ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಜನರನ್ನು ಉದ್ದೇಶಿಸಿ ಮಾತನಾಡಿರುವ ರೇವಂತ್ ರೆಡ್ಡಿ, ಮನ್ಸೂರ್ ಅಲಿಖಾನ್ ಗೆಲ್ಲಿಸಲು ನೀವೆಲ್ಲಾ ಬಂದಿದ್ದಿರಾ.. ಎಲ್ಲರಿಗೂ ವಂದನೆಗಳು. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ತೋರಿಸುವ ಸಮಯ ಬಂದಿದೆ ಎಂದಿದ್ದಾರೆ.
![](https://pratidhvani.com/wp-content/uploads/2024/04/105761667-1024x576.webp)
ಆಂಧ್ರ ಪ್ರದೇಶ, ತೆಲಂಗಾಣದಿಂದ ಬಂದಿರುವ ಲಕ್ಷಾಂತರ ಜನ ಇಲ್ಲಿ ವಾಸವಿದ್ದೀರಿ, ಇಡೀ ಪ್ರಪಂಚದಲ್ಲೇ ಐಟಿಗೆ ಬೆಂಗಳೂರು ಹೆಸರುವಾಸಿ, ಲಕ್ಷಾಂತರ ಯುವಕರಿಗೆ ಉದ್ಯೋಗ ಅವಕಾಶ ನೀಡಿದೆ. ಮಹದೇವಪುರದಲ್ಲಿ ಸಾಕಷ್ಟು ಆಂಧ್ರ, ತೆಲಂಗಾಣದ ಜನರಿದ್ದಾರೆ. ಪಿ.ಸಿ ಮೋಹನ್ ಅವರನ್ನು ಕಳೆದ ಮೂರು ಸಾರಿ ಆಯ್ಕೆ ಮಾಡಿ ಪಾರ್ಲಿಮೆಂಟ್ಗೆ ಕಳಿಸಿದ್ದೀರಿ. ಬೆಂಗಳೂರಿನ ಬಗ್ಗೆ ಕೇಂದ್ರದಲ್ಲಿ ಒಂದೇ ಒಂದು ಮಾತನಾಡಿಲ್ಲ, ಕಾವೇರಿ ಬಗ್ಗೆ ಮಾತಾಡಿಲ್ಲ, ಒಂದು ಬಾರಿಯೂ ಕರ್ನಾಟಕದ ಸಮಸ್ಯೆ ಬಗ್ಗೆ ಮಾತಾಡಿಲ್ಲ ಎಂದು ಕಿಡಿಕಾರಿದ್ದಾರೆ.
![](https://pratidhvani.com/wp-content/uploads/2024/04/105701479-1024x576.webp)
ಚನ್ನಾ ಬಟಾಣಿ ತಿನ್ನೋಕೆ ಪಿ.ಸಿ ಮೋಹನ್ ದೆಹಲಿಗೆ ಹೋಗ್ತಾರೆ ಎಂದು ವ್ಯಂಗ್ಯವಾಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಚನ್ನಾ ಬಟಾಣಿ ಬೆಂಗಳೂರು ಬಸ್ ಸ್ಟಾಂಡ್ನನ್ನೂ ಸಿಗುತ್ತೆ, ಅದಕ್ಕೆ ದೆಹಲಿಗೆ ಹೋಗಬೇಕಾ..? ಎಂದು ಪ್ರಶ್ನಿಸಿದ್ದಾರೆ. ಉದ್ಯೋಗ ಕೊಡ್ತೀವಿ ಅಂತಾ ಪ್ರಧಾನಿ ಮೋದಿ ಹೇಳಿದ್ರು. ಆದ್ರೆ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ. ರೈತರ ಮೇಲೆ ಪೊಲೀಸ್ ಮೂಲಕ ದೌರ್ಜನ್ಯ ಮಾಡಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](https://pratidhvani.com/wp-content/uploads/2024/04/images-9-1.jpg)
ದೇಶಕ್ಕೆ ಕಪ್ಪು ಹಣ ತರ್ತಿವಿ, 15 ಲಕ್ಷ ಹಣವನ್ನು ನಿಮ್ಮ ಅಕೌಂಟ್ಗೆ ಹಾಕ್ತೀನಿ ಅಂತಾ ಹೇಳಿದ್ರು, ಹಾಕಿದ್ದಾರಾ..? ಒಂದು ಪೈಸೆಯೂ ಯಾರ ಅಕೌಂಟ್ಗೂ ಬಂದಿಲ್ಲ. ಕುಟುಂಬ ರಾಜಕೀಯದ ಬಗ್ಗೆ ಮೋದಿ ಮಾತಾಡ್ತಾರೆ, ಆದರೆ ಯಡಿಯೂರಪ್ಪ ಮಗ ವಿಜಯೇಂದ್ರ ಪಾರ್ಟಿ ಅಧ್ಯಕ್ಷ, ಮತ್ತೊಬ್ಬರು ಸಂಸದರು. ರಾಜನಾಥ್ ಸಿಂಗ್ ಕೇಂದ್ರ ಸಚಿವ ಅವರ ಮಗ ಶಾಸಕ, ತೇಜಸ್ವಿ ಸೂರ್ಯ ಸಂಸದ, ಅವರ ಚಿಕ್ಕಪ್ಪ ಶಾಸಕರು, ನಿಮ್ಮ ಪಾರ್ಟಿಯಲ್ಲಿ ಇರುವವರೆಲ್ಲರೂ ಕುಟುಂಬ ರಾಜಕೀಯ ಮಾಡುವವರೇ ಆಗಿದ್ದಾರೆ ಎಂದು ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಕಾಂಗ್ರೆಸ್ಗೆ ಮತ ನೀಡಿ ಎಂದು ಕೇಳಿಕೊಂಡಿದ್ದಾರೆ.