ಇತ್ತೀಚೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅಧಿಕಾರ ಕಳೆದುಕೊಂಡರು. ಮೇಲುನೋಟಕ್ಕೆ ಅದು ಏಕನಾಥ ಶಿಂಧೆ ಅವರ ಕಾರಣಕ್ಕೆ ಎನಿಸಿದರೂ ಅಧಿಕಾರ ಕಸಿಯುವ ಹಿಂದಿನ ಕುತಂತ್ರ ಬಿಜೆಪಿಯದ್ದು ಎನ್ನುವುದು ಬಹಿರಂಗ ಸತ್ಯ. ಆದರೂ ಈಗ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ನಿರ್ಧರಿಸಿದೆ.
ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ‘ತಮಗೆ ಶಾಸಕರಿಂದ ಯಾವುದೇ ಒತ್ತಡಕ್ಕೆ ಇರಲಿಲ್ಲ’ ಎಂದು ಹೇಳಿಕೊಂಡಿದ್ದರೂ, ಅವರು ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನಕ್ಕೆ ಕಾರಣವಾದ ಇತ್ತೀಚಿನ ಬಂಡಾಯದ ಬೆಳವಣಿಗೆಗಳ ನಂತರ ಬಲ ಕಳೆದುಕೊಂಡಿದ್ದಾರೆ ಎಂಬುದು ಸುಳ್ಳಲ್ಲ. ಶಿವಸೇನೆಯ 18 ಸಂಸದರ ಪೈಕಿ 13 ಮಂದಿ ಸೋಮವಾರ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವಂತೆ ಕೇಳಿದರು. ಅಲ್ಲದೆ ಬಿಜೆಪಿ ಹಾಗೂ ಪಕ್ಷದಿಂದ ಸಿಡಿದು ಹೋಗಿರುವ ಏಕನಾಥ್ ಶಿಂಧೆ ಬಣದೊಂದಿಗೆ ಸಂಭವನೀಯ ಹೊಂದಾಣಿಕೆಗೆ ಬಾಗಿಲು ತೆರೆಯುವಂತೆ ‘ಮನವಿ’ ಮಾಡಿದರು ಎನ್ನಲಾಗಿದೆ.
ಪಕ್ಷದ ಸಂಸದ ರಾಹುಲ್ ಶೆವಾಲೆ ಕಳೆದ ವಾರ ಉದ್ಧವ್ ಠಾಕ್ರೆಗೆ ಪತ್ರ ಬರೆದು, ಶಿವಸೇನೆಯು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದರು. ಠಾಕ್ರೆಗಳನ್ನೂ ಎಂದೂ ಪ್ರಶ್ನಿಸಿದ ಪಕ್ಷದಲ್ಲಿ ಸಂಸದರೊಬ್ಬರು ಸೇನಾ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿದ್ದು ‘ಹುಲಿ ಮೇಲಿನ ಪಟ್ಟೆಗಳು ವೇಗವಾಗಿ ಮರೆಯಾಗುತ್ತಿವೆ’ ಎಂಬುದರ ಸುಳಿವಾಗಿತ್ತು. ಪಕ್ಷದ ಸದಸ್ಯರು ಎದ್ದುನಿಂತು ತಮ್ಮ ಅಭಿಪ್ರಾಯವನ್ನು ಹೇಳಲು ಆರಂಭಿಸಿದ್ದಾರೆ ಎಂಬ ಸ್ಪಷ್ಟ ಸೂಚನೆಯಾಗಿತ್ತು. ಉದ್ಧವ್ ಠಾಕ್ರೆಗೆ ಸಂಸದರ ಭಾವನೆಗಳನ್ನು ಕಡೆಗಣಿಸಿದರೆ ಪಕ್ಷದಲ್ಲಿ ಉಂಟಾಗಿರುವ ಬಿರುಕುಗಳು ದೊಡ್ಡದಾಗುತ್ತವೆ ಎಂಬ ಆತಂಕವೂ ಇದೆ.
ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬೆಂಬಲಿಸುವಂತೆ ಸಂಸದರು ಮಾಡಿದ್ದ ಒತ್ತಡಕ್ಕೆ ಒಪ್ಪಿಗೆ ಸೂಚಿಸುವ ಉದ್ಧವ್ ಠಾಕ್ರೆ ಅವರ ನಿರ್ಧಾರದಲ್ಲಿ ದೊಡ್ಡ ಸಂದೇಶವಿದೆ ಎಂದು ಮೂಲಗಳು ಹೇಳುತ್ತವೆ. ಅದೇನೆಂದರೆ ಉದ್ಧವ್ ಠಾಕ್ರೆ ಈಗ ಪ್ರಧಾನಿ ನರೇಂದ್ರ ಮೋದಿ ಜೊತೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಬಿಜೆಪಿ ನಾಯಕರೊಂದಿಗೆ ಮುರಿದು ಬಿದ್ದಿರುವ ಸಂಬಂಧವನ್ನು ಮರು ಸ್ಥಾಪಿಸಲು ಸಿದ್ಧರಿದ್ದಾರೆ ಎಂದು. ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರದ ಮೂಲಕ ಉದ್ಧವ್ ಠಾಕ್ರೆ ಶಿವಸೇನಾ-ಬಿಜೆಪಿ ಸಂಬಂಧವು ಮರುಸ್ಥಾಪನೆಯಾಗಲು ತಾವು ಸಿದ್ದ ಎಂಬ ಸುಳಿವನ್ನು ರವಾನಿಸಿದ್ದಾರೆ.
ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಶಿವಸೇನೆಯ ನಿರ್ಧಾರವನ್ನು ಸಮರ್ಥಿಸಿಕೊಂಡ ಹಿರಿಯ ನಾಯಕರೊಬ್ಬರು, ‘ಮೊದಲ ಬಾರಿಗೆ ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಮಹಿಳಾ ಅಭ್ಯರ್ಥಿಯನ್ನು ಬಿಂಬಿಸಿದಾಗ ಯಾರಾದರೂ ಏಕೆ ಆಕ್ಷೇಪಿಸಬೇಕು? ಈ ನಿರ್ಧಾರವನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಮಹಾರಾಷ್ಟ್ರದಲ್ಲೂ ಬುಡಕಟ್ಟು ಜನಾಂಗದವರಿದ್ದಾರೆ’ ಎಂದು ಹೇಳಿದ್ದಾರೆ. ಈ ಮೂಲಕ ಶಿವಸೇನೆ ‘ಸೀಮಿತ ಆಯ್ಕೆಗಳನ್ನು’ ಹೊಂದಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಒಂದೆಡೆ ನಾವು ದ್ರೌಪದಿ ಮುರ್ಮು ಅವರಲ್ಲಿ ವಿದ್ಯಾವಂತ ಮತ್ತು ಅನುಭವಿ ಬುಡಕಟ್ಟು ನಾಯಕತ್ವವನ್ನು ಕಾಣುತ್ತಿದ್ದೇವೆ. ಮತ್ತೊಂದೆಡೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರ ಬಗ್ಗೆ ವಿರೋಧ ಪಕ್ಷದೊಳಗೇ ಒಮ್ಮತದ ಅಭಿಪ್ರಾಯವಿಲ್ಲ. ಹೀಗಿರುವಾಗ ಶಿವಸೇನೆ ಯಶವಂತ ಸಿನ್ಹ ಅವರನ್ನು ಏಕೆ ಬೆಂಬಲಿಸಬೇಕು? ಯುಪಿಎ ರಾಷ್ಟ್ರಪತಿ ಅಭ್ಯರ್ಥಿಗಳಾದ ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರನ್ನು ಎರಡು ಬಾರಿ ಬೆಂಬಲಿಸಲು ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿದ್ದರು. ಈಗಲೂ ಕೂಡ ಹಾಗೆಯೇ ವಿಷಯಾಧಾರಿತವಾಗಿ ಪಕ್ಷ ನಡೆದುಕೊಳ್ಳಬೇಕಾಗಿದೆ ಎನ್ನುತ್ತಾರೆ ಇನ್ನೊಬ್ಬ ಶಿವಸೇನೆ ನಾಯಕರು.
ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಮೂಲಕ ಉದ್ಧವ್ ಠಾಕ್ರೆ ಚುರುಕಾದ ಆಟವಾಡಿದ್ದಾರೆ ಎಂದು ಹೇಳುವ ಮೂಲಕ ಶಿವಸೇನಾ ನಾಯಕರೊಬ್ಬರು, ‘ರಾಜಕೀಯದಲ್ಲಿ ಎಂದಿಗೂ ಎಲ್ಲಾ ಬಾಗಿಲನ್ನು ಮುಚ್ಚಲು ಸಾಧ್ಯವಿಲ್ಲ. ಯಾರು ಕೂಡ ಭವಿಷ್ಯವನ್ನು ಊಹಿಸಬಲ್ಲರು’ ಎಂದಿದ್ದಾರೆ.
ಇನ್ನೊಂದೆಡೆ ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲಿಸಿದ ಉದ್ಧವ್ ಠಾಕ್ರೆ ಅವರ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ. ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು, “ರಾಜಕೀಯದಲ್ಲಿ ಯಾರೂ ಶಾಶ್ವತವಾಗಿ ಮಿತ್ರರಲ್ಲ ಅಥವಾ ಶತ್ರುಗಳಲ್ಲ. ಬಿಜೆಪಿಯ ಕೇಂದ್ರ ನಾಯಕತ್ವ ಕೂಡ ಉದ್ಧವ್ ಠಾಕ್ರೆ ಅವರ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸುವುದಿಲ್ಲ. ಬಿಜೆಪಿಯ ಕೋರ್ ಕಮಿಟಿ ಸಭೆಗಳಲ್ಲಿ ರಾಜ್ಯ ಮತ್ತು ಕೇಂದ್ರ ನಾಯಕರು ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿಕೊಂಡು ಮಾತನಾಡದಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಅನರ್ಹತೆ ಕೋರಿರುವ ಶಾಸಕರ ಪಟ್ಟಿಯಲ್ಲಿ ಆದಿತ್ಯ ಠಾಕ್ರೆ ಹೆಸರನ್ನು ಸೇರಿಸದಿರಲು ಬಿಜೆಪಿ ನಿರ್ಧರಿಸಿದೆ’ ಎಂದು ಹೇಳಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು, ‘ ಏಕನಾಥ ಶಿಂಧೆ ನೇತೃತ್ವದ ಬಂಡುಕೋರರನ್ನು ಅಪ್ಪಿಕೊಳ್ಳಲು ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ಸಿದ್ಧರಿದ್ದರೆ, ಕೇಂದ್ರ ನಾಯಕತ್ವವು ಅವರಿಗೆ ಸಹಾಯ ಮಾಡುತ್ತದೆ. ಇದಕ್ಕೆ ಬೇಕಾಗಿರುವುದು ಕೇವಲ ಒಂದಯ ಫೋನ್ ಕರೆ ಅಥವಾ ಪಿಎಂ ಮತ್ತು ಠಾಕ್ರೆ ನಡುವಿನ ಸಭೆ’ ಎಂದು ಹೇಳಿದ್ದನ್ನು ಸ್ಮರಿಸಬಹುದು. ಒಟ್ಟಿನಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಮೂಲಕ ಉದ್ಧವ್ ಠಾಕ್ರೆ ಅವರು ಮತ್ತೆ ಬಿಜೆಪಿ ಜೊತೆಗಿನ ಸಖ್ಯದ ಸುಳಿವು ನೀಡಿದ್ದಾರೆ ಎನ್ನಲಾಗಿದೆ.