓದಿ : RCB ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?
ಸಂಸದೀಯ ಪ್ರಜಾಪ್ರಭುತ್ವದಲ್ಲಿರುವ ಮುಖ್ಯಮಂತ್ರಿಗೆ ಅರಸೊತ್ತಿಗೆಯಲ್ಲಿರುವ ಅರಸನ ಸ್ವಾತಂತ್ರ್ಯ ಇರುವುದಿಲ್ಲ. ಸಚಿವ ಸಂಪುಟ, ಪಕ್ಷದ ಹೈಕಮಾಂಡ್ ಹೀಗೆ ಹಲವಾರು ಲಗಾಮುಗಳಿರುತ್ತವೆ. ಅಲ್ಲಿ ಒಮ್ಮೊಮ್ಮೆ ಉದ್ದೇಶಿಸಿದ್ದನ್ನೆಲ್ಲ ಅನುಷ್ಠಾನಕ್ಕೆ ತರಲಾಗುವುದಿಲ್ಲ. ಸಿದ್ದರಾಮಯ್ಯನವರ ಆಡಳಿತದ ವಿಮರ್ಶೆ ಮಾಡುವವರು ಎತ್ತುತ್ತಿರುವ ವಿಷಯಗಳನ್ನು ಅವಲೋಕಿಸಿದರೆ ಇದು ಅರ್ಥವಾಗಬಹುದು.
ಲಿಂಗಾಯತ ಪ್ರತ್ಯೇಕ ಧರ್ಮ, ಮೂಢನಂಬಿಕೆ ನಿಷೇಧ ಕಾಯ್ದೆ, ಒಳಮೀಸಲಾತಿ, ಜಾತಿ ಸಮೀಕ್ಷೆಗಳಿಂದ ಹಿಡಿದು ದ್ವೇಷಭಾಷಣಕಾರರ ವಿರುದ್ದದ ಕ್ರಮದ ವರೆಗೆ ಹಲವಾರು ವೈಫಲ್ಯಗಳನ್ನು ಗುರುತಿಸಬಹುದು. ಆದರೆ ಈ ವಿಷಯದಲ್ಲಿ ಅವರ ಇಂಟೆಂಟ್ ಏನಿತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಾಕ್ಷಾತ್ ರಾಹುಲ್ ಗಾಂಧೀಯವರೇ ಮುಂದೆ ನಿಂತು ಕಾಂತರಾಜ್ ವರದಿಯನ್ನು ತಿರಸ್ಕರಿಸಲು ಹೇಳಿದಾಗ ಸಿದ್ದರಾಮಯ್ಯನವರು ಒಪ್ಪಬಾರದಿತ್ತು,
ಅನಿವಾರ್ಯವಾದರೆ ರಾಜೀನಾಮೆ ಕೊಟ್ಟು ಬರಬೇಕಾಗಿತ್ತು ಎಂದು ನನಗೂ ಅನಿಸಿತ್ತು. ಹಾಗೆ ಮಾಡಿದ್ದರೆ ಉದ್ದೇಶ ಸಫಲವಾಗುತ್ತಿತ್ತೇ? ಅಂತಹದ್ದನ್ನೆಲ್ಲ ಮಾಡಿದ್ದರೆ ಅವರು 2013ರಲ್ಲಿಯೇ ಮೊದಲ ರಾಜೀನಾಮೆ ಕೊಡಬೇಕಾಗಿತ್ತು. ಒಂದು ಘಟನೆಯ ಮೂಲಕ ಇದನ್ನು ವಿವರಿಸುತ್ತೇನೆ. ಮೂಢನಂಬಿಕೆನಿಷೇಧ ಕಾಯ್ದೆಯನ್ನು ರೂಪಿಸಿದಾಗ ಮಾಧ್ಯಮಗಳು ಅವರ ಮೇಲೆ ಮುಗಿಬಿದ್ದಿದ್ದವು. ವಿಶ್ವೇಶ್ವರ ಭಟ್ರ ಸಂಪಾಕತ್ವದ ಕನ್ನಡ ಪ್ರಭ ಈ ದಾಳಿಯ ಮುಂಚೂಣಿಯಲ್ಲಿತ್ತು.

ಆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳ ತುಣುಕುಗಳು ನನ್ನ ಬಳಿ ಇವೆ, ಅದನ್ನು ಇಲ್ಲಿ ಪ್ರಕಟಿಸಿ ಅವುಗಳನ್ನು ಬರೆದಿದ್ದ ನನ್ನ ಸ್ನೇಹಿತರನ್ನು ಮುಜುಗರಕ್ಕೀಡು ಮಾಡುವುದಿಲ್ಲ. ಆ ಸಮಯದಲ್ಲಿ ಒಂದು ದಿನ ಮುಖ್ಯಮಂತ್ರಿಗಳ ಜೊತೆ ನಾವು ಕಾರಿನಲ್ಲಿ ಹೋಗುವಾಗ ವಿಶೇಷಾಧಿಕಾರಿ ಮಿರ್ಜಾ ಮೆಹ್ದಿ ಅವರ ಮೊಬೈಲ್ ಗೆ ಒಂದು ಕರೆ ಬಂತು. ಅವರು ಮೊಬೈಲನ್ನು ಮುಖ್ಯಮಂತ್ರಿಗಳಿಗೆ ಕೊಟ್ಟರು. ಮಾತನಾಡುತ್ತಿದ್ದಂತೆ ಸಿಎಂ ಸಿಟ್ಟಾಗಿದ್ದು ಅವರ ಮುಖದಲ್ಲಿ ಕಾಣುತ್ತಿತ್ತು.ಕರೆ ನಿಂತ ಕೂಡಲೇ ಆ ಪೋನನ್ನು ಹಿಂದಕ್ಕೆ ಎಸೆಯುವ ರೀತಿಯಲ್ಲಿ ಕೊಟ್ಟಾಗ ಮಿರ್ಜಾ ಅವರು ಇಸ್ಕೊಂಡು ಸುಮ್ಮನಾದರು.
ಅದರ ನಂತರ ತಿಳಿದು ಬಂದ ವಿಷಯವೆಂದರೆ ಅದು ಅಹ್ಮದ್ ಪಟೇಲ್ ಅವರ ಕರೆಯಾಗಿತ್ತು. ಮೂಢನಂಬಿಕೆ ನಿಷೇಧಕಾಯ್ದೆಗೆ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಯಾರೋ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ದೂರು ಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ಕಾಯ್ದೆಯನ್ನು ತಡೆಹಿಡಿಯುವಂತೆ ಅಹ್ಮದ್ ಪಟೇಲ್ ಪೋನ್ ಮಾಡಿದ್ದರು. ಬಹಳ ಜನ ಮರೆತುಬಿಟ್ಟ ಸಂಗತಿ ಎಂದರೆ ಆಗ ತಡೆಹಿಡಿದ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಯಾವ ಮಾಧ್ಯಮವೂ ಅದನ್ನು ವಿರೋಧಿಸಲಿಲ್ಲ, ಅದು ಈಗಲೂ ಚಾಲ್ತಿಯಲ್ಲಿದೆ.
ಇದೇ ರೀತಿ ಲಿಂಗಾಯತ ಧರ್ಮ, ಒಳಮೀಸಲಾತಿ, ಜಾತಿ ಸಮೀಕ್ಷೆಯ ವಿಷಯದಲ್ಲಿ ಏನೆಲ್ಲಾ ಆಗಿರಬಹುದು ಎನ್ನುವುದನ್ನು ಅಂದಾಜು ಮಾಡಬಹುದು. ಆದ್ದರಿಂದ ಸಿದ್ದರಾಯ್ಯನವರ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದರೆ ಅವರ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದರೆ ಅವರಿಗೆ ಅನ್ಯಾಯ ಮಾಡಿದ ಹಾಗಾಗುತ್ತದೆ.






