ಸಿದ್ದರಾಮಯ್ಯ ಈ ಬಾರಿ ರಾಜಕೀಯ ತಂತ್ರಗಾರಿಕೆ ಮಾಡುತ್ತಿರುವ ರೀತಿಯನ್ನು ನೋಡಿದಾಗ ಎಲ್ಲರೂ ಹುಬ್ಬೇರಿಸುವುದು ಸಹಜ. ಸ್ವತಃ ಕಾಂಗ್ರೆಸ್ನಲ್ಲಿ ಎದುರಾಳಿ ಆಗಿರುವ ಡಿ.ಕೆ ಶಿವಕುಮಾರ್ ಒಂದು ಹೆಜ್ಜೆ ಇಟ್ಟರೆ, ಸಿದ್ದರಾಮಯ್ಯ ಹತ್ತು ಹೆಜ್ಜೆ ಮುಂದಕ್ಕೆ ಅಡಿ ಇಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಯಾರೊಬ್ಬರೂ ಮಾತನಾಡಬಾರದು ಅಂತಾ ಕಾಂಗ್ರೆಸ್ ಹೈಕಮಾಂಡ್ ಹೇಳಿದರೂ ಕಾಂಗ್ರೆಸ್ ನಾಯಕರು ಮಾತ್ರ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾನೇ ಹೇಳುತ್ತಿದ್ದಾರೆ. ಇತ್ತೀಚಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ಜೆಡಿಎಸ್ನಿಂದ ಉಚ್ಛಾಟನೆ ಆಗಿರುವ ಕೋಲಾರ ಶಾಸಕ ಶ್ರೀನಿವಾಸ್ಗೌಡ ಕೂಡ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ್ದರು. ಇದ್ರ ಬೆನ್ನಲ್ಲೇ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಬಯೋಪಿಕ್ ಬಿಡುಗಡೆ ಮಾಡುವ ಮೂಲಕ ಜನರನ್ನು ಆಕರ್ಷಣೆ ಮಾಡಲು ಸಿದ್ಧತೆಗಳು ನಡೆದಿವೆ.
ಮಾಜಿ ಸಿಎಂ ಬಾಲ್ಯ, ಶಿಕ್ಷಣ, ರಾಜಕೀಯ ಹಾದಿಯ ಮೈಲಿಗಲ್ಲು..!
ಕುರುಬ ಸಮುದಾಯದಲ್ಲಿ ಹುಟ್ಟಿದ ಸಿದ್ದರಾಮಯ್ಯ ಮೂಲತಃ ಬಡತನದಲ್ಲಿ ಬೆಳೆದವರು. ಶಿಕ್ಷಣ ಪಡೆಯಲು ಸಾಧ್ಯವಾಗದೆ ಶಾಲೆ ಬಿಟ್ಟು ಅಪ್ಪನ ಜೊತೆಗೆ ಕೆಲಸಕ್ಕೆ ಹೊರಟವರು. ಆ ನಂತರ ಶಾಲೆ ಕಲಿತು, ಮೈಸೂರಿನಲ್ಲಿ ಕಾನೂನು ಶಿಕ್ಷಣ ಪಡೆದು ವಕೀಲ ವೃತ್ತಿಗೆ ಹೋದವರು. ಇದರ ನಡುವೆ ವಿದ್ಯಾರ್ಥಿಯಾಗಿದ್ದಾಗಲೇ ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಇಷ್ಟರ ನಡುವೆ ರಾಜಕೀಯ ಸಿದ್ದರಾಮಯ್ಯ ಅವರನ್ನು ಕೈ ಬೀಸಿ ಕರೆದಿತ್ತು. ಹಳೇ ಮೈಸೂರು ಭಾಗದ ಭಾಷೆ, ವಾಕ್ಚಾತುರ್ಯ, ಆವಭಾದಿಂದ ಜನರನ್ನು ಆಕರ್ಷಣೆ ಮಾಡಬಲ್ಲ ರಾಜ್ಯದ ಏಕೈಕ ನಾಯಕ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಜೆಡಿಎಸ್ ಪಕ್ಷದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದರೂ ಸಮಾಧಾನ ಆಗದ ಸಿದ್ದರಾಮಯ್ಯ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು ಇತಿಹಾಸ. ಇದೀಗ ಕಾಂಗ್ರೆಸ್ನಲ್ಲೇ 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಹುಮ್ಮಸ್ಸಿನಲ್ಲಿದ್ದಾರೆ. ಸಂಪೂರ್ಣ ಘಟನಾವಳಿಗಳು ತೆರೆ ಮೇಲೆ ಬರುವುದಕ್ಕೆ ತಯಾರಿ ನಡದಿದೆ.
ಚುನಾವಣೆಗೂ ಮೊದಲೇ ಸಿದ್ದರಾಮಯ್ಯ ಸಿನಿಮಾ ರಿಲೀಸ್..!
ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಸತ್ಯ ರತ್ನಂ ಎಂಬ ಯುವ ನಿರ್ದೇಶಕ ಸಿದ್ದರಾಮಯ್ಯ ಅವರ ಬಯೋಪಿಕ್ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರನ್ನು ಒಮ್ಮೆ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಶಿವರಾಜ ತಂಗಡಗಿ ಆಸಕ್ತಿ ವಹಿಸಿದ್ದಾರೆ. ಡಿಸೆಂಬರ್ 6,7 ಅಥವಾ 8 ಸಿದ್ದರಾಮಯ್ಯ ಜೊತೆಗೆ 2ನೇ ಬಾರಿ ಮಾತುಕತೆ ಆಗಲಿದ್ದು, ಮುಂದಿನ ತಂಗಳ ಅಂತ್ಯದಲ್ಲಿ ಚಿತ್ರೀಕರಣ ಆರಂಭ ಮಾಡಲು ನಿರ್ಧಾರ ಆಗಿದೆ. ಅಷ್ಟೇ ಅಲ್ಲದೆ ರಾಜ್ಯ ವಿಧಾನಸಭಾ ಚುನಾವಣೆಗೂ ಮೊದಲೇ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧಾರ ಮಾಡಿದೆ.
ಕೋಟಿಗಳು ಲೆಕ್ಕವಿಲ್ಲ, ಪ್ಯಾನ್ ಇಂಡಿಯಾ ಲೆವೆಲ್ ಚಿತ್ರ..!
ಸಿದ್ದರಾಮಯ್ಯ ಅವರ ಜೀವನ ಆಧರಿಸಿ ನಿರ್ಮಾಣ ಆಗುವ ಚಿತ್ರಕ್ಕೆ ಇಂತಿಷ್ಟೆ ಬಜೆಟ್ ಎಂದು ನಿರ್ಧರಿಸಿಲ್ಲ. 10 ರಿಂದ 15 ಕೋಟಿ ವೆಚ್ಚವಾದರೂ ಸಿನಿಮಾವನ್ನು ಅದ್ಬುತವಾಗಿ ಚಿತ್ರೀಕರಣ ಮಾಡಲು ನಿರ್ಧಾರ ಮಾಡಲಾಗಿದೆ. ಅಷ್ಟೆ ಅಲ್ಲದೆ ಸಿದ್ದರಾಮಯ್ಯ ಮುಖಕ್ಕೆ ಹೋಲಿಕೆ ಆಗುವ ತಮಿಳು ಚಿತ್ರರಂಗದ ವಿಜಯ್ ಸೇತುಪತಿ ಅವರನ್ನು ಕರೆತರುವ ಪ್ರಯತ್ನ ನಡೆದಿದೆ. ಇದು ಕನ್ನಡದಲ್ಲಿ ಮಾತ್ರ ನಿರ್ಮಾಣ ಆಗುವ ಚಿತ್ರವಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ದರಾಮಯ್ಯ ಜೀವನ ಚರಿತ್ರೆ ಇಡೀ ಭಾರತದಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ರಾಜ್ಯ ರಾಜಕಾರಣದಲ್ಲಿ ಬೆಳೆದು ಬಂದ ನಾಯಕತ್ವ ಹಾಗು ರಾಜ್ಯದ ಜನರಿಗೆ ಕೊಟ್ಟಂತ ಯೋಜನೆಗಳು ಈ ಸಿನಿಮಾದಲ್ಲಿ ಇರಲಿದೆ ಎನ್ನಲಾಗಿದೆ.
ರಾಷ್ಟ್ರಮಟ್ಟದಲ್ಲಿ ಮಿಂಚಲು ಸಿದ್ದರಾಮಯ್ಯ ಸಿದ್ಧತೆ..!
ಸಿನಿಮಾ ಮಾಡೋದ್ರಿಂದ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯ ಯಾರು..? ಅವರ ಬೆಳವಣಿಗೆ ಹೇಗಿದೆ..? ಅವರ ನಾಯಕತ್ವ ಎಂತಹದ್ದು ಅನ್ನೋದನ್ನು ಜನರ ಮುಂದಿಡುವ ಪ್ರಯತ್ನ ಇದಾಗಿದೆ. ಸಿದ್ದರಾಮಯ್ಯ ಅವರನ್ನು ವಿರೋಧಿಸುವ ಜನರು ಕೂಡ ಸಿನಿಮಾ ನೋಡಿದ ಬಳಿಕ ಬದಲಾಗುವ ಸಾಧ್ಯತೆ ಇರುತ್ತದೆ. ಸಂಪೂರ್ಣವಾಗಿ ಸಿನಿಮಾ ತೋರಿಸಿ ಕಾಂಗ್ರೆಸ್ ಗೆಲ್ಲಿಸ್ತಾರೆ ಅಂತಾ ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ ಸಿನಿಮಾ ನೋಡಿದ ಮಂದಿಯಲ್ಲೆ ಕೆಲವರು ತಮ್ಮ ಮನಸ್ಸು ಬದಲಿಸಲೂ ಬಹುದು. ಅಷ್ಟೇ ಅಲ್ಲದೆ ರಾಜ್ಯಕ್ಕೆ ಮಾತ್ರ ಸೀಮಿತ ಆಗಿರುವ ಸಿದ್ದರಾಮಯ್ಯ ರಾಷ್ಟ್ರಮಟ್ಟಕ್ಕೂ ಕಾಲಿಡುವ ಸಾಧ್ಯತೆಗಳು ಈ ಚಿತ್ರ ನಿರ್ಮಾಣದ ಹಿಂದಿರುವ ಗುಟ್ಟು.
ಕೃಷ್ಣಮಣಿ