ಅತಿವೃಷ್ಟಿ ಸೃಷ್ಟಿಸಿದ ಅವಾಂತರಗಳಿಂದ ರಾಜ್ಯದ ಜನತೆ ಚಿಂತೆಯಲ್ಲಿರುವಾಗ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮದೇ ಸ್ವಂತ ಕಾರ್ಯದಲ್ಲಿ ಮಗ್ನರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿ, “ಅತಿಯಾದ ಮಳೆಯಿಂದ ರಾಜ್ಯ ಹಲವೆಡೆ ಗುಡ್ಡಗಳು ಕುಸಿಯುತ್ತಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಸೇತುವೆಗಳು ಮುಳುಗಿ ಹಲವು ಊರುಗಳಿಗೆ ಸಂಪರ್ಕ ಕಡಿತಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಜೊತೆಗಿದ್ದು ತ್ವರಿತವಾಗಿ ಸಮಸ್ಯೆಗಳು ಪರಿಹಾರವಾಗುವಂತೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ನಮ್ಮ ಶಾಸಕರುಗಳು ಈ ಬಗ್ಗೆ ಯೋಚಿಸದೇ ಬೇರೆಬೇರೆ ಅನಗತ್ಯ ಕಾರ್ಯಗಳಲ್ಲಿ ನಿರತರಾಗಿದ್ದಾರೆ” ಎಂದು ಬೇಸರ ವ್ಯಕ್ತ ಪಡಿಸಿದರು.
“ಬಿಜೆಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ, ಕೆ.ಎಂ.ನಾರಾಯಣ ಸ್ವಾಮಿ, ಎಸ್.ಎನ್.ಸುಬ್ಬಾರೆಡ್ಡಿ, ದತ್ತಾತ್ರೇಯ ಪಾಟೀಲ ರೇವೂರಾ, ಕೆ.ಶ್ರೀನಿವಾಸ್ ಮೂರ್ತಿ, ಮಹದೇವಪ್ಪ ಶಿವಲಿಂಗಪ್ಪ ಯದವಾಡ್, ಗಣೇಶ್ ಹುಕ್ಕೇರಿ, ಶ್ರೀಮಂತ ಪಾಟೀಲ, ಸೋಮನಗೌಡ ಪಾಟೀಲ, ಉದಯ ಬಿ ಗರುಡಾಚಾರ್, ಎಸ್.ರಾಮಪ್ಪ, ರವೀಂದ್ರ ಶ್ರೀಕಂಠಯ್ಯ, ಹರೀಶ್ ಪೂಂಜಾ, ವೆಂಕಟ್ ರೆಡ್ಡಿ ಮುದ್ನಾಳ್ರವರು ಕಾಶ್ಮೀರ ಸಮೀಪದ ಲಡಾಖ್ಗೆ ಪ್ರವಾಸ ಕೈಗೊಂಡಿದ್ದಾರೆ. ಅಧ್ಯಯನದ ನೆಪದಲ್ಲಿ ಜನರ ತೆರಿಗೆ ದುಡ್ಡಿನಲ್ಲಿ ಅಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ರಾಷ್ಟ್ರಪತಿ ಚುನಾವಣೆಗಾಗಿ ಬಿಜೆಪಿಯು ತನ್ನ ಶಾಸಕರನ್ನು ಶಾಂಗ್ರಿಲಾ ಹೊಟೇಲ್ನಲ್ಲಿ ಬಂಧಿಸಿಟ್ಟಿದೆ. ಅಲ್ಲಿಂದ ಹೊರಹೋಗಲು ಸಾಧ್ಯವಾಗದಂತೆ ಶಾಸಕರಿಗೆ ಬಿಜೆಪಿ ದಿಗ್ಬಂಧನ ವಿಧಿಸಿದೆ. ವಿರೋಧ ಪಕ್ಷ ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವ ಚಿಂತೆಯಾಗಿದೆ. ಒಟ್ಟಿನಲ್ಲಿ ಜನರ ಸಮಸ್ಯೆಗಳು ಇವರ್ಯಾರಿಗೂ ಕಾಣಿಸುತ್ತಿಲ್ಲ. ಮಳೆಯಿಂದಾಗಿ ಮೀನುಗಾರರು ಆದಾಯವಿಲ್ಲದೇ ಸಂಷ್ಟದಲ್ಲಿದ್ದರೂ ಕರಾವಳಿ ಭಾಗದ ಶಾಸಕರು ಹಾಗೂ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.